ಭಾವ

ಭಾವ

 

ಮಗುವಿನ ಜೊಚ್ಚಿಲ ಅಳುವನು ಕೇಳುತ

ತಾಯಿಯು ಹರಿಸಿದ ಬಾಷ್ಪ೦ಗಳಲ್ಲಿ

ಹಸಿವನು ಅಳಿಸುತ ನೋವನು ಮರೆಸುತ

ಸಲಹುವ ತಾಯಿಯ ವಾತ್ಸಲ್ಯದಲಿ

 

ತಾಯಿಯ ಪ್ರೀತಿಯ ಸಾರವ ಸವಿಯುತ

ಬೆಳೆಯುವ ಕಂದನ ಮನದಾಳದಲಿ

ಮಕ್ಕಳ ಕನಸನು ನನಸನು ಮಾಡಲು

ದುಡಿಯುವ ತಂದೆಯ ಕೈ ಕಸುವಿನಲಿ

 

ವಿದ್ಯೆಯ  ಕಲಿಸಿದ ಗುರುವನು ನೆನೆಯುತ

ಬೆಳೆಯುವ ಶಿಷ್ಯನ ಗುರು ಭಕುತಿಯಲಿ

ತನ್ನನೆ ಮೀರಿಪ ಶಿಷ್ಯನ ಏಳಿಗೆ

ಕಾಣುವ ಗುರುವಿನ ಸಾರ್ಥಕ್ಯದಲಿ

 

ಮನವನು ಮನೆಯನು ಅನುದಿನ ಬೆಳಗುವ

ಮಡದಿಯ ಕೈಬಳೆ ನಿನಾದದಲಿ

ಪ್ರತಿಫಲ ಬಯಸದೆ ಪ್ರೀತಿಯ ತೋರುವ

ನಿಜರೂಪದ ಸಿಹಿ ಗೆಳೆತನದಲ್ಲಿ

 

ವಿಧ ವಿಧ ಬಗೆಯಲಿ ವಿಧ ವಿಧ ರೂಪದಿ

ಒಳಗೂ ಹೊರಗೂ ತೋರುತಲಿರುವ

ಜೀವರ ನಡುವಿನ ಬೆಸುಗೆಯ ಬೆಸೆಯುತ

ತನ್ಮಯಲೋಕಕೆ ತಳ್ಳುತಲಿರುವ

 

ಕಾಣುವೆ ಅನುದಿನ ಕಾಣುವೆ ಪ್ರತಿಕ್ಷಣ

ಇರದಿರಲದು ಬರಿ ಬರಡೇ ಜೀವನ

ಏನಿದು,ಏನಿದು, ಏನಿದು ಜೀವ

ಬಾಳನು ಸುಂದರ ಮಾಡಿದ ಭಾವ

ಏನಿದರ ಹೆಸರು

ಏನಿದರ ಹೆಸರು?

 

ಜಗ ಎದುರು ಬಿದ್ದಾಗ ಜಗದೆದುರು ಬಿದ್ದಾಗ

ಜಗದ ಜೀವರುಗಳೆಲ್ಲ ನಕ್ಕಾಗ

ಜಗಕೆ ಕಿವಿಗೊಡದಂತೆ ಜಗದ ಪರಿವೆಯ ಚಿಂತೆ

ಇರದಂತೆ ನೀನಂದು ನನಗಾಗಿ ನಿಂತೆ

 

ಕೈ ಚಾಚಿ ಎಬ್ಬಿಸುತ ಮೈ ಮನವ ಝಾಡಿಸುತ

ಮೈದಡವಿ ಮನದಲ್ಲಿ ಮನದಲ್ಲಿ ಧೈಯ೯ ಮೂಡಿಸಿದೆ

ತನುವ  ಧೂಳನು ಒರೆಸಿ ಮನದ ಗಾಯವ ಮರೆಸಿ

ಹಳೆಯ ಪುಟಗಳ ಹರಿದು ಹೊಸದು ತೋರಿಸಿದೆ

 

ಹೊಸ ಬದುಕ ನಾಳೆಗಳು, ನಾಳೆಗಳ ಹಾಳೆಗಳು

ಹಾಳೆಗಳು ತುಂಬಿರುವ ಪುಸ್ತಕವಿದೆ

ಪುಸ್ತಕದ ಮೊದಲೇನು, ನಡುವೇನು ಕೊನೆಯೇನು

ಪುಸ್ತಕದ ತುಂಬೆಲ್ಲ ನಿನ್ನಿರುವಿದೆ

 

ಕರುಳ ಕುಡಿ ನಾವಲ್ಲ, ಕರುಳ ರಕ್ತವು ಇಲ್ಲ

ನೆರೆ ನೆರೆದು ನಿಂತ ಸಂಬಂಧಗಳು ಇಲ್ಲ

ಬರಿದೆ ಭಾವದ ಬೇರು ಹೀರಿ ಪ್ರೀತಿಯ ನೀರು

ಬೆಳೆಸಿರುವ ಈ ತರುವಿಗೇನು ಹೆಸರು?

 

ನಿನಗೇನು ಅಲ್ಲದ ಎನಗಾರು ನೀನು?

ನಮ್ಮ ನಡುವಿನ ಬಂಧಕಿರುವ ಹೆಸರೇನು?

ಮಂಗ(ಗ)ಳ ಯಾನ- ಸುದರ್ಶನ ಗುರುರಾಜರಾವ್

ಮಂಗ(ಗ)ಳ  ಯಾನ

ವಿಶ್ವದಲ್ಲೇ ಪ್ರಥಮಬಾರಿಗೆ ಪ್ರಥಮ ಪ್ರಯತ್ನದಲ್ಲೇ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಮಂಗಳನ ಅಂಗಳಕ್ಕೆ ಉಪಗ್ರಹವೋಂದನ್ನು ಇಳಿಸಿದ್ದು ವಿಜಯಾ ಮತ್ತೆ  ಅವನ ದಂಡಿಗೆ  ಭಾರೀ ಉನ್ಮಾದನಾನ್ನೂ, ದೇಶಪ್ರೇಮವನ್ನೂ,ಹುರುಪನ್ನು ಮೂಡಿಸಿಬಿಟ್ಟಿತು. ದೇಶದ ಸಮಸ್ತ ಜನಸ್ತೋಮದ ಜೊತೆಜೊತೆಗೆ ತಾವೂ ಈ ಸಾಧನೆಯನ್ನು ಸಂಭ್ರಮಿಸಿ ಪರಸ್ಪರ ಭಾರತೀಯರಾಗಿ ಅಭಿನಂದಿಸಿಕೊಂಡರು. ಅದೇ ಖುಷಿಯಲ್ಲಿ ತಾವು ಭಾರತೀಯರಾಗಿ ಈ ಭೂಮಿಯಲ್ಲಿ ಜನ್ಮ ತಾಳಿದ್ದಕ್ಕೆ ಸಾರ್ಥಕಭಾವವನ್ನು ಅನುಭವಿಸಿದರು. ತಮಗೆ ಕೆಲಸ ಸಿಗುವ ಮುನ್ನ, ಪೋಲಿಗಳಾಗಿ ಅಲೆಯುತ್ತಿದ್ದಾಗ ದಿನವೂ ಪೈಸೆ ಪೈಸೆಗೆ ಲೆಕ್ಖ ಕೇಳುತ್ತಿದ್ದ ತಂದೆತಾಯಿಯರನ್ನು ದಿನವೂ ಶಪಿಸುತ್ತಿದ್ದ, ತಮ್ಮನ್ನು ಈ ಭೂಮಿಗೆ ತಂದ ತಪ್ಪಿಗೆ ಅವರನ್ನೇ ನಿಂದಿಸುತ್ತಿದ್ದ ಅವರುಗಳಿಗೆಲ್ಲ ತಮ್ಮ ಮಾತಾ ಪಿತೃಗಳು ದೈವೀ ಸಮಾನರಾಗಿ ಗೋಚರಿಸಿದರು. ಅವರಿಗೆ ವಂದಿಸಿ ಹೆಚ್ಚು ಹುರುಪಿನಿಂದ ತಮ್ಮ ಕೆಲಸಕ್ಕೆ ನಡೆದರು.

ಅದಾದ ಒಂದು ತಿಂಗಳು ವಿಜಯನ ಸುದ್ದಿಯೇ ಇರಲಿಲ್ಲ,. ಯಾವ ಫೋನಿಗೂ ಈ-ಮೇಲಿಗೂ ಸಿಗಲಿಲ್ಲ. ಎಲ್ಲಿ ಹೋದ ಇವನು ಎಂದು ಎಲ್ಲರೂ ತಲೆ ಕೆರೆದು ಕೊಳ್ಳುತ್ತಿರುವಾಗಲೇ ಅವನು ಪ್ರತ್ಯಕ್ಷನಾದ. ಎಲ್ಲಿ ಹಾಳಾಗಿ ಹೋಗಿದ್ಯೋ ದರ್ಬೇಶಿ  ಈ -ಮೇಲು ಕಳಿಸಿದರು ಉತ್ತರ ಇಲ್ಲ ಎಂದು ಅವರು ಕೇಳಲಾಗಿ,  ನಾನು ಹಾರುತ ದೂರಾ ದೂರಾ, ಫೀ ಮೇಲು ಜೊತೆ ಹೋಗಿರುವಾಗ ನಿಮ್ಮ ಮೇಲು ಗಳಿಗೆ ನನ್ನ ಜೀವನದಲ್ಲಿ ಪಾಲಿಲ್ಲ ಎಂದು ಅಸಂಬದ್ಧವಾಗಿ ನುಡಿದ. ಅದೇನು ಸರಿಯಾಗಿ ಹೇಳೋ ಅಂದಿದ್ದಕ್ಕೆ, ನಾನು ಮಾರ್ಸು,ಆರ್ಬಿಟ್ ಎಲ್ಲ ಸೊನಾಲಿ ಜೊತೆ ಸುತ್ತುಹಾಕಿಕೊಂಡು ಬಂದೆನಮ್ಮ. ಬೇಕಾದ್ರೆ ನೀವೂ ಮಾರ್ಸ್ ನೋಡ್ಬೋದು. ಅಷ್ಟ್ಯಾಕೆ, ಗ್ಯಾಲಾಕ್ಸೀನೆ ಭೇದಿಸಬಹುದು. ಡೀಟೈಲಾಗಿ ಕೇಳ್ಬೇಕಾದ್ರೆ ಸಾಯಂಕಾಲ ನಮ್ಮ ಮಾಮೂಲು ಜಾಗಕ್ಕೆ ಬನ್ನಿ. ಕಾಫೀ ತಿಂಡಿ ಜೊತೆ ಹೇಳ್ತೀನಿ ಈಗ ಟೈಮಿಲ್ಲಮ್ಮ ಅಂತ ತನ್ನ “ಆಪಲ್ ವಾಚು” ನೋಡಿಕೊಂಡು ಹೊರಟು ಹೋದ.

 

ಎಲಾ ಇವನ. ಇದೇನಪ್ಪ ಇವನ ಹೊಸ ವರಸೆ, ಎರಡು ಗೇಣು ಉದ್ದ ಇಲ್ಲ ಮಾರು ಗಟ್ಲೆ ಮಾತಾಡ್ತಾನಲ್ಲ. ಮನೆ ಮುಂದಿನ ಅಂಗಳಕ್ಕೆ ಹೊಟ್ಟೆ ಬಿಟ್ಕೊಂಡು ಮೂರು ಮಾರು ಹಾರಕ್ಕೆ ಆಗದವನು ಮಾರ್ಸ್ ಗೆ ಹಾರುವುದೆಂದರೇನು? ಅದರ ಅರ್ಬಿಟ್, ಅಂದರೆ ಕಕ್ಷೆಯನ್ನು ಸೇರುವುದೆಂದರೇನು?ಕೋಟಿ ಮೈಲು ದೂರದಲ್ಲಿರುವ ಆ ಮಾರ್ಸ್, ಮಂಗಳನ ಅಂಗಳಕ್ಕೆ ಒಂದೇ ತಿಂಗಳಲ್ಲಿ ಹೋಗಿಬರುವುದೆಂದರೇನು? ಅದೂ ಅಲ್ಲದೆ ನಮಗೇ ಬರೀ ಮಾರ್ಸ್, ಮಂಗಳನೇ ಅಲ್ಲ, ಗ್ಯಲಾಕ್ಸಿಯನ್ನೇ ತೋರಿಸುತ್ತಾನೆಂದರೇನು? ತುಂಗೆ ನದಿಯನ್ನೇ ಕಾಣದ ಇವನು ಆಕಾಶಗಂಗೆಯನ್ನು ಕಂಡಿದ್ದಾನೆಂದರೆ  ನಂಬುವುದಾದರೂ ಹೇಗೆ? ಅರ್ಧ ಟೀ ಕುಡಿಸಿದ ಖರ್ಚಿಗೆ ನಮ್ಮಿಂದ ಎರಡರಷ್ಟು ಕೆಲಸ ತೆಗೆಯುವ ಇವನು ಕೋಟ್ಯಾನು ಕೋಟಿ ಖರ್ಚಿನ ಬಾಬತ್ತಿಗೆ ಕೈ ಹಾಕಿದಾದರೂ ಹೇಗೆ. ತಮ್ಮ ಮನೆಯ ಅಂಗಳವನ್ನೇ ಸರಿಯಾಗಿ ನೋಡದ ಇವನು ಮಂಗಳನ ಅಂಗಳವನ್ನು ಹೊಕ್ಕು ಬರುವುದೆಂದರೇನು, ಇಷ್ಟಕ್ಕೂ ನಮ್ಮ ಕಡೆಗೆ ಕಣ್ಣೆತ್ತಿಯೂ ನೋಡದ ಆ ಚಿನ್ನಾಲಿ, ಸೊನಾಲಿ ಇವನ ಜೊತೆ ಹಾರುತ್ತಾ ಹೋಗಿದ್ದಳೆಂ ದರೆ, ಅಬ್ಬಬ್ಬಾ !!! ಹೇಗೆ ಸಾಧ್ಯ ? ಎಂದುಕೊಂಡರೂ  ಕೆಟ್ಟ ಕುತೂಹಲ ಅವರನ್ನು ಕೆಣಕದೆ ಬಿಡಲಿಲ್ಲ. ಆ ಚಿನ್ನಾಲಿಯೊಡಾನೆ ಇವನು ಏನೇನು ಚಿನ್ನಾಟವಾಡಿರಬಹುದೆಂಬ ಅವರ ಕಸಿವಿಸಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು ಸಾಯಂಕಾಲ ಅವಧಿಗೆ ಮೊದಲೇ ಜಮಾಯಿಸಿದರು.

ವಿಜಯ ಬೇಗನೆ ಬರಲಿಲ್ಲ. ಕಾದೂ, ಕಾದೂ ಎರೆಡೆರೆಡು ಬೈಟು ಟೀ  ಕುಡಿದರು. ಸಿಟ್ಟು ಪಾದರಸದಂತೆ ಏರುತ್ತ ಹೋಯ್ತು. ಏನೋ ಹುನ್ನಾರ ಮಾಡಿದ್ದಾನೆ. ಒಂದು, ಎಲ್ಲೋ ಇವನಿಗೆ ದೇಶ ಪ್ರೇಮ ಹುಚ್ಚೆದ್ದು ಭ್ರಾಂತು ಬಡಿದುಕೊಂಡಿರಬೇಕು ಅದಕ್ಕೇ ಏನೇನೋ ಬಡಬಡಿಸುತ್ತಿದ್ದಾನೆ. ಇಲ್ಲವೇ ನಮ್ಮನ್ನು ಮತ್ತೆ ಬೇಸ್ತು ಬೀಳಿಸಲು ಸಂಚು ಮಾಡಿರಬೇಕು. ಬರಲಿ, ಇವತ್ತು ಮಂಗಳನಾದಿಯಾಗಿ ಗ್ರಹಚಾರ ಬಿಡಿಸುವ; ರಾಹು ಕೇತು, ಶನಿ ಎಲ್ಲಾ ಇವತ್ತು ಈ ನನ್ಮಗನ ಒಂಭತ್ತನೇ ಮನೆಯಲ್ಲಿ ಸೇರಿಕೊಂಡಿರಬೇಕು.. ಕರಾರುವಾಕ್ ಸಮಯಪಾಲನೆಯ  ಕುರುಹು ಗೊತ್ತಿಲ್ಲ್ಲದ ಇವನು ಮಂಗಳನ ಮುಖ ನೋಡಿರುವುದು ಅಷ್ಟರಲ್ಲೇ ಇದೆ ಮಂಗ ನನ್ನ ಮಗ ಎಂದೆಲ್ಲಾ ಬೈದಾಡಿಕೊಂಡರು.

ಕಡೆಗೂ ವಿಜಯನ ಆಕೃತಿ ಕಣ್ಣಿಗೆ ಗೋಚರಿಸಿತು. ಹತ್ತಿರ ಬಂದ. ಬರುತ್ತಲೇ  ತನ್ನ ಮುಖದಿಂದ ಮುಗುಳು ನಗೆಯ ಬೆಳಕ ಬೀರಿ, ಕಂಗಳಲ್ಲೇ ಒಲವ ತೋರಿ .. ‘ಮಂಗಳದ ಈ ಸುದಿನ ಮಧುರವಾಗಲಿ’ ಎಲ್ಲರಿಗೂ ಅಂದ. ಅದು ಅವರಿಗೆ  “ಮಂಗಗಳ ಈ ಸುದಿನ “ ಅಂದಂತೆ ಕೇಳಿ ಸಿಟ್ಟು ಇನ್ನೂ ಕೆರಳಿತು. ಪುಟ್ಟ ಹೇಳಿದ “ ಲೋ ಸೋಂಬೇರಿ ನನ್ಮಗನೇ, ಮೂರು  ಮಾರು ದೂರ ಇರುವ ನಿಮ್ಮ ಮನೆಯಿಂದ ಬರುವುದೇ ನಿನಗಾಗಲ್ಲ, ಇನ್ನು ಮಾರ್ಸ್ ಮೇಲೆ ಮಜಾ ಮಾಡಿಬಂದೆ ಅಂತ ಪಟ್ಟಿ ಕುಯ್ತೀಯ ನಿನ್ನ ನಂಬ್ತೀವಲ್ಲ ನಮಗೆ ಮೆಟ್ಟಿನಲ್ಲಿ ಹೊಡ್ಕೋಬೇಕು. ಆ ಮಾರಮ್ಮಂಗೆ  ಕೋಣನ್  ಬದ್ಲು ನಿನ್ನೆ ಬಲಿಹಾಕಬೇಕು ಮಗನೆ ಅಂದ.”

ವಿಜಯ “ ಶಾಂತಿ, ಶಾಂತಿ ಪುಟ್ಟ. ನಾನಿನ್ನೂ ತಿದಿನೇ ಒತ್ತಿಲ್ಲ ಆಗಲೇ ಭುಸು ಗುಟ್ಟ್ತಾಇದೀಯ. ನೀನೊಂಥರ ಪಾಕಿಸ್ತಾನದಲ್ಲಿರೋ ಕ್ಷಿಪಣಿ ಥರ ನೋಡು. ಕುಂಡಿನಲ್ಲಿ ಯಾವಾಗಲೂ ಬೆಂಕಿ ಹತ್ಕೊಂಢಂಗೆ ಆಡ್ತೀಯ. ಸ್ವಲ್ಪ ಇರ್ರಪ್ಪಾ ಹೇಳ್ತೀನಿ” ಅಂದ

‘ಅದೇನ್ ಹೇಳ್ತೀಯೋ ನಾವೇನೇನ್ ಕೇಳ್ಬೇಕೋ,..  ನೋಡು ನಾವಾಗಲೇ ಟಿ ಎರೆಡೆರೆಡು ಸಾರಿ ಕುಡಿದಿದ್ದೀವಿ. ಈಗ ತಿನ್ನಕ್ಕೆ ಚುರುಮುರಿ ಆರ್ಡರ್ ಮಾಡು ಅಮೇಲೆ ಕಾಫೀನೂ ನೀನೇ ಕೊಡಿಸಬೇಕು’ ಅಂತ ಓಂಕಾರಿ ಮತ್ತೆ ಉಗ್ರಪ್ಪ ಇಬ್ಬರೂ ಆಗ್ರಹ ಮಾಡಿದರು.

‘ಹಂಗೇ ಆಗಲಿ ಬಿಡ್ರೋ. ನಿಮ್ಗೂ ಶಕ್ತಿ ಬೇಕಲ್ಲ. ಈಗ್ಲೇ ತಿನ್ಕೊಂಡು ಬಿಡ್ರಿ, ಆಮೇಲೆ ಕಷ್ಟ ಆಗ್ಬಹುದು’ ಅಂತ ಹೇಳಿ ಆರ್ಡರ್ ಕೊಟ್ಟ. ಅಡಿಗೆ ಭಟ್ಟ  ಗುಡಿಬಂಡೆ ಫುಲ್ ಖುಷ್ ಆಗಿ ಚುರುಮುರಿ ಬೆರೆಸಲು ಮೆಣಸಿನಕಾಯಿಗಳನ್ನು ಕಚಕಚನೆ ಕೊಚ್ಚತೊಡಗಿದ.

‘ಸರಿ ಈಗ ಅದೇನ್ ಪಿಟೀಲ್ ಕುಯ್ತೀಯೋ ಕುಯ್ಯಿ. ಆಮೇಲೆ ಏನಾದ್ರೂ ನಾನ್ಸೆನ್ಸ್ ಹೇಳಿದ್ರೆ ನೋಡ್ತಾ ಇರು ..’ ಜಗ್ಗು ಎಚ್ಚರಿಕೆ ಕೊಟ್ಟ.

‘ನೋಡ್ರಪ್ಪಾ ನಾನೇನು ಇಲ್ಲ ಸಲ್ಲದ್ದೆಲ್ಲಾ ಹೇಳ್ತಿಲ್ಲಾ. ನೀವಿ ಹೇಳಿಕೊಂಡ ಹಾಗೆ ಇದೇನು ಕನಸು ಅಲ್ಲ. ನಿಮಗೆ ಬೇಕಾದ್ರೆ ಸುಬ್ಬನ್ನೂ , ದಮ್ಮಿದ್ರೆ ಸೋನಾಲಿನೂ ಕೇಳ್ಕೊಳೀ. ಅವಳು ಹೆಂಗೂ ನಂಜೊತೆಲೇ ಬಂದಿದ್ಲಲ್ಲ…’ ಮೆಣಸಿನ ಕಾಯಿ ಕಿವುಚಿದ. ಕೇಳಿ ಅವರೆಲ್ಲರ ತಲೆ ಗಿರ್ರಂತು, ಹೊಟ್ಟೆ ಕಿರ್ರೆಂತು, ಅಂಡು  ಚುರ್ರಂತು.  ಈ  ಮೂರು ಗೇಣುದ್ದ ಇರುವ ನನ್ಮಗ ಅವಳ ಜೊತೆ ಹೆಂಗೆ ಸೆಟ್ ಅಪ್ ಮಾಡ್ಕೊಂಡ? ಅದಕ್ಕೇ ಇರಬೇಕು love is blind ಅಂತ ಅಂದಿರಬೇಕು. ಮಂಗಳಯಾನ ಅಂತ ಹಾಗೇ ಶುಭಮಂಗಳ ಮಾಡ್ಕೊಂಡು ಬಿಟ್ಟಿದ್ರೆ ಹೆಂಗಪ್ಪಾ..  ಎಂಬ  ಚಿದಂಬರ ರಹಸ್ಯವನ್ನು ಭೇದಿಸಲು ಪುಟ್ಟ ಕೇಳಿಯೇ ಬಿಟ್ಟ.

“ಮಂಗಳಯಾನಕ್ಖೋಗಿ, ಶುಭಮಂಗಳ ಮಾಡ್ಕೊಂಡು ಹಂಗೇ ವಾಪಸ ಬರ್ತಾ ಚಂದ್ರಯಾನದಲ್ಲಿ ಮಧುಚಂದ್ರನೂ ಮುಗಿಸಿಕೊಂಡು ಬಂದಿರೋ ಹಂಗಿದೆ ಯಜಮಾನ್ರು” ಉರ್ಕೊಂಡ.

ನಸುನಕ್ಕ ವಿಜಯ ತಲೆದೂಗುತ್ತಲೂ ಹುಸಿ ನಾಚಿಕೆಯನ್ನು ತೋರುತ್ತಲೂ ಎಲ್ಲರಿಗೂ ಅವರವರ ತಿಂಡಿ ಪ್ಲೇಟುಗಳನ್ನು ತಾನೇ ಆಸ್ಥೆಯಿಂದ ಕೊಡುತ್ತಾ ಜೊತೆಗೆ ಅವರ್ಗಳು ಕೇಳದೇ ಇದ್ದರೂ ಮೈಸೂರುಪಾಕನ್ನೂ ಇಡಿಸಿದ್ದ. ಅದನ್ನು ನೋಡಿದ ಅವರ ತಳಮಳ ಇನ್ನೂ ಹೆಚ್ಚಾಯ್ತು. ಈ ನನ್ಮಗ ಆ ಸೊಟ್ಟ ಮೂತಿ ಸುಬ್ಬು ಸಾಕ್ಷಿಯಲ್ಲಿ ಅ ಚಿನಾಲಿ ಕೈಹಿಡಿದು ರಿಜಿಸ್ಟರ್ ಮಾಡುವೆ ಮಾದ್ಕೊಂಡಿರಬೇಕು ,ಅದಕ್ಕೇ ಅವರ ಅಪ್ಪ ಅಮ್ಮಂಗೂ ಇವನ ಅಡ್ರೆಸ್ ಗೊತ್ತಿರಲಿಲ್ಲ. ಒಳಗೇ ಮಸಲತ್ ಮಾಡಿದ್ದಾನೆ ಮಿತ್ರದ್ರೋಹಿ ಅಂತ ಮನದಲ್ಲೇ ಬೈದುಕೊಂಡರು.

ವಿಜಯ ಶುರು ಮಾಡ್ದ .” ನೋಡ್ರಪ್ಪಾ ನಾನು ಒಂದು ವರ್ಷದಿಂದ ಆಗಾಗ ರಜಾಹಾಕಿ ಹೋಗ್ತಾ ಇದ್ದಿದ್ದು ನಿಮಗೆ ಗೊತ್ತು. ಅವಾಗೆಲ್ಲ ನಾನು ಸೊನಾಲಿ ಟ್ರೈನಿಂಗ್ ಜೊತೆನೇ ಹೋಗ್ತಾ ಇದ್ದಿದ್ದು. ಆ ಪ್ರಾಜೆಕ್ಟು ಬಹಳ ರಹಸ್ಯ. ಭೈರಪ್ಪನವರ ಯಾನದಲ್ಲ್ಲಿತ್ತಲ್ಲಾ ಆ ಥರ ಅಂದ್ಕೊಳ್ಳಿ . ನಮಗೆ ಟ್ರೇನಿಂಗ – ತರಬೇತಿ ಅಂತ ಅದೆಲ್ಲಾ, ಕಡೆಗೆ ಅದು ಯಶಸ್ವಿಯಾಗಿದ್ದಕ್ಕೆ  ನಾವು ಮಾರ್ಸ್ ಆರ್ಬಿಟಲ್ಗೇ ಹೋಗಿ  ಹಂಗೇ ಸುತ್ತಾಡಿಕೊಂಡು ಬಂದ್ವಿ” ಅಂದ

‘ಅಲ್ಲಾ..ಹಂಗೇ ಸುತ್ತಾಕ್ಕಂಡು ಬರಕ್ಕೆ ಅದೇನು ಬುಡೇನ್ ಸಾಬಿ ಬಾಡಿಗೆ ಸೈಕಲ್ನಲ್ಲಿ ಸೀಗೇಹಳ್ಳಿಗೆ ಹೋಗಿ ಬಂದಂಗಾ .. ನನ್ಮಗನೇ.. ಮಾರ್ಸ್ ಆರ್ಬಿಟಲ್ ಗೆ ರಾಕೆಟ್ ನಲ್ಲಿ ಕೂತ್ಕೊಂಡು   ಹೋಗದಲ್ವಾ..’ ಓಂಕಾರಿ ಹೂಮ್ಕಾರ ಮಾಡಿದ .

‘ಮತ್ತಿನ್ನೇನು, ಕಂಬಿ ಇಲ್ದೇ ರೈಲು ಓಡ್ಸೋದು ಇವನಿಗೆ ಹೇಳ್ಕೊಡ್ಬೇಕಾ ..’ ಜಗ್ಗು ಅನುಮೋದಿಸಿದ.

‘ನೋಡ್ರೋ ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ, ನಾವಂತೂ ರೋವರ್  ನಲ್ಲಿ ಕೂತು, ಮಾರ್ಸ್ ಆರ್ಬಿಟಲ್ ಗೆ ಹೋಗಿ ಸುತ್ತಾಕೊಂಡ್ ಬಂದ್ವಿ. ಸೊನಾಲಿ ನನ್ನ ಪಕ್ಕನೆ ಕೂತಿದ್ಲು. ನಾನು ಹೇಳಿದ ಜೋಕ್ ಗೆಲ್ಲ  ನಕ್ಕಳು.’ ಕಿಚಾಯಿಸಿದ. ಅವರೆಲ್ಲರ ಹೊಟ್ಟೆ ಯೋಗ ಗುರು ರಾಮ್ ದೇವ್ ಹೊಟ್ಟೆ ಥರ ಗುರ್ ಗುರಾ ಅಂತ ಅಲ್ಲಾಡ್ತು.

ಅದೇನ್ ಸರಿಯಾಗಿ ಬೊಗಳಿ ಪುಣ್ಯ ಕಟ್ಕೋ , ಆರ್ಬಿಟಲ್ ನಲ್ಲಿ ಎಷ್ಟು ಸುತ್ತು  ಹಾಕಿದ್ರಿ ? ಉಗ್ರಿ ವ್ಯಗ್ರನಾಗಿ ಕೇಳಿದ.

“ ಆರ್ಬಿಟಲ್ ಅಂದ್ರೆ ಏನೂ ಅಂತ ಮೊದಲು ತಿಳ್ಕೋ ಬೇಕು. ಅದೊಂದು ಮುಗಿಯದೆ ಇರುವ ಜಗಿತ. ನೀವೆಷ್ಟೇ ಜಗಿದರೂ ಮುಗಿಯುವುದೇ ಇಲ್ಲ ಹೌದೋ ಅಲ್ವೋ ?” ಕೇಳಿದ

ಉಗ್ರಿಗೆ ಅವನು ಜಗಿತ ಅಂದದ್ದು ಜಿಗಿತ ಅನ್ನೋಥರ ಕೇಳಿಸಿ  ತಲೆದೂಗುತ್ತಾ, “ಹೌದು ಹೌದು, ಆರ್ಬಿಟ್ ದೀರ್ಘವೃತ್ತಾಕಾರದ ಕಕ್ಷೆ. ವೃತ್ತಕ್ಕೆ ಎಲ್ಲಾದರೂ ಆದಿ  ಅಂತ್ಯಗಳಿರುವುದುಂಟೇ ,. ನಮ್ಮ ಬೆಂಗಳೂರಿನ ರಿಂಗ್ ರೋಡ್ ಥರ” ಸಮರ್ಥನೆ ಕೊಟ್ಟ.

“ಒರ್ಬಿಟ್ ನ ಜಗಿದು ಜಗಿದು ಬೇಜಾರಾದ್ರೆ ನೀವು ಮಾರ್ಸ್ ಗೆ ಹೋಗಬೇಕು. ಅದು ಕಂದು  ಬಣ್ಣ ಇರುತ್ತೆ,. ಮೇಲ್ಮೈ ಎಲ್ಲಾ ಒರಟು, ಸಪಾಟಾಗಿ ನೈಸಾಗಿ ಇರಲ್ಲ ; ಆದರೆ ಮಾತ್ರ ಒಳಗೆ ಮೆದು” ವಿಜಯ ಹೇಳಿದ

ಜಗ್ಗು ಅನುಮೋದಿಸುತ್ತಾ,, ಹೌದಪ್ಪಾ , ಎಲ್ಲ್ಲಾ ಫೋಟೋದಲ್ಲೂ ತೋರ್ಸಲ್ವಾ,. ಗುಡ್ಡಗಳು ಕಣಿವೆಗಳು ಇವೆ. “

“ಇಲ್ಲ,ಅದೆಲ್ಲಾ ತಪ್ಪು. ಮಾರ್ಸ್ ಮೇಲೆ ದೊಡ್ಡ ಗುಡ್ಡಗಳಿಲ್ಲ. ಬರೀ ಮೋಟು ದಿಣ್ಣೆಗಳಷ್ಟೇ. ಕಣಿವೆಗಳಂತು ಇಲ್ಲವೇ ಇಲ್ಲ”. ವಿಜಯ ಒತ್ತಿ ಹೇಳಿದ, ಅವನ ಮೀಸೆಯ ಕೆಳಗಿನ ನಗು ಮಬ್ಬುಗತ್ತಲಲ್ಲಿ ಅವರಿಗೆ ಕಾಣಲಿಲ್ಲ.   

ಸರಿ ಆಮೇಲೆ, ಕಿಟ್ಟು ಬಾಯಿ ಬಿಟ್ಟ.

“ ಸರಿ ನಮಗೆ ಆರ್ಬಿಟ್ ಜಗಿದು ಜಗಿದು ಬೇಜಾರಾಗಿ ಕಡೆಗೆ ಮಾರ್ಸ್ ಕಡೆ ನಡೆದೆವು. ಆರ್ಬಿಟ್ ಅನ್ನು ತೊರೆದು ಮಾರ್ಸ್ ಒಳಗೆ ಇಳಿಸಿದೆವು. ಅಂದ .

ಮಾರ್ಸ್ ಮೇಲಲ್ವಾ ಎಲ್ಲಾರೂ ಇಳಿಯೋದು ? ಒಳಗೆ ಇಳಿಯೋದು ಅಂದ್ರೆ ಏನು? ಕಿಟ್ಟು ಮತ್ತೆ ಕೇಳಿದ

‘ಇಲ್ಲ, ಇಲ್ಲಾ, ಮಾರ್ಸ್ ಇರೋದೇ ಒಳಗೆ ಇಳಿಯಕ್ಕೆ. ಅದು ಬಹಳ ಚೆನ್ನಾಗಿರುತ್ತೆ. ಮರಳು ಮರಳಾಗಿ, ಸ್ವಲ್ಪ ಜಿಗುಟು, ಕಚ್ಚಿಕೊಂಡು ಬಿಡುತ್ತೆ’ ಅಂದ.

‘ಹಾಗೋ., ಅಂದ್ರೆ ನೆಲ ಮೆತ್ತಗಿರುತ್ತೋ? ಕಚ್ಚಿಕೊಂಡು ಬಿಡೋಕೆ ಅಲ್ಲೇನು ನೀರಿರುತ್ತಾ?’ ಓಂಕಾರಿ ಕೇಳಿದ.

‘ಲೋ,.. ಮಂಕು ಮುಂಡೇದೆ,ನೀನು ಭೂಗೋಲದಲ್ಲಿ ಓದಿಲ್ವಾ ,. ಭೂಮಿಗೆ ಬಹಳ ಹೋಲುವ ಗ್ರಹ ಮಂಗಳ- ಅದೇ ನಮ್ಮ ಮಾರ್ಸ್. ನೀರಿರೋದು ಈಗ ಸಾಬೀತಾಯ್ತಲ್ಲ,.’ ಉಗ್ರಿ ಬಾಯಿ ಹಾಕಿದ.

‘ಹೌದು, ಚೆನ್ನಾಗಿ ಜಗಿದಷ್ಟೂ ನೀರು ಜಾಸ್ತೀನೆ , ಬಲವಾಗಿ ತಳ್ಳಿದರೆ ಒಳಗೂ ಹೋಗುತ್ತೆ.’ ಅಂತ ತಡೆಯಲಾಗದೆ ಜೋರಾಗಿ ನಕ್ಕ. ಜಗ್ಗುವಿನ ಅನುಮಾನ ಜಾಸ್ತಿ ಆಯಿತು. ಅಷ್ಟರಲ್ಲಿ ಸುಬ್ಬನ ಆಗಮನ ಆಯ್ತು.

ತಂಗಳನ್ನ ತಿನ್ನುವ ಕಂಗಾಳಿ ಹಂಗಿರುವ ಇವನನ್ನು ಆ  ಮಂಗಳನ ಅಂಗಳಕ್ಕೆ ಯಾವ   ಮಂಗ ನನ್ನ ಮಗ ಕಳಿಸಿರಬಹುದು  ಎಂದುಕೊಳ್ಳುತ್ತಾ ಅವನನ್ನೇ

‘ಏನೋ ಸುಬ್ಬು ಈ ವಿಜಯ ನೀನು ಮತ್ತೆ ಸೊನಾಲಿ ಮಾರ್ಸ್ ಆರ್ಬಿಟಲ್ ಗೆಲ್ಲಾ ಹೋಗಿ ಬಂದ್ರೇನೋ’ ಒಕ್ಕೊರಲಿನಿಂದ ಕೇಳಿದರು.

ಹಿಂದು ಮುಂದು ಗೊತ್ತಿಲ್ಲದ ಸುಬ್ಬು ಹೇಳಿದ ‘ಹೌದು ಆ ಮಾರಯ್ಯನ ಕಾಫೀ ಕ್ಲಬ್ ಇರಲಿಲ್ಲವಾ., ಅಲ್ಲೆಲ್ಲಾ ಕ್ಲಾಸಿಗೆ  ಚಕ್ಕರ್ ಹೊಡೆದು ಸೂರ್ಯನ ಸುತ್ತಾ ತಿರುಗೋ ಗ್ರಹಗಳ ಹಾಗೆ ತಿರುಗೋ ಕಾಲೇಜು ಹುಡುಗೀರು ಹುಡುಗರು ಸುತ್ತಾಕ್ತಾ ಇರಲ್ವಾ, ಅದೇ ಕಾಫೀ ಕ್ಲಬ್ ಮಾರಯ್ಯ ಮೊನ್ನೆ ಮಂಗಳಯಾನ ಯಶಸ್ವೀ ಆಗಿದ್ದಕ್ಕೆ,ಆ  ಖುಷಿಗೆ ತನ್ನ ಅಂಗಡೀನ ಮಾರ್ಸ್ ಆರ್ಬಿಟಲ್ ಅಂತ ಬದಲಾಯಿಸಿಕೊಂಡಿದಾನೆ. ಈ ನನ್ಮಗ ವಿಜಯ ಅವತ್ತು ಆ ಸುಂದ್ರಿ ಸೊನಾಲಿ ಜೊತೆ ‘ಹಾರುತ ದೂರಾ ದೂರಾ’ ಅಂತ ನಡ್ಯೋದ ಬಿಟ್ಟು ತೇಲಾಡ್ ಕೊಂಡು ವಯ್ಯಾರ ಮಾಡ್ ಕೊಂಡು ಹೋಗ್ತಾ ಇದ್ದ. ಅಲ್ಲಿ ನಾನು ಇದ್ರೂ ನನ್ನ ನೋಡದ  ಹಾಗೇ ಕಣ್ಣು ಹೊರಳಿಸಿ , ಮುಖ ತಿರುಗಿಸಿಕೊಂಡು ಹೋಗ್ತಾ ಇದ್ದ. ಸೊನಾಲಿ ಮುಂಚೆ ನನ್ನ ಜೊತೆ ಕೆಲಸ ಮಾಡಿದ್ಳಲ್ಲ ಅವಳೇ ಹಾಯ್ ಅಂದ ಬಿಟ್ಳು.ಈ ಲೋಫರ್ನ ಮುಖ ನೋಡ್ಬೇಕಾಗಿತ್ತು. ಕೇಸರೀಭಾತ್ ನಲ್ಲಿ ಜಿರಳೆ  ಸಿಕ್ಕೋರ್ ಥರ ಮಾಡ್ದ. ಕೊನೆಗೆ ಕಾಟಾಚಾರಕ್ಕೆ ನನ್ನನ್ನೂ  ಕರೆದ. ಇವಂದು ಜಟಕಾ ಗಾಡಿ ಥರ ಇದ್ಯಲ್ಲಾ, ಆ ಕಿತ್ತೋಗಿರೋ ರೋವರ್ ಕಾರು, ಅದರಲ್ಲೇ ಆ ಮಾರಯ್ಯನ ಕಾಫಿ ಕ್ಲಬ್ ಗೆ ಕರ್ಕೊಂಡ್ ಹೋದ. ಈ ನನ್ಮಗನ ಡೌಲು ನೋಡ್ಬೇಕಾಗಿತ್ತು. ಇಂದ್ರನ ಐರಾವತ ಓಡ್ಸೋ ಥರ. ಆ ಮಾರ್ಸ್ ಅರ್ಬಿಟಲ್ ಅಂತ ಹೆಸರು ಬದಲಾಯಿಸಿ ಬೋರ್ಡ್ ಅವತ್ತೇ ಹಾಕಿದ್ದಕ್ಕೆ ಅಲ್ಲಿ ಕಾಫಿ ತಿಂಡಿ ತಗೊಂಡ್ರೆ ಮಾರ್ಸ್ ಚಾಕಲೇಟು ಬಾರು , ಆರ್ಬಿಟ್ ಚ್ಯೂಯಿಂಗ್ ಗಮ್ ಪ್ಫ್ರೀ ಆಗಿ ಕೊಟ್ಟರು . ಈ ಮೀರ್ ಸಾದಿಕ್ ನನ್ಮಗ ಅವಳ ಹತ್ರ ಲಲ್ಲೆ ಹೊಡೆದದ್ದೇನು? ಸೊಟ್ಟ  ಮೂತಿ ಮಾಡ್ಕೊಂಡು ರಜನೀಕಾಂತ್ ಸ್ಟೈಲ್ ನಲ್ಲಿ ಆ ಆರ್ಬಿಟ್ ಜಗಿದಿದ್ದೇನು, ಅವಳು ಆ ಮಾರ್ಸ್ ಚಾಕಲೇಟ್ ಬಾರ್ ನ ಒಂಥರಾ ಮಾದಕವಾಗಿ ಬಾಯಿಗಿಟ್ಟುಕೊಂಡು ಕಚ್ಚಿದರೆ ಈ ನನ್ಮಗ ಕೂತಲ್ಲೇ ನಲೀತಿದ್ದ,. ನನ್ನ ಒಂದೂ ಮಾತಾಡ್ಸಿದ್ರೆ ಕೇಳು!

ಕೊನೆಗೆ ಬೋರಾಗಿ ನಾನು ಲೇಟಾಯ್ತು ಹೊರಡ್ತೀನಿ ಅಂದ್ರೆ ಮೆತ್ತಗೆ ಎದ್ಬಂದು ಪರಸ್ ಮರೆತು ಬಂದೆ ‘ಬಿಲ್ಲು’ ಕೊಡು ಅಂತ ನನಗೇ  ಮೋಸದ್ ಬಾಣ ಹೊಡೀತಾನೆ ಭಡವ. ನಾನೇನಾದ್ರೂ ಅಲ್ಲಿ ಸಿಕ್ಕಿಲ್ಲಾಂ ದಿದ್ರೆ ಎನ್ಮಾಡ್ತಿದ್ದ ಅಂತೀನಿ….” ಅಂತ ವಿಷಯವನ್ನೇ ತನ್ನ ವಿಷದ ರೀತಿಯಲ್ಲಿ ಕಕ್ಕಿದ. ‘ಇಲ್ಲಿ ನಿಮಗೆ ಏನು ಬತ್ತಿ ಇಟ್ಟಿದ್ದಾನೆ ?’ ಅಂತಲೂ ಕೇಳಿದ.

ಇಂಗು ತಿಂಗ ಮಂಗಳಂತಾದ  ಅವರ ಮೂತಿ ನೋಡಿದ ವಿಜಯನಿಗೆ ನಗು ತಡೆಯಲೇ ಆಗಲಿಲ್ಲ. ತಾಳು ನನ್ನ ಮಗನೆ ಇವತ್ತು ನಾವೆಲ್ಲಾ ಸೇರಿ ಒದ್ದು ನಿನ್ನ  ಈ ಮಾರ್ಸ್ ಯಾಕೆ ಆ ಗ್ಯಾಲಾಕ್ಸಿಯಿಂದಲೇ ಗಡಿ ಪಾರು ಮಾಡಿಬಿಡುತ್ತೇವೆ’ ಎಂದು ಎದ್ದ ಅವರಿಂದ ತಪ್ಪಿಸಿಕೊಳ್ಳಲು ಚಂಗನೆ ನೆಗೆದು ವಿಜಯ ಓಡುವಲ್ಲಿ  ಗ್ಯಾಲಾಕ್ಸಿ ನಾಮಧೇಯ ಹೊತ್ತ ಕವಚ ಖಚಿತ ಚಾಕಲೇಟಿನ ದೊಡ್ಡ ಬಿಲ್ಲೆಯೊಂದು ಅವನ ಜೇಬಿನಿಂದ ಎಗರಿ ಅವರ ಮುಂದೆ ಬಿತ್ತು. !!!

_______________________________________________________

ಋಣ: ಫೇಸ್ ಬುಕ್ ನ ಗೋಡೆಗಳ ಮೇಲೆ ಬಂದ ಕೆಲವು ಕಾಮೆಂಟ್ (ಟೀಕೆ-ಟಿಪ್ಪಣಿ) ಗಳಿಂದ  ಸ್ಫೂರ್ತಿ ಪಡೆದು ರಚಿಸಿದ ಲೇಖನ.

ಕೃತಜ್ಞತೆಗಳು : ಶ್ರೀವತ್ಸ ಜೋಶಿ ಮತ್ತು ಅವರ ಗೆಳೆಯರ ಬಳಗ  

ಸುದರ್ಶನ ಗುರುರಾಜರಾವ್ ಅವರ ಬರಹ

“ನೆಟ್ಟಿ”ಗೇರಿದ ಪಠ್ಯ @ ನೆತ್ತಿಗೇರುವುದೇ? ಅಂತರ್ಜಾಲದಲ್ಲಿ ಕನ್ನಡ ಮಾಧ್ಯಮ ಶಾಲಾ ಪಠ್ಯಗಳು

“ನೆಟ್ಟಿ”ಗೇರಿದ ಪಠ್ಯ @ ನೆತ್ತಿಗೇರುವುದೇ? ಅಂತರ್ಜಾಲದಲ್ಲಿ ಕನ್ನಡ

ಮಾಧ್ಯಮ ಶಾಲಾ ಪಠ್ಯಗಳು

ನಾವು ಶಾಲೆಯಲ್ಲಿ ಓದುತ್ತಿರುವಾಗ ಒಂದು ತರಗತಿಯಿಂದ  ಉತ್ತೀರ್ಣರಾಗಿ ಇನ್ನೊಂದು ತರಗತಿಗೆ ಹೋಗುವುದರ ಜೊತೆಗೆ ಮುಂದಿನ ತರಗತಿಯ ಪಠ್ಯ ಪುಸ್ತಕಗಳ ಬೇಟೆಯೂ ಶುರುವಾಗುತ್ತಿತ್ತು. ಏಪ್ರಿಲ್ ಹತ್ತನೇ ತಾರೀಖು ನಮ್ಮ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿ ಅಧಿಕೃತವಾಗಿ ಪಾಸಾಗಿದ್ದೇವೆಂದು ಘೋಷಣೆಯಾಗುತ್ತಿದ್ದಂತೆ ನಮಗಿಂತ  ಒಂದು ವರ್ಷ ಮುಂದಿನ ವಿದ್ಯಾರ್ಥಿ ಗಳೊಂದಿಗೆ ನಮ್ಮ ಮಾತುಕತೆ ಶಾಲಾ ಆವರಣದಲ್ಲೇ ಶುರುವಾಗುತ್ತಿತ್ತು. .

ಮುಂಚಿನ ಪರಿಚಯದ ಆಧಾರದ ಮೇಲೆ, ಪುಸ್ತಕಗಳನ್ನು ಜೋಪಾನವಾಗಿ ಬೈಂ ಡು  ಹಾಕಿ ಕಾಪಾಡಿಕೊಂಡಿದ್ದನೆಯೇ ಇಲ್ಲವೇ ಎಂಬ ಗಾಳಿಸುದ್ದಿಯ ಮೇಲೆ ಯಾರೊಂದಿಗೆ ವ್ಯವಹರಿಸುವುದೆಂಬ ಕಾರ್ಯಕಾರಿ ನಿರ್ಣಯ ಕೈಗೊಳ್ಳಲಾಗುತ್ತಿತ್ತು.  ಇನ್ನು ಮುಂದಿನ ಕ್ಲಾಸಿನ ವಿದ್ಯಾರ್ಥಿ ಹುಡುಗಿಯಾಗಿದ್ದರೆ ಅವರನ್ನು ನೇರವಾಗಿ ಮಾತುಕತೆಗೆ ಎಳೆಯಲು ಆಗದ ನಾವು ಅವರುಗಳ ಅಣ್ಣಂದಿರ ಮೂಲಕ ವ್ಯವಹಾರ ಕುದುರಿಸಿಕೊಳುತ್ತಿದ್ದೆವು.  ಪುಸ್ತಕ ಬೇಟೆಯ ದಂಡಿಗೆ ಕೊರತೆಯಿಲ್ಲದಿದ್ದರೂ ಗಿರಾಕಿಗಳಿಗೂ ಒಂದು ಸ್ಥಾನ ಮಾನ ಇರುತ್ತಿತ್ತು. ಮಾತುಕತೆಗೆ ಮುಂಚೆಯೇ ಹಣ ತೋರಿಸಬಲ್ಲ , ಪುಸ್ತಕಕ್ಕೆ ತಕ್ಷಣ ಹಣ ಪಾವತಿಸಬಲ್ಲ, ಒಂದೆರೆಡು ದಿನಗಳಲ್ಲಿ ಕೊಡಬಲ್ಲ, ಒಂದೆರೆಡು ಕಂತುಗಳಲ್ಲಿ ಕೊಡಬಲ್ಲ, ಪುಸ್ತಕ ಕೊಂಡುಹೋಗಿ ಹಣ ಕೊಡಲಾಗದೆ ಪುನಃ ಜಪ್ತಿ ಮಾಡಿಸಿಕೊಂಡ ಇತಿಹಾಸವುಳ್ಳ ಇತ್ಯಾದಿ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಈ ಕೊಡು ಕೊಳ್ಳುವ ವ್ಯವಹಾರ ನಡೆಯುತ್ತಿತ್ತು. ಶಾಲೆಗಳು ಪ್ರಾರಂಭವಾಗಿ ೩-೪ ತಿಂಗಳು ಕಳೆದರೂ ಕೆಲವೊಮ್ಮೆ ಕೆಲವು ವಿಷಯಗಳ ಪಠ್ಯ  ಪುಸ್ತಕಗಳು ಸಿಗುತ್ತಲೇ ಇರಲಿಲ್ಲ !! ಬೆಂಗಳೂರಿನಿಂದ ಹರದಾರಿ ದೂರದಲ್ಲಿದ್ದ ಕೊಂಪೆಗಳಲ್ಲಿದ್ದ ನಮಗೆ ಎಷ್ಟೋ ಬಾರಿ ಪುಸ್ತಕಗಳು ಅಂಗಡಿಗಳಿಗೆ ಬಂದು ಖರ್ಚಾಗಿ ಹೋಗುತ್ತಿದ್ದುದೂ  ತಿಳಿಯುತ್ತಿರಲಿಲ್ಲ. ಈಗಿನಂತೆ ಜೆರಾಕ್ಸ್ ಸೌಲಭ್ಯವೂ ಸುಲಭವೂ , ಅಗ್ಗವೂ ಆಗಿ ದೊರಯದ ಕಾರಣ ಈ ಬಳಸಲ್ಪಟ್ಟ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಅಷ್ಟಕ್ಕೂ ಉತ್ತಮವಾಗಿ ಕಾಯ್ದುಕೊಂಡ ಅವೇ ಪುಸ್ತಕಗಳು ಕಡಿಮೆ ಬೆಲೆಗೆ ಸಿಕ್ಕಿ ಒಂದೆರೆಡು ರೂಪಾಯಿ ಉಳಿದರೆ ಅದೂ  ಸಂತೋಷಕರವೇ ! ಐದು ಹತ್ತು ಪೈಸೆಗಳಿಗೂ ತತ್ವಾರ ಆಗಿದ್ದ ಅ ದಿನಗಳಲ್ಲಿ Tesco  ದ ಧ್ಯೇಯವಾಕ್ಯವಾದ every little helps ಎಂಬುದು ನಮ್ಮ ಅಳಿವು ಉಳಿವಿನ ವೇದವಾಕ್ಯವಾಗಿ ತ್ತೆನ್ನಿ. ಇಷ್ಟಾಗಿಯೂ ಆರು ಏಳನೇ ತರಗತಿಯಲ್ಲಿ ಸಮಾಜ ಮತ್ತು ಕನ್ನಡದ ಪಠ್ಯಗಳು ಸಿಗದೇ ೨೦೦ ಹಾಳೆಯ ಲೇಖಕ್ ಪುಸ್ತಕವೊಂದರಲ್ಲಿ ಅದರ ನಕಲು ಮಾಡಿಕೊಂಡಿದ್ದೆ.

ಇಂತಿಪ್ಪ ಈ ಸೀನಿಯರ್ ವಿದ್ಯಾರ್ಥಿಗಳೊಂದಿಗಿನ ನಮ್ಮ ಈ  ಚೌಕಾಸಿಯೊಂದಿಗೆ  ಬೇಸಿಗೆ ರಜೆಯ ಆಚರಣೆಗೆ ಶ್ರೀಕಾರ ಹಾಡಲಾಗುತ್ತಿತ್ತು.

ನನ್ನ ಮುಂದಿನ ತರಗತಿಯಲ್ಲಿದ್ದ ವಿರುಪಿ, ಪಾಂಡಿ, ಸತೀಶ, ಹೋಟ್ಲು ಮಂಜ, ಉಜಿನಪ್ಪ, ಗೋವಿಂದ ,ಬಾಬು, ದೇವರಾಜಪ್ಪ, ತಿಪ್ಪೇಸ್ವಾಮಿಯೇ ಮೊದಲಾದವರ ಬಳಿ ಮಾತಾಡಿ ಅವರ ಮನೆಗಳಿಗೆ ಎಡತಾಕಿ, ಅಳೆದು ಸುರಿದು, ಹಗ್ಗ ಜಗ್ಗಾಟ ನಡೆಸಿ, ಅವರುಗಳಿಂದ ‘ ಕೊಡುವುದಿಲ್ಲ ಹೋಗೆಂ’ಬ ಧಮಕಿಗಳಿಗೆ ಒಳಗಾಗಿ ಕೆಲವೊಮ್ಮೆ ಗೆದ್ದು, ಕೆಲವೊಮ್ಮೆ ಸೋತು,ಅಷ್ಟಿಷ್ಟು  ಕೆಲವೊಮ್ಮೆ ಮೋಸಹೋಗಿ, ಮತ್ತೆ ಕೆಲವೊಮ್ಮೆ ಮರುಳು ಮಾಡಿ, ಬೇರೆ ಯಾವುದೋ ಆಸೆ ತೋರಿಸಿ ವ್ಯವಹಾರ ಮುಗಿಸಿ ಎಲ್ಲ ಪುಸ್ತಕಗಳೊಂದಿಗೆ ಮನೆ ಸೇರಿದರೆ ಅಲ್ಲಿಗೆ ಪಾಂಡವ ಅಶ್ವಮೇಧವೂ ನಮ್ಮ ವಿಜಯೋತ್ಸವಕ್ಕೆ ಸಮವಿರುತ್ತಿರಲಿಲ್ಲ. ವರುಷ ಪೂರ್ತಿ ನಾನು ಕೂಡಿಟ್ಟುಕೊಂಡ ಹಣಕ್ಕೆ ವರುಷದ ಕೊನೆಗೆ ನಮ್ಮ ತಾಯಿ ಕೊಡುತ್ತಿದ್ದ ೫ ರೂಪಾಯಿ ಸೇರಿ ಸ್ವಲ್ಪ ಬಂಡವಾಳ ಇಟ್ಟುಕೊಂಡು ಹೋಗುತ್ತಿದ್ದ ನನಗೆ ಸ್ವಲ್ಪ ಆದ್ಯತೆ ಇತ್ತು ಎಂದೇ ಹೇಳಬೇಕು. ಮಾರುವವರಿಗೂ ಹಣ ಸಿಕ್ಕರೆ ಅವರ ಪುಸ್ತಕಗಳಿಗೂ ದಾರಿಯಾದೀತೆಂಬ ಯೋಚನೆ ಅವರಿಗೆ!

 

ನಗರಗಳಲ್ಲಿದ್ದ ನಮ್ಮ ಕೆಲವು ನೆಂಟರ ಮಕ್ಕಳಿಗೆ ಈ ಗೋಜಲು-ಪರಿಪಾಟಲುಗಳು ಇರಲಿಲ್ಲ. ಖಾಸಗೀ ಶಾಲೆಯಾದ ಕಾರಣ ಅವರಿಗೆ ಹೇಗೋ ಪುಸ್ತಕಗಳು ಹೊಂದಿಕೆಯಾಗಿಬಿಡುತ್ತಿದ್ದವು. ಆಂಗ್ಲಮಾಧ್ಯಮವೂ ಸಹ!

ನೋಟು ಪುಸ್ತಕಗಳು ಕೂಡಾ ಅವರಿಗೆ ಸಲೀಸಾಗಿ ಸಿಗುತ್ತಿದ್ದವು. ನಾವು ಅವರುಗಳ ಮನೆಗೆ ಹೋದಾಗ ಅವರ ಹಿಂದಿನ ಕ್ಲಾಸಿನ ಪುಸ್ತಕಗಳನ್ನು ಪಡೆದು ಬರೆಯದ ಹಾಳೆಗಳನ್ನು ಜೋಪಾನವಾಗಿ ಹರಿದು ಸೇರಿಸಿ ದಪ್ಪ ದಾರ ದಬ್ಬಳಗಳಿಂದ ಅವುಗಳನ್ನು ಹೊಲಿದು ತರುತ್ತಿದ್ದೆವು. ಅವರೂ ಅವುಗಳನ್ನು ಕೊಡುವಷ್ಟು ಧರಾಳಿಗಳಾಗಿದ್ದರು.

ಈಗ ಕಾಲ ಬದಲಾಗಿದೆ. ಮೊದಲ ಹಂತವೆಂಬಮತೆ ಎಲ್ಲ ಸರಕಾರೀ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಕಾಲ ಕಾಲಕ್ಕೆ ತಲುಪದ ವಿಳಂಬ ನೀತಿ ಇಂದಿಗೂ ಒಂದು ಜಾಡ್ಯವೇ ಆದರೂ ಪುಸ್ತಕ ಸಿಗುವುದರ ಭರವಸೆಯಂತೂ ಇದೆ. ಆದರೆ ಹೊರಗಡೆಯ ಮಾರಾಟವನ್ನು ನಿಷೇಧಿಸಿರುವ ಕಾರಣ ಕಾಸುಕೊಟ್ಟರೂ ನಿಮಗೆ ಪುಸ್ತಕಗಳು ಸಿಗಲಾರವು.

ಎರಡನೆ ಹಂತದಲ್ಲಿ ಈ ಪಠ್ಯಗಳನ್ನು ಅಂತರ್ಜಾಲದಲ್ಲಿ ಏರಿಸುತ್ತೇವೆಂದು ಕಳೆದ ಐದು ವರುಷಗಳಲ್ಲಿ ಹೇಳುತ್ತಾ ಮೂಗಿಗೆ ತುಪ್ಪ ಹಚ್ಚಿ ಕೂಡಿಸಿದ್ದ ಕರ್ನಾಟಕ  ಘನವೆತ್ತ ಸರಕಾರ ಕೊನೆಗೂ ಆ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಕಲಿಸಲ್ಪಡುವ ಎಲ್ಲ ಭಾಷಾ ಮಾಧ್ಯಮಗಳ ಎಲ್ಲ ವಿಷಯಗಳ ಪಠ್ಯ ಪುಸ್ತಕಗಳನ್ನು “ನೆಟ್ಟಿ” ಗೆ ಏರಿಸಿದೆ.  ಕನ್ನಡ ಮಾಧ್ಯಮದ ಪುಸ್ತಕಗಳು ಈಗ ಸಮಗ್ರವಾಗಿ ಒಂದು ಕಡೆ ಲಭ್ಯವಾಗಿವೆ. ಕನ್ನಡಮಟ್ಟಿಗೆ ಇದೊಂದು ಸಕಾರಾತ್ಮಕವಾದ, ಧನಾತ್ಮಕವಾದ ಬೆಳವಣಿಗೆ. ಹಾಗೆಂದು ಕನ್ನಡ ಪಠ್ಯಗಳನ್ನು ಅಂತರ್ಜಾಲದಲ್ಲಿ ದೊರೆಯುವಂತೆ ಮಾಡುವ ಕೆಲವು ಪ್ರಯತ್ನಗಳು ಹಿಂದೆ ನಡೆದಿದ್ದವು. ಅಮೇರಿಕಾದ ಕನ್ನಡಕ್ಕೆ ಮಿಡಿಯುವ ಕೆಲವು ಜೀವಗಳು ಸ್ಕ್ಯಾನ್ ಮಾಡಿದ ಕೆಲವು ಪುಸ್ತಕಗಳ , ಬಿಡಿ ಹಾಳೆಗಳನ್ನು ಒಂದೆಡೆ ಸೇರಿಸಿ ಆಸಕ್ತರಿಗೆ ಕೊಡಮಾಡುವ ಕೆಲಸ ಮಾಡಿದ್ದರು. ಸರಳತೆಯ, ಸಮಗ್ರತೆಯ ನಿಟ್ತಿನಿಂದ ಇವು ಹೆಚ್ಚು ಪ್ರಯೋಜನಕಾರಿಯಾಗುವಲ್ಲಿ ಸೋತವು. ನಾನು ಸಹಾ ಭಾರತದಲ್ಲಿ ಪುಸ್ತಕಗಳಿಗಾಗಿ ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದೆ . ಇನ್ನು ಆ ಚಿಂತೆ ಇಲ್ಲ.

 

ತಮಿಳುನಾಡು ಸರಕಾರದ ಶಿಕ್ಷಣ ಪ್ರಾಧಿಕಾರವು ಕನ್ನಡ ಪುಸ್ತಕಗಳನ್ನುಅಂತರ್ಜಾಲದಲ್ಲಿ  ಬಿಡುಗಡೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾದ  ಸಂಸ್ಥೆ. ಬಣ್ಣದ ಚಿತ್ರ, ಸರಳತೆ , ವಿಷಯ ವಿಸ್ತಾರ,ನಿರೂಪಣೆಯಿಂದ ಗುಣಮಟ್ಟದ ಪಠ್ಯಗಳನ್ನು ಕೊಡಮಾಡಿದೆ. ಒಂದನೇ ತರಗತಿಯಿಂದ ೧೨ ನೇ ತರಗತಿಯವರೆಗೆ ಎಲ್ಲಾ ವಿಷಯಗಳ ಪುಸ್ತಕಗಳು ಕನ್ನಡ ,ತೆಲುಗು, ಮಲೆಯಾಳಂ ಹಾಗೂ ತಮಿಳು ಮಾಧ್ಯಮದಲ್ಲಿ ದೊರೆಯುತ್ತವೆ. ಮೊದಲು ವರ್ಷದ ಪೂರ್ಣ ಪಠ್ಯ ಲಭ್ಯವಿತ್ತು . ಈಗ ಸೆಮಿಸ್ಟರ್ ಪದ್ಧತಿಯಲ್ಲಿ ಎರೆದು ಮೂರು ಭಾಗಗಳಾಗಿ ವಿಂಗಡಿಸಿ ವಿಭಜಿಸಿದ ಕಾರಣ ಸ್ವಲ್ಪ ಅವ್ಯವಸ್ಥೆ ಅನಿಸುತ್ತದೆ.  ಮೊದಲು ಕನ್ನಡ ಭಾಷಾ ಭಾರತಿ ಪಠ್ಯ ವೂ ಇತ್ತು. ಈಗ ಭಾಷಾ ಭಾರತಿ ಆರನೆ ತರಗತಿಯಿಂದ ಮಾತ್ರ ಲಭ್ಯ. ಇದೂ ಸಹಾ ಒಂದು ಕೊರತೆ! ಆದಾಗ್ಯೂ ಇದೊಂದು ಬಲು ಉಪಯೋಗಿಯಾದ ಪ್ರಯತ್ನ. ನನ್ನ ಮಕ್ಕಳಿಗೆ ಕನ್ನಡವನ್ನು ಇದರ ಸಹಾಯದಿಂದ ಕಲಿಸುತ್ತಿದ್ದೇನೆ. ೧೨ನೇ ತರಗತಿಯ ಕನ್ನಡ ಪುಸ್ತಕದಲ್ಲಿ ಪೂರ್ಣಚಂದ್ರ ತೇಜಸ್ವಿಯವರ “ಕೃಷ್ಣೇಗೌಡನ ಆನೆ” ಕಥೆ ಇದೆ. ಧರೆಗಿಳಿಸಿಕೊಂಡು ಓದಿ.

NCERT ಅವರ ಜಾಲತಾನದಲ್ಲಿಯೂ ಪಠ್ಯಗಳಿವೆ. ಹಿಂದೀ, ಇಂಗ್ಲೀಶು, ಉರ್ದು ಮಾಧ್ಯಮದ ಈ ಪಠ್ಯಗಳು ಕನ್ನಡ ಕಲಿಕೆಗೆ ಸಹಕಾರಿಯಾಗಿಲ್ಲ.  ೬-೮ ವರುಶಗಳಿಂದ ಇದು ಚಾಲ್ತಿಯಲ್ಲಿದ್ದರೂ ಪ್ರಾಂತೀಯ ಭಾಷೆಗಳನ್ನು ಕಡೆಗಣಿಸಲಾಗಿತ್ತು.  ಭಾರತದ ಅಧಿಕೃತ ಭಾಷೆಗಳಲ್ಲಿ ಕಲಿಕಾಸಾಮಗ್ರಿಗಳು ದೊರೆಯುವಂತೆ ಮಾಡಲು ಕೇಂದ್ರಸರಕಾರದ “ಭಾರತವಾಣಿ “ ಎಂಬ ಮಹತ್ವಾಕಾಂಕ್ಷಿ  ಯೋಜನೆಯ ಸಹಯೋಗದಲ್ಲಿ ಕನ್ನಡ ಪುಸ್ತಕಗಳು ಕರ್ನಾಟಕದಿಂದ ಕಡೆಗೂ  ಬೆಳಕು ಕಂಡಿವೆ ಹಾಗೂ ಇದನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಎಲ್ಲ ವಿಷಯದ ಪುಸ್ತಕಗಳು ಇವೆ. ಕನ್ನಡಿಗರಾದ ಬೇಳೂರು ಸುದರ್ಶನ ಅವರ ತಂಡವು ಶ್ರದ್ಧೆ ಪ್ರೀತಿಗಳಿಂದ ನಮಗೆ ಕೊಡಮಾಡಿದ್ದಾರೆ.

ಇಲ್ಲಿ ಎಲ್ಲ ಪುಸ್ತಕಗಳನ್ನು PDF ಆವೃತ್ತಿಯಲ್ಲಿ ನೋಡಬಹುದು , ಅಮ್ಗೈಲಿನ ಸ್ಲೇಟುಗಳಲ್ಲಿ, ಮಡಿಲಲ್ಲಿ ಮಗುವಾಗಿ ಮಾಡಿಸಿಕೊಂಡು ಮಲಗುವ, ಬಿಚ್ಚಿಕೊಂಡು ಆಡುವ ಗಣಕ ಯಂತ್ರಗಳಲ್ಲಿ ಧರೆಗಿಳೀಸಿಕೊಂಡು ಶೇಖರಿಸಿಡಬಹುದು, ಓದಬಹುದು, ಕಲಿಯಬಹುದು, ಕಲಿಸಬಹುದು!!

ಕರ್ನಾಟಕದ ಈ ಪುಸ್ತಕಗಳನ್ನು ಕರ್ನಾಟಕದ “ಕಣಜ” ದಲ್ಲೂ ಇವುಗಳನ್ನು ಪಡೆಯಬಹುದಾಗಿದೆ. ಆದರೆ, not for  copy  ಎಂಬ ನೀರಿನ ಕಲೆ ಕಡುಕಪ್ಪಾಗಿ ಕಾಣುವ ಕಾರಣದಿಂದ ಕಿರಿಕಿರಿ ಯಾಗುತ್ತದೆ. ಭಾರತವಾಣಿಯಲ್ಲಿ ಈ ತೊಂದರೆಯಿಲ್ಲ.  ಭಾರತವಾಣಿ ಎಂಬ ದೂರದೃಷ್ಟಿಪೂರ್ಣ, ಬಹುತ್ವಾಕಾಂಕ್ಷಿ  ಯೋಜನೆಯ ಒಳಹೊಕ್ಕು ಒಮ್ಮೆ ನೋದಿಬನ್ನಿ. ಇಡೀ ಭಾರತದ ಭಾಷೆಗಳಲ್ಲಿರುವ ಜ್ಞಾನ ಗಂಗೆಯನ್ನು ಒಂದೆಡೆ ಸೇರಿಸುವ ಸಾಗರದೋಪಾದಿ ಯೋಜನೆ. ನಿಘಂಟು, ಪಠ್ಯಗಳು, ಜೊತೆಗೆ ಕನ್ನಡದ ವಿಶ್ವಕೋಶ ಸಹಾ ಇಲ್ಲಿ ಲಭ್ಯ! ಮಹಾರಾಷ್ಟ್ರ ಸರಕಾರದ ಕನ್ನಡದ ಪಠ್ಯಗಳು ಸಹ ಇಲ್ಲಿ ಲಭ್ಯ  ಇವೆ. ಎಲ್ಲ ತರಗತಿಯ ಎಲ್ಲ ಪುಸ್ತಕಗಳು ಇನ್ನೂ ಇಲ್ಲ. ಆದರೆ ಗುಣಮಟ್ಟದ ದೃಷ್ಟಿಯಿಂದ ತಮಿಳುನಾಡಿನ ಪುಸ್ತಕಗಳಿಗಿಂತ ಉತ್ತಮವಾದುವು. ಭಾರತವಾಣಿ ಬೆಳೆಯುತ್ತಾ ಹೋದಂತೆ ನಮ್ಮ ಆಯ್ಕೆಯ ಸಾಧ್ಯತೆಗಳು ವಿಸ್ತಾರವಾಗುತ್ತವೆ. ಬಹು ಮಾಧ್ಯಮ ಜ್ಞಾನವಾಹಿನಿಯೂ ಅಭಿವ್ರುದ್ಧಿಗೊಳ್ಳುತ್ತಿದೆ ಎಂದು ಕೇಳಿ ಬಲ್ಲೆ. ಕನ್ನಡದ ಉಳಿವು ಬೆಳವಣಿಗೆಗೆ ಆದ ಸಹಾ ಸಹಾಯಕವಾಗಬಹುದು, ಕಾಯಬೇಕು.

 

ಕನ್ನಡದ ಮೊದಲ ರಾಷ್ಟ್ರಕವಿ ಹೀಮೆಯ ಶ್ರೀ ಗೋವಿಂದಪೈ ಅವರ  ‘ ತಾಯೆ ಬಾರಾ ಮೊಗವ ತೋರ ಕನ್ನಡಿಗರ ಮಾತೆಯೇ’ ಎಂಬ ಹಾಡಿನಲ್ಲಿ

ಎನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

ಮೃಗದ  ಸೇಡು  ನಮ್ಮ ಪಾಡು ಪರರ ನುಡಿಗೆ ಮಿಡುಕುವ

ಕನ್ನಡ ಕಸ್ತೂರಿಯನ್ನ ಹೊಸತು ಸಿರಿಂ ತೀಡದೆನ್ನ

ಸುರಭಿ ಎಲ್ಲಿ? ನಿನದನ್ನ ನವಶಕ್ತಿಯನೆಬ್ಬಿಸು

ಹೊಸ ಸುಗಂಧದೊಸಗೆಯಿಂದ  ಜಗದಿ ಹೆಸರ ಹಬ್ಬಿಸು

ಎನ್ನುವ  ಮಾತುಗಳಿವೆ.

ಸರಳ, ಸುಂದರ, ಸಶಕ್ತವಾದ ಕನ್ನಡ ಭಾಷೆ ತನ್ನ ಜನರಿಂದಲೇ ಅವಗಣನೆಗೆ ಒಳಗಾಗಿ ಅಳಿವು ಉಳಿವಿನ ಹೋರಾಟದಲ್ಲಿ ನಲುಗುತ್ತಿರುವಾಗ ಇದೊಂದು ಆಶಾದಾಯಕವಾದ  ಬೆಳವಣಿಗೆ. ತಾಂತ್ರಿಕ ಯುಗದ ಪಾಶ್ಚಾತ್ಯೀಕರಣದ ಹೊಡೆತಕ್ಕೆ ಸಿಕ್ಕಿ ಬಳಲಿರುವ ಭಾಷೆಗೆ ಇದು ಒಂದು ತಾತ್ಕಾಲಿಕವಾದ ಶಕ್ತಿ ನೀಡುವ ಸೂಜಿಮದ್ದು.

ಉಪಸಂಹಾರ:

ಇಲ್ಲಿಗೆ ಎರಡು ವರುಷಗಳ ಹಿಂದೆ ನನ್ನ ಪ್ರೌಢಶಾಲಾ ಶಿಕ್ಷಕರೊಬ್ಬರ ಭೇಟಿ ಮಾಡಿದ್ದೆ. ನಾವು ಮಕ್ಕಳಾಗಿ, ವಿದ್ಯಾರ್ಥಿಗಳಾಗಿ ಅಂದು ನಾವು ಪಡುತ್ತಿದ್ದ ಪರಿಪಾಟಲುಗಳನ್ನು  ಅವರು ಮೆಲುಕುಹಾಕಿದರು.’’ ಅಂದು ನಿಮಗೆ ಕಲಿಯುವ ಆಸೆಯಿತ್ತು, ಜ್ಞಾನದ ಹಸಿವಿತ್ತು. ನಿಮ್ಮ ಆ ಅವಶ್ಯಕತೆಗಳನ್ನು ಪೂರೈಸುವ ಸೌಲಭ್ಯವಾಗಲಿ, ಆರ್ಥಿಕ ಶಕ್ತಿಯಾಗಲೀ ನಮಗಿರಲಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು, ಪೆನ್ಸಿಲ್ ಸೈಕಲ್ ,ಊಟ, ಬಟ್ಟೆ ಎಲ್ಲವೂ ಉಚಿತವಾಗಿ  ದೊರೆಯುತ್ತದೆ. ಆದರೆ ಕಲಿಯುವಂತ ಹಸಿವೆ ಅವರಲ್ಲಿ ನಮಗೆ ಕಾಣುವುದಿಲ್ಲ’’.

ಅವರಾಗ ಹೇಳಿದ ಎರಡು ಮಾತುಗಳು ಆಗಾಗ  ನನ್ನ ಮನಃ ಪಟಲದಲ್ಲಿ ಹಾಯ್ದುಹೋಗುತ್ತಿರುತ್ತವೆ.

ಕನ್ನಡಕ್ಕೆ ಕುರಿತಾದ ಈ ಹೊಸ ಬೆಳವಣಿಗೆಯೂ ಹಸಿವಿಲ್ಲದವನಿಗೆ ಬಡಿಸಿದ ಮೃಷ್ಠಾನ್ನವಾಗದಿದ್ದರೆ ಸಾಕು. ಅಂಗೈಯಲ್ಲಿ ಅರಮನೆಯಿದ್ದರೇನು ಭಾಗ್ಯ? ಕನ್ನಡದ ಮಕ್ಕಳು ಅನುಭವಿಸುವ ಅದೃಷ್ಟವಿಲ್ಲದ  ಭೋಗ ಅಭಾಗ್ಯರಾಗದಿದ್ದರೆ ಸಾಕು..

ನೇರವಾಗಿ ‘’ನೆಟ್ಟಿ’’ ಗೆ ಏರಿದ ಕನ್ನಡ , ತನ್ನ ಮಣ್ಣಿನ ಋಣವಿರುವ ಕನ್ನಡ ಕೂಸುಗಳ ನೆತ್ತಿಗೇರುವುದೇ ಎಂಬುದು ಯಕ್ಷ ಪ್ರಶ್ನೆ

ಗೋವಿಂದ ಪೈ ಗಳ ಈ ಸಾಲುಗಳೊಮಡಿಗೆ, ಕನ್ನಡದ ವೈಭವಕ್ಕೆ ಹಾತೊರೆಯುತ್ತಾ,,,

‘’ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ

ನೀಗದಂತೆ  ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ

ನಮ್ಮೆದೆಯಂ ತಾಯೆ ಬಲಿಸು

ಎಲ್ಲರ ಬಾಯಲ್ಲಿ ನೆಲೆಸು

ನಮ್ಮ ಮನನೊಂದೆ ಕಲಸು

ಇದನೊಂದನೆ ಕೋರುವೆ

ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ? ‘’

——————————————————–

‘’ನೆಟ್ಟಿ’’ಗೇರ್ದ ನುಡಿಯು ನೆತ್ತಿಗೇರಲದು ಅಸಾಧ್ಯವೇ ?

ಕನ್ನಡದ ಕಲಿಗಳಾಗಿ ಆಂಗ್ಲವನ್ನು ಮಣಿಸಿ- ಖಾಸಗಿ ಶಾಲೆಗಳ ಕಡೆಗಣಿಸಿ.

ಕನ್ನಡದ ಕಲಿಗಳಾಗಿ ಆಂಗ್ಲವನ್ನು ಮಣಿಸಿ-

ಖಾಸಗಿ ಶಾಲೆಗಳ ಕಡೆಗಣಿಸಿ.

ಕನ್ನಡ ಮಾಧ್ಯಮದಲ್ಲಿದ್ದು ಇಂಗ್ಲಿಷ್ ಕಲಿಯಲು/ಕಲಿಸಲು ಸುಲಭ ವಿಧಾನ

೧.ಪರಿಚಯ

೨.ಕಲಿಕೆಯ ಕ್ರಮ (ಸ್ಥೂಲ ರೂಪು ರೇಷೆ )

೩. ಇಂಗ್ಲಿಷ್ ಭಾಷೆಯ ವ್ಯವಸ್ಥಿತ ಅಭ್ಯಾಸ ಮತ್ತು ಇಂಗ್ಲಿಷ್ ಕಲಿಕೆಯ ಪರಿಕರಗಳು- ಭಾಷಾಂತರ ಪಾಠಮಾಲೆ

೪.ಉಪಸಂಹಾರ ಮತ್ತು ಪರಿಸಮಾಪ್ತಿ.

ಪರಿಚಯ :

ಕನ್ನಡದಲ್ಲಿ ಕಲಿತರೆ ಭವಿಷ್ಯವಿಲ್ಲ, ಇಂಗ್ಲೀಷ್  ಮಾಧ್ಯಮ ಎಂದರೆ ಮಾತ್ರವೇ ಯಶಸ್ಸಿನ ಮಂತ್ರ ಎಎಂಬೊಂದು ನಂಬಿಕೆಯನ್ನು ಜನಮಾನಸದಲ್ಲಿ ಬಲವಾಗಿ ಬಿತ್ತಿ ಕಾಲಕ್ರಮದಲ್ಲಿ ನೀರೆರೆರ್ದು ಪೋಷಿಸಿಕೊಂಡು ಬಂದ ಖಾಸಗಿ ವ್ಯವಸ್ಥಾಪಕರು, ಅವರೊಡನೆ ಕೈಜೋಡಿಸಿ ತಮ್ಮ ನೆಲ-ಜಲ- ಭಾಷೆ ಸಂಸ್ಕೃತಿಗೆ ಚೂರಿ ಹಾಕಿದ ಭ್ರಷ್ಟ ರಾಜಕಾರಿಣಿಗಳು, ಧೃತರಾಷ್ಟ್ರನಂತೆ ತಿಳಿದು ಸುಮ್ಮನಿದ್ದ ಸರಕಾರವು ಜನರನ್ನು ಸುಲಿದು ಹಣದ ಹೊಳೆಯನ್ನು ತಮ್ಮಕಡೆಗೆ ಹರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿವೆ. ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಬಹಳಷ್ಟು ಬಾರಿ ಸರಳವೇ ಇರುತ್ತದೆ. ಅದನ್ನು ಗುರುತಿಸಿ ಅಳವಡಿಸಿಕೊಳ್ಳುವ ಭಾರ ಪ್ರಜ್ಞಾವಂತ ಸಮಾಜದ್ದಾಗಿರಬೇಕು. ಅಂತಹ ಸರಳೋಪಾಯಗಳನ್ನು ಹುಡುಕಿಸಿ ಪಸರಿಸುವ ಕೆಲಸ ಶಿಕ್ಷಣ ಮತ್ತು ಸಾಹಿತ್ಯ-ಸಂಸ್ಕೃತಿ ಇಲಾಖೆಗಳದ್ದಾಗಿರಬೇಕು. ಆದರೆ ಎಲ್ಲರೂ ಕಳ್ಳರೇ ! ಗೊಂದಲವನ್ನು ಹಬ್ಬಿಸಿ ಅದರ ಲಾಭ ಪಡೆಯಲು ನಿಂತ ಬೇಲಿಯೇ ಎದ್ದು ಹೊಲ ಮೇಯ್ದ ಪರಿಣಾಮವಾಗಿ ಇಂದು ಕನ್ನಡ ಶಾಲೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಖಾಸಗಿಗೆ ಪೈಪೋಟಿ ಕೊಡುವಲ್ಲಿ ಸೋಲುತ್ತಿವೆ. ಅವುಗಳಲ್ಲಿ ಕೆಲವನ್ನು ನೋಡೋಣ

 

೧. ನಗರ ಭಾಗಗಳಲ್ಲಿ ಕನ್ನಡ ಶಾಲೆಗೆ ಹೋಗುವ ಬಹುತೇಕರು ಬಡತನದ ರೇಖೆಗಿಂತ ಕೆಳಗಿನವರು- ಮನೆಯಲ್ಲಿ ಯಾವ ಮಾರ್ಗದರ್ಶನ ಇವುಗಳಿಗೆ ದೊರೆಯುವುದು ಅಪರೂಪ

೨. ಗ್ರಾಮಾಂತರ ಶಾಲೆಗಳಲ್ಲಿ ಹಾಗೂ ಕುಗ್ರಾಮಗಳಲ್ಲಿ ಇದೆ ಬಡತನದ ಸಮಸ್ಯೆ ಜೊತೆಗೆ ಶಿಕ್ಷಕರ ಅಭಾವ, ಅಧೋಗತಿಯ ಕಟ್ಟಡಗಳು ಇತ್ಯಾದಿ.

೩. ಶಿಕ್ಷಕರಿಗೆ ಕಲಿಸುವುದೊಂದನ್ನು ಬಿಟ್ಟು ಬೇರೆಲ್ಲವನ್ನೂ ತಲೆಗೆ ಕಟ್ಟಿ ಅವರ ಬದುಕನ್ನು ಮೂರಾಬಟ್ಟೆ ಮಾಡಿರುವ ಸರಕಾರ ಮಕ್ಕಳ ಅಧೋಗತಿಗೆ ತಾನು ಕೈಜೋಡಿಸಿದೆ.

೪..ಖಾಸಗಿ ಶಾಲೆಯ ಗೀಲಿಟುಗಳನ್ನು ತೋರಿಸಲಾಗದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ನವರಂಗಿ ದುನಿಯಾದಲ್ಲಿ ಆಕರ್ಷಣೆ ಕಳೆದು ಕೊಳ್ಳುತ್ತಿವೆ. ಸಮವಸ್ತ್ರ ಧರಿಸಿ, ಹೊರೆ ಬ್ಯಾಗು ಹೊತ್ತು ಬೂಟು ಹಾಕಿ ಕುತ್ತಿಗೆ ಕೌಪೀನವನ್ನು ಕಟ್ಟಿ ಶಾಲೆಗೆ ಹೊರಟರೆ ತಮ್ಮ ಮಕ್ಕಳು ಮುಂದೆ ಬಂದರು ಎಂದು ಭ್ರಮಿಸುವ ತಂದೆ ತಾಯಿಯರಿಗೂ ಕಡಿಮೆ ಏನು ಇಲ್ಲ.

 

ಉತ್ತಮ ಹಿನ್ನೆಲೆ/ಮನೆಯಲ್ಲಿ ಸಿಗುವ ಪ್ರೋತ್ಸಾಹ/ಹೆಚ್ಚುವರಿ ಪಾಠದ ಅನುಕೂಲ /ಸೌಲಭ್ಯಗಳಿಂದ ಮುಂದೆ ಬಂದ ವಿದ್ಯಾರ್ಥಿಗಳ ಜಾಹಿರಾತುಗಳನ್ನು ದೊಡ್ಡದಾಗಿ ತಂದೆತಾಯಿಯರು ಸುರಿದ ಹಣದಿಂದಲೇ ಕೊಟ್ಟು ಮತ್ತಷ್ಟು ಹಣ ಮಾಡಿಕೊಳ್ಳುವ ಖಾಸಗಿ ಶಹಳೆಗಳಿಗೆ/ಇಂಗ್ಲಿಷ್ ಮಾಧ್ಯಮಗಳ ಶಾಲೆಗಳಿಗೆ ಸರಕಾರಿ ಶಾಲೆಗಳು ಯಾವ ಸ್ಪರ್ಧೆಯನ್ನು ಒಡ್ಡಲಾರವು. ಸಾಮಾಜಿಕ ಸಮಾನತೆಯನ್ನು ಮೀಸಲಾತಿಯ ಮೂಲಕ ತರಲು ಶ್ರಮಿಸುವ ಸರಕಾರ, ಸಮಾನತೆಯ ಮೂಲಭೂತ ಅಂಶವಾದ ಶಿಕ್ಷಣ ಕ್ಷೇತ್ರವನ್ನು ಅಸಮಾನತೆಯ ಆಡುಂಬೊಲವಾಗಿ ಪರಿವರ್ತಿಸಿರುವುದೊಂದು ಈ ಶತಮಾನದ ಬಹುದೊಡ್ಡ ವಿಪರ್ಯಾಸ.

ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿತವರೆಲ್ಲರೂ ಯಶಸ್ಸಿನ ಹಾದಿ ಹಿಡಿದವರೇನಲ್ಲ. ಸಾಧಾರಣದಿಂದ ಹಿಡಿದು ಅಸಾಧಾರಣ ಸಾಧನೆ ಮಾಡಿದವರಂತೆಯೇ ಸಾಕಷ್ಟು ಪ್ರಮಾಣದ ಸಂಖ್ಯೆಯಲ್ಲಿ ಎಲ್ಲಿಯೂ ಸಲ್ಲದ ಪ್ರಜೆಗಳೂ ಇದ್ದಾರಾದರು ಅವರುಗಳ ಪರಿಚಯ ಸಮಾಜಕ್ಕೆ ಇರುವುದೇ ಇಲ್ಲ.ಹಾಗೂ ಅದನ್ನು ಹಾಗೆಯೇ ಇರುವಂತೆ ನೋಡಿಕೊಳ್ಳಲಾಗುತ್ತದೆ. ಅದೇ ರೀತಿ ಕನ್ನಡ ಶಾಲೆಯಲ್ಲಿಯೇ ಓದಿ ಸಾಧನೆ ಮಾಡಿದವರ ವಿವರಗಳು ವ್ಯವಸ್ಥಿತವಾಗಿ ಪ್ರಚಾರಗೊಳ್ಳುವುದಿಲ್ಲ. ಹಾಗಾಗಿ ಇದೊಂದು ರೀತಿಯ ಭ್ರಮೆಯನ್ನು ಜನಮಾನಸದಲ್ಲಿ ಹುಟ್ಟು ಹಾಕುತ್ತದೆ. ಇಂತಹ ದುಬಾರಿ ಶಾಲೆಯ ಮಕ್ಕಳು ಕಲಿಯುವೆ ಠುಸ್ಸ್-ಪುಸ್ ಇಂಗ್ಲೀಷು ಬಹುತೇಕ ವ್ಯವಸ್ಥಿತವಾಗಿ ವ್ಯಾಕರಣಬದ್ಧವಾಗಿ ಕಲಿತ ಇಂಗ್ಲಿಷ್ ಆಗಿರುವುದಿಲ್ಲ. ನನ್ನ ಸಂಬಂಧಿಕರ ಮಾಕ್ಲು ಪ್ರತಿಷ್ಠಿತವಾದ ದುಬಾರಿ ಶಾಲೆಗೆ ಹೋಗುತ್ತಾರಾದರು ಅವರ ಜ್ಞಾನದ ಹರವು, ತಿಳುವಳಿಕೆಯ ಮಟ್ಟ ಅತ್ಯುತ್ತಮ ಎಂದೇನೂ ನನಗೆ ಅನ್ನಿಸಿಲ್ಲ. ಸ್ಪೆಲ್ಲಿಂಗ ನ ತಪ್ಪುಗಳನ್ನು ಅವರು ಮಾಡುತ್ತಾರೆ. ನನ್ನ ತಂಗಿಯ ಮಗಳು ಸಹ ಬಸವನ ಗುಡಿಯ ಪ್ರತಿಷ್ಠಿತ ಶಾಲೆಗೆ ಹೋಗುತ್ತಿದ್ದರೂ, ಇಂಗ್ಲೀಷು ಮಾಧಯಮದಲ್ಲಿ ಓದುತ್ತಿದ್ದರು, ಇಂಗ್ಲೀಷಿನಲ್ಲಿದ್ದ ಗಣಿತ ಹಾಗೂ ವಿಜ್ಞಾನವನ್ನು ಸರಿಯಾಗಿ ಕಲಿತಿರಲೇ ಇಲ್ಲ!!. ನಾನು ಭಾರತಕ್ಕೆ ಬಂದಾಗ, ಸತತವಾಗಿ ದೂರವಾಣಿಯ ಮೂಲಕ ಪಾಠ ಪ್ರವಚನಗಳನ್ನು ಮಾಡಿ ಆಕೆಯನ್ನು ಸುಧಾರಿಸಬೇಕಾಯಿತು. ಒಂದು ಸಾರಿ ಕಲಿಕೆಯ ವಿಧಾನ , ಮನನ ಮಾಡುವ ಕಲೆ ಅವಳಿಗೆ ತಿಳಿದ ನಂತರ ತನ್ನ ಕಲಿಕೆಯನ್ನು ತಾನೇ ಮುಂದುವರಿಸಿಕೊಂಡು ಇಂದು ಯಶಸ್ಸನ್ನು ಕಂಡುಕೊಂಡಿದ್ದಾಳೆ. ಇಂತಹ ಹಲವಾರು ಅನುಭವಗಳು ನನಗಾದ ಕಾರಣ, ಕನ್ನಡ ಮಾಧ್ಯಮದಲ್ಲೇ  ನಾನು ಕಲಿತ ಕಾರಣ, ನನ್ನ ಸುತ್ತಲಿನ ಹಲವಾರು ಜನರು ಲಕ್ಷಅಂತರ ಸುರಿದು ಮಕ್ಕಳನ್ನು ಓಡಿಸಲು ಪಡುತ್ತಿರುವ ಪರಿಪಾಟಲುಗಳನ್ನು ನೋಡಿರುವ ಕಾರಣಕ್ಕಾಗಿ, ಈ ಲೇಖನ ಬರೆಯಿಟ್ಟಿದ್ದೇನೆ. ಶಿಕ್ಷಣ ಅನ್ನುವುದು ಯಾವತ್ತೂ ದುಬಾರಿಯಾಗಬಾರದು ಸ್ವಸ್ಥ ಸಮಾಜಕ್ಕೆ ಅದು ತಳಹದಿಯಾಗಬೇಕು. ಹಾಗೆಯೇ ಶಿಕ್ಷಣ ಮತ್ತು ಕಲಿಕೆಗಳು ಕಬ್ಬಿಣದ ಕಡಲೆಯು ಆಗಬಾಬಾರದು. ಅದನ್ನು ಸರಳೀಕರಿಸಿ ಕಲಿಸುವ ಸಾಧ್ಯತೆಗಳನ್ನು ಸತತವಾಗಿ ನಾವು ಅನ್ವೇಷಿಸುತ್ತಿರಬೇಕು. ಕಲಿಕೆಗೆ ಬೇಕಾದ ಒಂದು ಪ್ರಮುಖ ಅಂಶವೆಂದರೆ ಶ್ರದ್ಧೆ ಮತ್ತು ಸತತ ಪರಿಶ್ರಮ. ಇವುಗಳನ್ನು ಬಿಟ್ಟು ಕಲಿಯುವುದು ಅಸಾಧ್ಯ. ಇಂಗ್ಲೀಷು ಸಹ ಇದಕ್ಕೆ ಹೊರತಲ್ಲ.

ಇಂಗ್ಲಿಷನ್ನು ಕಲಿಯಲು ಹಲವಾರು ಮಾರ್ಗಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ. ಸಾವಿರಾರು ಪುಸ್ತಕಗಳು, ಸಾವಿರಾರು ರೂಪಾಯಿ ಶುಲ್ಕದ ಧಿಢೀರ್ ಕೋರ್ಸುಗಳು, ರ್ಯಾಪಿಡೆಕ್ಸ್ ಇಂಗ್ಲಿಷ್ ಪುಸ್ತಕಗಳು ಇತ್ಯಾದಿ ಇತ್ಯಾದಿ. ಅವುಗಳಿಗೆ ಹೋಗಿ ಇಂಗ್ಲಿಷಿನಲ್ಲಿ ಪರಿಣಿತರಾದವರನ್ನು ನಾನು ಕಾಣೆ. ಇದ್ದರು ಇರಬಹುದು. ಆದರೆ ಅವುಗಳು ವಯಸ್ಕರಿಗೆ ಹೇಳಿಮಾಡಿಸಿದ್ದಂತಹವು. ಮಕ್ಕಳಿಗೆ ಮೊದಲಿನಿಂದಲೇ ಕನ್ನಡದ ಜೊತೆ ಜೊತೆಗೆ ಇಂಗ್ಲಿಷ್ ಕಲಿಸುವ ಸುಲಭ ಸಾಧ್ಯ ವಿಧಾನವನ್ನು ನಾನು ಇಲ್ಲಿ ಚರ್ಚಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಭಾಷೆಯಷ್ಟೇ ಅಲ್ಲ ನಮ್ಮ ಇತಿಹಾಸ ಸಂಸ್ಕೃತಿ ಸಾಹಿತ್ಯ ಜೀವನ ಮೌಲ್ಯಗಳ ಅಪೂರ್ವ ಭಂಡಾರ ಮಕ್ಕಳದ್ದಾಗುತ್ತದೆ. ಜೊತೆಗೆ ಇಂಗ್ಲೀಷು ಒಂದು ಭಾಷೆಯಾಯಾಗಿ ಕಲಿತರೆ ಮುಂದಿನ ವಿದ್ಯಾಭ್ಯಾಸದಲ್ಲಿ ಅದು ಉಪಯೋಗಕ್ಕೂ ಬರುತ್ತದೆ. ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದು ಬಿಸುಡುವ ಖಾಸಗಿ ಸಂಸ್ಥೆಗಳಿಗೆ ಅಮೂಲಾಗ್ರ ಕಲಿಕೆಯ ಕಡೆ ಗಮನ ಇರುವುದಿಲ್ಲ. ವಾಣಿಜ್ಯಿಕ ಉದ್ದೇಶಕ್ಕೆ ನಿಂತ ಅವುಗಳಿಗೆ  ದೇಶ  ಭಾಷೆಯ ಸೊಗಡನ್ನು ತಿಳಿಸುವುದಾಗಲಿ, ಸಂಸ್ಕೃತಿಯನ್ನು ಬೆಳೆಸುವುದಾಗಲೀ , ದೇಶಪ್ರೇಮವನ್ನು ಬಿತ್ತುವುದಾಗಲಿ, ಸಾಹಿತ್ಯ-ಸಂಗೀತಗಳ ಬಗೆಗೆ ಆಸಕ್ತಿಯನ್ನು ಕೆರಳಿಸುವುದಾಗಲಿ ಮಾಡುವುದರಲ್ಲಿ ಯಾವುದೇ ಆಸ್ಥೆಯನ್ನು ವಹಿಸಲಾರವು. ವಿದ್ಯೆಯನ್ನು ತಪಸ್ಸೆಂದು, ಗುರುಗಳನ್ನು ದೇವರೆಂದು ಭಾವಿಸಿ ಪೂಜಿಸಿದ ದೇಶದಲ್ಲಿ ಈ ಬೆಳವಣಿಗೆಗಗಳು ಭಾವನಾರಹಿತವಾದ, ಅಂಕಿ ಸಂಖ್ಯೆಗಳೊಂದಿಗೆ ಆಡಬಲ್ಲ ಜೈವಿಕ ರೊಬೋಟುಗಳನ್ನು ತಯಾರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ-ಸಾಂಸ್ಕೃತಿಕ ಪಲ್ಲಟಗಳು, ಮೌಲ್ಯಗಳಲ್ಲಿ ಆಗುತ್ತಿರುವ ಬದಲಾವಣೆಗಳು, ವಿಭಕ್ತ ಕುಟುಂಬಗಳು ಹೆಚ್ಚಾಗಿ, ಅವಿಭಕ್ತ ಕುಟುಂಬಗಳಲ್ಲಿ ಹಿರಿಯರು ಮೂಲೆಗುಂಪಾಗಿ,  ಕಾರ್ಟ್ಯೂನುಗಳೇ ಜೀವನವೆಂದು, ಜೀವನ ಎಂಬುವುದು ವಿಡಿಯೋ ಗೇಮು ಆಡಿದಂತೆ ಎಂದು ತಿಳಿದಿರುವ ಮಕ್ಕಳ ಪೀಳಿಗೆಯನ್ನು ಬೆಳೆಸುತ್ತಿದ್ದೇವೆ ಹಾಯಾಗು ಅದಕ್ಕಾಗಿ ಹಗಲು ಇರುಳು ದುಡಿದು ಆ ಹಣವನ್ನು ಖಾಸಗಿ ಶಾಲೆಗಳ ಎರಡನೇ ದರ್ಜೆ ಶಿಕ್ಷಣಕ್ಕೆ ಸುರಿಯುತ್ತಿದ್ದೇವೆ. ಮೇಲೆ ಹೇಳಿದ ಬದಲಾವಣೆಗಳು ಉಳ್ಳವರ ಸ್ತರದಲ್ಲಿ ಹೆಚ್ಚಾಗಿ ಕಂಡುಬಂದರೂ, ಮಧ್ಯಮ ಹಾಗೂ ಕೆಳ ಮಧ್ಯಮ ಸ್ತರದಲ್ಲೂ ಇದೊಂದು ಪಿಡುಗಾಗಿ ಪರಿಣಮಿಸಿದೆ. ಇಂಗ್ಲಿಷ್ ಶಾಲೆಗಳಿಂದ ಮಕ್ಕಳ ಸಮಗ್ರ ಬೆಳವಣಿಗೆ ಆಗುತ್ತದೆ ಎಂಬ ಭ್ರಮೆ ಇವರಲ್ಲಿ ಯುಎಂಬಿವೆ. ಆದರೆ ಭ್ರಮೆಯೇ ವಾಸ್ತವ ಅಲ್ಲವಷ್ಟೆ. ಕಾನನದ ಎಂಬ ತಾಯ್ನುಡಿಯಲ್ಲಿ ಕಲಿತು ಸಾಹಿತ್ಯ-ಸಂಸ್ಕೃತಿ-ಭಾವ ಬಂಧನಗಳ ಮಧ್ಯೆ ಬೆಳೆದ ಮಗುವಿನ ವ್ಯಕ್ತಿತ್ವ ಗಟ್ಟಿಯಾದದ್ದು. ಮುಂದೆ ಜೀವನದಲ್ಲಿ ಕಂಡು-ಕಾಣದೆ ಬಂದೆರಗುವ ಸವಾಲುಗಳನ್ನು ಮೆಟ್ಟಿ ನಿಂತು ಎದುರಿಸುವ ಎದೆಗಾರಿಕೆಯನ್ನು ಬೆಳೆಸುವ ವಿದ್ಯಾಭ್ಯಾಸವನ್ನು ಕೊಡುವತ್ತ ಆಸಕ್ತಿ ಇರುವ ಆದರೆ ಗೊಂದಲದಲ್ಲಿ ಬಿದ್ದಿರುವ ಬಿದ್ದಿರುವ ಪೋಷಕರಿಗಾಗಿ ನಾನು ಈ ಲೇಖನವನ್ನು ಬರೆಯುತ್ತಿದ್ದೇನೆ. ಇದು ನನ್ನ ಸ್ವಂತ ಅನುಭವವು ಹೌದು. ಠಸ್ ಪುಸ್ ಎಂದು ಇಂಗ್ಲಿಷಿನಲ್ಲಿ ಮಾತನಾಡಿದಾಕ್ಷಣ ಕ್ಲಿಷ್ಟ ವಿಷಯಗಳಾದ ಗಣಿತ ವಿಜ್ಞಾನಗಲಾಗಲಿ, ಸಮಾಜ ಶಾಸ್ತ್ರ-ಇಂಗ್ಲಿಷ್ ವ್ಯಾಕರಣವಾಗಲೀ  ಅನಾಯಾಸವಾಗಿ ತಲೆಗೇರುವುದಿಲ್ಲ.ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಕಲಿತು ಇಂಗ್ಲಿಷನ್ನು ಒಂದು ಭಾಷೆಯಾಗಿ ಮಾತ್ರವೇ ಕಲಿತ ಮಕ್ಕಳಿಗೆ ಅವು ಕಬ್ಬಿಣದ ಕಡಲೆಗಳಾಗಬೇಕಾಗಿಯೂ ಇಲ್ಲ. ವಾಸ್ತವವಾಗಿ ಗಣಿತ ವಿಜ್ಞಾನಗಳನ್ನು ಅರ್ಥೈಸಿಕೊಳ್ಳಲು ಆಳವಾದ ಇಂಗ್ಲೀಷ ಜ್ಞಾನ ಬೇಕಾಗಿಯೇ ಇಲ್ಲ. ಸಾಧಾರಣವಾದ ಹಿಡಿತದ ಜೊತೆಗೆ, ಮೂಲಭೂತ ವೈಜ್ಞಾನಿಕ, ಗನೀತಿಕ ಪರಿಕಲ್ಪನೆಗಳು ಭದ್ರವಾಗಿದ್ದರೆ ಸಾಕು. ಇದನ್ನು ಮಕ್ಕಳಲ್ಲಿ ಮೊದಲಿನಿಂದಲೇ (ಯಾವ ಮಾಧ್ಯಮದಲ್ಲಿ ಕಲಿತರೂ ) ಬೆಳೆಸಬೇಕು. ತರ್ಕಬದ್ಧವಾಗಿ ಯೋಚಿಸುವ ಹಾಗೂ ವ್ಯವಸ್ಥಿತವಾಗಿ, ನಿಯಂಮಿತವಾಗಿ ಅಭ್ಯಾಸ ಮಾಡುವ ಪ್ರವೃತ್ತಿ ಇದ್ದರೆ ಸಾಕು.

ಕಲಿಕೆಯ ಕ್ರಮ (ಸ್ಥೂಲ ರೂಪು ರೇಷೆ )

ಯಾವುದೇ ವಿಷಯವನ್ನು ಕಲಿಯುವಾಗ ಆ ಕಲಿಕೆಯು ಹಂತ ಹಂತವಾಗಿ ಬೆಳೆಯುತ್ತದೆ. ಎಲ್ಲಕ್ಕೂ ಮೂಲವಾದದ್ದು ಅಕ್ಷರ ಜ್ಞಾನ. ಅಕ್ಷರಗಳನ್ನು ಸೇರಿಸಿ ಪದ ಸಮೂಹವಾಗುತ್ತದೆ. ಪದಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಬಳಸಿದಾಗ ವಾಕ್ಯವಾಗುತ್ತದೆ. ಕನ್ನಡವಾಗಲಿ ,ಇಂಗ್ಲಿಷಾಗಲಿ ಇದೆ ರೀತಿ ಕಲಿಯುವುದು. ಮೊದಲು ಮಾತನಾಡಿ ಅಭ್ಯಾಸವಾದ ಭಾಷೆಯನ್ನು ಓದುವುದರ ಮೂಲಕ , ಹೊಸ ಪದಗಳನ್ನು ಕಲಿತು ಅವುಗಳ ಉಪಯೋಗವನ್ನು ಮಾಡಿಕೊಳ್ಳುವುದರ ಮೂಲಕ ಮಗುವಿನ ಭಾಷಾ ಸಾಮರ್ಥ್ಯ ಬೆಳೆಯುತ್ತಾ ಹೋಗುತ್ತದೆ. ಪದಸಂಪತ್ತಿನ ವ್ಯಾಪ್ತಿ ಕ್ರಮೇಣವಾಗಿ ವೈಜ್ಞಾನಿಕ , ಗನೀತಿಕ, ಸಾಮಾಜಯಿಕ ಶಾಸ್ತ್ರದ ವಿಷಯಗಳಿಗೂ ಬೆಳೆದು ಪ್ರತಿ ಶಬ್ದದ ಅರ್ಥ ಹಾಯಾಗು ಅನ್ವಯವನ್ನು ಮಗುವಿನಲ್ಲಿ ಬೆಳೆಸಲಾಗುತ್ತದೆ. ಇದು ಹಲವು ಹಂತಗಳ್ಲಲಿ ಆಗುತ್ತದೆ- ಕೆಲವೊಮ್ಮೆ ಪ್ರತ್ಯಕ್ಷವಾಗಿ, ಕೆಲವೊಮ್ಮೆ ಪರೋಕ್ಷವಾಗಿ, ಕೆಲವೊಮ್ಮೆ ತಾನೇ ತಾನಾಗಿ ನಮ್ಮ ಅರಿವಿಗೆ ಬರದಂತೆ ಆದರೂ ಇವುಗಳನ್ನು ಸ್ಥೂಲವಾಗಿ

ಶ್ರವಣ-ಮನನ-ಪಠಣ-ಮನನ-ನಿಧಿಧ್ಯಾಸನ ಎಂಬ ಪ್ರಕ್ರಿಯೆಗಳಿಂದಲೂ, ಅದು ಮುಂದುವರಿದು ಮೇಲಿನ ತರಗತಿಗಳಲ್ಲಿ, ಪ್ರಬುದ್ಧಾವಸ್ಥೆಗೆ ಬರುವಾಗ

ಅಧ್ಯಯನ- ಮನನ- ಪಠಣ- ಮನನ-ನಿಧಿಧ್ಯಾಸನ ಎಂಬ ಹಂತಗಳನ್ನು ಒಳಗೊಳ್ಳುತ್ತದೆ. ಇದರಲ್ಲಿ ಪಾಠ-ಪ್ರವಚನ ಕೇಳುವುದು, ನಮ್ಮ ನಮ್ಮಲ್ಲಿ ಚರ್ಚಿಸಿ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದು ಸೇರುತ್ತದೆ.

ನಿಧಿಧ್ಯಾಸನಕ್ಕೆ ಹೋಗುವ ಮೊದಲು ಕಲಿಯುವ ಪಾಠಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಬಾಯಿಪಾಠ ಮಾಡಿರಲೇ ಬೇಕು. ಕೆಲವರು ಅದರ ಅರ್ಥವನ್ನು ಅರಿತು, ಕೆಲವರು ಪೂರ್ತಿ ಅರಿಯದೆಯೇ ಬಾಯಿ ಪಾಠ ಮಾಡುತ್ತಾರೆ. ಅದರಲ್ಲಿ ತಪ್ಪಿಲ್ಲ. ಆದರೆ ನಿಧಿಧ್ಯಾಸನ ಎಂಬ ಹಂತವನ್ನು (ಅಂದರೆ ನಾವು ಓದಿ-ಕೇಳಿ ತಿಳಿದ ವಿಚಾರವನ್ನು ಒರೆಗೆ ಹಚ್ಚಿ ನಮ್ಮ ಸ್ವಂತ  ಪದಗಳಲ್ಲಿ ಅದರ ಪರಿಕಲ್ಪನೆಯನ್ನು ವಿವರಿಸಲು ಸಾಧ್ಯ ಮಾಡಿಕೊಳ್ಳುವವರೆಗೂ) ಆ ಪಾಠವನ್ನು ಕಲಿತಿದ್ದೇನೆ ಎಂದೆನ್ನಲಾಗದು.

ಮೇಲೆ ವಿವರಿಸಿದ ಭಾರತೀಯವಾದ ಕಲಿಕೆಯ ಪರಿಕಲ್ಪನೆ ನಿಮಗೆ ಅರ್ಥವಾಗದಿದ್ದರೆ ಈ ಕೆಳಗಿನ learning  pyramid  ಅನ್ನು ನೋಡಿ. ಬೆಂಜಮಿನ್ ಬ್ಲೂಮ್ ಎಂಬ ತಜ್ಞ ಇದನ್ನು ಪ್ರಸ್ತುತ ಪಡಿಸಿದ್ದು.

ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಪ್ರಾಥಮಿಕ ಜ್ಞಾನ ಅಕ್ಷರಗಳು-ಪದಗಳು-ಪದಸಮೂಹಗಳು. ಯಾವುದೇ ಭಾಷೆಯ ಮೇಲೆ ಪ್ರಭುತ್ವಕ್ಕೆ ಇವು ಮೂಲ ಸಲಕರಣೆಗಳು. ಪದಗಳ ಜ್ಞಾನ ಇದ್ದರೆ ೪೦% ಭಾಗ ಭಾಷೆ ಬಂದಂತೆಯೇ. ಉಳಿದ ಕೆಲಸ ಅವುಗಳನ್ನು ಕೂಡಿಸಿ  ಸೂಕ್ತವಾದ ಪುರುಷ, ಕಾಲ, ಇತ್ಯಾದಿಗಳನ್ನು ಸೇರಿಸಿ ಓದುವ, ಬರೆಯುವ ಮಾತನಾಡುವ ವಿಧಾನ ಅಷ್ಟೇ.

ಈ ಪದ ಸಂಪತ್ತನ್ನು ಬೆಳೆಸಲು ಮಗುವಿಗೆ ಕನ್ನಡ ಹಾಗೂ ಇಂಗ್ಲಿಷ್ ವರ್ಣಮಾಲೆಯ ಪರಿಚಯ ಇರಲೇ ಬೇಕು ಹಾಗೂ ಅದು ಇಂದಿನ ಬಹುತೇಕ ಮಕ್ಕಳು ೫ ವರ್ಷದೊಳಗೆ ಚನ್ನಾಗಿಯೇ ಕಲಿತಿರುತ್ತವೆ.ಮನೆಯಲ್ಲಿ ಆಡುವ ಕನ್ನಡ ಭಾಷೆಗೆ (ಅಥವಾ ಕೆಲವು ಕುಟುಂಬಗಳಲ್ಲಿ ಇಂಗ್ಲೀಷೇ ಸಂವಹನದ ಭಾಷೆಯಾಗಿದ್ದಲ್ಲಿ ಕನ್ನಡದ ಪರ್ಯಾಯ ಪದಗಳನ್ನು ಪರಿಚಯಿಸುವುದು) ಪರ್ಯಾಯವಾದ ಇಂಗ್ಲಿಷ್ ಪದಗಳನ್ನು ಪರಿಚಯಿಸುತ್ತಾ ಹೋಗಬೇಕು. ಕುಳಿತುಕೋ ಎಂಬುದಕ್ಕೆ sit ,ತಿನ್ನು ಎನ್ನುವುದಕ್ಕೆ eat ಎಂಬಂತಹ ಸರಳ ಪದಗಳಿಂದ ಹಿಡಿದು ಸಂಕೀರ್ಣ ಪದಪರಿಚಯವನ್ನು ಹಂತ ಹಂತವಾಗಿ ಬೆಳೆಸುತ್ತಾ ಹೋಗ್ಗಬೇಕು.

ತಂದೆ ತಾಯಿಯರಿಗೆ ಇದಕ್ಕಾಗಿ ಸ್ವಲ್ಪ ಪರಿಶ್ರಮ ಹಾಕಬೇಕಾಗುತ್ತದೆ. ಮಾನಸಿಕ ಹಾಗೂ ಬೌದ್ಧಿಕ ಪೂರ್ವ ತಯಾರಿ ಅವಶ್ಯಕ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.

ಮಗುವು ಮುಂದೆ ಕಲಿಯುತ್ತಾ ಹೋದಂತೆ ಗಣಿತ ವಿಜ್ಞಾನ ವಿಷಯಗಳು ಸಹ ಪಠ್ಯಕ್ರಮದಲ್ಲಿ ಸೇರಿಕೊಳ್ಳುತ್ತವೆ. ಆಗ ಕನ್ನಡದಲ್ಲಿ (ಅಥವಾ ಇಂಗ್ಲಿಷಿನಲ್ಲಿ ) ಬರುವ ವೈಜ್ಞಾನಿಕ ಪದಗಳಿಗೆ ಪರ್ಯಾಯವಾದ ಇಂಗ್ಲಿಷ್ (ಅಥವಾ ಕನ್ನಡ) ಪದಗಳನ್ನು ಪರಿಚಯಿಸುವುದಲ್ಲದೆ ಅವುಗಳನ್ನು ಬಾಯಿಪಾಠ ಮಾಡಿಸಬೇಕು. ಉದಾಹರಣೆಗೆ: velOcity ವೇಗ ,acceleration ವೇಗೋತ್ಕರ್ಷ, ratio  ಅನುಪಾತ, square ವರ್ಗ, parallel ಸಮಾನಯಂತರ, calculus ಕಲನ  ಶಾಸ್ತ್ರ ಇತ್ಯಾದಿ. ಹೀಗೆ ಜೀವಶಾಸ್ತ್ರ, ರಸಾಯನ ಶಾಸ್ತ್ರಗಳಲ್ಲೂ ಬರುವ ಪಾರಿಭಾಷಿಕ ಪದಗಳನ್ನು ಕಲಿಸುತ್ತಾ ಹೋದರೆ, ಅರ್ಧ ಭಾಷೆ ಕಲಿತಂತೆಯೇ.

ಪ್ರತಿಯೊಂದರ definition ಗಳನ್ನು ಕನ್ನಡದಲ್ಲಿ ವಿವರಿಸಿ ಹೇಳಿದರೆ ಅದು ನೆನಪಿನಲ್ಲಿ ಉಳಿಯುವುದು ಅಲ್ಲದೆ ಕಲಿಕೆಯು ಸರಾಗವು, ಸುಲಭವೂ, ಜ್ಞಾಪಕ ಇಡಲು ಅನುಕೂಲವು ಆಗುವುದು. ಪದಗಳು ಪ್ರತಿನಿಧಿಸುವ ವೈಜ್ಞಾನಿಕ ಅಥವಾ ಗಣಿತೀಯ ಪರಿಕಲ್ಪನೆಯ ಚಿತ್ರ ಮಗುವಿನ ಮನಃಪಟಲದಲ್ಲಿ ಮೂಡಿದರೆ ಸಾಕು, ಭಾಷೆಯನ್ನು ಮೀರಿದ ಅರ್ಥವ್ಯಾಪ್ತಿ ಅದಕ್ಕೆ ತಿಳಿಯುವುದಲ್ಲದೆ ಮುಂದೆ ಅದೇ ವಿಚಾರಗಳನ್ನು ಕಾಲೇಜುಗಳಲ್ಲಿ ಇಂಗ್ಲಿಷಿನಲ್ಲಿ ಓದುವಾಗ ಅರ್ಥೈಸಿಕೊಳ್ಳಲು ಕಷ್ಟಕರವಾಗಲಾರದು.

ಈ ಕೆಲಸವನ್ನು ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರೂ ಮಾಡಿದರೆ ಇಂಗ್ಲಿಷಿನ ವ್ಯಾಮೋಹ ಹರಿಯುವುದಲ್ಲದೆ ಕನ್ನಡದ ಉಳಿವಿಗೂ ಸಹಕಾರಿಯಾಗುತ್ತದೆ.

ಇದು ಕನ್ನಡದ ಜೊತೆಗೆ ಇಂಗ್ಲಿಷಿನ ವಿಷಯಗಳಿಗೆ ಸಂಬಂಧಿಸಿದಂತೆ ಸಮಾನಾಂತರ ಕಲಿಕೆ ಹೇಗೆ ಸಾಧ್ಯ ಎಂಬುದನ್ನು ಪರೀಕ್ಷಿಸುವ ಒಂದು  ವಿಧಾನದ ಪಕ್ಷಿ ನೋಟ.

ಇದರ ಜೊತೆಗೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ವ್ಯವಸ್ಥಿತವಾಗಿ ಹೇಗೆ ಕಲಿಯಬಹುದು ಎಂಬುದನ್ನು ನೋಡೋಣ.

ಇಂಗ್ಲಿಷ್ ಭಾಷೆಯ ವ್ಯವಸ್ಥಿತ ಅಭ್ಯಾಸ ಮತ್ತು ಇಂಗ್ಲಿಷ್ ಕಲಿಕೆಯ ಪರಿಕರಗಳು-

ಭಾಷಾಂತರ ಪಾಠಮಾಲೆ.

ವ್ಯವಸ್ಥಿತವಾಗಿ ಇಂಗ್ಲಿಷ್ ಭಾಷೆಯ ಕಲಿಕೆಯನ್ನು ಭಾಷಾಂತರ ಮಾಡುವ ವಿಧಾನದ ಮೂಲಕ ಕಲಿಸುವುದು ಪರಿಣಾಮಕಾರಿಯಾದ ವಿಧಾನ ಎಂದು ನನ್ನ ಭಾವನೆ. ಈ ಪ್ರಕ್ರಿಯೆಗೆ ಮೊದಲು ಒಂದು ( ಇಲ್ಲಿ ಕನ್ನಡ) ಭಾಷೆಯ ಮೇಲೆ ಸಾಧಾರಣದಿಂದ ಉತ್ತಮ ಎನ್ನುವಷ್ಟು ಹಿಡಿತ ಮಗುವಿಗೆ ಬಂದಿರಬೇಕು. ಅಂದರೆ ಕನ್ನಡವನ್ನು ಸರಾಗ ವಾಗಿ ಓದಿ ಬರೆಯುವಷ್ಟು ಮತ್ತು ಓದಿದ ವಾಕ್ಯಗಳನ್ನು ಅರ್ಥೈಸುವಷ್ಟು ಹಿಡಿತ ಬಂದಿರಬೇಕು. ಅಷ್ಟುಮಟ್ಟಿಗಿನ  ಭಾಷಾ ಪ್ರಭುತ್ವ ಸಾಮಾನ್ಯವಾಗಿ ೪ ಅಥವಾ ಐದನೇ ತರಗತಿಗೆ ಬರಬಹುದೆಂದು ನನ್ನ ಭಾವನೆ,. ಮಗುವು ಚುರುಕಾಗಿದ್ದು ಕಲಿಕೆಯ ಸಾಮರ್ಥ್ಯವನ್ನು ತೋರಿಸಿದರೆ ಬಹುಷಃ ೩ ನೇ ತರಗತಿಗೆ ವ್ಯವಸ್ಥಿತ ಇಂಗ್ಲಿಷ್ -ಕನ್ನಡ ಭಾಷಾಂತರ ಪಾಠಮಾಲೆಯನ್ನು ೩ನೇ ತರಗತಿಯಿಂದ ಕಳಿಸಿದರೆ ೭ನೇ ತರಗತಿಗೆ ಬರುವ ವೇಳೆಗೆ ಈ ಪಥ್ಯಮಾಲೆಯ ೩ ಪುಸ್ತಕಗಳನ್ನು ಮುಗಿಸಬಹುದು. ಅಷ್ಟರಲ್ಲಿ ನಿಮ್ಮ್ ನಿರೀಕ್ಷೆಗೂ ಮೀರಿದ ಇಂಗ್ಲಿಷ್ ಭಾಷೆಯ ಹಿಡಿತ ಮಗುವಿಗೆ ಬಂದಿರುವುದನ್ನು ಕಾಣುವಿರಿ.

ಖಾಸಗಿ ಶಾಲೆಯ ಮಕ್ಕಳಿಗೆ ಬೇಕಾದ್ದು-ಬೇಡಾದ್ದು ಎಲ್ಲವೂ ಸೇರಿ, ಇದರ ಜೊತೆಗೆ ಹೊಂವರ್ಕ್ ಎನ್ನುವ ಯಾಂತ್ರಿಕ  ಯಮಯಾತನೆಯನ್ನು ಹೇರಿ ಕಲಿಸುವ ಕಾರಣ ಮಕ್ಕಳು ಆಸಕ್ತಿದಾಯಕವಾಗಿ, ಕಲಿಕೆಯನ್ನು ಒಂದು ಸಂತೋಷದ ಚಟುವಟಿಕೆಯೇನೆಂದು ನೋಡುವುದನ್ನೇ ಮರೆಯುತ್ತವೆ.ಸರಕಾರಿ ಶಾಲೆಗಳಲ್ಲಿ ಈ ಹೊರೆ ಇರುವುದಿಲ್ಲ ಹಾಗೂ ಅವುಗಳು ಕಲಿಯುವ ವಿಷಯಗಳು ಸಹಾ ಮಕ್ಕಳ ಸಾಮರ್ಥ್ಯವನ್ನು ಅವಲಂಬಿಸಿಯೇ ಸಿದ್ಧಪಡಿಸುವುದರಿಂದ ಈ ಬಗೆಯ ಸೃಜನಾತ್ಮಕ, ಧನಾತ್ಮಕ, ಸಧೃಢ ಬೆಳವಣಿಗೆಗೆ ಸಮಯ ವ್ಯಯಿಸಲು ಸಾಕಷ್ಟು ಅವಕಾಶ ಇರುತ್ತದೆ. ಇದು ಬೇಡುವುದು ನಿಮ್ಮ ಸಮಯವನ್ನು ಹಾಗೂ ಬದ್ಧತೆಯನ್ನು ಮಾತ್ರವೇ.

ಇಂಗ್ಲಿಷನ್ನು ಓದುವುದು, ಬರೆಯುವುದು ಮತ್ತು ಅರ್ಥೈಸಿಕೊಳ್ಳುವುದು ಈ ಪುಸ್ತಕಗಳ ಅಭ್ಯಾಸದಿಂದ ಸಾಧ್ಯವಾಗುತ್ತದೆ. ಪೋಷಕರಿಗೆ ಇಂಗ್ಲೀಷು ಚೆನ್ನಾಗಿ ಬರುವುದಿದ್ದರೆ, ಮಾತನಾಡುವುದನ್ನು ಜೊತೆ ಜೊತೆಗೆ ಸ್ವಲ್ಪ ಸ್ವಲ್ಪವಾಗಿ ಕಳಿಸಬಹುದು. ಪದ ಪರಿಚಯವನ್ನು ಮೊದಲಿನಿಂದಲೇ ಆರಂಭಿಸಿರದಿದ್ದರೂ , ಈ ಪಾಠಮಾಲೆಯ ಪುಸ್ತಕಗಳನ್ನು ಕ್ರಮವಾಗಿ ಮುಗಿಸುವಷ್ಟರಲ್ಲಿ ಸಾಕಷ್ಟು ಪದಭಂಡಾರ ಬೆಳೆದೆ ಇರುತ್ತದೆ. ಇದರ ಜೊತೆಗೆ ವೈಜ್ಞಾನಿಕ, ಗಣಿತೀಕವಾದ ಪದಗಳನ್ನು ,ಅವುಗಳ ಅರ್ಥವನ್ನು ಆಗಾಗ, ಸೂಕ್ತಸಮಯಗಳಲ್ಲಿ ಪರಿಚಯಿಸಿ,ವಿವರಿಸಿ, ಮನನ ಮಾಡಿಸಿ, ಬಾಯಿಪಾಠ ಮಾಡಿಸಿಬಿಟ್ಟರೆ ಸಾಕು. ಮೊದ ಮೊದಲು ಪ್ರತಿಯೊಂದು ಹಂತವನ್ನು ದಾಟುವಾಗಲು ಹೆಚ್ಚು ಸಮಯ ಹಿಡಿದರೂ, ಕ್ರಮೇಣ ಮಕ್ಕಳು ಸ್ವಾಧ್ಯಾಯ ಮಾಡುವಸ್ಜ್ತು ಬೆಳೆದರೆ ಮಾರ್ಗದರ್ಶಕರಿಗೆ ಹೆಚ್ಚಿನ ಹೊರೆ ಬೀಳದು. ಮಾತನಾಡುವುದನ್ನು YOUTUBE ವಿಡಿಯೋ ಹಾಗೂ BBC ವಾರ್ತೆ,ಹಾಗೂ ಮತ್ತೆ ಕೆಲವು ಇಂಗ್ಲಿಷ್ ಕಾರ್ಯಕ್ರಮಗಳನ್ನು ಕೇಳಿ ಅಭ್ಯಾಸ ಮಾಡಿಕೊಳ್ಳಬಹುದು.

ಹೀಗೆ ಸತತ ಪರಿಶ್ರಮದಿಂದ  ಸುಲಭ, ಸಧೃಢ ಹಾಗೂ ಸಮರ್ಥವಾಗಿ ಕನ್ನಡ -ಇಂಗ್ಲಿಷ್ ಭಾಷೆಗಳನ್ನು ಕಲಿತು, ನಮ್ಮ ಕನ್ನಡವನ್ನು ಕಲಿತು ಉಳಿಸಿ ಬೆಳೆಸುವುದಾರೆ ಈ ಲಕ್ಷಅಂತರಗಳನ್ನೇಕೆ ಖರ್ಚು ಮಾಡಬೇಕು ಎಂಬುದನ್ನು ಯೋಚಿಸಿರಿ. ಸರಕಾರಿ ಶಾಲೆಗಳಲ್ಲಿ ಎಲ್ಲವೂ  ಉಚಿತ.  ಮನೆಯಲ್ಲಿ ಕುಳಿತು ಸ್ವಲ್ಪ ನಾವು ಅಭ್ಯಾಸ ಮಾಡಿ ಮಕ್ಕಳಿಗೂ ಮಾರ್ಗದರ್ಶನ ಮಾಡಿದರೆ ಕೌಟುಂಬಿಕ ಅನುಬಂಧವು ಬೆಳೆಯುವುದಲ್ಲದೆ ಕಲಿಕೆಯು ಶಕ್ತಿಯುತವಾಗಿರುತ್ತದೆ,.. ಹಾವು ಕೊಂದು  ಹದ್ದಿಗೆ ಹಾಕಿದರೆ ನಮಗುಳಿಯುವುದು ಕೊಂದ ಪಾಪವೆ ಹೊರತು ಮತ್ತೇನಿಲ್ಲ. ಜೊತೆಗೆ ಕಥೆ, ದೃಷ್ಟಾಂತ ಸ್ವಾನುಭವಗಳನ್ನು ಮಕ್ಕಳ ಜೊತೆಗೆ ಹಂಚಿಕೊಳ್ಳುವ ಅಪೂರ್ವ ಅವಕಾಶವೂ ನಮಗೆ ದೊರೆಯುತ್ತದೆ.

ಉಪಸಂಹಾರ ಮತ್ತು ಪರಿಸಮಾಪ್ತಿ:

ಒಟ್ಟು ಮೂರು ಪುಸ್ತಕಗಳ ಬೆಲೆ ೧೫೦ ರೂಪಾಯಿ ದಾಟಲಾರದು. ಒಟ್ಟು ಮೂರು ಪುಸ್ತಕಗಳಲ್ಲಿರುವ ಪುಟಗಳ ಸಂಖ್ಯೆ  (೧೪೦X ೩= ೪೨೦) ಪುಟಗಳು. ಅದರಲ್ಲಿಯೂ ಮೊದಲ ಪುಸ್ತಕ ಬಹಳ ಚಿಕ್ಕದು. ಎರೆಡೆರೆಡು ದಿನಕ್ಕೊಂದರಂತೆ ಪಾಠ ಮುಗುಸಿದರು ಮೊದಲ ಪುಸ್ತಕವನ್ನು ೬-೭ ತಿಂಗಳಲ್ಲಿ ಮುಗಿಸಿ ಬಿಡಬಹುದು. ಆ ವೇಳೆಗೆ ಮಗುವಿಗೆ ಸಾಕಷ್ಟು ಕನ್ನಡ ಹಾಗೂ ಇಂಗ್ಲಿಷ್ ವಾಕ್ಯ ರಚನೆಯ ಬಗ್ಗೆ ಅರಿವು ಮೂಡಿರುತ್ತದೆ. ನಾನು ಮೂರನೇ ಪುಸ್ತಕವನ್ನು ಮಾಡಲಿಲ್ಲ. ಏಳನೇ ತರಗತಿ ಮುಗಿಯುವ ಹೊತ್ತಿಗೆ ಎರಡನೇ ಪುಸ್ತಕವನ್ನು ಮುಗಿಸಿದ್ದೆ ಅಷ್ಟೇ. PUC ಯಲ್ಲಿ ನನಗೆ ಯಾವ ತೊಂದರೆಯು ಆಂಗ್ಲ ಮಾಧ್ಯಮದಿಂದ ಬರಲಿಲ್ಲ. ಇಂಗ್ಲೀಷಿನಲ್ಲಿ  ನನಗೆ ೮೯ ಅಂಕಗಳು ಬಂದಿದ್ದವು

ಇಂದಿಗೂ ಉತ್ತರ ಕರ್ನಾಟಕ , ಧಾರವಾಡದ ಕಡೆಯ ಮಕ್ಕಳು ಇದನ್ನು ಕಲಿತು ಸಾಧನೆ ಮಾಡಿದ್ದಾರೆ/ಮಾಡುತ್ತಿದ್ದಾರೆ.

ಇದು ಬೇಡುವುದು ನಿಯಮಿತವಾದ ಅಭ್ಯಾಸ, ಪ್ರೋತ್ಸ್ಸಾಹ ಹಾಗೂ ಮೋಡ ಮೊದಲು ಹೆಚ್ಚಿನ ಮಾರ್ಗದರ್ಶನ. ಈಗಂತೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ, ದೂರದರ್ಶನಗಳಲ್ಲಿ ಬರುವ ಸಾಕಷ್ಟು ಇಂಗ್ಲಿಷ್ ಕಾರ್ಯಕ್ರಮಗಳು ಕಲಿಕೆಗೆ ಪೂರಕವಾಗಿ ಸಹಾಯ ಮಾಡಬಲ್ಲವು. ಯಾವ ಖಾಸಗೀ ಶಾಲೆಯೂ ಕೊಡಲಾಗದ ಅಪೂರ್ವ ಕಾಣಿಕೆಯನ್ನು ನಿಮ್ಮ ಮಗುವಿಗೆ ( ಶಾಲೆಯ ಮಕ್ಕಳಿಗೆ) ನೀವು ಈ ಮೂಲಕ ಕೊಡಬಹುದು. ಅವುಗಳ ಬಾಯಿಗೆ ಸುರಿಯುವ ಲಕ್ಷಅಂತರ ಹಣವನ್ನು ನಿಮ್ಮ ಮಗುವಿನ ಭವಿಷ್ಯನಿಧಿಯಾಗಿ ಇಡಬಹುದು. ಆಯ್ಕೆ ನಿಮ್ಮದು.

 

ಖಾಸಗಿ ಕಾಲೇಜಿನ ಕಲಿಕೆ- ಬರೀ ಗಿಲೀಟಿನ ಬುಡುಬುಡಿಕೆ

ಖಾಸಗಿ ಕಾಲೇಜಿನ ಕಲಿಕೆ- ಬರೀ ಗಿಲೀಟಿನ ಬುಡುಬುಡಿಕೆ

ಶ್ರದ್ಧಾಹಿ ಪರಮಾಗತಿಃ-

  • ನನ್ನ ಆಟೋ ಮಾರಿದರು ಮಗಳಿಗೆ ಪ್ರವೇಶ ದೊರೆಯಲಿಲ್ಲ
  • ೯೫% ಅಂಕ ಪಡೆದರೂ ಕಾಲೇಜಿನಲ್ಲಿ ಸೀಟಿಲ್ಲ
  • ಹಿಂದೂ ಧರ್ಮದ ಮಕ್ಕಳಿಗೆ ಪ್ರವೇಶವಿಲ್ಲ; ನಮ್ಮ ಕೋಮಿನ ಮಕ್ಕಳಿಗೆ ಆದ್ಯತೆ
  • ಪೋಷಕರು ಭರಿಸಲಾಗದಷ್ಟು ಕಾಲೇಜುಗಳು ದುಬಾರಿ
  • ದುಬಾರಿ ಕಾಲೇಜಿಗೆ ಸೇರಿಸಿದರೂ ಟ್ಯೂಷಣ್ ಹೇಳಿಸಲೇ ಬೇಕು – ಸಾವಿರಾರು ರೂಪಾಯಿಗಳ ಧಂಧೆ
  • ದುಬಾರಿ ಕಾಲೇಜಿಗೆ ಸೇರಿಸುವ ಕುಟುಂಬಗಳಲ್ಲಿ ಆದಾಯದ ಬಹು ಭಾಗ ಶುಲ್ಕಕ್ಕೆ ಹೋಗುವ ಕಾರಣ ಜೀವನದ ಹಲವು ಅಗತ್ಯತೆಗಳನ್ನು ಕಡಿತಗೊಳಿಸಿಕೊಂಡು ಮನೆಯ /ಮನಸ್ಸಿನ/ದೇಹದ ಆರೋಗ್ಯಕ್ಕೆ ಸಂಚಾಕಾರ ತ್ತಮ್ದುಕೊಳ್ಳುವ ಸಾಧ್ಯತೆ ಹೆಚ್ಚು.
  • ಇಷ್ಟೆಲ್ಲಾ ಕಷ್ಟ ಪಡುವ ತಾಯಿತಂದೆಯರಿಂದ ಅಥ್ವಾ ಮಗುವೇ ಸಂವೇದನಾಶೀಲನಾಗಿದ್ದರೆ ಅದಕ್ಕೆ ಕಷ್ಟಗಳು ತಿಳಿದು ನೇರ ಅಥವಾ ಪರೋಕ್ಷ ಒತ್ತಡಕ್ಕೆ ಒಳಗಾಗಿ ವಿದ್ಯಾಭ್ಯಾಸಕ್ಕೆ ಆಡ್ದಿಯಾಗಬಹುದು.
  • ಇದು ಒಂದು ಆರೋಗ್ಯಕರ ಬೆಳವಣಿಗೆ ಅಲ್ಲ.
  • ಕ್ರಿಶ್ಚಿಯನ್ ಅಥವಾ ಮುಸಲ್ಮಾನರ ವಿದ್ಯಾ ಸಂಸ್ಥೆಗಳಿಗೆ ಸೇರಿ ಅಲ್ಲಿ ಹೂವು ಮುದಿಯುವಂತಿಲ್ಲ, ಹಣೇ ಕುಂಕುಮ ಇಡುವಂತಿಲ್ಲ, ಸೀರೆ ಉಡುವಂತಿಲ್ಲ, ಬಳೆ ತೊಡುವಂತಿಲ್ಲ ಎಂಬ ತಲೆಹರಟೆ ಅಸಹಿಷ್ಣತೆಯ ಪರಮಾವಧಿಯ ನಿಷೇಧಗಳನ್ನು ಅನುಭವಿಸಬೇಕು. ಇನ್ನು ಲವ್ ಜಿಹಾದು/ ಪ್ರೇಮಕ್ಕೆ ಒತ್ತಡ ಹಾಕುವುದು  ಇತ್ಯಾದಿ ಸಮಸ್ಯೆಗಳು ಸೇರಿ ‘’ಕಾಸು ಹಾಳು ತಲೆಯು ಬೋಳು ‘’ ಎಂಬ ಗಾದೆಯಂತೆ ಆಗುವುದೊಂದು ಅಭಾಸ.

ಈ ಸಮಸ್ಯೆಗಳು ಎಂದಿಗೂ ಇದ್ದಂತಹವೇ.ಆದರೆ ಇತ್ತೀಚೆಗೆ ಅದರ ವ್ಯಾಪ್ತಿ , ಗಹನತೆ ಹೆಚ್ಚಾಗಿದೆ

ಇಷ್ಟೆಲ್ಲಾ ಪರಿಪಾಟಲು ಪಟ್ಟರೂ ಕೊನೆಗೆ ಭ್ರಷ್ಟರ ಸಂತೆಯಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿ ಅಯೋಗ್ಯರಿಗೆ ಆದ್ಯತೆ ಸಿಗುವಂಥ ಪರಿಸ್ಥಿತಿಯಲ್ಲಿ ಅಷ್ಟೆಲ್ಲಾ ಖರ್ಚುಮಾಡಿ ಪದವಿ ಪೂರ್ವ ಖಾಸಗಿ ವಿದ್ಯಾಲಯಗಳಿಗೆ ಕಳಿಸಲೇ ಬೇಕೆ? ಇದಕ್ಕೆ ಬೇರೆ ದಾರಿಯೇ ಇಲ್ಲವೇ? ಕಲಿಯಲು ಇರುವ ಬೇರೆ ದಾರಿಗಳು ಯಾವುವು?ಅದರ ಸಾಧಕ ಬಾಧಕಗಳೇನು? ವ್ಯವಧಾನ ಇದ್ದರೆ ಒಮ್ಮೆ ಓದಿ.

ಹತ್ತನೇ ತರಗತಿಯ ಫಲಿತಾಂಶಗಳು ಹೊರಬಿದ್ದು ಕಾಲೇಜಿಗೆ ಸೇರಲು ವಿದ್ಯಾರ್ಥಿ ಪೋಷಕರ ನೂಕು ನುಗ್ಗಲು ಪ್ರಾರಮ್ಭವಾಗಿದೆಯಷ್ಟೇ . ಓದುವ ಸಮಸ್ಯೆ ಹಿಂದೆ ಬಿದ್ದು ಪ್ರವೇಶ ಪಡೆಯುವ ಸ್ಪರ್ಧೆ ಶುರುವಾಗಿದೆ. ಸಮಸ್ಯೆಗಳ , ಎಡವುಗಲ್ಲುಗಳ ಮುಳ್ಳಹಾದಿಯೇ  ಈಗ ಅನಾವರಣಗೊಳ್ಳುತ್ತಾ ಹೋಗುತ್ತಿದೆ.ಪರೀಕ್ಷೆಗಳೇ ಸುಲಭವೋ, ಪಠ್ಯಗಳೇ ಸುಲಭವೋ, ಮೌಲ್ಯಮಾಪಕರೇ ಧಾರಾಳವೋ ಇಲ್ಲಾ ಬೋಧನೆಯೇ ಚುರುಕಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದರೋ ಯಾರಿಗೆ ಗೊತ್ತು? ನಿಜ ಸ್ವರೂಪವನ್ನು ಬಗೆದು ನೋಡಲು ವ್ಯವಧಾನವಿಲ್ಲದ ಪ್ರಪಂಚದಲ್ಲಿ ೮೫% ಮೀರಿ ಅಂಕ ಗಳಿಸುವವರ ಸಂಖ್ಯೆ ಹೆಚ್ಚಾಗಿ ಎಲ್ಲಾ ಹೆಸರಿರುವ ಕಾಲೇಜುಗಳಲ್ಲಿ ನೂಕು ನುಗ್ಗಲು. ಇಂತಹ ಪರಿಸ್ಥಿತಿಯಲ್ಲಿ ಅಂಕಗಳಷ್ಟೇ  ಅಲ್ಲದೆ ಹಣ ಚೆಲ್ಲಬಲ್ಲ ಶಕ್ತಿ, ಜಾತಿ, ಮತ, ಕೋಮು, ಇತ್ಯಾದಿಗಳು ಸಹಾ ಪರಿಗಣಿಸಲ್ಪಟ್ಟು ನಿಜ ಪ್ರತಿಭೆಗಳಿಗೆ, ಸಮಾಜದಲ್ಲಿ ನಿಜವಾದ ಬೆಂಬಲ ಬೇಕಿರುವ ಮಕ್ಕಳಿಗೆ ಪ್ರವೇಶವನ್ನು ನಿರಾಕರೈಸಲಾಗುತ್ತಿದೆ. ತಮ್ಮ ಮಕ್ಕಳಿಗೆ ಬೇಕಾದ ಕಾಲೇಜುಗಳಲ್ಲಿ ಪ್ರವೇಶ ದೊರಕಿಸಲು ವಿಫಲರಾಗಿ ತಂದೆ ತಾಯಿಯರು, ಇಷ್ಟು ಕಷ್ಟ ಪಟ್ಟು ಓದಿಯೂ ಸಲ್ಲದ ಮಕ್ಕಳು ಒಂದು ಬಗೆಯ ನಿರಾಶೆ, ಹತಾಶೆ, ಕ್ರೋಧ, ಅಸಹಾಯತೆಗಳ ಕೂಪದಲ್ಲಿ ಬೀಳುತ್ತಿದ್ದರೂ ಅವರಿಗೆ ಕೇಳಲು ಸರಕಾರವೂ ಇಲ್ಲ ಸಂಘ ಸಂಸ್ಥೆಗಳೂ  ಇಲ್ಲ.

ಹೀಗಾಗಿ ಇರುವ  ಇದ್ದಂತೆಯೇ ಗ್ರಹಿಸಿ ಪರ್ಯಾಯ ಆಲೋಚನೆಗಳನ್ನು ಹಂಚಿಕೊಳ್ಳುವುದನ್ನು ಈ ಲೇಖನದ ಮೂಲಕ ವಿಚಾರ ಮಾಡಿ ನೋಡೋಣ

ಬಯಸಿದ ಕಾಲೇಜಿನಲ್ಲಿ ಸೀಟು ಸಿಕ್ಕದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಯಿತೆಂದು ಹತಾಶರಾಗಬೇಕಿಲ್ಲ. ಸಾಧಿಸಲು ಸಾಧಕನ ಮನಸ್ಥೈರ್ಯ ಮತ್ತು ಬದ್ಧತೆಗಳು ಮುಖ್ಯವೇ ಹೊರತು ಕಾಲೇಜುಗಲಲ್ಲ. ನಾನು ಸಾಗಿಬಂದ ದಾರಿಯ ಪರಿಚಯ ಮಾಡಿಕೊಡುತ್ತಾ ಬಡ ಹಾಗೂ ಕೆಲ ಮಧ್ಯಮ ವರ್ಗದ ಮಕ್ಕಳ ಸಾಧನೆಗೆ ಬೇಕಾಗಿರುವ ಅಂಶಗಳ ಒಳನೋಟಗಳನ್ನು ನೀಡುತ್ತೇನೆ. ಇದನ್ನು ಆತ್ಮರತಿ ಎಂದಾಗಲೀ, ಅತೀ ಅತ್ಮಪ್ರಶಂಸೆ ಎಂದಾಗಲಿ ಭಾವಿಸಬಾರದು. ಸ್ವಾನುಭವ ಲೇಖನದ ನೈಜತೆಯನ್ನು ಹೆಚ್ಚಿಸುವುದು ಎಂಬ ಕಾರಣಕ್ಕೆ ಅದನ್ನಿಲ್ಲಿ ಸೇರಿಸುತ್ತಿದ್ದೇನೆ. ಜೀವನದ ಈ  ಹಂತದಲ್ಲಿ ನನಗೆ ಹೊಗಳಿಕೆ ತೆಗಳಿಕೆಗಳ ಅವಶ್ಯಕತೆ ಇಲ್ಲ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇನೆ.

ನಾನು ಹತ್ತನೇ ತರಗತಿ ಉತ್ತೀರ್ಣನಾಗಿದ್ದು ೧೯೮೬ ರಲ್ಲಿ. ಬರಗೂರು ಎಂಬ ಹಳ್ಳಿ ಕೊಂಪೆಯಲ್ಲಿ. ಅಲ್ಲಿ ಇದ್ದ ಸರಕ್ಕಾರಿ ಅನುದಾನಿತ ಪ್ರೌಢಶಾಲೆ ಚೆನ್ನಾಗಿಯೇ ಇತ್ತು. ಕನ್ನಡ ಪ್ರಥಮ ಭಾಸೆಯಾಗಿ, ಕನ್ನಡ ಮಾಧ್ಯಮದಲ್ಲಿಯೇ ಓದಿ, ರಾಜ್ಯಕ್ಕೆ ೨೦ ನೆ ರ್ಯಾಂಕ್ ಅನ್ನು ಕೇವಲ ಎರಡು ಅಂಕಗಳಿಂದ ತಪ್ಪಿಸಿಕೊಂಡರು ತುಮಕೂರು ಜಿಲ್ಲೆಗೆ ಮೊದಲನೆಯವನಾಗಿ ಪಾಸಾಗಿದ್ದೆ! ಶಾಲೆಗೆ, ಊರಿಗೆ ಹೆಮ್ಮೆಯ ವಿಷ್ಯ ಅದು. ಆದರೆ ಜಿಲ್ಲಾ  ಕೇಂದ್ರದ  ಸಂಘಗಳಿಗೆ ಈ ಮಾಹಿತಿ ಇರಲಿಲ್ಲ. ತುಮಕೂರಿನ , ನನಗಿಂತ  ಕಡಿಮೆ ಅಂಕ ತೆಗೆದ ಇನ್ನಿಬ್ಬರಿಗೆ ಮೊದಲನೆಯ ಹಾಗೂ ಎರಡನೆಯ ಬಹುಮಾನ ಘೋಷಿಸಿ ಸನ್ಮಾನ ಮಾಡಿಬಿಟ್ಟರು. ನಮ್ಮ ಮುಖ್ಯೋಪಾಧ್ಯಾಯರು ಅನಂತರ ಅವರೊಡನೆ ಜಗಳ ಮಾಡಿ ನನಗೂ ಒಂದು ಪ್ರಶಸ್ತಿ ಕೊಡಿಸಿದರು!! ಅದು ಬೇರೆ ವಿಷಯ.

ಕಾಲೇಜಿಗೆಂದು  ತುಮಕೂರಿಗೆ ಬಂದಾಗ ಅಲ್ಲಿನ ಪ್ರಸಿದ್ಧ ಸರ್ವೋದಯ ಕಾಲೇಜಿಗೆ ಸೇರಲು ಬಯಸಿ ಅರ್ಜಿ ಹಾಕಿ ಪರೀಕ್ಷೆಯೊಂದನ್ನು ಬರೆದದ್ದಾಯಿತು. ಪರೀಕ್ಷೆಯೊಂದು ನೆಪ ಮಾತ್ರ. ಪ್ರವೇಶಕ್ಕಾಗಿ ೩೦೦೦ ರೂಪಾಯಿ ಕೊಡಬೇಕೆಂದರು!! ನನ್ನ ಬಳಿ ಅಷ್ಟು ಹಣ ಎಲ್ಲಿರಬೇಕು. ನಮ್ಮ ಪರಿಸ್ಥಿತಿ ವಿವರಿಸಿದರೂ, ನಾನು ಜಿಲ್ಲೆಗೆ ಪ್ರಥಮವಾಗಿ ಹಳ್ಳಿಯೊಂದರಿಂದ ಪಾಸಾಗಿ ಬಂದಿದ್ದರೂ ಅದಾವುದರ ಗಣನೆ ಅವರಿಗಿರಲಿಲ್ಲ. ಬೇಕಾದ್ದು ಹಣ.

ಸರಿ, ತಿಳಿಯದ ನಮಗೆ ಸಿದ್ಧಗಂಗಾ ಕಿರಿಯ ಕಾಲೇಜಿನಲ್ಲಿ ಸೇರಲು ಸಲಹೆ ಕೊಡಲಾಗಿ ನಾನು ಅಲ್ಲಿಗೇ ಸೇರಿದೆ. ಅಲ್ಲಿ ಫೀಸು ಕೇವಲ ಮುನ್ನೂರು ರೂಪಾಯಿ ಇರಬೇಕು. ಸೇರಿದೆ. ಪಾಠ ಪ್ರವಚನಗಳು ಸಾಧಾರಣ ಮಟ್ಟದ್ದವಾದರೂ ನಿಯಮಿತವಾಗಿ ನಡೆಯುತ್ತಿದ್ದವು. ನಾನು ಯಾವ ಹೆಚ್ಚುವರಿ ಪಾಠಕ್ಕೂ ಹೋಗಲಿಲ್ಲ. ನಮ್ಮ ದಾಯಾದಿ ಅಣ್ಣನ, ಇನ್ನೂ ನಿರ್ಮಾಣದ ಹಂತದಲ್ಲಿದ್ದ ಮನೆಯಲ್ಲಿಯೇ , ಮನೆಯ ಕ್ಯೂರಿಂಗ್ ಇತ್ಯಾದಿ ಮಾಡಿಕೊಂಡು ಅದರ ಒಂದು ಕೋಣೆಯಲ್ಲಿಯೇ ಇದ್ದುಕೊಂಡು ಪ್ರಥಮ ವರ್ಷ ಮುಗಿಸಿದೆ. ಎರಡನೆ ವರ್ಷದಲ್ಲಿ ನಮ್ಮದೇ ಮನೆಯಲ್ಲಿ ಓದಿದೆನಾದರೂ ಹೆಚ್ಚುವರಿ ಪಾಠಕ್ಕೆ ಹೋಗಲಿಲ್ಲ. ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೂರನೆಯವನಾಗಿ ಪಾಸಾದದ್ದೂ ಅಲ್ಲದೆ ಪ್ರವೇಶ ಪರೀಕ್ಷೆಗಳಲ್ಲಿಯೂ ಒಳ್ಳೆಯ ರ್ಯಾಂಕ್ ಪಡೆದು ಬೆಂಗಳೂರು ಮೆಡಿಕಲ್ ಕಾಲೇಜು ಸೇರಿದೆ. ಜಿಲ್ಲೆ ಗೆ ಪ್ರಥಮ ಸ್ಥಾನ  ಪಡೆದವನು,ನಾನೂ ಅಲ್ಲಿ ಸಹಪಾಠಿಗಳಾದೆವು ಹಾಗೂ ಇಂದಿಗೂ ಜೀವದ ಗೆಳೆಯರಾಗಿ ಉಳಿದಿದ್ದೇವೆ. ಅವನು ಸರ್ವೋದಯ ಕಾಲೇಜಿನ ವಿದ್ಯಾರ್ಥಿ. ಪಿ ಯು ಸಿ ಯಲ್ಲಿ  ನನಗೂ ಅವನಿಗೂ ೧೮ ಅಂಕಗಳ ವ್ಯತ್ಯಾಸ ಇತ್ತು!

ಸರ್ವೋದಯ ಕಾಲೇಜಿಗೆ ಸೇರದೆಯೂ ಸಾಧನೆ ಮಾಡುವ ಛಲವೊಂದು ನನ್ನಲ್ಲಿತ್ತು. ಕನ್ನಡ ಮಾಧ್ಯಮದ ತೊಂದರೆ, ಮನೆಯಲ್ಲಿ ಸೌಲಭ್ಯಗಳ ಕೊರತೆ, ಹೊಸ ಪುಸ್ತಕಗಳನ್ನು ಕೊಳ್ಳಲಾಗದೆ ಹಾದಿ ಬೀದಿ ಬದಿಯಲ್ಲಿ ಮಾರುತ್ತಿದ್ದ ಹಳೇ ಪುಸ್ತಕಗಲ್ಲ್ಲಿಯೇ ನನಗೆ ಬೇಕಾದ ಪಾಠಗಳನ್ನು ಕುರಿತು ಓದಿ, ಅದರ ಪರಿಕಲ್ಪನೆಯನ್ನು ಮನದಲ್ಲಿ ಮನನ ಮಾಡಿಕೊಂಡು , ಹೆಚ್ಚುವರಿ ಮಾರ್ಗದರ್ಶಕರಿಲ್ಲದೆಯೂ ಉತ್ತಮ ಅಂಕಗಳನ್ನು ಪಡೆಯಬಹುದಾದರೆ ಇಂದಿನ ದಿನಗಳಲ್ಲಿ ಅದು ಏಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಸ್ನೇಹಿತರೂ ಆಗಾಗ ಅವರ ಪುಸ್ತಕಗಳನ್ನು ಎರವಲು ಕೊಡುತ್ತಿದ್ದರು. ನನಗೆ ತಿಳಿದದ್ದನ್ನು ಅವರಿಗೆ ನಿಸ್ವಾರ್ಥತೆಯಿಂದ ಕಲಿಸುತ್ತಲೂ  ಇದ್ದೆ.

ಹೀಗೆ ಒಳ್ಳೆಯ ಕಾಲೇಜಿನಲ್ಲಿ ಓದಿರಬಹುದಾದ, ಉತ್ತಮ ಆರ್ಥಿಕ ಹಿನ್ನೆಲೆಯಿಂದ ಬಂದ ಉಳಿದ ಮಕ್ಕಳಿಗೆ ಹೋಲಿಸಿದರೆ ನಾನು ಕಳೆದುಕೊಂಡದ್ದೇನು? ನನ್ನ ಬಳಿ ಆಟವಾಡಲು ಸಮಯ ಇರಲಿಲ್ಲ. ಸಿನಿಮಾ ಹೋಟೆಲು ಎಂದು ಮಾಡಲು ಹಣವೂ ಇರಲಿಲ್ಲ. ನನ್ನ ಸಮಕಾಲೀನ ಕೆಲವು ಮಕ್ಕಳು ಓದು- ಹದಿ ಹರೆಯದ ಮೋಜು ಎರಡನ್ನೂ ಸಮಾನಾಂತರವಾಗಿ ಮಾಡಿರಬಹುದು.ಈ ಸಾಧನೆಯ ಹಾದಿಯಲ್ಲಿ ನಾನದನ್ನು ಬಲಿ ಕೊಟ್ಟೆ ಎನ್ನ ಬಹುದಾದ್ರೂ ‘ ವಿದ್ಯಾತುರಾಣಾಂ ನಾ ನಿದ್ರಾ ನಾ ಸುಖಾಃ ‘’ ಎಂಬ ಉಕ್ತಿಗೆ ಅನುಗುಣವಾಗಿಯೇ ನಾನು ನಡೆದ ಬಗ್ಗೆ ಹೆಮ್ಮೆಯಿದೆ.

ಆಗ ಅಂತರ್ಜಾಲವಾಗಲೀ, ಇತರ ರೀತಿಯ ಸೌಲಭ್ಯಗಲಾಗಲೀ ಇರದ ಕಾರಣ ಕಾಲೇಜಿನಲ್ಲಿ ಬೋಧಿಸುವುದು , ಅವರಿಂದ ತಿಳಿಯುವುದು ಮಹತ್ವಪೂರ್ಣವಾಗಿತ್ತು. ಇಂದು ಅಂತರ್ಜಾಲದಲ್ಲಿ ಮಾಹಿತಿ,ವಿಷಯಗಳ ಕುರಿತಾದ ಆಕರಗಳು ಹೇರಳವಾಗಿವೆ. ಗುಣಮಟ್ಟದ ಪಾಠ ಪ್ರವಚನಗಳು ಸುಲಭವಾಗಿ, ಉಚಿತವಾಗಿ ಸಿಗುತ್ತವೆ. ಪುಸ್ತಕದಲ್ಲಿರುವ ಪಾಠಗಳಿಗೆ ಪೂರಕವಾದ ವಿಚಾರ ವಿಶ್ಲೇಷಣೆ, ಪರಿಕಲ್ಪನೆಗಳ ವಿವರಣೆ ಸಿಗುತ್ತದೆ. ಎರಡನೇ ದರ್ಜೆಯ ಅಧ್ಯಾಪಕರುಗಳ ಬಡಬಡಿಕೆ ಕೇಳಬೇಕಾಗಿಲ್ಲ. ಆದರೆ, ಕಲಿಕೆಯ ಯಾವುದೇ ಹಂತದಲ್ಲಿ ಉತ್ತಮ ಅಧ್ಯಾಪಕರುಗಳು ಸಿಕ್ಕಿದರೆ ಅದೊಂದು ಅಪೂರ್ವ ಅನುಭವ-ಅದೃಷ್ಟ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಅಪರೂಪದ ಸಂಗತಿ . ನನ್ನ ಇಡೀ ಇಲ್ಲಿಯ ವರೆಗಿನ ಅನುಭವದಲ್ಲಿ ೨೦% ಅಧ್ಯಾಪಕರುಗಳು  ಉತ್ತಮ ಎಂಬ ವರ್ಗಕ್ಕೆ ಸೇರಿದವರು. ಬಹುತೇಕ ಖಾಸಗೀ ಕಾಲೇಜುಗಳ ಅಧ್ಯಾಪಕರುಗಳು ಅಸಾಮಾನ್ಯರೇನೂ ಅಲ್ಲ.

ಅಂತರ್ಜಾಲದಲ್ಲಿ PHYSICS ,CHEMISTRY ,MATHEMATICS ಮತ್ತು BIOLOGY ಗೆ ಸಂಬಂಧಿಸಿದ ಸಾಕಷ್ತು ಪುಸ್ತಕಗಳು PDF ಆವೃತ್ತಿಯಲ್ಲಿ ಲಭ್ಯ. ಕಾಲೇಜಿಗೆ ಸುರಿಯುವ ಹಣದಲ್ಲಿ ಒಂದೊಳ್ಳೆ TABLET COMPUTER ಕೊಂಡು ಅದರಲ್ಲಿ DOWNLOAD ಮಾಡಿಕೊಂಡು ಓದಬಹುದು. ಕೆಲವಿ ಅಮೇರಿಕಾದ ಅಧ್ಯಾಪಕರುಗಳು ವೀಡಿಯೊ ಪಾಠಗಳನ್ನೂ ಮಾಡಿದ್ದಾರೆ YOUTUBE ಹಾಗೂ ಇತರ ಆಕರಗಳಲ್ಲಿ ನಿಮಗೆ ಬೇಕಾದ ವಿಷಯಕ್ಕೆ ಕುರಿತಂತೆ ಹಲವಾರು  ಬಗೆಯ ಪಾಠಗಳು ಲಭ್ಯವಿವೆ. ಏಕಾಗ್ರತೆಯಿಂದ ಇವುಗಳನ್ನು ಕೇಳಿ ಮನನ ಮಾಡಿಕೊಂಡರೆ ಯಾವ ಹಂಗಿಲ್ಲದೆ ಕಲಿಕೆ, ಗ್ರಹಿಕೆ ಸಾಧ್ಯ. ಇದಕ್ಕೆ ಮೂಲಭೂತವಾದ ಆಲೋಚನಾಶಕ್ತಿ, ಕುತೂಹಲ, ಕಲಿಕೆಯ ಹಸಿವು ಇದ್ದರೆ ಸಾಕು. ನಿಮಗೆ ಇಷ್ಟವಾಗುವ ವೀಡಿಯೊ ಗಳನ್ನೂ ಗುರುತಿಸಿಟ್ಟುಕೊಳ್ಳಿ, ಕೆಲವು ಜಾಲತಾಣಗಳಿಗೆ ಸದಸ್ಯರಾಗಿ., ಒಂದಲ್ಲ ಹಲವು ಸಾರಿ ಕೇಳಿ , ಮನಸ್ಸಿನಲ್ಲಿ ಮಥಿಸಿ, ಸ್ವಂತ ಪರಿಶ್ರಮದಿಂದ ಪಠಣ- ಶ್ರವಣ-ಮನನ-ನಿಧಿಧ್ಯಾಸನ ಹಂತಗಳಲ್ಲಿ ಅರ್ಥ ಮಾಡಿಕೊಂಡರೆ ಅದರ ನೆನಪೂ ಚನ್ನಾಗಿ ಉಳಿಯುತ್ತದೆ, ಅನ್ವಯಿಕ (applied ) ಪ್ರಶ್ನೆಗಳನ್ನು ಚನ್ನಾಗಿ ಉತ್ತರಿಸಬಹುದು.ಆತ್ಮವಿಶ್ವಾಸವು ವೃದ್ಧಿಸುತ್ತದೆ. ಈಗಲೂ ನಾನು  ವೃತ್ತಿಯಿಂದ ವೈದ್ಯನಾದರೂ, ಭೌತಶಾಸ್ತ್ರ , ಗಣಿತ ಕುರಿತ ಪುಸ್ತಕಗಳನ್ನು ಓದುತ್ತಲೇ ಇರುತ್ತೇನೆ!!

ಈಗ ನನ್ನ ಬಳಿ ಹೀಗೆ ಶೇಖರಿಸಿಕೊಂಡ  ಹಲವಾರು ಪುಸ್ತಕಗಳಿವೆ. ಬೇಕಾದರೆ ಸಂಪರ್ಕಿಸಬಹುದು.

ಕುರಿಮಂದೆಯಂತೆ ಜನಮರುಳೋ ಜಾತ್ರೆ ಮರುಳೋ ಎಂಬ ಹುಚ್ಚರ ಸಂತೆಯಲ್ಲಿ ನೀವೂ ಒಬ್ಬರಾಗಿ ನುಗ್ಗಿ ಹಣ, ನೆಮ್ಮದಿ ಹಾಳು ಮಾಡಿಕೊಳ್ಳುವ ಬದಲು ಒಂದು ಹೆಜ್ಜೆ ಹಿಂದೆ ಹೋಗಿ ಒಮ್ಮೆ ಸಾಧಕ ಬಾಧಕಗಳನ್ನು ಪರಿಗಣಿಸಿ ಹೆಜ್ಜೆಯಿಡಿ. ನಿಮ್ಮ ಮೇಲೆ ನೀವಿಟ್ಟುಕೊಳ್ಳುವ, ನಿಮ್ಮ ಮಕ್ಕಳಿಗೆ ನೀವು ಕೊಡುವ ಆತ್ಮಸ್ಥೈರ್ಯ, ಪ್ರೋತ್ಸಾಹ, ಧೃಢ ನಿಶ್ಚಯ, ತಪಸ್ಸಿನೋಪಾದಿಯಲ್ಲಿ ನಡೆಸುವ ಅಧ್ಯಯನ ನಿಮ್ಮನ್ನು ಗುರಿ ಮುಟ್ಟಿಸಿಯೇ ತೀರುತ್ತದೆ.

ಒಳ್ಳೆಯ ಕಾಲೇಜು, ಉತ್ತಮ ಬೋಧನೆ, ಮಾರ್ಗದರ್ಶನ, ಪುಸ್ತಕ , ಹೆಚ್ಚುವರಿ ಕೋಚಿಂಗ್ ಇತ್ಯಾದಿ ಸಿಕ್ಕಿದ್ದರೆ ಬಹುಶ್ಃ ನನ್ನ ಕನಸಿನಂತೆ ನಾನು ಐ ಐ ಟಿ ಯಲ್ಲಿ  ಪ್ರವೇಶ ಗಿಟ್ಟಿಸುತ್ತಿದ್ದೆನೇನೋ? ಯಾರಿಗೆ ಗೊತ್ತು. ಅಂದು ನನ್ನ ಶಕ್ತಿಯ ಪರಿಮಿತಿಯಲ್ಲಿ ಮಾಡಬಹುದಾದ್ದನ್ನು ಸಾಧಿಸಿದೆನೆಂಬ ತೃಪ್ತಿ ನನಗಿದೆ.ಜೊತೆಗೆ ನನ್ನ ಭಾಷೆ, ನೆಲ, ನೀರು, ಸಾಹಿತ್ಯ, ಸಂಸ್ಕೃತಿಗಳ ಕುರಿತಾದ ಅಭಿಮಾನವೂ ಇದೆ.ಕೇವಲ ಲೌಕಿಕ ಸಾಧನೆಗಳ ಕೂಪದಲ್ಲಿ ಬೀಳದೆ ಆಧ್ಯಾತ್ಮಿಕ ಆಯಾಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಸ್ಕಾರ ನನಗೆ ನನ್ನ ಅನುಭವ ಕಲಿಸಿದೆ. ಖಾಸಗೀ ಕಾಲೇಜುಗಳ ಗಿಲೀಟು ವಾತಾವರಣದಲ್ಲಿ ಇವೆಲ್ಲವೂ ದಕ್ಕುತ್ತಿತ್ತೋ ಇಲ್ಲವೋ ಎಂಬ ಜಿಜ್ಞಾಸೆ ನನ್ನ ಕೆಲವು ಸಹಪಾಠಿಗಳನ್ನು ನೋಡಿದಾಗ ನನಗೆ ಕಾಡುತ್ತದೆ.

 ಉಪಸಂಹಾರ:

ಪಿ.ಯು ಸಿ ಯಲ್ಲಿ ಅಷ್ಟೇನೂ ತೊಂದರೆಯೆನಿಸದ ಇಂಗ್ಲೀಷ್   ಮೆಡಿಕಲ್ ಸೇರಿದಾಗ ಸಾಕಷ್ಟು ಕಾಡಿತು. ಬೆಂಗಳೂರು ಹುಡುಗರ ಭರಾಟೆಗೆ ನಾನು ಸ್ವಲ್ಪ ಹೆದರಿಡ್ಡೇನೋ ನಿಜ. ಪಠ್ಯಗಳನ್ನು ಅರ್ಥೈಸಿಕೊಳ್ಳುವುದರಲ್ಲೂ ಬಹಳವೇ ತೊಂದರೆಯೆನಿಸಿತು. ಮೊದಲ ಕಿರು ಪರೀಕ್ಷೆಯಲ್ಲಿ ಫ಼ೇಲಾಗಿದ್ದೆ ಸಹ.ಅದರೂ, ಸಾಧಿಸಬಹುದೆಂಬ ನಂಬಿಕೆ, ಸತತ ಪರಿಶ್ರಮದಿಂದ distinction ನಲ್ಲಿಯೇ ಪಾಸಾಗುತ್ತ ಕೊನೆಗೆ ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಹತ್ತನೆ ರ್ಯಾಂಕ್ ಕೂಡ ಪಡೆದೆ. ಬೆಂಗಳೂರು , ಇತರ ನಗರಗಳ, ಉತ್ತಮ ಹಿನ್ನೆಲೆಯ ಬಹುತೇಕ ವಿದ್ಯಾರ್ಥಿಗಳನ್ನು ಮೀರಿಸಿದ ಸಾಧನೆ ನನ್ನಂತಹವನೊಬ್ಬ ಮಾಡಬಹುದಾದರೆ ಅಂತರಿಕವಾಗಿ ಇನ್ನೂ ಪ್ರತಿಭಾನ್ವಿತ ಹುಡುಗರದೆಷ್ಟು ಸಾಧನೆ ಮಾಡಬಲ್ಲರು. ನಿಮ್ಮ ಶಕ್ತಿಯ ಅಂದಾಜು ನಿಮಗಿದ್ದರೆ ಖಾಸಗಿ ಕಾಲೇಜುಗಳ ಮುಲಾಜು ನಿಮಗೆ ಬೇಡವೇ ಬೇಡ. ಮುಂದೆ ರಾಷ್ಟ್ರಮಟ್ಟದ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಇಡಿ ದೇಶದ ೬೦೦೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬರೆಯುವ ಪರೀಕ್ಷೆಯಲ್ಲಿ ೩೩ ನೇ ರ್ಯಾಂಕ್ ಪಡೆದಿದ್ದೆ. ಮುಂದೆಯೂ ಹಲವಾರು ಪರೀಕ್ಷೆಗಳನ್ನು ಎದುರಿಸಿದ್ದೇನೆ, ಉತ್ತಮ ಅಂಕಗಳೊಂದಿಗೆ ತೇರ್ಗಡೆಯೂ ಆಗಿದ್ದೇನೆ. ವಿಷಯದ ಆಳಕ್ಕೆ ಹೋಗಿ ಅರ್ಥೈಸಿಕೊಳ್ಳುವ ನನ್ನ ಅಭ್ಯಾಸದಿಂದ ಕಿರಿಯ ವೈದ್ಯರ ನೆಚ್ಚಿನ ಅಧ್ಯಾಪಕನೂ ಆಗಿದ್ದೇನೆ. ನನ್ನ ಈ ಸಾಧನೆಯಲ್ಲಿ ಹಲವಾರು ಸಹೃದಯರ ಪಾತ್ರವಿದೆ,.. ಕಾಲ ಕಾಲಕ್ಕೆ ಕೈಹಿಡಿದವರ ಔದಾರ್ಯವಿದೆ. ಆದರೆ ಮನಸ್ಸಿನ ಹಸಿವು ಅಂತಹ ಸಹಾಯಗಳನ್ನು ಹೇಗೋ ಒದಗಿಸುತ್ತದೆ. ಧೃತಿಗೆಡದೆ , ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆದು ಓದಿ. ಅಲ್ಲಿ ಚೆಲ್ಲುವ ಹಣವನ್ನು ಪುಸ್ತಕ ಪರಿಕರ ಕೊಳ್ಳುವುದಕ್ಕೆ ಬಳಸಿ. ನಿಮ್ಮ ಪರಿಶ್ರಮವೇ ನಿಮಗೆ ಶ್ರೀರಕ್ಷೆ ಎಂಬುದು ನೆನಪಿರಲಿ- ಸಾಕು.

ಸುದರ್ಶನ ಗುರುರಾಜರಾವ್

ಭೈರಪ್ಪನವರ “ಯಾನ”ದ ಕಿಟಕಿಯಿಂದೊಂದು ಇಣುಕು ನೋಟ :

ಯಾನದ ಕಿಟಕಿಯಿಂದೊಂದು ಇಣುಕು ನೋಟ :

ಭೈರಪ್ಪನವರ ಕಾದಂಬರಿಗಳು ವಸ್ತು ವಿಷಯದಿಂದಲೂ, ಕಥೆಯ ಗಂಭೀರ ಹಂದರದಿಂದಲೂ ಇತರರಿಗಿಂತ ಭಿನ್ನವಾಗಿರುವ ವಿಚಾರ ತಿಳಿಯದ್ದೇನಲ್ಲ. ಈ ಸರಣಿಗೆ ಮತ್ತೊಂದು ಸೇರ್ಪಡೆ ‘ಯಾನ’. _____________________________________________________________

ಯಾನದಲ್ಲಿ ಬರುವ ಪ್ರಮುಖ ಪಾತ್ರಗಳಾದ ಉತ್ತರಾ (ಹೆಣ್ಣು) ಹಾಗೂ ಸುದರ್ಶನ  (ಗಂಡು) ಎರಡೂ ನನಗೆ ಆತ್ಮೀಯವಾದ ಹೆಸರುಗಳೇ. ಉತ್ತರಾ ನನ್ನ ಜನ್ಮ ನಕ್ಷತ್ರದ ಹೆಸರಾದರೆ ಸುದರ್ಶನ ನನ್ನ ಹೆಸರೇ ಆಗಿದೆ. ಸ್ವನಾಮ ಪ್ರೇಮ, ಸ್ವನಾಮಾನುಕಂಪ ಹಾಗೂ ಪಕ್ಷಪಾತಗಳು ತಿಳಿಯದ್ದೇನಲ್ಲ. ಈ ಹಿನ್ನೆಲೆಯಲ್ಲಿ ಈ ಕಾದಂಬರಿಯ ಪಾತ್ರಗಳನ್ನು ನಿರೂಪಣೆಯನ್ನು ಹಾಗೂ ಕಥಾವಸ್ತುವನ್ನು ಅದಷ್ಟು ವಸ್ತುನಿಷ್ಠ ವಾಗಿ ಮಾಡಲು ಪ್ರಯತ್ನಿಸಿದ್ದೇನೆಂದು ಮೊದಲೇ ಘೋಷಿಸಿಬಿಡುತ್ತೇನೆ.

‘’ಯಾನ’’ ಭೂಮಿಯಿಂದ ಬೇರೊಂದು ಸೌರವ್ಯೂಹವನ್ನೇ ಹೊಕ್ಕು ಅಲ್ಲಿ ಜೀವಸಂಕುಲವನ್ನು ಬೆಳೆಸಬಲ್ಲ, ಪೋಷಿಸಬಲ್ಲ ಗ್ರಹವೊಂದನ್ನು ಹುಡುಕುವ ಮಾನವನ ಮಹದೋದ್ದೇಶದ ಪ್ರಯಾಣಕಥನ., ಪ್ರಯಾಣವೊಂದು ಧಿಢೀರ್ ಎಂದು ಪ್ರಾರಂಭವಾಗುವುದಿಲ್ಲವಷ್ಟೆ ; ಅದಕ್ಕೆ ತಯಾರಿ ಬೇಕು. ಆ ತಯಾರಿಯ ಹಂತದಲ್ಲಿ ಪಾತ್ರ ಪರಿಚಯಗಳಗ್ಗುವುದಲ್ಲದೆಅವರ ಜೀವನದ, ಆ ದೇಶ ಕಾಲಗಳ ವಿದ್ಯಮಾನಗಳ ಭೂಮಿಕೆ ಕಾದಂಬರಿಯಲ್ಲಿ  ಸಿದ್ದಹವಾಗುತ್ತದೆ. ಕಥೆಯು ಭೂತ ವರ್ತಮಾನಗಳ ಮಧ್ಯೆ ತುಯ್ದಾಡುತ್ತಾ,ಪಾತ್ರಗಳ ಮನೋವ್ಯಾಪಾರವನ್ನು ಅವರು ನಂಬಿದ ತತ್ವಗಳ /ಮಾನಸಿಕ ಮಸೂರದ ಮೂಲಕ ಹಾಗೂ ಅವರುಗಳು ಇರುವ ದೇಶ ಕಾಲ ಧರ್ಮ ನಂಬಿಕೆಗಳ ಚೌಕಟ್ಟಿನಲ್ಲಿ ತಿಳಿಸುತ್ತಾ ಸಾಗುತ್ತದೆ. ಇಲ್ಲಿ ಅರಿವು ಮತ್ತು ನಂಬಿಕೆಗಳ ನಡುವಿನ ವ್ಯತ್ಯಾಸ ಗಮನಿಸಬೇಕು.ನಂಬಿಕೆ ಮತ್ತು ಆಯ್ಕೆಗಳ ನಡುವಿನ ತಾಕಲಟಗಳೂ ಬರುತ್ತವೆ. ಮಾನವನ ಜೀವನದ ವಿದ್ಯಮಾನಗಳು ಮತ್ತು ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸರಳ ರೇಖಾತ್ಮಕವಾಗಿರದೆ ಎಡ ಬಲ ಊರ್ಧ್ವ ಹಾಗೂ ಅಧೋಮುಖಗಳಿಂದ ಬಂದು ಬಡಿಯುವ ಹಲಾವಾರು ಘಟನೆ,ಒತ್ತಡಗಳ ಸಂಕೀರ್ಣ ಉತ್ಪತ್ತಿ ಎಂಬುದು ಭೈರಪ್ಪನವರ ಎಲ್ಲ ಕಾದಂಬರಿಗಳಂತೆ ಇಲ್ಲಿಯೂ ಹಾಸು ಹೊಕ್ಕಾಗಿರುವ ಅಂಶ ;ಆದರೆ ಆಯಾಮ ಮಾತ್ರ ಬೇರೆ.

ಮೊದಲಿಗೆ ಪಾತ್ರಗಳನ್ನೂ ಕುರಿತು ನೋಡೋಣ.

ಉತ್ತರಾ:

ಉತ್ತರಾ ಒಬ್ಬಳು ಒಬ್ಬಳು ಚೆಲುವು, ಛಲ ,ವಿದ್ಯೆ,ಬುದ್ಧಿ,ಆತ್ಮವಿಶ್ವಾಸ ,ಯಾರೂ ಬಯಬಯಸಬಹುದಾದ ಸಾಮಾಜಿಕ ಹಾಗೂ ಕೌಟುಂಬಿಕ ಹಿನ್ನೆಲೆಯಿಂದ ಬಂದ ಹೆಣ್ಣು. ತಾನು ಬಯಸಿದ್ದನ್ನು ಹೋರಾಡಿ ಪಡೆಯಬಲ್ಲ ಮನೋಸ್ಥೈರ್ಯ ಇರುವಂತಹವಳು್. ಹೊಸ ಅನುಭವ ಸಾಹಸಗಳಿಗೆ ತನ್ನನು ತಾನು ಒಡ್ಡಿಕೊಳ್ಳಬಲ್ಲ ಆಧುನಿಕ ಮನೋಭಾವದವಳಾದರೂ ತನ್ನ ತಾಯಿ ತಂದೆಯರಿಂದ ಭಾರತೀಯ ಧರ್ಮ ನಂಬಿಕೆಗಳ ಅರಿವನ್ನು ಇಟ್ಟುಕೊಂಡು ಬೆಳೆದಿರುವವಳು.. ಪೈಲಟ್ ವ್ರುತ್ತಿಯಿಂದ ಹೊರಬಂದು ವ್ಯೋಮಯಾನದ ಪ್ರಯೋಗಾತ್ಮಕ ಕ್ರಿಯೆಗೆ ಸ್ವ ಇಚ್ಚೆಯಿಂದಲೇ ಹೋಗಿ ಆಯ್ಕೆಯಾಗುತಾಳೆ. ಅಲ್ಲಿ ಯಾದವನೊಂದಿಗೆ ಪ್ರೇಮಾಕುರವೂ ಆಗಿ ಬಾಹ್ಯಾಕಾಶದಲ್ಲಿ ದೇಹಸಂಪರ್ಕ ಮಾಡುವ ಮುನ್ನ ಗಂಧರ್ವ ರೀತಿಯಲ್ಲಿ ವಿವಾಹವನ್ನು ಮಾಡಿಕೊಳ್ಳುತಾಳೆ. ಆ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಹೆಸರನ್ನೂ ಗಳಿಸುತ್ತಾಳೆ. ತನಗಿದ್ದ ಸಂಸ್ಕಾರದ ಫಲವಾಗಿ ಆ ಎಲ್ಲ ಹಣ, ಹೆಸರು ಪ್ರತಿಷ್ಠೆಗಳು ತರಬಹುದಾದ ಅವಘಢ ಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತಾಳೆ. ಮುಂದಿನ ಹಂತದ ಯೋಜನೆಗೆ ಅವಳ ಪ್ರಿಯಕರ  /ಗಂಡನಾದ ಯಾದವನು ಉತ್ಸಾಹ ತೋರದಿದ್ದಾಗ ತಾನು ಹೊರಟು ನಿಲ್ಲುತ್ತಾಳೆ. ಮನೆಯ/ ಮನೆಯವರ ಜವಾಬುದಾರಿಯ ಕಾರಣ ಅವನು ಬರುತ್ತಿಲ್ಲವೆಂದು ತಿಳಿದಿದ್ದರೂ ತನ್ನ ನಿರ್ಧಾರ ಬದಲಾಯಿಸದವಳಾಗುತ್ತಾಳೆ. ಸ್ವತಂತ್ರ ಮನೋಭಾವದ ಉತ್ತರಾ, ಯಾದವನ ಭೂಮಿಯ ಮೇಲಿನ ಕೌಟುಂಬಿಕ ಅನಿವಾರ್ಯತೆಗಳಿಗೆ ಸ್ಪಂದಿಸುವುದಿಲ್ಲ. ಕೀರ್ತಿ, ಹೊಸ ಅನುಭವ, ದೇಶಪ್ರೇಮ ದೇಶಸೇವೆ ಇವುಗಳ ನಡುವಿನ ಗೊಂದಲ ಒಂದು ಕಡೆ ,ಯಾದವನ ಮೇಲಿನ ಪ್ರೀತಿ,ಸೆಳೆತ,ತನ್ನದೇ ಸಂತತಿಯನ್ನು ಬೆಳೆಸುವ ಆಕಾಂಕ್ಷೆ ಇನ್ನೊಂದೆಡೆ. ಯಾದವ ಅವಳ ಒತ್ತಡಕ್ಕೆ ಒಪ್ಪದೇ ಹೋದಾಗ ತನ್ನ ಅಂತರಾತ್ಮಕ್ಕೆ ವಿರುದ್ಧ ಯಾನಕ್ಕೆ ಹೊರಟೆ ಬಿಡುತ್ತಾಳೆ. ಅಲ್ಲಿಂದ ಮುಂದೆ ಅವಳ ಉತ್ಸಾಹ, ಕಾರ್ಯ ತತ್ಪರತೆ ತನ್ನ ತತ್ವಗಳ ಮೇಲಿನ ನಂಬಿಕೆ ಇತ್ಯಾದಿಗಳು ಅವಳ ಜೀವನದಲ್ಲಿ ಮಸುಕಾಗುತ್ತಾ ಹೋಗುತ್ತವೆ. ತನ್ನ ಅಯೋಮಯ ಹೊಯ್ದಾಟದಲ್ಲಿ ಸಹಯಾತ್ರಿ ಸುದರ್ಶನ ನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಅವನನ್ನು ವಿರೋಧಿಸಿ, ಆ ಮೂಲಕ ದಾಂಪತ್ಯ ಜೀವನ ಶುರುಮಾಡುವಲ್ಲಿ ವಿಳಂಬಿಸಿ ಅವನನ್ನು ಮಾನಸಿಕವಾಗಿಯೂ ,ದೈಹಿಕವಾಗಿಯೂ ಕಳೆದುಕೊಳ್ಳುತ್ತಾಳೆ. ಕೃತಕ ಗರ್ಭಧಾರೆಣೆಯ ಮೂಲಕ ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಪಡೆದು, ಅವರ ಆರೈಕೆ ಪಾಲನೆ ಮಾಡಿದಾಗ್ಯು ಅವಳ ಹಾಗೂ ಸುದರ್ಶನನ ಮಧ್ಯೆ ಮಾನಸಿಕೆ ಸಾಹಚರ್ಯ ಸೌಹಾರ್ದತೆ ಬೆಳೆಯುವುದೇ ಇಲ್ಲ. ಒಳ್ಳೆಯ ತಾಯಿಯಾಗುವ ಉತ್ತರಾ ತನ್ನ  ನಡವಳಿಕೆ ನಿರ್ಧಾರಗಳಿಂದ ಹಲವು ಉತ್ತರಗಳಿಲ್ಲದ ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತಾಳೆ.

ಒಂದು ಪಾತ್ರ ಓದುಗರು ಕಟ್ಟಿಕೊಂಡ ನಿರೀಕ್ಷೆ ಅಥವಾ ಆದರ್ಶದ ಪ್ರಕಾರ ಸಾಗಬೇಕೇ ಬೇಡವೇ ಎಂಬುದು ಇಲ್ಲಿನ ಚರ್ಚೆಯ ವಿಷಯ.

ಮಹಿಳಾವಾದಿಗಳ ಪ್ರಕಾರ ಉತ್ತರಾ ಪಾತ್ರ ಪೂರ್ಣ ಪ್ರಮಾಣದಲ್ಲಿ ಮೂಡಿ ಬಂದಿಲ್ಲ ಎಂದೆನ್ನಬಹುದು. ಅಷ್ಟೆಲ್ಲಾ ಪ್ರತಿಭೆಯಿದ್ದವಳನ್ನು  ಕಡೆಗೆ ಯಾವುದನ್ನೂ ವೃದ್ಧಿಗೊಳಿಸಿಕೊಳ್ಳದೆ ಇಡೀ ಯಾನದ ಕಾಲಮಾನದಲ್ಲಿ ತೋಟದಲ್ಲಿ ಕಾಲ ಕಳೆಯುವ, ಮಕ್ಕಳಿಗೆ ತಾಯಿಯಾಗುವ,ಹಾಗೂ ಆಗೀಗ ಅಡುಗೆ ಮಾಡುವ ಗೃಹೀತ ಕೆಲಸಕ್ಕೆ ಸೀಮಿತಗೊಳಿಸಿ ಕಾದಂಬರಿಕಾರರು ಈ ಪಾತ್ರಕ್ಕೆ ಅನ್ಯಾಯ ಮಾಡಿದ್ದಾರೆ; ಮಹಿಳಾ ಸಬಲತೆಯನ್ನು ಎತ್ತಿ ಹಿಡಿದಿಲ್ಲ ,ಮತ್ತೆ ಅದೇ ದಮನೀಯ ಮನೋಧರ್ಮವನ್ನು ಒಬ್ಬ ಆಧುನಿಕ ಮಹಿಳೆಗೆ ಆರೋಪಿಸಿ ಪ್ರ್ಗಗತಿವಿರೋಧಿಯಾಗಿ ಬಿಂಬಿಸಿಕೊಂಡಿದ್ದಾರೆ ಎನ್ನುವ ಟೀಕೆಗಳು ಬರಬಹುದಾದ ಸನ್ನಿವೇಶ ತಂದುಕೊಂಡಿದ್ದಾರೆ .

ಸೈದ್ಧಾಂತಿಕ ನೆಲೆಗಟ್ಟಿನಿಂದ ನೋಡಿದರೆ ಇದು ಸರಿ ಎಂದೆನ್ನಿಸಬಹುದು. ಆ ಪಾತ್ರವನ್ನು ಆದರ್ಶೀಕರಣಗೊಳಿಸಿ ನೌಕಾಯಾನದ ಯಶೋಗಾಥೆಯಲ್ಲಿ ಅವಳ ಸಾಹಸ, ತಾಂತ್ರಿಕ ಪರಿಣತಿಗಳನ್ನು ಒರೆಗಿಟ್ಟು ಪಾತ್ರವನ್ನು ಸಶಕ್ತಗೊಳಿಸಬಹುದಿತ್ತು . ಆದರೆ ಅದು ಕೇವಲ ಸೈದ್ಧಾಂತಿಕ  ನೆಲೆಗಟ್ಟು.

ವೈಚಾರಿಕ ಹಾಗು ವಾಸ್ತವಿಕ ನೆಲೆಗಟ್ಟಿನಿಂದ ನೋಡಿದಾಗ ಹಲಾವಾರು ಹೆಣ್ಣುಗಳು ತಮ್ಮ ಸಾಧನೆಯಾ ಹಾದಿಯಿಂದ ಸರಕ್ಕನೆ ಹೊರಳಿ ತಮ್ಮ ಪಾರಂಪರಿಕವಾದ ,ಜೀವ ವಿಕಾಸದ ಮೂಲಭೂತ ಕೆಲಸವಾದ ಕುಟುಂಬದ ಲಾಲನೆ ಪಾಲನೆಯಲ್ಲಿ ತೊಡಗುವುದು ಅಪರುಪವೂ ಅಲ್ಲ, ಅಸಾಧುವೂ ಅಲ್ಲ,ಅಸಾಧ್ಯವೂ ಅಲ್ಲ. ಅಷ್ಟಕ್ಕೂ ತನ್ನ ಪ್ರೇಮವೈಫಲ್ಯವನ್ನು ಅನುಭವಿಸಿದ ಉತ್ತರೆಯಲ್ಲಿ ಆ ರೀತಿಯ ನಿರಾಸಕ್ತಿ ಮೂಡುವುದು ಹಲವಾರು ಮನೋವ್ಯಾಪಾರಗಳ ಸಾಧ್ಯಾ ಸಾಧ್ಯತೆಗಳ ಪಟ್ಟಿಯಲ್ಲಿ ಪ್ರಮುಖವಾದ ಅಂಶವೇ ಅಗಿದೆ್‌. ಹಾಗಾಗಿ ಭೈರಪ್ಪನವರು ತಮಗೆ ಬೇಕಾದ ಒಂದನ್ನು, ಹಂದರಕ್ಕೆ ಹೊಂದುವಹಾಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ಅರಿಸಿಕೊಂಡದ್ದು ಅಕ್ಷಮ್ಯವೆಂತೇನೂ ಅನಿಸಲಿಲ್ಲ. ಇಷ್ಟಕ್ಕೂ ಜೀವನ ನಿರ್ವಹಣೆ ಹಾಗೂ ಭದ್ರತೆಯ ದೃಷ್ಟಿಯಿಂದ ಯಾವ ಕೊರತೆಯೂ ಇರದ ಪರಿಸ್ಥಿತಿಯಲ್ಲಿ ಮಾನವ ಜೀವಿಯೊಂದು ಇರುವಾಗ ದೇಹ – ಮನಸ್ಸುಗಳಿಗೆ ಕಡಿಮೆ ಜಗ್ಗಾಟ ಮಾಡಿಸುವ ಹಾದಿ ಹಿಡಿಯುವುದು ಮೂರರಲ್ಲಿ ಎರಡರಷ್ಟು ಜನ ಆಯ್ದುಕೊಳ್ಳುವ ಆಯ್ಕೆ!!.

ಯಾದವ :

ಕೆಳ ಮಧ್ಯಮ ವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದ, ತನ್ನವರ,ತನ್ನ ಮನೆಯವರ ಮೇಲೆ ಪ್ರೀತಿ ಜವಾಬ್ದಾರಿಗಳು ಇರುವ ಯುವಕನೊಬ್ಬನ ಮನೋವ್ಯಾಪಾರಗಳನ್ನು ಪ್ರತಿನಿಧಿಸುವ ಪಾತ್ರ. ಸಾಧಾರಣಕ್ಕಿಂತ ಹೆಚ್ಚಿನ ಬುದ್ಧಿಮತ್ತೆಯಿದ್ದರೂ ಯಾದವ ದೈಹಿಕವಾದ ಚಟ್ಟುವಟಿಕೆಗಳಲ್ಲಿ ಹೆಚ್ಚು ಒಲವಿರುವ ಮನಸ್ಸುಳ್ಳವ;ಸೈದ್ಧಾಂತಿಕ ವಿಜ್ಞಾನ ಹಾಗೂ ಅದರ ಪರಿಕಲ್ಪನೆಗಳು ಅವನಿಗೆ ಹಿಡಿಸವು. ಹೀಗಾಗಿ ಈ ಗ್ಗಾಗಲೇ ವೈಜ್ಞಾನಿಕವಾಗಿ ,ಪ್ರಾಯೋಗಿಕವಾಗಿ ಭದ್ರ  ನೆಲೆಯ ಮೇಲೆ ನಿಂತಿರುವ ಬಾಹ್ಯಾಕಾಶಯಾನ ಅವನಿಗೆ ಸುಲಭ ಸಾಧ್ಯ. ಇಲ್ಲಿ ಅಮೂರ್ತ (ಅಬ್ಸ್ಟ್ರ್ಯಾಕ್ಟ್) ಆಲೋಚನೆಗಳ ವ್ಯಾಪ್ತಿ ಬಹಳ ಕಡಿಮೆ. ಆದರೆ ಇನ್ನೊಂದು ಸೌರವ್ಯೂಹಕ್ಕೆ ಹೋಗುವ ಸೋಲಾರಿಸ್ನಲ್ಲಿ ಅವನ ಬುದ್ಧಿಮತ್ತೆಗೆ ಹೆಚ್ಚಿನ ಸವಾಲು ಎದುರಾಗುತ್ತಿತ್ತು. ಅವನ ಮನಸ್ಥಿತಿ ಅದರ ಮಟ್ಟಕ್ಕೆ ಏರಿಸುವಷ್ಟಿರಲಿಲ್ಲ. ತಂಗಿಯರ ಮದುವೆ ಹಾಗೂ ತಂದೆ ತಾಯಿಯರ ಆರೈಕೆ ಪಾಲನೆಗಳನ್ನು ಪ್ರಧಾನ ಜೀವನ ಧ್ಯೇಯವನ್ನಾಗಿ ಪರಿಗಣಿಸುವ ಅವನಿಗೆ ( ಅಥವಾ ಅವನಮ್ತಿರುವ ಇನ್ಯಾರಿಗಾದರೂ) ಈ ಹೊಸಬಗೆಯ ಸಾಹಸಕ್ಕೆ ಕೈ ಹಾಕಿ ಅವರೆಲ್ಲರಿಂದ ದೂರ ಉಳಿಯುವ ಮನೋಧಾರ್ಢ್ಯತೆ ಇರುವುದಿಲ್ಲ. ಹಾಗಾಗಿಯೇ ಹೊಸ ಸವಾಲಿಗೆ ಒಡ್ಡಿಕೊಳ್ಳುವ ಉತ್ತರೆಯ ಹಂಬಲದಿಂದ ದೂರ ಸರಿಯುತ್ತಾನೆ. ಉತ್ತರಾ ಕೂಡಾ ಅವನ ಕೋರಿಕೆಯನ್ನು ತಿರಸ್ಕರಿಸಿ ಹೊರಟು ನಿಲ್ಲುತಾಳೆ. ಹಾಗೆಂದು ಅವನಿಗೆ ಊತ್ತರೆಯ ನೆನಪು ಮಾಸುವುದಿಲ್ಲ; ತನ್ನ ಹೆಂಡತಿ ರಾಜನಿಗೆ ಅದನ್ನು ತಿಳಿಸಿರುವುದು ಇಲ್ಲ. ರಾಷ್ತ್ರೀಯ ಭದ್ರತೆ, ರಹಸ್ಯದ ಕಾರಣದ ಜೊತೆಗೆ ಪತಿ ಪತ್ನಿಯರ ನಡುವೆ ಬೇರೊಂದು ಹೆಣ್ಣಿನ ವಿಚಾರವಾಗಿ ಇರಬಲ್ಲ ಆತಂಕ, ಸಂಕೋಚ ಎರಡೂ ಕಾರಣ. ಅದು ತಿಳಿದು ಬಿಟ್ಟಾಗ ರಜನಿಯ ಪ್ರತಿಕ್ರಿಯೆಯೂ, ಯಾದವನ ನಡವಳಿಕೆಯೂ ಯಾವ ಆದರ್ಶಗಳ ಚೌಕಟ್ಟಿಗೆ ಮಣಿಯದೆ ಸಾಮಾನ್ಯ ಮನುಷ್ಯರ ಪ್ರಾತಿನಿಧಿಕ ಪ್ರತಿಕ್ರಿಯೆಯಾಗಿಯೇ ಚಿತ್ರಣಗೊಂಡಿದೆ. ಭೈರಪ್ಪನವರ ಕಥಾನಿರೂಪಣೆ ಇದೇ ಕಾರಣಕ್ಕೆ ಸಾರ್ವಕಾಲಿಕ ಕೃತಿಯಾಗಿ ನಿಲ್ಲುವ ಶಕ್ತಿ ಪಡೆದಿರುತ್ತದೆ. ಆದರ್ಶಗಳ ಚೌಕಟ್ಟಿನಲ್ಲಿ ಇಬ್ಬರೂ ಅಥವಾ ಇಬ್ಬರಲ್ಲಿ ಒಬ್ಬರು ಪ್ರಬುದ್ಧ ನಡವಳಿಕೆ ತೋರಬಹುದಿತ್ತು. ಇದು ಅಪರೂಪ.  ಆದರೆ ಇತಿಹಾಸ ಗಮನಿಸಿದಾಗ  ಸಾಂದರ್ಭಿಕ ಅನಿವಾರ್ಯತೆಯನ್ನು ಲೆಕ್ಕಿಸದೆ ಪ್ರತಿಭಟನೆ, ಜಗಳ ದೂಷಣೆ, ಆರೋಪ ಪ್ರತ್ಯಾರೋಪ ಇತ್ಯಾದಿಗಳೇ ಹೆಚ್ಚು ನಡೆಯುವ ಕಾರಣ ವಾಸ್ತವಿಕ ನೆಲೆಗಟ್ಟಿನ ಚಿತ್ರಣ. ಮನೋವ್ಯಾಧಿಗೆ ತುತ್ತಾಗುವುದು ಇದರ ಇನ್ನೊಂದು ಲಕ್ಷಣ. ಅವನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ತನ್ನ ಸಾಮರ್ಥ್ಯದ ಚೌಕಟ್ಟಿನಲ್ಲಿ ಆದಷ್ಟು ಪ್ರಾಮಾಣಿಕವಾಗಿ ಇರಬಯಸುವ ವ್ಯಕ್ತಿ. ವ್ಯಕ್ತಿಕೇಂದ್ರಿತ ಆಸೆ ಆಕಾಂಕ್ಷೆಗಳು ಹಾಗೂ ಕುಟುಂಬ ಅಥವಾ ಸಮುದಾಯ ಕೇಂದ್ರಿತ ನಿರೀಕ್ಷೆಗಳ ತಾಕಲಾಟದಲ್ಲಿ ಯಾದವನ ಮನಸ್ಸು ಎರಡನೆಯ ಕಡೆಗೆ ವಾಲಿದುದು ಅನಿರೀಕ್ಷಿತವೇನಲ್ಲ. ಅದು ಸಂಸ್ಕಾರ ಸಂಸ್ಕೃತಿಗಳು ರೂಪಿಸುವ ಒಂದು ವ್ಯಕ್ತಿತ್ವ.ವೈಯಕ್ತಿಕ ಆಕಾಂಕ್ಷೆ, ಉತ್ತರಾಳ ಆಗ್ರಹ ಹಾಗೂ ತನ್ನ ಕುಟುಂಬ ಇಟ್ಟಿರುವ ನಿರೀಕ್ಷೆ ಇವು ಮೂರರ ತಾಕಲಾಟದಲ್ಲಿ ,ಹಗ್ಗ ಜಗ್ಗಾಟದಲ್ಲಿ ಸಮನ್ವಯ ಸಾಧಿಸುವ ಸಾಧ್ಯತೆ ಇಲ್ಲದೇ ಹೋದಾಗ  ಅಸಹಾಯಕವಾದ, ಬಲಹೀನವಾದ ಹಾಗೂ ವ್ಯತಿರಿಕ್ತ ಪರಿಣಾಮಗಳಿಗೆ ಹಲವು ಜೀವಗಳು ತುತ್ತಾಗುವ ಸಾಧ್ಯತೆ ಮನಗಂಡು ತನ್ನ ಹಾಗೂ ಉತ್ತರಾಳ ಸಂಬಂಧವನ್ನು ತೊರೆಯುವ ಕಷ್ಟ ಸಾಧ್ಯ ಆದರೆ   ಕಾರ್ಯಸಾಧುವಾದ  ನಿರ್ಧಾರ ತೆಗೆದುಕೊಳ್ಳುತ್ತಾನೆ.ವ್ಯಕ್ತಿಗತ ಹಿತಾಸಕ್ತಿಗಾಗಿ ಇನ್ನೊಬ್ಬರ ಹಿತವನ್ನು ಮೆಟ್ಟಲು ಸಧೃಢ ಮನಸ್ಸು ಬೇಕಾಗಿಲ್ಲ.ಹೀಗಾಗಿ ಅವನು ದುರ್ಬಲ ಮನಸ್ಸಿನ ವ್ಯಕ್ತಿಯೆಂದು ನನಗನ್ನಿಸುವುದಿಲ್ಲ.

ಸುದರ್ಶನ

ಮೂರನೆಯ ಪಾತ್ರವಾಗಿ ಮೂಡಿಬರುವ ಸುದರ್ಶನನ ವ್ಯಕ್ತಿತ್ವ ಸ್ವಲ್ಪ ವಿಭಿನ್ನ ಸ್ವರೋಪದ್ದು. ಇವನು ಅಸಾಧಾರಣ ಬುದ್ಧಿವಂತ ಹಾಗೂ ಒಂದು ಚೌಕಟ್ಟಿಗೆ ಒಳಪಟ್ಟ ವ್ಯಕ್ತಿತ್ವದವನಲ್ಲ. ಇವನ ಬಾಲ್ಯ ಯೌವ್ವನಗಳನ್ನು ಹೆಚ್ಚು ಕಟ್ಟಿ ಕೊಟ್ಟಿಲ್ಲವಾದ್ದರಿಂದ ತಂದೆ ತಾಯಿಯರ ಪರಿಪೂರ್ಣ ಆರೈಕೆ ಇವನಿಗೆ ಸಿಕ್ಕಿಲ್ಲ ಹಾಗೂ ಅಕ್ಕನ ಆರೈಕೆಯಲ್ಲಿ ಬೆಳೆದವನೆಂದು ಊಹಿಸಿಕೊಳ್ಳಬಹೌದು. ಇಂತಹ ಸನ್ನಿವೇಶಗಳಲ್ಲಿ ಆಗುವ ಬಹುತೇಕ ಮನಬೆಳವಣಿಗೆಗಳಂತೆ ಇವನಿಗೆ ಸಾಮಾಜಿಕ ಬಂಧನ ವಾತ್ಸಲ್ಯಗಳ ಸೆಳೆತ ಅಷ್ಟಕ್ಕಷ್ಟೆ. ಹಾಗೆಂದು ಮೌಲ್ಯಗಳೇ ಇಲ್ಲವೆನ್ನುವಂತಿಲ್ಲ. ಹೊರದೇಶಗಳಲ್ಲಿ ಇದ್ದ ಕಾರಣಕ್ಕೂ,ಯಾನಕ್ಕೆ ಮುಂಚೆಯೇ ದೇಹ ಸಂಪರ್ಕದ ಅನುಭವ ಇದ್ದುದಕ್ಕೂ, ಮದುವೆಯಾಗದೆ ಉಳಿದವನಾದುದಕ್ಕೂ ಹೆಚ್ಚಿನ ತಾಕಲಾಟಗಳು ಇವನಲ್ಲಿ ಕಂಡುಬರುವುದಿಲ್ಲ.ಯಾನದಲ್ಲಿ ಉತ್ತರೆಯ ನಡವಳಿಕೆಗಳು ಇವನಲ್ಲ್ಲಿ ಎಬ್ಬಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅಂತರ್ಮುಖಿಯಾಗುವ ಮೂಲಕ ಅವನ ಪಾತ್ರ ಹಾಗೂ ವ್ಯಕ್ತಿತ್ವ ಬೆಳೆಯುತ್ತಾ ಹೋಗುತ್ತದೆ. ಧ್ಯಾನಸ್ಥಿತಿಯಲ್ಲಿ ಇಳಿಯುತ್ತಾ ವಿಶ್ವರಹಸ್ಯದ ಉತ್ತರಗಳನ್ನು ತತ್ವಮೀಮಾಂಸೆಯಲ್ಲಿ ಹುಡುಕುತ್ತಾ ಹೋಗುವ ಅವನ ವೈಚಾರಿಕ ಲಹರಿ ಕಾದಂಬರಿಯ ಮೂಲ ತಿರುಳು ಎಂದೆನ್ನಬಹುದು.ಈ ಮೂಲ ತಿರುಳಿನ ಸುತ್ತಲೇ ಇರುವ ಸಿಪ್ಪೆ, ಬೀಜಗಳಂತೆ ಉಳಿದ ಪಾತ್ರಗಳು ನನಗೆ ಭಾಸವಾಗುತ್ತವೆ.

ಬೆಳಕು- ಕತ್ತಲು,ಸೂರ್ಯ ,ಗುರುತ್ವ, ಕೃಷ್ಣ ಗುಹ್ವರ ಇತ್ಯಾದಿಗಳ ತಾತ್ವಿಕ ಸಂವಾದ ಇಲ್ಲಿನ ಹೈಲೈಟ್ . ಸಮಕಾಲೀನ ಜಗತ್ತಿನ ಎಡ-ಬಲ ರಂಗಗಳ ಸೈಧ್ಧಾಂತಿಕ ಭಿನ್ನಾಭಿಪ್ರಾಯಗಳು , ಜಾಹಿರಾತು ಮಾರುಕಟ್ಟೆ ಹಣ ಪ್ರಚಾರಗಳ  ಜೇಡರ ಬಲೆ,ಹಿಮಾಲಯದ ತಪ್ಪಲು ,ಅಲ್ಲಿ ನಡೆಯುತ್ತಿರುವ ವಿಧ್ವಂಸಕ ಬೆಳವಣಿಗೆಗಳು , ಜನರ ಮನೋಭಾವ ಮೌಲ್ಯಗಳಲ್ಲಾಗುತ್ತಿರುವ ಅಧಃ ಪತನಗಳು ಎಲ್ಲವನ್ನು ವಿವರಿಸುವಲ್ಲಿ ಕಥೆ ನಡೆಯುವ ಕಾಲಮಾನದ ಚಾರಿತ್ರಿಕ ಚೌಕಟ್ಟನ್ನು ಕಟ್ಟಿಕೊಡುತ್ತವೆ,. ಹಾಗಾಗಿ ಈ ಕಾದಂಬರಿಯನ್ನು ಇನ್ನೂ ಐವತ್ತು ವರ್ಷ ಕಳೆದು ಓದಿದರೂ ಅದರ ಪ್ರಸ್ತುತಿ ಸ್ವೀಕರಣೀಯವೆಂದು ನನ್ನ ಭಾವನೆ. ಅಕ್ಕನ ನಿರಪೇಕ್ಷ ಅಂತಃ ಕರಣ, ಭಾವನ,ಅವರ ಮಕ್ಕಳ  ಪ್ರೀತಿ, ಧ್ಯೇಯಸಾಧನೆಗೆ ಮುಖಮಾಡಿದವನಿಗೆ ಅಸ್ತಿ ಪಾಸ್ತಿಯ ಮೇಲಿನ ನಿರಾಸಕ್ತಿಯಂಥ ಸಾರ್ವಕಾಲಿಕ  ಸತ್ಯಗಳು ಕೂಡಾ ಕಥೆಯಲ್ಲಿ ಬಂದು ಹೋಗುತ್ತವೆ. ಭೂಮಿಯಲ್ಲಿ ಲೋಭ ಮೋಹಗಳನ್ನು ಗೆಲ್ಲಬಲ್ಲ ಮನೋಭೂಮಿಕೆ ರೂಪುಗೊಂಡು ಉತ್ತರೆಯೋಂದಿಗೆ ಸೋಲ್ಯಾರಿಸ್ ನಲ್ಲಿ  ಕಾಮವನ್ನು ಗೆಲ್ಲಬಲ್ಲ ,ಕ್ರೋಧವನ್ನು  ಮಣಿಸಬಲ್ಲ ಮನೋಸ್ಥಿತಿ ಮೂಡುವುದರ ಮುನ್ನುಡಿ ಸುಪ್ತವಾಗಿ ವ್ಯಕ್ತಪ ಡಿಸುತ್ತಾರೆ ಭೈರಪ್ಪನವರು. ಏಕಾಂತದಲ್ಲಿ ಕಾಮವನ್ನು ಗೆಲ್ಲುವುದು ಕಷ್ಟಕರ. ಇಲ್ಲಿ ಅವನು ಉತ್ತರೆಯೊಡನೆ ಹೊಂದಾಣಿಕೆ ಮಾಡಿಕೊಂಡು ಉಳಿದ ಸಾಧನೆಗಳ ಶಿಖರ ಏರಬಹುದಿತ್ತೇ ಇಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಹಾಗಿದ್ದರೆ ಕಥೆಯ ಓಟಕ್ಕೆ ಚ್ಯುತಿ ಬರುತ್ತಿತ್ತೇ ಇಲ್ಲವೇ ಎಂದು ಹೇಳುವುದು ಕಷ್ಟ.  ಅವರಿಬ್ಬರಲ್ಲಿ ಮೂಡುವ ಬಿರುಕು ಹಾಗೂ ಸಮರಸವಿಲ್ಲದ ಜೀವನ ಓದುಗನಲ್ಲಿ ಒಂದುಬಗೆಯ ಹತಾಶೆ ಮೂಡಿಸುವುದಂತೂ ನಿಜ.ಯಾನದ ನೌಕೆಯ ಒಳಗೂ, ಹೊರಗೂ ಇರುವ ನಿರ್ವಾತವನ್ನು, ಏಕತಾನತೆಯನ್ನು ಇದು ಪ್ರತಿನಿಧಿಸುತ್ತದೆಯೇನೋ ನನಗೆ ತಿಳಿಯದು. ಎರಡು ವಿಭಿನ್ನ ನೌಕೆಗಳಲ್ಲಿ ಎರಡು ವಿಭಿನ್ನ ಪರಸ್ಪರ ಸಂಬಂಧವಿರುವ ಜೋಡಿಗಳ ಕಥಾ ಹಂದರ ಇದ್ದಲ್ಲಿ ಕಥೆಯ ವ್ಯಾಪ್ತಿ ಸಮಗ್ರವಾಗುತ್ತಿತ್ತೇನೋ.

ಉಳಿದ ಮುಖ್ಯಪಾತ್ರಗಳಾದ ಆಕಾಶ್ ಹಾಗೂ ಮೇದಿನಿ ಅವರ ಚಿತ್ರಣ ಕಥಾ ಕ್ರಿಯೆಯ ಮೂಲ ಪರಿಕರಗಳಾಗದೆ ಕೇವಲ ವೇಗವರ್ಧಕಗಳಂತೆ ಮೂಡಿಬರುತ್ತವೆ.

ಕಥಾನಿರೂಪಣೆ:

ವೈಜ್ಞಾನಿಕ ಹಂದರದ ಮೇಲೆ ಕಟ್ಟಿಕೊಟ್ಟ ವೈಚಾರಿಕ ಕಥೆಯಾದ್ದರಿಂದ ಇಲ್ಲಿ ಯಾವ ರೋಚಕ ಸನ್ನಿವೇಶಗಳು ಮೂಡುವುದಿಲ್ಲ. ಬಾಲಿವುಡ್ ಅಥವಾ ಹಾಲಿವುಡ್ ನ ಸಾಹಸ ಇಲ್ಲಿಲ್ಲ ಅಲ್ಲಲ್ಲಿ ಸ್ವಲ್ಪ ನಿಧಾನವಾಗಿ ಹೋಗುತ್ತಿದೆ ಎಂದೆ ನ್ನಿಸಿದರೂ, ಓದಿಸಿಕೊಂಡು ಹೋಗುವುದರಲ್ಲಿ ಕಾದಂಬರಿ ಸೋಲುವುದೆಂದು ನನಗನ್ನಿಸಲಿಲ್ಲ.ಭೈರಪ್ಪನವರ ಕಥೆಗಳಲ್ಲಿ ಬರುವ ಕಾಮ ಇಲ್ಲಿಯೂ ಸಾಕಷ್ಟು ಇದೆ. ಅಲ್ಲಲ್ಲಿ ವೈಜ್ಞಾನಿಕ ವಿವರಣೆಗಲಿದ್ದರೂ, ಓದುಗನ ಗಮನ ಆ ಕಡೆಗೆ ಅಷ್ಟು ಹರಿಯದು- ಕಾರಣ ಇದು ಮೂಲಭೂತವಾಗಿ ವೈಚಾರಿಕ ಕಾದಂಬರಿ.  ಹಾಗಾಗಿ ಇದನ್ನು ವೈಜ್ಞಾನಿಕ ಕಾದಂಬರಿ ಎಂದೆನ್ನಲಾಗದು.

ಕಥಾವಸ್ತು:

ಕಾದಂಬರಿ ಬರೆಯುವುದು ಮತ್ತು ಓದುವುದು ಏಕೆ ಎಂದು ಕೇಳಿಕೊಂಡರೆ ಹಲವರಿಂದ ಹಲವು ಉತ್ತರಗಳನ್ನು ನಿರೀಕ್ಷಿಸಬಹುದು. ಮಕ್ಕಳಿಗೆ ಕಥೆಗಳನ್ನು ಹೇಳುವುದರ ಮೂಲ ಧ್ಯೇಯ ಅವು ಪುರಾಣ, ಇತಿಹಾಸ, ದೃಷ್ಟಾಂತಗಳ ಮೂಲಕ ಪ್ರಪಂಚದ ಗುಣ ಸ್ವರೂಪಗಳನ್ನು , ಒಳ್ಳೆಯದು-ಕೆಟ್ಟದ್ದು  ಸ್ವೀಕೃತ -ಅಸ್ವಿಕೃಉತ ನಡವಳಿಕೆಗಳ ನಡುವಿನ ವ್ಯತ್ಯಾಸ ಗ್ರಹಿಸಿ ವ್ಯಕ್ತಿತ್ವವನ್ನು ರೂಪುಗೊಳಿಸಲಿಕ್ಕೆ ಹಾಗೂ ಮನರಂಜನೆಗೆ ಎಂದು ವ್ಯಾಖ್ಯಾನಿಸಬಹುದು.

ಆದರೆ ಪ್ರೌಢರು ಈ ಕಾದಂಬರಿಗಳಿಂದ  ಏನನ್ನು ತೆಗೆದುಕೊಳ್ಳಬೇಕು? ಕನಸುಗಳನ್ನೇ ,ಆದರ್ಶಗಳನ್ನೇ,ಕಟುವಾಸ್ತವಗಳನ್ನೇ, ಅಥವಾ ಕ್ರಾಂತಿಕಾರಿ ಮನೋಭಾವಎಗಳನ್ನೇ, ವೈಚಾರಿಕತೆಯನ್ನೇ ಹೇಳುವುದು ಕಷ್ಟ. ಮೇಲಿನ ಎಲ್ಲ ನಿರೀಕ್ಷೆಗಳನ್ನು,  ವಾಸ್ತವಿಕ, ಪ್ರಾಯೋಗಿಕ ಅಥವಾ ಕಾಲ್ಪನಿಕ ಆಯಾಮಗಳ ನಡುವೆ  ಯಾವುದರಲ್ಲಿ ಭಾವಿಸಿಕೊಳ್ಳಬೇಕು ಎಂದಾಗ ಪ್ರಶ್ನೆ ಇನ್ನೂ ಜಟಿಲವಾಗುತ್ತದೆ. ಯಾರಿಗೆ ಯಾವುದು ಬೇಕು ಎನ್ನುವುದು ಅವರವರ ಭಾವ ಭಕುತಿ ಸಂಸ್ಕೃತಿ ಸಂಸ್ಕಾರಗಳನ್ನು , ಮನೋಧರ್ಮ ಮನೋವಾಂಛೆಗಳನ್ನು ಅವಲಂಬಿಸಿರುತ್ತದೆ.

ನನ್ನ ಮಟ್ಟಿಗೆ ಹೇಳುವುದಾದರೆ ಒಂದು ಸಾಹಿತ್ಯ ಕೃತಿ ವೈಚಾರಿಕತೆಯನ್ನು ಪ್ರಚೋದಿಸಬೇಕು. ಪರಂಪರೆ ತಳಹದಿಯ ಮೇಲೆ ನಮ್ಮ ಮನಸ್ಸಿನ ಗಡಿಯನ್ನು ವಿಸ್ತರಿಸುವಂತಿರಬೇಕು. ಹಳೆ ಬೇರಿನ ಮರಕ್ಕೆ ಹೊಸಚಿಗುರನ್ನು ಟಿಸಿಲೊಡೆಸಬೇಕು- ಬರೀ ಎಲೆಗಳನ್ನಲ್ಲ- ರೆಂಬೆ ಕೊಂಬೆಗಳ ಸಮೇತವಾಗಿ.  ನಮ್ಮ ನಡುವಿನ ತಾಕಲಾಟಗಳಿಗೆ ನಮ್ಮ ಮನೋಧರ್ಮ ,ಮಾನವನ ಮೂಲಗುಣಗಳು ಕಾರಣವೇ ಹೊರತು ಅವುಗಳನ್ನು ಮೀರಿನಿಂತ  ಧರ್ಮ ಅಲ್ಲ ಎಂಬ ಸತ್ಯವನ್ನು ಸಾರುವಂತಿರಬೇಕು. ಈ ಕಡೆಯ ಅಂಶ ಕೆಲವರಿಗೆ ಒಪ್ಪಿಗೆಯಾಗದೇ ಇರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಾವು ಒಂದು ಸಮುದಾಯವಾಗಿ ಸಧೃಉಢವಾಗಿ ಮುನ್ನಡೆಯಬೇಕಾದರೆ ನಮ್ಮ ಮೂಲ ಹಾಗೂ ದೇಶೀ ಪರಂಪರೆಯ ಬಗೆಗೆ ವೈಜ್ಞಾನಿಕ ಅರಿವು, ಚಿಕಿತ್ಸಕ ಹೆಮ್ಮೆ ಇರುವುದು ಬಹಳ ಮುಖ್ಯ. ನಮ್ಮ ಸಂಸ್ಕೃತಿಯ ಅರಿವು ನಮಗೆ ಗಹನವಾಗಿ ಇದ್ದಲ್ಲಿ ಮಾತ್ರ ವಿಧ್ವಂಸಕ ಶಕ್ತಿಗಳು ಕೀಳಾಗಿ ಕಾಣುವುದಾಗಲೀ, ಕೀಳರಿಮೆ ಮೂಡಿಸುವುದಾಗಲೀ ಮಾಡಲಾರವು. ಒಡೆಯಲಾರವು.

ಇದೇ ಕಾರಣಕ್ಕೆ ಭೈರಪ್ಪನವರ ಯಾನ ನನಗೆ ಪ್ರಸ್ತುತವಾಗಿಯೂ, ಆಪ್ತವಾಗಿಯೂ ಕಾಣುತ್ತದೆ.. ದೇಶೀ ಭಾವನೆಗಳು ಹಾಗೂ ಚಿಂತನೆಗಳನ್ನು ಒರೆಗಿಟ್ಟು  ಹೊಸ ಯುಗದ  ವೈಜ್ಞಾನಿಕತೆಗೆ ಪೂರಕವಾಗಿ ತಾತ್ವಿಕ ಅಂಶಗಳ ಸಮನ್ವಯ ಸಾಧಿಸುತ್ತಾ ಹೋಗುತ್ತಾರೆ. ಪಾತ್ರಗಳನ್ನೂ ಯಾವ ಆದರ್ಶಗಳ ಚೌಕಟ್ಟಿಗೂ ಬಂಧಿಸದೆ ಅವರವರ ನಿರ್ಧಾರಗಳಿಗೆ ಪಕ್ಕಾಗಿಸುತ್ತಾರೆ ಹಾಗೂ ಆ  ನಿರ್ಧಾರಗಳಿಗಳ  ಪರಿಣಾಮಗಳನ್ನು ತೋರಿಸಿ ಅವಕ್ಕೆ ಹೊಣೆಯಾಗಿಸುತ್ತಾರೆ.

ಪರ್ವ, ಸಾರ್ಥ, ನೆಲೆ ಕಾದಂಬರಿಗಳಷ್ಟು ತೀವ್ರವಾಗಿಲ್ಲದಿದ್ದರೂ ಯಾನ ನಮ್ಮ ಮನೋ ವಿಮಾನವನ್ನು ಅರಿವಿನ ಪರಿಧಿಯ ಹೊರಗೆ ಉಡಾಯಿಸುವುದರಲ್ಲಿ ಯಶಸ್ವಿಯಾಗಿದೆ ಎಂದೆನ್ನಲು ಅಡ್ಡಿಯಿಲ್ಲ.

ಸುದರ್ಶನ ಗುರುರಾಜರಾವ್.

Daffodils ಕವಿತೆಯನ್ನು ಕನ್ನಡಕ್ಕೆ ಭಾವಾನುವಾದ ಮಾಡಿದ್ದೇನೆ. ಕನ್ನಡ ಭಾಷೆಯ ಸೌಂದರ್ಯ ಮತ್ತು ಅಭಿವ್ಯಕ್ತಿಗಳ ಶಕ್ತಿ ಕೂಡಾ ಅನುಪಮವಾದದ್ದೇ.

Daffodils

ಗಿರಿಶಿಖರ ಕಂದರಗಳಾ ಮೇಲೆ ನಾನೊಮ್ಮೆ

ಒಂಟಿ ಮೋಡದ ತೆರದಿ ಅಲೆಯುತಿರುವಲ್ಲಿ

ಸ್ವರ್ಣ ವರ್ಣದ ಹೂವ ಕಂಬಳಿಯ ಹಾಸನ್ನು

ಕಂಡು ಅಚ್ಚರಿಗೊಂಡು ನಿಂದೆ ನಾನಲ್ಲಿ

 

ಕೊಳದ ಬದಿಯಲಿ ನಿಂತ ಸಾಲುಮರಗಳ ಕೆಳಗೆ

ನಲಿವ ಹೂಗಳು ಕರೆಯೆ ಕೈಬೀಸಿ ಬಳಿಗೆ

ಕ್ಷಣವೊಮ್ಮೆ ನಾನಿಂತು ಹರಿಸಿದೆನು ಚಿತ್ತ

ನೋಡುತಲಿ ಕಣಿವೆಯಾ ಸುತ್ತ ಮುತ್ತ.

 

ಆಕಾಶಗಂಗೆಯಲಿ ರಾತ್ರಿಯಾಗಸದಲ್ಲಿ

ಎಣೆಯಿರದೆ ಮಿನುಗುವಾತಾರೆಗಳ ತೆರದಿ

ಕೊಳದ ದಂಡೆಯ ಉದ್ದ ಅಗಲಕ್ಕೂ ಮೈಚಾಚಿ

ಕಣ್ಣ ತುಂಬಿವೆ ಇಲ್ಲಿ ಕಾಣಿಸದೆ, ಪರಿಧಿ!

 

ಹತ್ತಲ್ಲ ನೂರಲ್ಲ ಹತ್ತು ಸಾವಿರವಲ್ಲ

ಲಕ್ಷಕ್ಕೂ ಮಿಗಿಲಾಗಿ ನಗುತಿರುವುವಲ್ಲಿ

ಬಳುಬಳುಕಿ ನಸುನಗುತ ತಲೆದೂಗಿ ಆಡಿಹವು

ತಂಗಾಳಿ ಮೃದುವಾಗಿ ಬೀಸುತಿರುವಲ್ಲಿ

 

ಕೊಳದೊಳಗೆ ಜಲದಲೆಯು ಎದ್ದು ಕುಣಿದಿರಲೇನು

ನಮ್ಮ ನಾಟ್ಯದ ಸಮಕೆ ಅವುಗಳಿಲ್ಲೆಂದು

ಹೆಮ್ಮೆ -ಬಿಮ್ಮುಗಳಿಂದ ಹರುಷದೊನ್ನಲಿವಿಂದ

ಸುಮರಾಜಿ ನರ್ತಿಸಿವೆ ನೋಡು ನೀಬಂದು

 

ಪುಷ್ಪಹಾಸಿನ ಚೆಲುವು ನನ್ನ ಮನ ತುಂಬಿರಲು

ನನ್ನ ಮೇಲೆಯೇ ನಾನು ಮೋಹಗೊಂಡು

ಕಣ್ಣು ಮನ ತುಂಬಿರುವ ಈ ಸಿರಿಯ ಭಾಗ್ಯವನು

ನಂಬಲಾರದೆ ನಂಬಿ ನಿಂದೆನಿಂದು

 

ಮನೆಗೆ ಮರಳುತ ಒಂಟಿ ಭಾವದಲಿ ಪವಡಿಸಿದೆ

ನಾ ಎನ್ನ ತಲ್ಪದಾ ಮೇಲೆ ತಲೆಯಿಟ್ಟು

ಏಕಾಂತ ನೀಡಿದಾ ಸುಖದ ಸ್ಪರ್ಶಕೆ ಚೆಲುವ

ಹೂವುಗಳ ಸಾಂಗತ್ಯ ಮನದೊಳಿಟ್ಟು

 

ಹೃನ್ಮನ ತುಂಬಿದಾ ಹೂವೆ ನಿನ್ನ ಹೆಸರೇನೆ?

‘ಡಾಫುಡಿಲ್ಸ್’ ಎಂಬ ನೆಲ ನೈದಿಲೆಯು ತಾನೆ!!

ಸಹಿಷ್ಣುತೆ-ಅಸಹಿಷ್ಣುತೆ

ಸಹಿಷ್ಣುತೆ-ಅಸಹಿಷ್ಣುತೆ

ಅದೊಂದು ಅನಿವಾಸಿ ಭಾರತೀಯರ ಚಿಕ್ಕದೊಂದು ಸಂಘ. ಹತ್ತಾರು ವರ್ಷಗಳಿಂದ, ಎಲ್ಲ ಸಂಘಗಳು ಕಾಣುವ ಏಳು ಬೀಳುಗಳನ್ನು, ಒಳಿತು ಕೆಡಿಕುಗಳನ್ನು, ಸಂಘಟನೆ-ವಿಘಟನೆಗಳನ್ನು ಕಾಲ ಕಾಲಕ್ಕೆ ಅನುಭವಿಸಿಯೂ ಕ್ರಿಯಾತ್ಮಕವಾಗಿದ್ದ ಒಂದು ಚಿಕ್ಕ ಊ ರಿನ ಚಿಕ್ಕ ಸಮ್ಘಟನೆ.ನೆಲ ಜಾಲಗಳನ್ನು ಬಿಟ್ಟು ಬಂದಿಳಿದ ಭಾರತೀಯರನ್ನು ಒಂದು ಚಾವಣಿಯಡಿ ತಂದು, ವರುಷ ಕ್ಕಿಷ್ಟು  ಕಾರ್ಯಕ್ರಮಗಳನ್ನು ಆಯೋಜಿಸಿ ತನ್ನ ಕೈಲಾದಷ್ಟು ಚಾರಿಟಿಗಳನ್ನು ಮಾಡುತ್ತಿದ್ದ ಒಂದು ಸಂಸ್ಥೆ. ದೀಪಾವಳಿ, ಹೋಳಿ ಹಬ್ಬ, ,ಆಹಾರ ಮೇಳ, ಹೊಸವರ್ಷಾಚರಣೆ ಗಳು ಅದರ ಪ್ರಮುಖ ಕಾರ್ಯಕ್ರಮಗಳಾಗಿದ್ದವು.

ಭಾರತೀಯರೆಂದಮೇಲೆ ವೈವಿಧ್ಯತೆ ಸ್ವಾಭಾವಿಕವಷ್ಟೇ. ಹಲವು ಭಾಷೆ, ವೇಷ, ಆಚಾರ ವಿಚಾರ, ಧರ್ಮ ಪಂಗಡಗಳ ಗೂಡು ಎಂಬುದನ್ನು ಹೇಳಬೇಕಿಲ್ಲ. ಬಹುತೇಕರು ಹಿಂದೂ ಧರಮದವರಾಗಿದ್ದು ಮೊದಲಿಗೆ ಎರಡು ಮುಸ್ಲಿಂ ಹಾಗೂ ಎರೆಡು ಕ್ರಿಸ್ಚಿಯನ್ ಪಂಗಡಗಳು ಇದರಲ್ಲಿದ್ದವು. ಕ್ರಿಶ್ಚಿಯನ್ ಪಂಗಡಗಳವರು ಕ್ಯಠೋಲಿಕ್   ಅನುಯಾಯಿಗಳಗಿದ್ದು ಹೊಸವರ್ಷಾಚರಣೆ ಹೊರತು ಪಡಿಸಿ ಉಳಿದ ಹಬ್ಬಾಚರಣೆಯಲ್ಲಿ ಪಾಲ್ಗೊಂಡಿದ್ದು ನಾನು ನೋಡಿರಲಿಲ್ಲ. ಮುಸ್ಲಿಂ ಕುಟುಂಬಗಳಲ್ಲಿ ಒಂದು, ಅವರೇ ಹೇಳಿಕೊಂಡಂತೆ ‘ಅಹ್ಮದೀಯ’ ಎಂಬ ಶಾಖೆಗೆ ಸೇರಿದ ಜನ. ಇನ್ನೊಂದು, ನನಗೆ ತಿಳಿಯದು, ನಾನೂ ಕೇಳಿಲ್ಲ, ಅವರೂ ಹೇಳಿಲ್ಲ.

ಯಾವ  ಭೇದಭಾವವೂ ಇಲ್ಲದೆ ಎಲ್ಲರೂ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆವು. ಬಾಲಿವುಡ್ ಹಾಡುಗಳು, ಕಿರು ಪೌರಾಣಿಕ ಪ್ರಸಂಗಗಳು, ಶಾಸ್ತ್ರೀಯ ಸಂಗೀತ ಹಾಗೂ ನೃತ್ಯರೂಪಕಗಳು  ಕಾರ್ಯಕ್ರಮದ ಭಾಗಗಳಾಗಿದ್ದವು. ನಮ್ಮ ಭರತನಾಟ್ಯದ ಶಿಕ್ಷಕಿಗೆ ಅವಕಾಶ ಸಿಕ್ಕಾಗ, ಕೆಲವು ಸೂಫಿ ಸಂತರ ಹಾಡುಗಳಿಗೂ ಮಕ್ಕಳಿಂದ ಹೆಜ್ಜೆ ಹಾಕಿಸುತ್ತಿದ್ದಳು. ಸದಸ್ಯರ ಕುಟುಂಬಗಳು ಉತ್ಸಾಹದಿಂದಲೇ ಭಾಗವಹಿಸುತ್ತಿದ್ದವು.

ಬದಲಾವಣೆ ಯುಗದ ಧರ್ಮ.,ಕಾಲಕ್ರಮದಲ್ಲಿ ಮಂಗಳೂರು, ಹೈದರಾಬಾದು, ಉತ್ತರ ಪ್ರದೇಶ ಹಾಗೂ ಬಿಹಾರಗಳ ಮುಸ್ಲಿಮ್ ಕುಟುಂಬಗಳು ಊರಿಗೆ ಸೇರ್ಪಡೆಯಾದವು,. ನಾವು ಸಹ ಸಂಘದ ಸದಸ್ಯತ್ವಕ್ಕೆ ಅವರನ್ನು ಆಹ್ವಾನಿಸಿ ಸೆರಿಸಿಕೊಂಡೆವು.. ಮೊದಲವರ್ಷ ಏನೂ ತೊಂದರೆ ಯಿರಲಿಲ್ಲ. ಎರಡನೇ ವರ್ಷದ ದೀಪಾವಳಿ ಸಮಯಕ್ಕೆ ಈದ್ ಹಬ್ಬವೂ ಬರುವ ಕಾರಣ ದೀಪಾವಳಿ-ಈದ್ ಎಂಬ ಯುಗಳ ಹಬ್ಬವಾಗಿ ಕಾರ್ಯಕ್ರಮ ನಡೆಸಬೇಕೆಂಬ ಕೋರಿಕೆ ಬಂತು. ಸಮಿತಿ ಸರ್ವಾನುಮತದಿಂದ ಅಂಗಿಕರಿಸಿ, ಅದಕ್ಕೆಂದೇ ಹೊಸ ಭಿತ್ತಿ ಪಟವನ್ನು ಬರೆಸಲಾಯಿತು. ಏಕತೆ- ಸಮಗ್ರತೆಯ ನಡೆಯೆಂದು ಎಲ್ಲರೂ ಸಂತೋಷಿಸಿದರು!

ಆದರನಂತರ ಹೋಳಿ ಹಬ್ಬಅತಿ ಧಾರ್ಮಿಕ ಆಚರಣೆಯೆಂದೂ, ಸಮುದಾಯದ ಎಲ್ಲರ ಆಶಯಕ್ಕೆ ಅನುಗುಣವಾಗಿಲ್ಲವೆಂದೂ, ಅದನ್ನು ಸೆಕ್ಯುಲರ್ ಅದ ಅಚರಣೇಯಾಗಿ ಬದಲಾಯಿಸಬೇಕೆಂಬ ಕೋರಿಕೆ ಬಂತು. ಹೋಳಿ ಹಬ್ಬ ಎಂಬುದನ್ನು ವಸಂತೋತ್ಸವ ಎಂಬ ಹೆಸರಿನಿಂದ ಕರೆಯಲಾಯಿತು. ಬಣ್ಣದ ಬದಲಿಗೆ ಹೂವಿನ ಪಕಳೆಗಳನ್ನು ಚಿಮ್ಮಲಾಯಿತು. ಕೆಲವರು ಗೊಣಗುಟ್ಟಿದರೂ ಬದಲಾವಣೆಯನ್ನು ಒಪ್ಪಿಕೊಂಡರು. ಆದರೆ ಬಣ್ಣದ ಎರಚಾಟವಿಲ್ಲದೆ ಮಕ್ಕಳು ನಿರಾಶರಾಗಿದ್ದು ಸುಳ್ಳಲ್ಲ.

ಮತ್ತೊಂದು ವರುಷ ಕಳೆದು ಆ ವರುಷದ ದೀಪಾವಳಿ ಕಾರ್ಯಕ್ರಮದ ಮುಸ್ಲಿಂ ಸಮುದಾಯದ ಮಕ್ಕಳು ವಿಷ್ಣುವಿನ ದಶಾವತಾರದ ನೃತ್ಯರೂಪಕವೊಂದರಲ್ಲಿ ಪಾಲ್ಗೊಳ್ಳಲಿಲ್ಲ.! ನಮ್ಮ ನೃತ್ಯ ಶಿಕ್ಷಕಿ ಅವರಿಗಾಗಿ ಮತ್ತೊಂದು ಹಾಡೊಂದಕ್ಕೆ ತರಬೇತಿ ಕೊಡಬೇಕಾಗಿ ಬಂತು. ಕೆಲಸದೊತ್ತಡದಲ್ಲಿ ಅವಳು ನಲುಗಿದ್ದಂತೂ ನಿಜ. ಆದರೆ ಮೊದಲು ಹೇಳಿದ ಅಹ್ಮದೀಯ ಕುಟುಂಬ ಇದಕ್ಕೆ ಹೊರತು. ಎಲ್ಲ ಕಾರ್ಯಕ್ರಮಗಳಲ್ಲಿ ಅವರು ಭಾಗಿಗಳಾಗಿದ್ದರು.

ನಂತರದ ವರ್ಷದಲ್ಲಿ ಹಬ್ಬಾಚರಣೆಗಳು ಎಲ್ಲರ ಧಾರ್ಮಿಕ  ನಂಬಿಕೆಗಳಿಗೆ ಅನುಗುಣವಾಗಿರದ ಕಾರಣ ದೀಪಾವಳಿ ಅಡಿಯಲ್ಲಿ ಲಕ್ಷ್ಮಿ ಪೂಜೆ ಕೂದದೆಂದೂ, ದೀಪವನ್ನು ಬೆಳಗಿ ಕಾರ್ಯಕ್ರಮ ಉದ್ಘಾಟಿಸುವುದು ‘’ಸೆಕ್ಯುಲರ್’’ ಅಲ್ಲವೆಂದು ಆಕ್ಷೇಪಣೆ ಬಂತು. ಸಮಿತಿಯ ಸಭೆಯಲ್ಲಿ ಕೆಲವರು ಸಮಾನತೆಯ ಮನೋಭಾವದ ಗುಂಗಿನಲ್ಲಿ ಅನುಮೋದಿಸಿದರು, ಕೆಲವರು ಸುಮ್ಮನಿದ್ದರು ಮತ್ತೆ ಕೆಲವರು ಮುಖ ಮುಖ ನೋಡಿಕೊಂಡರು- ತಮ್ಮ ಅಸಮ್ಮತಿಯನ್ನು ಹೊರಹಾಕಲು ಹಿಂಜರಿದರು. ನಾನು ಶಾಂತವಾಗಿ ಪ್ರತಿಭಟಿಸಿದೆ. ನಮ್ಮದು ಭಾರತೀಯ ಪರಂಪರೆಯನ್ನು ಬಿಂಬಿಸುವ ಸಂಘಟನೆಯಾಗಿದ್ದಲ್ಲಿ, ಭಾರತಿಯ ಸಂಸ್ಕೃತಿಯನ್ನು  ಅಭಿವ್ಯಕ್ತಗೊಳಿಸುವ ಆಚರಣೆಗಳನ್ನು ಅನುಸರಿಸಲು ಹಿಂದೆ ಮುಂದೆ ನೋಡಬೇಕಾದ ಪ್ರಮೆಯವಿಲ್ಲ. ಭಾರತವೆಂದರೆ ಬಾಲಿವುಡ್ ಅಲ್ಲ, ಅದನ್ನು ಮೀರಿದ ಒಂದು ವಿಶಿಷ್ಟ ವ್ಯವಸ್ಥೆ,. ಅದನ್ನು ಬಿಟ್ಟು ಕಾರ್ಯಕ್ರಮ ರೂಪಿಸುವುದಾದರೆ ಅದಕ್ಕಿಂತ ದೊಡ್ಡ ಅಭಾಸ ಅಸಂಬದ್ಧತೆ ಇರಲಾರದು. ಭಾರತಿಯ ಪರಮ್ಪರೆಯ ವೈಶಿಷ್ಟ್ಯವೆಂದರೆ ಮನುಷ್ಯನ ಜೀವನದೆಲ್ಲ ಕೋನಗಳಲ್ಲಿ ತಾತ್ತ್ವಿಕ  ಧಾರ್ಮಿಕ, ಲೌಕಿಕ,ಪಾರಮಾರ್ಥಿಕ ಸಮಗ್ರತೆಯ ಆಯಾಮಗಳು ಹಾಸುಹೊಕ್ಕಾಗಿವೆ. ಇದು ಕಲಾ ಪ್ರಾಕಾರಗಳಲ್ಲಿ ವ್ಯಕ್ತಗೊಂಡಿದೆ. ಅದು ಸಂಗೀತ, ಸಾಹಿತ್ಯ, ನೃತ್ಯ, ಶಿಲ್ಪ ,ಚಿತ್ರಕಲೆಗಳಿರಬಹುದು- ಅದು ಆಧ್ಯಾತ್ಮ ಪುರಾಣಗಳ ಜತೆಗೆ ಹ್ಹಾಸುಹೊಕ್ಕಾಗಿ ಹೊಸೆದುಕೊಂದಿರುವ ಒಂದು ಅಪರೂಪದ ಜೀವನ ದರ್ಶನ. ಅದರ ಹಿಂದಿನ ಆಶಯಗಳನ್ನು ಗುರಿತಿಸಿ ಗೌರವಿಸಬೇಕೇ ವಿನ್ಃ ಭೇದ ಎಣಿಸಬಾರ್ದೆಂದು ವಾದಿಸಿದೆ. ಈ ತತ್ವಗಳನ್ನು ಮುಂದಿನಪೀಳಿಗೆಗೆ ದಾಟಿಸುವ ಹೊಣೆ ನಮ್ಮ ಮೇಲಿದ್ದಲ್ಲಿ , ಈ ಸಂಘಟನೆಗೂ ಒಂದು ಅರ್ಥವಿದೆ, ಹಬ್ಬಾಚರಣೆಗೂ ಒಂದು ಅರ್ಥವಿದೆ. ಇಲ್ಲವಾದಲ್ಲಿ ದೀಪಾವಳಿ ಹೆಸರಿನಲ್ಲಿ ನವೆಂಬರ್ ತಿಂಗಳ ಈ ಕಾರ್ಯಕ್ರಮಕ್ಕೆ ಯಾವುದೇ ಅರ್ಥವಿಲ್ಲ , ನಾನು ಒಪ್ಪಲಾರೆ ಎಂದೆ.

ನನ್ನ ವಾದ ತೀವ್ರವಾದವೆಂದೂ, ಅದು ಸೆಕ್ಯುಲರ್ ಅಲ್ಲವೆಂದೂ, ನಮ್ಮ ನಂಬಿಕೆಯನ್ನು ಇತರರ ಮೇಲೆ ಹೇರುವ ಹುನ್ನಾರವೆಂದು ಆಕ್ಷೇಪಣೆ ಬಂತು. ನೀವು ಒಪ್ಪದ ಆಚರಣೆಗಳನ್ನು ಕೈಬಿಡಲು ಒತ್ತಡ ಹಾಕುತ್ತಿರುವಿರಾದರೆ ನಿಮ್ಮದು ಸೆಕ್ಯುಲರ್ ಹೇಗಾಯಿತು? ಸಹಿಷ್ಣುತೆ ನಿಮ್ಮ ನಡೆಯಲ್ಲಿ ಎಲ್ಲಿದೆ ಎಂಬ  ಪ್ರಶ್ನೆಗೆ, ನಾವು ನಮ್ಮ ಆಚರಣೆಗಳನ್ನು ವೇದಿಕೆಯ ಮೇಲೆ ತರುವುದಿಲ್ಲ ಹಾಗಾಗಿ ನೀವೂ ಸಹ ತರಬಾರದೆಂಬ ವಾದ ಬಂತು!!

ಅಲ್ಲಿಗೆ, ನಾನು ಸೆಕ್ಯುಲರ್ ಎಂಬುದರ ಅರ್ಥವನ್ನು ಅಲ್ಲಿರುವ ಸದಸ್ಯರು ಹೇಗೆ ಅರ್ಥೈಸಿಕೊಂಡಿದಾರೆಂಬ ಪ್ರಶ್ನೆ ಮಾಡಿದಾಗ ಯಾರಲ್ಲೂ ಸ್ಪಷ್ಟ ಉತ್ತರವಿರಲಿಲ್ಲ. ಧಾರ್ಮಿಕ ಆಚರಣೆಗಳನ್ನು ಇನ್ನೊಬ್ಬರು ಒಪ್ಪದಿದ್ದಾಗ ಕೈಬಿಡುವುದೇ ಸೆಕ್ಯುಲರ್ ಎಂಬ, ಇತರರ ಆಚರಣೆ ನಂಬಿಕೆಗಳನ್ನು ಸಹಿಸಿಕೊಳ್ಳುವ ಮನೋಭಾವವೆಂದೂ ಗೊಂದಲಮಯ  definition  ಕೊಟ್ಟರು.

ನನ್ನ ಪ್ರಕಾರ ಸೆಕ್ಯುಲರ್ ಎಂಬುದು ಆಂತರ್ಯದಲ್ಲಿ ಗೌರವ ಎಂಬ ಹೂರಣವನ್ನು ಇಟ್ಟುಕೊಂಡ  ಮನಸ್ಥಿತಿ ಎಂದೂ, ಅದು ಕೇವಲ ಸಹಿಸಿಕೊಳ್ಳುವ ಸ್ಥಿತಿ ಅಲ್ಲ. ಸಹಿಸಿಕೊಳ್ಳುವವ ಅಸಹಿಷ್ಣು ಆಗಬಹುದು ಆದರೆ ಗೌರವ ಭಾವ ಒಂದು absolute ಸ್ಥಿತಿ. ಪರಸ್ಪರರ ಆಚರಣೆಗಳಿಗೆ ಗೌರವ ಕೊಟ್ಟು ಬೆಳೆಸುವ ಸ್ಥಿತಿಯೇ ಸೆಕ್ಯುಲರ್-ಸಹಿಷ್ಣುತೆ ಎಂಬ ಪ್ರತಿವಾದ ಹೂಡಿದೆ. ನಿಮ್ಮಲ್ಲಿ ಸಾಂಸ್ಕೃತಿಕವಾದ ಸರಕಿದ್ದರೆ ಅದನ್ನು ವೇದಿಕೆಗೆ ತನ್ನಿ. ಸಂತೋಷವಾಗಿ ಅಚರಿಸೋಣ. ಇಲ್ಲದಿದ್ದಲ್ಲಿ ಉಳಿದವರದ್ದು ನೋಡಿ ಸಂತೋಷಿಸಿ. ನಾವೂ ಮಾಡೆವು ನಿಮಗೂ ಬಿಡೆವು ಎಂಬ ಧೋರಣೆ ಆರೊಗ್ಯಕರವಲ್ಲ. ನಿರ್ಧಿಷ್ಟ ಗುರಿಗಳಿಲ್ಲದಿದ್ದರೆ ನಮ್ಮದು ಅರ್ಥಹೀನ ಸಂಘಟನೆಯಾಗುತ್ತದೆ ಎಂಬ ವಾದವನ್ನು ಮುಂದಿಟ್ಟೆ. ಕೆಲವರು ಈಗ ನನ್ನನ್ನು ಬೆಂಬಲಿಸಿದರು. ಕಾರ್ಯಕ್ರಮಗಳು ಯಥಾ ಪ್ರಕಾರ ನಡೆದವು. ಧರ್ಮ ಬಾಹಿರವಾದ ಅಂಶಗಳಿದ್ದ ಕಾರಣ ದೇಶಬಾಂಧವರು ಊಟದ ಹೊತ್ತಿಗೆ ಆಗಮಿಸಿ ತಿಂದುಂಡು ನಡೆದರು. ನಂತರದ ವರ್ಷಗಳಲ್ಲಿ ಮೊದಲಿದ್ದ ಎರೆಡು ಕುಟುಂಬಗಳನ್ನು ಹೊರತು ಪಡಿಸಿ ಉಳಿದ ಮುಸ್ಲಿಂ ಕುಟುಂಬಗಳು ಕಾರ್ಯಕ್ರಮಕ್ಕೆ ಬರುವುದನ್ನ್ನು ನಿಲ್ಲಿಸಿಯೇ ಬಿಟ್ಟರು.

ಮೊದಲು ಹೇಳಿದಂತೆ, ಕ್ರಿಶ್ಚಿಯನ್ ಕುಟುಂಬಗಳು ಮೊದಲಿನಿಂದಲೂ ಈ ಹಬ್ಬಾಚರಣೆಯಲ್ಲಿ ಪಾಲ್ಗೊಂದೇ ಇರಲಿಲ್ಲ. ನಮ್ಮೂರಿನ ಸಕಲ ( ನನ್ನನ್ನು ಹೊರತು ಪಡಿಸಿ) ಹಿಂದೂಗಳ ಮನೆಯಲ್ಲಿ ಕ್ರಿಸ್ಮಸ್ ಮರವನ್ನು, ಈಸ್ತರ್ ಮೊಟ್ಟೆ-ಮೊಲಗಳನ್ನು ಕಂಡಿದ್ದೇನೆ ಆದರೆ ಇತರರ ಮನೆಗಳಲ್ಲಿ ನಮ್ಮ ದೀಪಾವಳಿಯನ್ನೋ, ಗಣೇಶ ಚತುರ್ಥಿಯನ್ನೋ ಆಚರಿಸುವುದು ನೋಡಿಲ್ಲ.

ಇದು, ಒಂದು ಸಂಘಟನೆಯ ಕಾರ್ಯದರ್ಶಿಯಾಗಿ ನಾನು ಕಂಡುಂಡ  ಅನುಭವ. ವೈಯಕ್ತಿಕವಾಗಿ ನಾನು ಹಿಂದು (ಸನಾತನ) ಧರ್ಮದ ಅನುಯಾಯಿ-ಅಭಿಮಾನಿಯಾಗಿದ್ದರೂ ಇತರ ಧರ್ಮಾಚರಣೆಗಳನ್ನು ಅವಿರುವಂತೆಯೇ ಗೌರವಿಸಿದವನು.ಈ ಪರಸ್ಪರ ಗೌರವ ಆದರಗಳ ಗೆರೆ ಮೀರಿದ ಪರಿಸ್ಥಿತಿಯಲ್ಲಿ ನಮ್ಮ ತತ್ವಗಳನ್ನು, ಆದರ್ಶ ನಂಬಿಕೆಗಳನ್ನು ನಿರ್ಭೀತಿಯಿಂದ ಪ್ರತಿಪಾದಿಸಿದವನು. ಇದಕ್ಕಾಗಿ ವೈಯಕ್ತಿಕವಾಗಿ ಸಂಬಂಧಗಳು ಹಳಸಿದರೂ, ಅದನ್ನು ಅನುಭವಿಸಿದವನು. ನನ್ನ ಈ ನಡೆಯನ್ನು ಅಸಹಿಷ್ಣುತೆ ಎಂಬ ಹಣೆಪಟ್ಟಿಯನ್ನು ಕಟ್ಟಿದವರನ್ನೂ ಸಹ ಕಂಡಿದ್ದೇನೆ.

ಇತರ ಧರ್ಮಗಳ/ನಂಬಿಕೆಗಳನ್ನು ಅಂಗೀಕರಿಸುವ ನಮ್ಮ ಮನಸ್ಥಿತಿ ಬೇರೆಯಾದ ಅವರಿಗೇಕೆ ಬರಲಿಲ್ಲ ಎಂಬುದು ಒಂದು ಮೂಲಭೂತವಾದ ಪ್ರಶ್ನೆ. ಕಾರಣ ಇಷ್ಟೆ: ಮಧ್ಯಪ್ರಾಚ್ಯದಲ್ಲಿ ಹುಟ್ಟಿ ಬೆಳೆದ ಈ ಸೆಮೆಟಿಕ್ ರಿಲಿಜನ್ ಗಳು( ಅಬ್ರಹಾಮಿಕ್ ರಿಲಿಜನ್) ಗಳು ಏಕ ದೇವ, ಏಕ ತತ್ವ,ಏಕ ಮಾರ್ಗ ಪ್ರತಿಪಾದಕ ರಿಲಿಜನ್ ಗಳು. ಇವುಗಳನ್ನು ನಮ್ಮ ಅರ್ಥದಲ್ಲಿ  ಧರ್ಮ ಎನ್ನಲಾಗದು. ಅವು ಮತಗಳು. ಇರುವುದೊಂದೇ ಪುಸ್ತಕ. ಅದನ್ನು ಓದಿಕೊಂಡ ಅನುಯಾಯಿಗಳು ನಂಬುವುದು, ನಮ್ಮ ಮಾರ್ಗವೊಂದೆ ಸತ್ಯ. ಉಳಿದವು  ಪಾಪಿಗಳದ್ದು.ಹಾಗಾಗಿ ಅವುಗಳನ್ನು ನಿರ್ಮೂಲನೆ ಮಾಡು ಎಂಬ ಬೋಧನೆ ನೀಡುವ ಧರ್ಮ ಗ್ರಂಥಗಳು ಇಲ್ಲವೇ ಅದರ interpretation ಗಳು. ಹಾಗಾಗಿ ಕ್ರೈಸ್ತ ಧರ್ಮದವರು ಆಮಿಷ ಒತ್ತಡಗಳ ಮೂಲಕ ಮತಪರಿವರ್ತನೆಗೆಲೆಸಿದರೆ, ಇಸ್ಲಾಂ ಭಯ, ಬಲಾತ್ಕಾರ, ಬಳಪ್ರಯೋಗಗಳ ಮಾರ್ಗದಲ್ಲಿ ತಮ್ಮ ಮತವನ್ನು ಹರಡಲು ಪ್ರಚೋದಿಸುತ್ತದೆ. ತಮ್ಮದು ಹೊರತಾಗಿ ಉಳಿದೆಲ್ಲವೂ ಹರಾಮ್ ಆದ ಕಾರಣ ಒಪ್ಪಿಕೊಳ್ಳುವ ಮನೋಭಾವವೇ ಅಲ್ಲಿ ಇರಲಾರದು. ಇದ್ದಗ್ಯೂ ಅದು exception to the rule. ಅಷ್ಟೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಖರತೆ ಹೆಚ್ಚಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಒಪ್ಪಿಕೊಳ್ಳದ ಮನೋಭಾವವನ್ನು ಬಲಾಧ್ಯ ಪೋರ್ಚುಗೀಸರು ಗೋವಾ ಮತ್ತಿತರ ಜಾಗಗಳಲ್ಲಿ ನಡೆಸಿದ ವಿಧ್ವಂಸಕತೆಯಲ್ಲಿ ಕಾಣಬಹುದು, ಘೋರಿ ಮಹಮ್ಮದನಲ್ಲಿ ಕಾಣಬಹುದು, ವಿಜಯನಗರದ ಬೀದಿಗಳಲ್ಲಿ ಕಾಣಬಹುದು,,ಕಾಶ್ಮೀರಿ ಪಂಡಿತರ ಮಾರಣಹೋಮದಲ್ಲಿ ಕಾಣಬಹುದು, ಇಂದಿಗೂ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಹಿಂದುಗಳ ಮೇಲೆ ಕ್ರಿಶ್ಚಿಯನ್ ಪಂಗಡಗಳು ನಡೆಸುತ್ತಿರುವ ದೌರ್ಜನ್ಯದಲ್ಲಿ ಕಾಣಬಹುದು. ಕೇರಳದಲ್ಲಿ ನಡೆಯುತ್ತಿರುವ ದೌರ್ಜನ್ಯದಲ್ಲಿ ಕಾಣಬಹುದು. ಆಂಧ್ರಪ್ರದೇಶದ ಕರಾವಳಿಯಲ್ಲಿ ನಡೆದಿರುವ ಮತಪರಿವರ್ತನಾ ಅಭಿಯಾನದಲ್ಲಿ ಕಾಣಬಹುದು. ಈ ಎಲ್ಲ ಹುನ್ನಾರಗಳ ಹಿಂದಿನ ವಿಸ್ತೃತ ಹಾಗೂ ಆಧುನಿಕ ರೂಪವೇ ಇಂದು ಚರ್ಚೆಗೊಳಗಾಗಿರುವ ಅಸಹಿಷ್ಣುತೆಯ ಕೂಗು.

ಈ ಕೂಗಿನ ಹಿಂದಿನ ರಾಜಕೀಯ ಷದ್ಯಂತ್ರಗಳು, ಸಮಾಜ ವಿರೋಧಿ ಹುನ್ನಾರಗಳು, ಓಲೈಕೆ ರಾಜಕಾರಣ, ಮತಬ್ಯಾಂಕ್ ನ ಹಪಾಹಪಿ, ಇದರ ಹಿಂದಿರುವ ಬುದ್ಧಿಜೀವಿಗಳು, ರಾಜಕಾರಿಣಿಗಳು, ಸಾಹಿತಿಗಳು ಇವರುಗಳ ಬದ್ಧತೆ, ಬಂಡವಾಳಗಲನ್ನು ಗಮನಕ್ಕೆ ತೆಗೆದುಕೊಂಡರೆ ಇವರ ಈ hue & cry ಹಿಂದಿರುವ ಪ್ರಾಮಾಣಿಕತೆ ಬಯಲಾಗುತ್ತದೆ. ಇಷ್ಟುದಿನ ಕೇಳಿಬರದ ಈ ವಿದ್ಯಮಾನ ಇದ್ದಕ್ಕಿದ್ದಂತೆ ಮಾರ್ಮೊಳಗುತ್ತಿರುವುದರ ರಹಸ್ಯ ಎಲ್ಲರಿಗೂ ಉತ್ತರ  ಗೊತ್ತಿರುವ  ಪ್ರಶ್ನೆಯೇ.

ಸರಕಾರ, ಮಾಧ್ಯಮಗಳು ಸಂಘ ಸಂಸ್ಥೆಗಳು ಎಲ್ಲವೂ ತಮ್ಮ ಹಿಡಿತದಲ್ಲಿದ್ದಾಗ ತಮಗೆ ಅನುಕೂಲವಾಗುವ ವಾತಾವರಣ ಇದ್ದಾಗ ಕೇಲಿಬರದ ಈ ಕೂಗು ಇಂದು ಕೇಳುತ್ತಿರುವ ಕಾರಣ, ಪಟ್ಟಭದ್ರರ ಅಡಿ ಅಲುಗುತ್ತಿರುವುದಷ್ತೆ. ತಿರುಚಿದ ಇತಿಹಾಸವನ್ನು ಪ್ರಶ್ನಿಸಿದಾಗ ರೋಮಿಲಾ ಥಾಪರ್ ಅಸಹಿಷ್ಣುತೆಯ ಕೂಗು ಹಾಕುತ್ತಾಳೆ, ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಿದಾಗ ದೇಶದೆಲ್ಲ ಬುದ್ಧಿಜೀವಿಗಳು ಒಕ್ಕೊರಲಿನಿಂದ ಪ್ರತಿಭಟಿಸುತ್ತಾರೆ, ನಕ್ಸಲರನ್ನು ಮಟ್ಟಹಾಕಿದರೆ ಮಾನವ ಹಕ್ಕುಗಳ ಪ್ರಶೆ ಏಳುತ್ತದೆ, ಯಾವುದೊ ಒಂದು ಮುಸ್ಲಿಮನ ಕೊಲೆಯಾದರೆ ದೇಶಾದ್ಯಂತ ಅಲ್ಲೋಲ ಕಲ್ಲೋಲವಾಗುತ್ತದೆ, ವಿವೇಕಾನಂದ ಜನ್ಮದಿನಾಚರಣೆ ಕೋಮುವಾದಿಯಾಗುತ್ತದೆ, ದಲಿತನಲ್ಲದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಬ್ರಾಹ್ಮಣ ಪುರೋಹಿತಶಾಹಿಯನ್ನು ಎಳೇದುತರಲಾಗುತ್ತದೆ. ಅಕಬರ್ -ಬಾಬರ್ ಇತ್ಯಾದಿಗಳಿಗೆ ಒಂದೊಂದು ಪಾಠ ಮುಡಿಪಾಗಿತ್ತು ಇಡಿ ವಿಜಯನಗರ ಇತಿಹಾಸವನ್ನು ಒಂದು ಪುಟಕ್ಕೆ ಸೀಮಿತವಾಗಿದ್ದನ್ನು ಪ್ರಶ್ನಿಸಿದರೆ ಕೋಮುವಾದ ಭುಗಿಲೇಳುತ್ತಿದೆ ಎಂಬುದಾಗಿ ಕೂಗಲಾಗುತ್ತದೆ. ಇಂದಿಗೆ ಅಸತ್ಯವೆಂದು ಸಾಬೀತಾಗಿರುವ ಆರ್ಯ ದ್ರಾವಿಡ ಇತಿಹಾಸವನ್ನೇ ಇನ್ನು ಬಂಡವಾಳ ಮಾಡಿಕೊಂಡು ದೇಶ ವಿಭಜನೆಗೆ ಪ್ರಯತ್ನಿಸಲಾಗುತ್ತದೆ, ಅದನ್ನು ವಿರೋಧಿಸಿದರೆ ಅಸಹಿಶ್ನುತೆಯ ಪಟ್ಟ ಕಟ್ಟಲಾಗುತ್ತದೆ,.

ರಾಮಾಯಣದ ರಾಮ ವ್ಯಭಿಚಾರಿಯೆಂದೂ, ಅವನು ಕಬ್ಬಿಣ ತರಲು ಕಾಡಿಗೆ, ಶ್ರೀಲಂಕಾಕ್ಕೆ ಹೋದನೆಂದೂ ಹೇಳಿದವನಿಗೆ ಪ್ರೊಫೆಸ್ಸರ್ ಗಿರಿ ನೀಡಲಾಗುತ್ತದೆ. ಭಗವದ್ಗೀತೆ ಹಿಂಸಾ ಪ್ರಚೋದಕೆವೆಂದು ಬಡಬಡಿಸುವ ಭಗವಾನನಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಾವಿರಾರು ರೈತರು ಸತ್ತಾಗ ಇರಲಾಗದ ಹಣ , ಕಕ್ಕುಲತೆ, ಟಿಪ್ಪೂ ಸುಲ್ತಾನನ ಜನ್ಮದಿನ ಆಚರಣೆಗೆ ಬಿಡುಗಡೆಯಾಗುತ್ತದೆ. ಅದರ ಔಚಿಯ್ತವನ್ನು ಪ್ರಶ್ನಿಸಿ ವಿರೋಧಿಸಿದಾಗ ಅಸಹಿಷ್ಣುತೆಯ ಹೋಗೆ ದೇಶದ ತುಂಬ ವ್ಯಾಪಿಸುತ್ತದೆ.

ಕಂಬಳದ ಕೋಣ ಓಟದ ಸ್ಪರ್ಧೆ, ಜಲ್ಲಿಕಟ್ಟು ಆಚರಣೆಗಳು ಪ್ರಾಣಿಹಿಂಸೆಯ ಪ್ರತೀಕವಾದರೆ, ಬಕೄದಿನ ಕುರಿ, ಒಂಟೆಗಳ ಮಾರಣಹೋಮ ಪ್ರಾಣಿದಯಾ ಸಂಘದ, ಬುದ್ಧಿಜೀವಿಗಳ ಕಣ್ಣಿಗೆ ಕಾಣದೆ ಹೋಗುತ್ತದೆ.

ಇಂದಿನ  ಸಹಿಷ್ಣುತೆ ಅಸಹಿಷ್ಣುತೆಗಳ ಚರ್ಚೆ ಧಾರ್ಮಿಕ ವೆನ್ನಿಸಬಹುದಾದ ಹೊದಿಕೆ ಹೊದ್ದಿದ್ದರೂ ಸಹ ಅದರ ಮೂಲವಿರುವುದು ನಮ್ಮ ಇಡಿ ದೇಶದ ಒಂದು ಪಂಗಡ ಇಬ್ಬಂದಿತನದ ವೈಚಾರಿಕ ಪೊಳ್ಳುತನದಲ್ಲಿ. ಪ್ರಾಮಾಣಿಕತೆಯ ದಿವಾಳಿತನದಲಯ್ಲಿ. ಭಿನ್ನತೆ ಜಗದ ನಿಯಮ,. ಪ್ರಕೃತಿಯಲ್ಲಿ ಏಕರೂಪತೆ ಅಸಾಧ್ಯ. ಅದು ರೂಪ ಗುಣಗಳಿರಬಹುದು, ಚಿಂತನೆಯಿರಬಹುದು,ನಂಬಿಕೆ ಆಚರಣೆಗಳಿರಬಹುದು. ಆದರೆ ಪ್ರಾಮಾಣಿಕತೆ ಎಂಬುದು ಸಾಧ್ಯ. ಸಮಸ್ಯೆತ್ಯ ಮೂಲ ಇರುವುದು ಇಲ್ಲಿಯೇ. ಮೊದಲು ಹೇಳಿದ ಸೆಮೆಟಿಕ್ ರಿಲಿಜನ್ ಗಳು ‘’ಆನೋ ಭದ್ರಾ ಕ್ರತುವೋ ಎಂತು ವಿಶ್ವತಃ “ ಎಂಬ ತೆರೆದ ಹಾದಿಯ ಮತಗಳಲ್ಲ.ನಮ್ಮದೇ ಸರಿ. ಉಳಿದವರು heathen ಅಥವಾ ಹರಾಮ್ ಎನ್ನುವ ಮನೋಭಾವದ ಜನ, ನಮ್ಮವರೇ ಬುದ್ಧಿಜೀವಿಗಳ ಮೂಲಕ ಅಸಹಿಷ್ಣುತೆಯ ಆರೋಪವನ್ನು ಸಹಿಷ್ಣುಗಳ ಮೇಲೆ ಹೊರಿಸುತ್ತಿರುವುದು ಒಂದು ವಿಪರ್ಯಾಸಕರ ಬೆಳವಣಿಗೆ. ಈ ಸಂಘರ್ಷ ಇರಬಾರದು ಎಂದು ಆಶಿಸುವುದು ಒಂದು ಹಗಲುಗನಸು ಅಷ್ಟೇ. ವಾಸ್ತವ ಭಿನ್ನವಾದದ್ದು. ಇಸ್ಲಾಮಿನ ಸುನ್ನಿಗಳು ಶಿಯಾ, ಅಹ್ಮದೀಯ ಪಂಗಡಗಳನ್ನು ಸಹಾ ಒಪ್ಪುವ ಸ್ಥಿತಿಯಲ್ಲಿ ಇಲ್ಲದ್ದು ನಾವು ಕಾಣುತ್ತಿದ್ದೇವೆ. ಬಹುಸಂಖ್ಯಾತ ಮುಸ್ಲಿಮರು ಬಾಂಗ್ಲಾ, ಪಾಕಿಸ್ತಾನ, ಕಾಷ್ಮೀರಗಳಲ್ಲಿ ಹಿಂದೂಗಳ ಮಾರಣಹೋಮ ನಡೆಸಿರುವುದನ್ನು ಕಂಡಿದ್ದೇವೆ. ಶಾಂತಿಮಂತ್ರ ಅಲ್ಲಿ ಕೆಲಸಕ್ಕೆ ಬಂದಿಲ್ಲದ್ದನ್ನೂ ನೋಡಿದ್ದೇವೆ. ಮಾನವರನ್ನು ಮಾನವನಾಗಿ ಕಾನು ಎಂಬುದು ಬೃಉಹದಾಶಯವೇ ಸರಿ. ಆದರೆ ಎದುರುಗಿರುವ ಮಾನ ದಾನವ ಪ್ರವೃತ್ತಿಯವನೆಂದಾದಾಗ ನಮ್ಮ ನಿಲುವು ಏನಿರಬೇಕೆಂಬುದು ನಮಗೆ ಸ್ಪಷ್ಟವಾಗಿರಬೇಕು ಅಷ್ಟೇ.

ಭಾರತ ಇಂದು ಭಾರತವಾಗಿ ಉಳಿದಿರುವುದರ ಹಿಂದೆ ದೇಶಪ್ರೇಮಿಗಳ ಧರ್ಮಾಧಕರ ಬೆವರಿದೆ. ಶಿವಾಜಿಯಂಥ  ಹೋರಾಟಗಾರರ ಛಲವಿದೆ. ಧರ್ಮದ-ಸಂಸ್ಕೃತಿಯ  ಮೇಲಿನ ಒಲವಿದೆ ಭಕ್ತಿಯಿದೆ, ಅಭಿಮಾನವಿದೆ. ಅವನ ತಾಯಿಯಂತಹ ಮಹಿಳೆಯರ ಆದರ್ಶವಿದೆ.ಸಾಮಾಜಿಕವಾಗಿ ಆಚರಿಸಿದ ಧಾರ್ಮಿಕ  ಕಾರ್ಯಕ್ರಮಗಳ ಪರಿಣಾಮವಿದೆ. ಮನೆಮನೆಗಳಲ್ಲಿ ಇಟ್ಟು ಪೂಜಿಸಿದ ದೇವ ದೇವರ ಮೇಲಿನ ಶ್ರದ್ಧೆಯಿದೆ.ಕಟ್ಟುವ ಮನಸ್ಸುಗಳಲ್ಲಿ ಸಾಮಾನ್ಯವಾಗಿ ಕಾಣುವ ಗುಣಗಳಿವು.

ಹಿಂದಿನ ವಿಚಾರಗಳನ್ನು ಕೆದಕಬಾರದು ಎನ್ನುವವರು ತಿಳಿಯಬೇಕಾದ ಒಂದು ವಿಚಾರ ‘’ ಅಸತ್ಯ-ಅಪ್ರಾಮಾಣಿಕತೆಯ ವೈಚಾರಿಕ ಪೊಳ್ಳುತನ ಓಲೈಕೆಯಿಂದ ಸಹಿಷ್ಣು ಸಮಾಜ ಕಟ್ಟಲು ಸಾಧ್ಯವಿಲ್ಲ.” ಜಾತಿ ವ್ಯವಸ್ಥೆಗೆ ಬ್ರಾಹ್ಮಣರನ್ನು,ಆರ್ಯರನ್ನು  ದೂರುವ ಸಹಿಷ್ಣುಗಳು  ಇತಿಹಾಸದಲ್ಲಿ ಚೆನ್ನಾಗಿಯೇ ದಾಖಲಾಗಿರುವ ಹಿಂದೂಗಳ ಮೇಲಿನ ಮುಸ್ಲಿಂ ದಾಳಿಕೋರರ , ರಾಜ ರಾಜರುಗಳ ದಬ್ಬಾಳಿಕೆಯನ್ನು ಪ್ರಾಮಾಣಿಕವಾಗಿ, ಮುಕ್ತವಾಗಿ ಚರ್ಚಿಸಬೇಕು.ಅದನ್ನು ಆ ಸಮುದಾಯ ಒಪ್ಪಿಕೊಳ್ಳುವಂತೆಯೂ ಉತ್ತೇಜಿಸಬೇಕು. ಕಸವನ್ನು ಚಾಪೆಯ ಕೆಳಗೆ ತಳ್ಳಿದರೆ ಅದೇನು ಇಲ್ಲವಾಗುವುದಿಲ್ಲ. ಹುಳಗಳನ್ನು ಬೆಳೆಸುವ ತಿಪ್ಪೆಯಾಗಿ ಮಾರ್ಪಡಬಹುದಷ್ಟೇ.

ಎಲ್ಲರೂ ಒಂದೇ ನಮ್ಮಲ್ಲಿ ವೈಷಮ್ಯ ಬೇಡ, happy ever after  ಎಂದು ಆಶಿಸುವ ಹಿಂದೂ ಮನಸ್ಸುಗಳು ಕೇಳಿಕೊಳ್ಳಬಹುದಾದ ಪ್ರಶ್ನೆಯಿದು:

ತೋಳವೊಂದು ಕುರಿಯ ಬಳಿಗೆ ಬಂದು ನಾವಿಬ್ಬರೂ ಒಂದೇ ಭೂಮಿಯ ಮಣ್ಣಿನಿಂದ ಆದವರು. ನನಗೂ ನಿನಗೂ ವ್ಯತ್ಯಾಸವಿಲ್ಲ. ನಾನೀಗ ನಿನ್ನನ್ನು ತಿಂದುಬಿಡುವೆ. ನೀನು ನನ್ನಲ್ಲಿಯೇ ಸೇರಿಹೋಗಿಬಿಡುತ್ತೀಯ.ಹಾಗಾಗಿ ನಿನ್ನದೇನು ನಷ್ಟವಾಗುವುದಿಲ್ಲ ಎಂದಾಗ ಕುರಿ ಏನು ಹೇಳಬೇಕು? ಅಥವಾ ಬುದ್ಧಿ ಜೀವಿಯಾಗಿ ಕುರಿಗೆ ನೀವೇನು ಹೇಳುತ್ತೀರಿ ಎಂಬುದು ಕೇಳಿಕೊಳ್ಳಬೇಕು.