“ನೆಟ್ಟಿ”ಗೇರಿದ ಪಠ್ಯ @ ನೆತ್ತಿಗೇರುವುದೇ? ಅಂತರ್ಜಾಲದಲ್ಲಿ ಕನ್ನಡ ಮಾಧ್ಯಮ ಶಾಲಾ ಪಠ್ಯಗಳು

“ನೆಟ್ಟಿ”ಗೇರಿದ ಪಠ್ಯ @ ನೆತ್ತಿಗೇರುವುದೇ? ಅಂತರ್ಜಾಲದಲ್ಲಿ ಕನ್ನಡ

ಮಾಧ್ಯಮ ಶಾಲಾ ಪಠ್ಯಗಳು

ನಾವು ಶಾಲೆಯಲ್ಲಿ ಓದುತ್ತಿರುವಾಗ ಒಂದು ತರಗತಿಯಿಂದ  ಉತ್ತೀರ್ಣರಾಗಿ ಇನ್ನೊಂದು ತರಗತಿಗೆ ಹೋಗುವುದರ ಜೊತೆಗೆ ಮುಂದಿನ ತರಗತಿಯ ಪಠ್ಯ ಪುಸ್ತಕಗಳ ಬೇಟೆಯೂ ಶುರುವಾಗುತ್ತಿತ್ತು. ಏಪ್ರಿಲ್ ಹತ್ತನೇ ತಾರೀಖು ನಮ್ಮ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿ ಅಧಿಕೃತವಾಗಿ ಪಾಸಾಗಿದ್ದೇವೆಂದು ಘೋಷಣೆಯಾಗುತ್ತಿದ್ದಂತೆ ನಮಗಿಂತ  ಒಂದು ವರ್ಷ ಮುಂದಿನ ವಿದ್ಯಾರ್ಥಿ ಗಳೊಂದಿಗೆ ನಮ್ಮ ಮಾತುಕತೆ ಶಾಲಾ ಆವರಣದಲ್ಲೇ ಶುರುವಾಗುತ್ತಿತ್ತು. .

ಮುಂಚಿನ ಪರಿಚಯದ ಆಧಾರದ ಮೇಲೆ, ಪುಸ್ತಕಗಳನ್ನು ಜೋಪಾನವಾಗಿ ಬೈಂ ಡು  ಹಾಕಿ ಕಾಪಾಡಿಕೊಂಡಿದ್ದನೆಯೇ ಇಲ್ಲವೇ ಎಂಬ ಗಾಳಿಸುದ್ದಿಯ ಮೇಲೆ ಯಾರೊಂದಿಗೆ ವ್ಯವಹರಿಸುವುದೆಂಬ ಕಾರ್ಯಕಾರಿ ನಿರ್ಣಯ ಕೈಗೊಳ್ಳಲಾಗುತ್ತಿತ್ತು.  ಇನ್ನು ಮುಂದಿನ ಕ್ಲಾಸಿನ ವಿದ್ಯಾರ್ಥಿ ಹುಡುಗಿಯಾಗಿದ್ದರೆ ಅವರನ್ನು ನೇರವಾಗಿ ಮಾತುಕತೆಗೆ ಎಳೆಯಲು ಆಗದ ನಾವು ಅವರುಗಳ ಅಣ್ಣಂದಿರ ಮೂಲಕ ವ್ಯವಹಾರ ಕುದುರಿಸಿಕೊಳುತ್ತಿದ್ದೆವು.  ಪುಸ್ತಕ ಬೇಟೆಯ ದಂಡಿಗೆ ಕೊರತೆಯಿಲ್ಲದಿದ್ದರೂ ಗಿರಾಕಿಗಳಿಗೂ ಒಂದು ಸ್ಥಾನ ಮಾನ ಇರುತ್ತಿತ್ತು. ಮಾತುಕತೆಗೆ ಮುಂಚೆಯೇ ಹಣ ತೋರಿಸಬಲ್ಲ , ಪುಸ್ತಕಕ್ಕೆ ತಕ್ಷಣ ಹಣ ಪಾವತಿಸಬಲ್ಲ, ಒಂದೆರೆಡು ದಿನಗಳಲ್ಲಿ ಕೊಡಬಲ್ಲ, ಒಂದೆರೆಡು ಕಂತುಗಳಲ್ಲಿ ಕೊಡಬಲ್ಲ, ಪುಸ್ತಕ ಕೊಂಡುಹೋಗಿ ಹಣ ಕೊಡಲಾಗದೆ ಪುನಃ ಜಪ್ತಿ ಮಾಡಿಸಿಕೊಂಡ ಇತಿಹಾಸವುಳ್ಳ ಇತ್ಯಾದಿ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಈ ಕೊಡು ಕೊಳ್ಳುವ ವ್ಯವಹಾರ ನಡೆಯುತ್ತಿತ್ತು. ಶಾಲೆಗಳು ಪ್ರಾರಂಭವಾಗಿ ೩-೪ ತಿಂಗಳು ಕಳೆದರೂ ಕೆಲವೊಮ್ಮೆ ಕೆಲವು ವಿಷಯಗಳ ಪಠ್ಯ  ಪುಸ್ತಕಗಳು ಸಿಗುತ್ತಲೇ ಇರಲಿಲ್ಲ !! ಬೆಂಗಳೂರಿನಿಂದ ಹರದಾರಿ ದೂರದಲ್ಲಿದ್ದ ಕೊಂಪೆಗಳಲ್ಲಿದ್ದ ನಮಗೆ ಎಷ್ಟೋ ಬಾರಿ ಪುಸ್ತಕಗಳು ಅಂಗಡಿಗಳಿಗೆ ಬಂದು ಖರ್ಚಾಗಿ ಹೋಗುತ್ತಿದ್ದುದೂ  ತಿಳಿಯುತ್ತಿರಲಿಲ್ಲ. ಈಗಿನಂತೆ ಜೆರಾಕ್ಸ್ ಸೌಲಭ್ಯವೂ ಸುಲಭವೂ , ಅಗ್ಗವೂ ಆಗಿ ದೊರಯದ ಕಾರಣ ಈ ಬಳಸಲ್ಪಟ್ಟ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಅಷ್ಟಕ್ಕೂ ಉತ್ತಮವಾಗಿ ಕಾಯ್ದುಕೊಂಡ ಅವೇ ಪುಸ್ತಕಗಳು ಕಡಿಮೆ ಬೆಲೆಗೆ ಸಿಕ್ಕಿ ಒಂದೆರೆಡು ರೂಪಾಯಿ ಉಳಿದರೆ ಅದೂ  ಸಂತೋಷಕರವೇ ! ಐದು ಹತ್ತು ಪೈಸೆಗಳಿಗೂ ತತ್ವಾರ ಆಗಿದ್ದ ಅ ದಿನಗಳಲ್ಲಿ Tesco  ದ ಧ್ಯೇಯವಾಕ್ಯವಾದ every little helps ಎಂಬುದು ನಮ್ಮ ಅಳಿವು ಉಳಿವಿನ ವೇದವಾಕ್ಯವಾಗಿ ತ್ತೆನ್ನಿ. ಇಷ್ಟಾಗಿಯೂ ಆರು ಏಳನೇ ತರಗತಿಯಲ್ಲಿ ಸಮಾಜ ಮತ್ತು ಕನ್ನಡದ ಪಠ್ಯಗಳು ಸಿಗದೇ ೨೦೦ ಹಾಳೆಯ ಲೇಖಕ್ ಪುಸ್ತಕವೊಂದರಲ್ಲಿ ಅದರ ನಕಲು ಮಾಡಿಕೊಂಡಿದ್ದೆ.

ಇಂತಿಪ್ಪ ಈ ಸೀನಿಯರ್ ವಿದ್ಯಾರ್ಥಿಗಳೊಂದಿಗಿನ ನಮ್ಮ ಈ  ಚೌಕಾಸಿಯೊಂದಿಗೆ  ಬೇಸಿಗೆ ರಜೆಯ ಆಚರಣೆಗೆ ಶ್ರೀಕಾರ ಹಾಡಲಾಗುತ್ತಿತ್ತು.

ನನ್ನ ಮುಂದಿನ ತರಗತಿಯಲ್ಲಿದ್ದ ವಿರುಪಿ, ಪಾಂಡಿ, ಸತೀಶ, ಹೋಟ್ಲು ಮಂಜ, ಉಜಿನಪ್ಪ, ಗೋವಿಂದ ,ಬಾಬು, ದೇವರಾಜಪ್ಪ, ತಿಪ್ಪೇಸ್ವಾಮಿಯೇ ಮೊದಲಾದವರ ಬಳಿ ಮಾತಾಡಿ ಅವರ ಮನೆಗಳಿಗೆ ಎಡತಾಕಿ, ಅಳೆದು ಸುರಿದು, ಹಗ್ಗ ಜಗ್ಗಾಟ ನಡೆಸಿ, ಅವರುಗಳಿಂದ ‘ ಕೊಡುವುದಿಲ್ಲ ಹೋಗೆಂ’ಬ ಧಮಕಿಗಳಿಗೆ ಒಳಗಾಗಿ ಕೆಲವೊಮ್ಮೆ ಗೆದ್ದು, ಕೆಲವೊಮ್ಮೆ ಸೋತು,ಅಷ್ಟಿಷ್ಟು  ಕೆಲವೊಮ್ಮೆ ಮೋಸಹೋಗಿ, ಮತ್ತೆ ಕೆಲವೊಮ್ಮೆ ಮರುಳು ಮಾಡಿ, ಬೇರೆ ಯಾವುದೋ ಆಸೆ ತೋರಿಸಿ ವ್ಯವಹಾರ ಮುಗಿಸಿ ಎಲ್ಲ ಪುಸ್ತಕಗಳೊಂದಿಗೆ ಮನೆ ಸೇರಿದರೆ ಅಲ್ಲಿಗೆ ಪಾಂಡವ ಅಶ್ವಮೇಧವೂ ನಮ್ಮ ವಿಜಯೋತ್ಸವಕ್ಕೆ ಸಮವಿರುತ್ತಿರಲಿಲ್ಲ. ವರುಷ ಪೂರ್ತಿ ನಾನು ಕೂಡಿಟ್ಟುಕೊಂಡ ಹಣಕ್ಕೆ ವರುಷದ ಕೊನೆಗೆ ನಮ್ಮ ತಾಯಿ ಕೊಡುತ್ತಿದ್ದ ೫ ರೂಪಾಯಿ ಸೇರಿ ಸ್ವಲ್ಪ ಬಂಡವಾಳ ಇಟ್ಟುಕೊಂಡು ಹೋಗುತ್ತಿದ್ದ ನನಗೆ ಸ್ವಲ್ಪ ಆದ್ಯತೆ ಇತ್ತು ಎಂದೇ ಹೇಳಬೇಕು. ಮಾರುವವರಿಗೂ ಹಣ ಸಿಕ್ಕರೆ ಅವರ ಪುಸ್ತಕಗಳಿಗೂ ದಾರಿಯಾದೀತೆಂಬ ಯೋಚನೆ ಅವರಿಗೆ!

 

ನಗರಗಳಲ್ಲಿದ್ದ ನಮ್ಮ ಕೆಲವು ನೆಂಟರ ಮಕ್ಕಳಿಗೆ ಈ ಗೋಜಲು-ಪರಿಪಾಟಲುಗಳು ಇರಲಿಲ್ಲ. ಖಾಸಗೀ ಶಾಲೆಯಾದ ಕಾರಣ ಅವರಿಗೆ ಹೇಗೋ ಪುಸ್ತಕಗಳು ಹೊಂದಿಕೆಯಾಗಿಬಿಡುತ್ತಿದ್ದವು. ಆಂಗ್ಲಮಾಧ್ಯಮವೂ ಸಹ!

ನೋಟು ಪುಸ್ತಕಗಳು ಕೂಡಾ ಅವರಿಗೆ ಸಲೀಸಾಗಿ ಸಿಗುತ್ತಿದ್ದವು. ನಾವು ಅವರುಗಳ ಮನೆಗೆ ಹೋದಾಗ ಅವರ ಹಿಂದಿನ ಕ್ಲಾಸಿನ ಪುಸ್ತಕಗಳನ್ನು ಪಡೆದು ಬರೆಯದ ಹಾಳೆಗಳನ್ನು ಜೋಪಾನವಾಗಿ ಹರಿದು ಸೇರಿಸಿ ದಪ್ಪ ದಾರ ದಬ್ಬಳಗಳಿಂದ ಅವುಗಳನ್ನು ಹೊಲಿದು ತರುತ್ತಿದ್ದೆವು. ಅವರೂ ಅವುಗಳನ್ನು ಕೊಡುವಷ್ಟು ಧರಾಳಿಗಳಾಗಿದ್ದರು.

ಈಗ ಕಾಲ ಬದಲಾಗಿದೆ. ಮೊದಲ ಹಂತವೆಂಬಮತೆ ಎಲ್ಲ ಸರಕಾರೀ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಕಾಲ ಕಾಲಕ್ಕೆ ತಲುಪದ ವಿಳಂಬ ನೀತಿ ಇಂದಿಗೂ ಒಂದು ಜಾಡ್ಯವೇ ಆದರೂ ಪುಸ್ತಕ ಸಿಗುವುದರ ಭರವಸೆಯಂತೂ ಇದೆ. ಆದರೆ ಹೊರಗಡೆಯ ಮಾರಾಟವನ್ನು ನಿಷೇಧಿಸಿರುವ ಕಾರಣ ಕಾಸುಕೊಟ್ಟರೂ ನಿಮಗೆ ಪುಸ್ತಕಗಳು ಸಿಗಲಾರವು.

ಎರಡನೆ ಹಂತದಲ್ಲಿ ಈ ಪಠ್ಯಗಳನ್ನು ಅಂತರ್ಜಾಲದಲ್ಲಿ ಏರಿಸುತ್ತೇವೆಂದು ಕಳೆದ ಐದು ವರುಷಗಳಲ್ಲಿ ಹೇಳುತ್ತಾ ಮೂಗಿಗೆ ತುಪ್ಪ ಹಚ್ಚಿ ಕೂಡಿಸಿದ್ದ ಕರ್ನಾಟಕ  ಘನವೆತ್ತ ಸರಕಾರ ಕೊನೆಗೂ ಆ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಕಲಿಸಲ್ಪಡುವ ಎಲ್ಲ ಭಾಷಾ ಮಾಧ್ಯಮಗಳ ಎಲ್ಲ ವಿಷಯಗಳ ಪಠ್ಯ ಪುಸ್ತಕಗಳನ್ನು “ನೆಟ್ಟಿ” ಗೆ ಏರಿಸಿದೆ.  ಕನ್ನಡ ಮಾಧ್ಯಮದ ಪುಸ್ತಕಗಳು ಈಗ ಸಮಗ್ರವಾಗಿ ಒಂದು ಕಡೆ ಲಭ್ಯವಾಗಿವೆ. ಕನ್ನಡಮಟ್ಟಿಗೆ ಇದೊಂದು ಸಕಾರಾತ್ಮಕವಾದ, ಧನಾತ್ಮಕವಾದ ಬೆಳವಣಿಗೆ. ಹಾಗೆಂದು ಕನ್ನಡ ಪಠ್ಯಗಳನ್ನು ಅಂತರ್ಜಾಲದಲ್ಲಿ ದೊರೆಯುವಂತೆ ಮಾಡುವ ಕೆಲವು ಪ್ರಯತ್ನಗಳು ಹಿಂದೆ ನಡೆದಿದ್ದವು. ಅಮೇರಿಕಾದ ಕನ್ನಡಕ್ಕೆ ಮಿಡಿಯುವ ಕೆಲವು ಜೀವಗಳು ಸ್ಕ್ಯಾನ್ ಮಾಡಿದ ಕೆಲವು ಪುಸ್ತಕಗಳ , ಬಿಡಿ ಹಾಳೆಗಳನ್ನು ಒಂದೆಡೆ ಸೇರಿಸಿ ಆಸಕ್ತರಿಗೆ ಕೊಡಮಾಡುವ ಕೆಲಸ ಮಾಡಿದ್ದರು. ಸರಳತೆಯ, ಸಮಗ್ರತೆಯ ನಿಟ್ತಿನಿಂದ ಇವು ಹೆಚ್ಚು ಪ್ರಯೋಜನಕಾರಿಯಾಗುವಲ್ಲಿ ಸೋತವು. ನಾನು ಸಹಾ ಭಾರತದಲ್ಲಿ ಪುಸ್ತಕಗಳಿಗಾಗಿ ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದೆ . ಇನ್ನು ಆ ಚಿಂತೆ ಇಲ್ಲ.

 

ತಮಿಳುನಾಡು ಸರಕಾರದ ಶಿಕ್ಷಣ ಪ್ರಾಧಿಕಾರವು ಕನ್ನಡ ಪುಸ್ತಕಗಳನ್ನುಅಂತರ್ಜಾಲದಲ್ಲಿ  ಬಿಡುಗಡೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾದ  ಸಂಸ್ಥೆ. ಬಣ್ಣದ ಚಿತ್ರ, ಸರಳತೆ , ವಿಷಯ ವಿಸ್ತಾರ,ನಿರೂಪಣೆಯಿಂದ ಗುಣಮಟ್ಟದ ಪಠ್ಯಗಳನ್ನು ಕೊಡಮಾಡಿದೆ. ಒಂದನೇ ತರಗತಿಯಿಂದ ೧೨ ನೇ ತರಗತಿಯವರೆಗೆ ಎಲ್ಲಾ ವಿಷಯಗಳ ಪುಸ್ತಕಗಳು ಕನ್ನಡ ,ತೆಲುಗು, ಮಲೆಯಾಳಂ ಹಾಗೂ ತಮಿಳು ಮಾಧ್ಯಮದಲ್ಲಿ ದೊರೆಯುತ್ತವೆ. ಮೊದಲು ವರ್ಷದ ಪೂರ್ಣ ಪಠ್ಯ ಲಭ್ಯವಿತ್ತು . ಈಗ ಸೆಮಿಸ್ಟರ್ ಪದ್ಧತಿಯಲ್ಲಿ ಎರೆದು ಮೂರು ಭಾಗಗಳಾಗಿ ವಿಂಗಡಿಸಿ ವಿಭಜಿಸಿದ ಕಾರಣ ಸ್ವಲ್ಪ ಅವ್ಯವಸ್ಥೆ ಅನಿಸುತ್ತದೆ.  ಮೊದಲು ಕನ್ನಡ ಭಾಷಾ ಭಾರತಿ ಪಠ್ಯ ವೂ ಇತ್ತು. ಈಗ ಭಾಷಾ ಭಾರತಿ ಆರನೆ ತರಗತಿಯಿಂದ ಮಾತ್ರ ಲಭ್ಯ. ಇದೂ ಸಹಾ ಒಂದು ಕೊರತೆ! ಆದಾಗ್ಯೂ ಇದೊಂದು ಬಲು ಉಪಯೋಗಿಯಾದ ಪ್ರಯತ್ನ. ನನ್ನ ಮಕ್ಕಳಿಗೆ ಕನ್ನಡವನ್ನು ಇದರ ಸಹಾಯದಿಂದ ಕಲಿಸುತ್ತಿದ್ದೇನೆ. ೧೨ನೇ ತರಗತಿಯ ಕನ್ನಡ ಪುಸ್ತಕದಲ್ಲಿ ಪೂರ್ಣಚಂದ್ರ ತೇಜಸ್ವಿಯವರ “ಕೃಷ್ಣೇಗೌಡನ ಆನೆ” ಕಥೆ ಇದೆ. ಧರೆಗಿಳಿಸಿಕೊಂಡು ಓದಿ.

NCERT ಅವರ ಜಾಲತಾನದಲ್ಲಿಯೂ ಪಠ್ಯಗಳಿವೆ. ಹಿಂದೀ, ಇಂಗ್ಲೀಶು, ಉರ್ದು ಮಾಧ್ಯಮದ ಈ ಪಠ್ಯಗಳು ಕನ್ನಡ ಕಲಿಕೆಗೆ ಸಹಕಾರಿಯಾಗಿಲ್ಲ.  ೬-೮ ವರುಶಗಳಿಂದ ಇದು ಚಾಲ್ತಿಯಲ್ಲಿದ್ದರೂ ಪ್ರಾಂತೀಯ ಭಾಷೆಗಳನ್ನು ಕಡೆಗಣಿಸಲಾಗಿತ್ತು.  ಭಾರತದ ಅಧಿಕೃತ ಭಾಷೆಗಳಲ್ಲಿ ಕಲಿಕಾಸಾಮಗ್ರಿಗಳು ದೊರೆಯುವಂತೆ ಮಾಡಲು ಕೇಂದ್ರಸರಕಾರದ “ಭಾರತವಾಣಿ “ ಎಂಬ ಮಹತ್ವಾಕಾಂಕ್ಷಿ  ಯೋಜನೆಯ ಸಹಯೋಗದಲ್ಲಿ ಕನ್ನಡ ಪುಸ್ತಕಗಳು ಕರ್ನಾಟಕದಿಂದ ಕಡೆಗೂ  ಬೆಳಕು ಕಂಡಿವೆ ಹಾಗೂ ಇದನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಎಲ್ಲ ವಿಷಯದ ಪುಸ್ತಕಗಳು ಇವೆ. ಕನ್ನಡಿಗರಾದ ಬೇಳೂರು ಸುದರ್ಶನ ಅವರ ತಂಡವು ಶ್ರದ್ಧೆ ಪ್ರೀತಿಗಳಿಂದ ನಮಗೆ ಕೊಡಮಾಡಿದ್ದಾರೆ.

ಇಲ್ಲಿ ಎಲ್ಲ ಪುಸ್ತಕಗಳನ್ನು PDF ಆವೃತ್ತಿಯಲ್ಲಿ ನೋಡಬಹುದು , ಅಮ್ಗೈಲಿನ ಸ್ಲೇಟುಗಳಲ್ಲಿ, ಮಡಿಲಲ್ಲಿ ಮಗುವಾಗಿ ಮಾಡಿಸಿಕೊಂಡು ಮಲಗುವ, ಬಿಚ್ಚಿಕೊಂಡು ಆಡುವ ಗಣಕ ಯಂತ್ರಗಳಲ್ಲಿ ಧರೆಗಿಳೀಸಿಕೊಂಡು ಶೇಖರಿಸಿಡಬಹುದು, ಓದಬಹುದು, ಕಲಿಯಬಹುದು, ಕಲಿಸಬಹುದು!!

ಕರ್ನಾಟಕದ ಈ ಪುಸ್ತಕಗಳನ್ನು ಕರ್ನಾಟಕದ “ಕಣಜ” ದಲ್ಲೂ ಇವುಗಳನ್ನು ಪಡೆಯಬಹುದಾಗಿದೆ. ಆದರೆ, not for  copy  ಎಂಬ ನೀರಿನ ಕಲೆ ಕಡುಕಪ್ಪಾಗಿ ಕಾಣುವ ಕಾರಣದಿಂದ ಕಿರಿಕಿರಿ ಯಾಗುತ್ತದೆ. ಭಾರತವಾಣಿಯಲ್ಲಿ ಈ ತೊಂದರೆಯಿಲ್ಲ.  ಭಾರತವಾಣಿ ಎಂಬ ದೂರದೃಷ್ಟಿಪೂರ್ಣ, ಬಹುತ್ವಾಕಾಂಕ್ಷಿ  ಯೋಜನೆಯ ಒಳಹೊಕ್ಕು ಒಮ್ಮೆ ನೋದಿಬನ್ನಿ. ಇಡೀ ಭಾರತದ ಭಾಷೆಗಳಲ್ಲಿರುವ ಜ್ಞಾನ ಗಂಗೆಯನ್ನು ಒಂದೆಡೆ ಸೇರಿಸುವ ಸಾಗರದೋಪಾದಿ ಯೋಜನೆ. ನಿಘಂಟು, ಪಠ್ಯಗಳು, ಜೊತೆಗೆ ಕನ್ನಡದ ವಿಶ್ವಕೋಶ ಸಹಾ ಇಲ್ಲಿ ಲಭ್ಯ! ಮಹಾರಾಷ್ಟ್ರ ಸರಕಾರದ ಕನ್ನಡದ ಪಠ್ಯಗಳು ಸಹ ಇಲ್ಲಿ ಲಭ್ಯ  ಇವೆ. ಎಲ್ಲ ತರಗತಿಯ ಎಲ್ಲ ಪುಸ್ತಕಗಳು ಇನ್ನೂ ಇಲ್ಲ. ಆದರೆ ಗುಣಮಟ್ಟದ ದೃಷ್ಟಿಯಿಂದ ತಮಿಳುನಾಡಿನ ಪುಸ್ತಕಗಳಿಗಿಂತ ಉತ್ತಮವಾದುವು. ಭಾರತವಾಣಿ ಬೆಳೆಯುತ್ತಾ ಹೋದಂತೆ ನಮ್ಮ ಆಯ್ಕೆಯ ಸಾಧ್ಯತೆಗಳು ವಿಸ್ತಾರವಾಗುತ್ತವೆ. ಬಹು ಮಾಧ್ಯಮ ಜ್ಞಾನವಾಹಿನಿಯೂ ಅಭಿವ್ರುದ್ಧಿಗೊಳ್ಳುತ್ತಿದೆ ಎಂದು ಕೇಳಿ ಬಲ್ಲೆ. ಕನ್ನಡದ ಉಳಿವು ಬೆಳವಣಿಗೆಗೆ ಆದ ಸಹಾ ಸಹಾಯಕವಾಗಬಹುದು, ಕಾಯಬೇಕು.

 

ಕನ್ನಡದ ಮೊದಲ ರಾಷ್ಟ್ರಕವಿ ಹೀಮೆಯ ಶ್ರೀ ಗೋವಿಂದಪೈ ಅವರ  ‘ ತಾಯೆ ಬಾರಾ ಮೊಗವ ತೋರ ಕನ್ನಡಿಗರ ಮಾತೆಯೇ’ ಎಂಬ ಹಾಡಿನಲ್ಲಿ

ಎನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

ಮೃಗದ  ಸೇಡು  ನಮ್ಮ ಪಾಡು ಪರರ ನುಡಿಗೆ ಮಿಡುಕುವ

ಕನ್ನಡ ಕಸ್ತೂರಿಯನ್ನ ಹೊಸತು ಸಿರಿಂ ತೀಡದೆನ್ನ

ಸುರಭಿ ಎಲ್ಲಿ? ನಿನದನ್ನ ನವಶಕ್ತಿಯನೆಬ್ಬಿಸು

ಹೊಸ ಸುಗಂಧದೊಸಗೆಯಿಂದ  ಜಗದಿ ಹೆಸರ ಹಬ್ಬಿಸು

ಎನ್ನುವ  ಮಾತುಗಳಿವೆ.

ಸರಳ, ಸುಂದರ, ಸಶಕ್ತವಾದ ಕನ್ನಡ ಭಾಷೆ ತನ್ನ ಜನರಿಂದಲೇ ಅವಗಣನೆಗೆ ಒಳಗಾಗಿ ಅಳಿವು ಉಳಿವಿನ ಹೋರಾಟದಲ್ಲಿ ನಲುಗುತ್ತಿರುವಾಗ ಇದೊಂದು ಆಶಾದಾಯಕವಾದ  ಬೆಳವಣಿಗೆ. ತಾಂತ್ರಿಕ ಯುಗದ ಪಾಶ್ಚಾತ್ಯೀಕರಣದ ಹೊಡೆತಕ್ಕೆ ಸಿಕ್ಕಿ ಬಳಲಿರುವ ಭಾಷೆಗೆ ಇದು ಒಂದು ತಾತ್ಕಾಲಿಕವಾದ ಶಕ್ತಿ ನೀಡುವ ಸೂಜಿಮದ್ದು.

ಉಪಸಂಹಾರ:

ಇಲ್ಲಿಗೆ ಎರಡು ವರುಷಗಳ ಹಿಂದೆ ನನ್ನ ಪ್ರೌಢಶಾಲಾ ಶಿಕ್ಷಕರೊಬ್ಬರ ಭೇಟಿ ಮಾಡಿದ್ದೆ. ನಾವು ಮಕ್ಕಳಾಗಿ, ವಿದ್ಯಾರ್ಥಿಗಳಾಗಿ ಅಂದು ನಾವು ಪಡುತ್ತಿದ್ದ ಪರಿಪಾಟಲುಗಳನ್ನು  ಅವರು ಮೆಲುಕುಹಾಕಿದರು.’’ ಅಂದು ನಿಮಗೆ ಕಲಿಯುವ ಆಸೆಯಿತ್ತು, ಜ್ಞಾನದ ಹಸಿವಿತ್ತು. ನಿಮ್ಮ ಆ ಅವಶ್ಯಕತೆಗಳನ್ನು ಪೂರೈಸುವ ಸೌಲಭ್ಯವಾಗಲಿ, ಆರ್ಥಿಕ ಶಕ್ತಿಯಾಗಲೀ ನಮಗಿರಲಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು, ಪೆನ್ಸಿಲ್ ಸೈಕಲ್ ,ಊಟ, ಬಟ್ಟೆ ಎಲ್ಲವೂ ಉಚಿತವಾಗಿ  ದೊರೆಯುತ್ತದೆ. ಆದರೆ ಕಲಿಯುವಂತ ಹಸಿವೆ ಅವರಲ್ಲಿ ನಮಗೆ ಕಾಣುವುದಿಲ್ಲ’’.

ಅವರಾಗ ಹೇಳಿದ ಎರಡು ಮಾತುಗಳು ಆಗಾಗ  ನನ್ನ ಮನಃ ಪಟಲದಲ್ಲಿ ಹಾಯ್ದುಹೋಗುತ್ತಿರುತ್ತವೆ.

ಕನ್ನಡಕ್ಕೆ ಕುರಿತಾದ ಈ ಹೊಸ ಬೆಳವಣಿಗೆಯೂ ಹಸಿವಿಲ್ಲದವನಿಗೆ ಬಡಿಸಿದ ಮೃಷ್ಠಾನ್ನವಾಗದಿದ್ದರೆ ಸಾಕು. ಅಂಗೈಯಲ್ಲಿ ಅರಮನೆಯಿದ್ದರೇನು ಭಾಗ್ಯ? ಕನ್ನಡದ ಮಕ್ಕಳು ಅನುಭವಿಸುವ ಅದೃಷ್ಟವಿಲ್ಲದ  ಭೋಗ ಅಭಾಗ್ಯರಾಗದಿದ್ದರೆ ಸಾಕು..

ನೇರವಾಗಿ ‘’ನೆಟ್ಟಿ’’ ಗೆ ಏರಿದ ಕನ್ನಡ , ತನ್ನ ಮಣ್ಣಿನ ಋಣವಿರುವ ಕನ್ನಡ ಕೂಸುಗಳ ನೆತ್ತಿಗೇರುವುದೇ ಎಂಬುದು ಯಕ್ಷ ಪ್ರಶ್ನೆ

ಗೋವಿಂದ ಪೈ ಗಳ ಈ ಸಾಲುಗಳೊಮಡಿಗೆ, ಕನ್ನಡದ ವೈಭವಕ್ಕೆ ಹಾತೊರೆಯುತ್ತಾ,,,

‘’ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ

ನೀಗದಂತೆ  ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ

ನಮ್ಮೆದೆಯಂ ತಾಯೆ ಬಲಿಸು

ಎಲ್ಲರ ಬಾಯಲ್ಲಿ ನೆಲೆಸು

ನಮ್ಮ ಮನನೊಂದೆ ಕಲಸು

ಇದನೊಂದನೆ ಕೋರುವೆ

ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ? ‘’

——————————————————–

‘’ನೆಟ್ಟಿ’’ಗೇರ್ದ ನುಡಿಯು ನೆತ್ತಿಗೇರಲದು ಅಸಾಧ್ಯವೇ ?

ಭಾರತ ದೇಶ -ಕನ್ನಡ ನಾಡು – ಕನ್ನಡ ಭಾಷೆ ಕುರಿತ ಪಿ.ಬಿ.ಶ್ರೀನಿವಾಸರ ಹಾಡುಗಳು

ಭಾರತ ದೇಶ -ಕನ್ನಡ ನಾಡು –  ಕನ್ನಡ ಭಾಷೆ  ಕುರಿತ ಪಿ.ಬಿ.ಶ್ರೀನಿವಾಸರ ಹಾಡುಗಳು

 

Map of Karnataka

ಸಾಹಿತ್ಯ ಹಾಗೂ ಸಂಗೀತ ಎರಡರಲ್ಲೂ ಶ್ರೀಮಂತವಾದ ಹಾಡುಗಳನ್ನು ಮಧುರವಾಗಿ ಹಾಡಿ ನಮಗಾಗಿ ಬಿಟ್ಟು ಹೋಗಿದ್ದಾರೆ ಜೇನುದುಂಬಿ, ಗಾನ ಗಾರುಡಿಗ, ಕಾಕಿನಾಡ ಕೋಗಿಲೆ,  ಎಂದು ಹೆಸರಾದ ಮಧುರ ಕಂಠದ ಗಾಯಕ ನಮ್ಮ ಪಿ.ಬಿ.ಶ್ರೀನಿವಾಸ್..

ಅವರು ಹಾಡಿದ ಹಾಡುಗಳು ನಮ್ಮ ಜೀವನದ ಪ್ರತಿಯೊಂದು ಪ್ರಸಂಗಕ್ಕೂ ಹಲವಾರು ಇವೆ. ೫೦ ವರ್ಷ ಗಳಷ್ಟು ಹಳೆಯದಾದರೂ ಇನ್ನೂ ಅನುರಣಿಸಿ ನಮ್ಮ ಭಾಷೆಯ ಸೌಂದರ್ಯವನ್ನು ಜೀವಂತವಾಗಿಟ್ಟಿವೆ.ಅಂತರ್ಗತ ಭಾವನೆಗಳಿಗೆ, ಶ್ರುತಿ ಲಯಗಳಿಗೆ ಒತ್ತುಕೊಟ್ಟು ಹಾಡಿದ್ದು ಇವರ ವಿಶೇಷತೆ. ತಾಯಿಯ ಹಾಡುಗಳಿಂದ ಪ್ರಭಾವಿತರಾಗಿ,ಯಾವ ಗುರುಮುಖದಿಂದಲೂ ಅಧಿಕೃತವಾಗಿ ಸಂಗೀತ ಕಲಿಯದಿದ್ದರೂ ಸಂಗೀತ ಸರಸ್ವತಿಯನ್ನು ತಮ್ಮ ಸತತ ಪರಿಶ್ರಮದಿಂದ ಒಲಿಸಿಕೊಂಡು ಗಾಯನ ಶಿಖರದ ಉತ್ತುಂಗವನ್ನು ತಲುಪಿದ್ದು ಈಗ ಇತಿಹಾಸ.

ಕರ್ನಾಟಕ ಸಂಗೀತ ರುಚಿಸದೆ ಉತ್ತರ ಭಾರತದ ಹಿಂದೂಸ್ತಾನಿ ಶೈಲಿಯಲ್ಲಿ ಆಗಿನ ಗಾಯಕರುಗಳ ಹಾಡುಗಳನ್ನು ಶ್ರದ್ಧೆಯಿಂದ ಆಲಿಸಿ -ಅನುಕರಿಸಿ ಕಲಿತಿದ್ದರೆಂದರೆ ಇವರು  ಒಂದು ಬಗೆಯ ಆಧುನಿಕ ಏಕಲವ್ಯರೆನ್ನಬಹುದು.  .

ಅವುಗಳಲ್ಲಿ ಕನ್ನಡ ಭಾಷೆ- ನಾಡು -ಸಾಹಿತ್ಯ ಕುರಿತಾಗಿ ಅವರ ಕೆಲವು ಹಾಡುಗಳ ಪಟ್ಟಿ ಇಲ್ಲಿದೆ. ಹಾಡುಗಳನ್ನು ಕುರಿತಾದ ಸಂಕ್ಷಿಪ್ತ ಟಿಪ್ಪಣಿ ಸೇರಿಸಿದ್ದೇನೆ (ನನಗೆ ತಿಳಿದಷ್ಟು) ನಿಮ್ಮ ಅವಗಾಹನೆಗಾಗಿ.

 

  • ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು : ವಿಜಯನಗರದ ವೀರಪುತ್ರ  ನಾಯಕ ನಟ ಸುದರ್ಶನ ಅವರಿಗಾಗಿ ಹಾಡಿದ್ದು. ಅಧಿಕೃತವಾಗಿ ಕನ್ನಡದಲ್ಲಿ ಅವರ ಪಾದಾರ್ಪಣೆ
  • ಕನ್ನಡವೇ ತಾಯ್ನುಡಿಯು ಕರುನಾಡು ತಾಯ್ನಾಡು : ಅನ್ನಪೂರ್ಣ ಚಿತ್ರದಲ್ಲಿ ಹಿನ್ನೆಲೆ ಗಾಯಕನಾದ ನಟನಿಗೆ ಪಿ.ಬಿ.ಎಸ್ ಹಾಡಿದ ಹಿನ್ನೆಲೆ ಗಾಯನ!
  • ಬಾ ತಾಯೆ ಭಾರತಿಯೇ  ಭಾವ ಭಾಗೀರಥಿಯೆ; ತಾಯಿ ಕರುಳು ಚಿತ್ರದ ಈ ಸುಂದರ ಹಾಡಿನ ನಿಜವಾದ ಕತೃ  ಬಹುಮುಖ ಪ್ರತಿಭೆಯ ನಟ ಟಿ.ಎನ್.ಬಾಲಕ್ರಿಶ್ಣ ಅವರು. ಎಲ್ಲಾ ದಾಖಲೆಗಳಲ್ಲಿ  ಜಿ ವಿ  ಅಯ್ಯರ್ ಇ ಹಾಡಿನ ರಚನೆಕಾರರೆಂದು ನಮೂದಿಸಿದೆ. ಆದರೆ ತಮ್ಮ ಎರಡನೆಯ ಮಗಳು ಭಾರತಿ ಹುಟ್ಟಿದಾಗ ಆ ಮಗುವಿನ ಆಗಮನದ ಸಂಭಮದಲ್ಲಿ ರಚಿಸಿದ ಅನನ್ಯ ಗೀತೆ.
  • ಕನ್ನಡತಿ ನಮ್ಮೊಡತೀ ಕಣ್ಣು ತೆರೆದು ನೋಡು : ಪುನರ್ಜನ್ಮ, 
  • ಕಲಿಯಿರೊಂದು ಪಾಠವನು ಕನ್ನಡತಾಯ್ ಮಕ್ಕಳೇ : ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ರಾಜಕುಮಾರ್ ಅವರು  ತಮ್ಮ ಪೂರ್ವಾಶ್ರಮದಲ್ಲಿ ಮಕ್ಕಳಿಗೆ ಕಲಿಸುವ ಗೀತೆ
  • ನಮ್ಮ ತಾಯಿ ಭಾರತಿ ನಮ್ಮ ನಾಡು ಭಾರತ: ನಾಂದಿ ಚಿತ್ರದಲ್ಲಿ ಶಿಕ್ಷಕ ಪಾತ್ರದ   ರಾಜಕುಮಾರರಿಗಾಗಿ ಹಾಡಿದ ಹಾಡು.
  • ಮೈಸೂರು ದಸರಾ ಎಷ್ಟೊಂದು ಸುಂದರಾ : ಕರುಳಿನ ಕರೆ ಚಿತ್ರದಲ್ಲಿ ರಾಜಕುಮಾರ್-ಸುದರ್ಶನ  ಅವರ ನಟನೆಗೆ ಹಾಡಿದ ಹಾಡು
  • ಒಲವಿನಾ ಪ್ರಿಯಲತೆ ಅವಳದೇ ಚಿಂತೆ: ಜಿ.ಕೆ.ವೆಂಕಟೇಶ್ ಅವರ ಸಂಗೀತ ಇರುವ ಈ ಭಾವಪೂರ್ಣ ಗೀತೆ ಸಂಪೂರ್ಣ ಕನ್ನಡ ನಾಡಿನ ಕುರಿತಲ್ಲದಿದ್ದರೂ  ಕನ್ನಡ ನಾಡಿನ ಸಂಸ್ಕೃತಿಯಲ್ಲಿ ಅರಳಿದ   ಪ್ರಿಯ ಸತಿಯರ ಗುಣಲಕ್ಷಣಗಳನ್ನು  ಬಣ್ಣಿಸುತ್ತದೆ. ಇದನ್ನು ಪಿ.ಬಿ.ಎಸ್ ರ ಕಂಠದಲ್ಲಿ ಕೇಳಿಯೇ ಅನುಭವಿಸಬೇಕು.
  • ದೇವನೊಬ್ಬ ನಾಮ ಹಲವು ಭಕುತರೆನಿತೋ ಭುವಿಯಲಿ : ನಮ್ಮ ಊರ ದೇವರು ಚಿತ್ರದಲ್ಲಿ ರಾಜೇಶ್ ಅವರಿಗಾಗಿ  ಹಾಡಿದ್ದು. ಕನ್ನಡ ಮಾತೆಯನ್ನು ಭಾರತಮಾತೆಯ ಮಗಳಾಗಿ ಸಾಮರಸ್ಯ ಬೆಸೆಯುವ ಗೀತೆ.
  • ಕಣ್ಣಾರೆ ನೀ ನೋಡು ಕನ್ನಡ ಸೀಮೆ ಮನಸಾರೆ ಕೊಂಡಾಡು ಈ ನಾಡ ಹಿರಿಮೆ: ‘ಚಿರಂಜೀವಿ’ ಎಂಬ ಕನ್ನಡದಲ್ಲಿ  ಮೂಡಿಬಂದ ಒಂದು ಅಮೋಘ ಚಿತ್ರದ ಈ ಹಾಡು ಕನ್ನಡ ಭಾಷೆ, ಸಾಹಿತ್ಯ , ನಾಡು, ವೈಭವ, ಇತಿಹಾಸ, ಎಲ್ಲವನ್ನೂ ಸಮಗ್ರವಾಗಿ ಚಿತ್ರಿಸುವ ಪರಿಪೂರ್ಣ ಗೀತೆ. ಈ ಚಿತ್ರದ ಪ್ರತಿಯೊಂದು ಹಾಡೂ ಒಂದೊಂದು ರತ್ನವೇ ಸರಿ. ವಿಜಯ ನಾರಸಿಂಹ ಅವರ ಸಾಹಿಯ್ತ, ವಿಜಯಭಾಸ್ಕರ್ ಸಂಗೀತ ಕಳಶಪ್ರಾಯವಾಗಿದೆ. ಮಗುವೊಂದು ಕ್ಯಾನ್ಸರ್ ಖಾಯಿಲೆಗೆ ತುತ್ತಾದಾಗ  ಅದರ ಪರಿವಾರದಲ್ಲಿ ಆಗುವ ತವಕ-ತಲ್ಲಣಗಳನ್ನು, ನೋವಿನಲ್ಲೂ ತ್ಯಾಗಮಯಿಯಾಗಬಹುದಾದ ಸಾಮಾಜಿಕ, ಮಾನವೀಯ ಕಾಳಜಿಯನ್ನು ಮನದಲ್ಲಿ ಮೂಡಿಸುವ ಅದ್ಭುತ ಚಿತ್ರ.
  • ಒಂದೇ ನಾಡು ಒಂದೇ ಕುಲವು ಒಂದೇ ದೈವವೂ: ನಾಡ ಭಕ್ತಿ ಗೀತೆ ಎಂದೆನ್ನಬಹುದು. ಮೇಯರ್ ಮ್ಮುತ್ತಣ್ಣ ಚಿತ್ರದ್ದು.
  • ನಮ್ಮ ತಾಯಿ ಭಾರತಿ ಪಡೆದ ಪುನಿತ ಸಂಸ್ಕೃತಿ ವಿಶ್ವ ದಯಾ ಕೀರುತಿ ನಡೆಸುವ ವರ್ಧಂತಿ : ಚಿತ್ರ ನನಗೆ ತಿಳಿಯದು.
  • ಕನ್ನಡ ನಾಡಿನ ವೀರ ರಮಣೀಯ: ನಾಗರಹಾವು ಚಿತ್ರದಲ್ಲಿ ಒನಕೆ ಓಬವ್ವ ಪಾತ್ರ -ಕಥೆಯನ್ನು ಬಿಂಬಿಸುವ ಹಾಡು- ವಿಷ್ಣುವರ್ಧನರಿಗಾಗಿ ಹಾಡಿದ್ದು.
  • ಈ ದಿನ ಮಜಾ ಕಂಡೆನು ನಿಜ ಆದೆನು  ರಾಜ: ದೇವರ ಮಕ್ಕಳು ಚಿತ್ರದ ಹಾಡು. ಸೆರೆಯಿಂದ ಬಿಡುಗಡೆಯಾಗಿ ಬರುವ ರಾಜಕುಮಾರರ ಪಾತ್ರಕ್ಕೆ ಹಿನ್ನೆಲೆ ಗಾಯನ.
  • ಆಗದು ಎಂದಿ ಕೈಕಟ್ಟಿ ಕುಳಿತರೆ : ಬಂಗಾರದ ಮನುಷ್ಯಾ ಚಿತ್ರದಲ್ಲಿ ಭಾಷೆ, ನಟನೆ,ಸಾಹಿತ್ಯ ಸಂಗೀತ, ಸ್ಫೂರ್ತಿಯ ಸಂದೇಶ ತುಂಬಿದ ಬದುಕಿನ  ಬಂಗಾರವನ್ನು ಎಲ್ಲ ರೀತಿಯಲ್ಲಿ ಎಲ್ಲ ಜನರಿಗೆ ಮುಟ್ಟಿಸಿದ ಚಿತ್ರ ಹಾಗೂ ಕಲಶಪ್ರಾಯವಾದ ಗೀತೆ.    
  • ನಾವಾಡುವ ನುಡಿಯೇ ಕನ್ನಡ ನುಡಿ: ಗಂಧದ ಗುಡಿ ಚಿತ್ರದ ಅತಿ ಜನಪ್ರಿಯ ಗೀತೆ. ಈ  ಮಾಧುರ್ಯ ಪಿ.ಬಿ.ಎಸ್ ಅಲ್ಲದೆ ಇನ್ನೊಬ್ಬರು ಹೇಳಿದ್ದರೆ ಹೇಗಿರುತ್ತಿತ್ತೋ ತಿಳಿಯದು. ಅನುಕರಿಸಿದವರೆಲ್ಲರೂ ತಮ್ಮ ಪರಿಮಿತಿಯನ್ನು ಮೀರಲಾಗದೇ ಸೋತಿದ್ದಾರೆ.
  • ಬೆಳೆದಿದೆ ನೋಡಾ ಬೆಂಗಳೂರು ನಗರ ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ: ಮನೆ ಕಟ್ಟಿ ನೋಡು ಚಿತ್ರದ ಆರಂಭ ಗೀತೆ .  ಸಿ.ವಿ ಶಿವಶಂಕರ ಅವರ ರಚನೆ.
  • ನಾ ನೋಡಿ  ನಲಿಯುವ ಕಾರವಾರ ಓ ಕಾರವಾರ ಕಡಲಿನ ತೀರ ನಾ ನೋಡಿ  ನಲಿಯುವ ಕಾರವಾರ: ಮಹಡಿ ಮನೆ ಚಿತ್ರದಲ್ಲಿ ಸಿ.ವಿ ಶಿವಶಂಕರ್ ಅವರ ಹಾಡಿಗೆ ದನಿಯಾಗಿಹರು. ಅಪರೂಪದ ಗೀತೆ.
  • ಕೊಡಗಿನ ಕಾವೇರಿ- ಕಾವೇರಿ ನೀ ಬೆಡಗಿನ ವಯ್ಯಾರಿ: ಶರಪಂಜರ ಚಿತ್ರದ ಈ ಅದ್ಭುತ ಗೀತೆ ತನ್ನ ಸಾಹಿತ್ಯ ಸಂಗೀತಕ್ಕಷ್ಟೇ ಅಲ್ಲದೆ ಚಿತ್ರೀಕರಣದ ದೃಶ್ಯ ಸೌಂದರ್ಯಕ್ಕೂ ಹೆಸರಾಗಿದೆ. ಕಾವೇರಿ ನದಿಯ ನೆಪದಲ್ಲಿ ಕನ್ನಡ ನಾಡನ್ನು ವರ್ಣಿಸುವ ಶ್ರೀಮಂತ ಗೀತೆ.
  • ನೀಡಿ ಬನ್ನಿ ಪ್ರಾಣದಾನ ಉಳಿಸ ಬನ್ನಿ ಮಾನ ಹರಿಸ ಬನ್ನಿ ದೇವಗಂಗೆ : ತೂಗುದೀಪ ಚಿತ್ರದ ಹಾಡು. ನಮ್ಮ ಚಿ ಉದಯಶಂಕರ ಅವರ ತಂದೆ ಚಿ.ಸದಾಶಿವಯ್ಯ ನವರ ರಚನೆ.
  • ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ ; ಪರೋಪಕಾರಿ ಚಿತ್ರದ  ಗೀತೆ. ;
  • ಜನ್ಮ ಜನ್ಮದಾ ಅನುಬಂಧ ಹೃದಯ ಹೃದಯ ಗಳ ಪ್ರೇಮಾನುಬಂಧ: ಸಾಕ್ಷಾತ್ಕಾರ ಚಿತ್ರಕ್ಕೆ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಪಾಂಡಿತ್ಯ ಪೂರ್ಣ ಗೀತೆ. ರಂಗರಾವ್ ಅವರ ಸಂಗೀತದಲ್ಲಿ ಮೂಡಿಬಂದ ಹಾಡಿನ ಮೊದಲಲ್ಲಿರುವ ಆಲಾಪದಲ್ಲಿ ಪಿ.ಬಿ.ಎಸ್ ತುಂಬಿದ ಭಾವ ಹೃದಯಂಗಮ.
  • ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ: ಇದೂ ಕೂಡಾ ಕನ್ನಡ ನಾಡಿನ ವೈಭವವನ್ನು ಸಮಗ್ರವಾಗಿ ವಿವರಿಸುವ ಗೀತೆ. ಎಸ್. ಜಾನಕಿ ಅವರೊಡನೆ ಪಿ.ಬಿ.ಎಸ್ ಹಾಡಿದ್ದಾರೆ.
  • ಜಯ ಭಾರತ ಜನನಿ ಯ ತನುಜಾತೆ ಜಯಹೇ ಕರ್ನಾಟಕ ಮಾತೆ. : ಕು.ವೆಂ.ಪು ಅವರ ನಾಡಗೀತೆಯನ್ನು ಮೊದಲು ಹಾಡಿದ್ದು ಪಿ.ಬಿ.ಎಸ್.
  • ಯಾರು ಏನು ಮಾಡುವರು ನನಗೇನು ಕೇಡು ಮಾಡುವರು : ಕ್ರಾಂತಿ ವೀರ
  • ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ : ಪೋಸ್ಟ್ ಮಾಸ್ಟರ್ ಚಿತ್ರದ ಈ ಗೀತೆ ಪಿ.ಬಿ.ಎಸ್ ರ ಭಾವ ಪೂರ್ಣ ಧ್ವನಿಯನ್ನು ಸಂಪೂರ್ಣವಾಗಿ ಬಳಸಿಕೊಂಡ ಮಧುರ ಹಾಡು.  

 

ಇನ್ನೂ ಕೆಲವು ಇದೆಯೆಂದು ನನಗೆ ಅನಿಸುತ್ತಿದೆ. ತಿಳಿದವರು ಸೇರಿಸಿ ಈ ಪಟ್ಟಿಯನ್ನು ಇನ್ನು ಹೆಚ್ಚು ಸಂಪದ್ಭರಿತಗೊಳಿಸಬಹುದು.

 

 

ಸುದರ್ಶನ ಗುರುರಾಜರಾವ್ .