ಬೆಡಗಿನ ಕನ್ನಡ ವರ್ಣಮಾಲೆ

ಬೆಡಗಿನ ಕನ್ನಡ ವರ್ಣಮಾಲೆ
”ಅ,ಆ ಇ,ಈ ಕನ್ನಡದಾ ಅಕ್ಷರಮಾಲೆ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ” ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. ಈ ಸುಂದರ ಗೀತೆ ಸ್ವರಗಳ ಸ್ತರದಲ್ಲಿ ಯೋಗವಾಹಗಳಾದ ಅಂ ಅಃ ಗಳೊಂದಿಗೆ ಮುಗಿಯುತ್ತದೆ. ಕರುಳಿನ ಕರೆ ಚಿತ್ರಕ್ಕಾಗಿ ಶ್ರಿ ಆರ್.ಎನ್. ಜಯಗೋಪಾಲ್ ಅವರು ರಚಿಸಿದ ಕನ್ನಡದ ಈ ಅನನ್ಯ ಗೀತೆ ಪ್ರತಿಯೊಂದು ಸ್ವರಕ್ಕೂ ಜೀವನದ ವಿವಿಧ ಹಂತ (ಸ್ತರ) ಗಳಲ್ಲಿ ಇರಬಹುದಾದ ಪ್ರಾಮುಖ್ಯತೆ ಯನ್ನು ತೊರುತ್ತದೆ. ’ಅ’ ಇಂದ ಅಮ್ಮಾ ಎನ್ನುವ ಮೊದಲ ಮಾತು ಶಿಶುವಾಗಿದ್ದಾಗ, ಆಟ ಊಟ ಓಟ ಗಳು ಬಾಲಕನಾಗಿದ್ದಾಗ,ಇನ್ನೂ ಬೆಳೆದ ನಂತರ ಮಾನವೀಯ ಮೌಲ್ಯಗಳ ಕಲಿಕೆ- ಇದ್ದವರು ಇಲ್ಲದವರಿಗೆ ನೀಡುವುದು, ಈಶ್ವರನಲ್ಲಿ ಭಕ್ತಿ ಇಡುವುದು ಮುಖ್ಯವಾಗುತ್ತದೆ;ಅಂದರೆ, “ನಾನು” ಎನ್ನುವ ಭಾವ ತೊಡೆಯುವುದು. ತರುಣರಾಗಿದ್ದಾಗ ಕಲಿಯುವ ಬಹು ಮುಖ್ಯ ನೀತಿ ಉಪ್ಪು ತಿಂದ ಮನೆಗೆ ಎರ್ಡ ಬಗೆಯದಿರುವ ಮನೋಭಾವ, ಸ್ವಾರ್ಥ ಸಾಧನೆಗಾಗಿ ಊರಿಗೆ ದ್ರೋಹ ಮಾಡದಿರುವ ( ವ್ಯಕ್ತಿಗತ ಹಿತಕ್ಕಿಂತ ಸಾಮಾಜಿಕ ಹಿತವನ್ನು ಪರಿಗಣಿಸುವ ಮನೋಭಾವನೆ) ವ್ಯಕ್ತಿತ್ವದ ಬೆಳವಣಿಗೆ, ಆನಂತರದಲ್ಲಿ ಓದು ಮುಗಿದು ಮಾಗಿದ ತಾರುಣ್ಯದ ವಯಸ್ಸಿನಲ್ಲಿ ದೇಶಸೇವೆ ಈಶ ಸೇವೆ ಎಂದು ಮಾಡಿದಾಗ ಜೀವನ ಆಹಾ ಆಃ ಆಃ ಎನ್ನುವಂತಿರುತ್ತದೆ ಎಂದು ಸುಂದರವಾಗಿ ಹೆಣೆದಿದ್ದಾರೆ.  ಕನ್ನಡದ ಮುಂದಿನ ವರ್ಣಮಾಲೆಯಲ್ಲಿ ಬರುವ ವ್ಯಂಜನಗಳಿಗೂ ಅವುಗಳದ್ದೆ ಆದ ವೈಶಿಷ್ಟ್ಯ ಇದ್ದು ಇದು ಬಹಳ ಜನಕ್ಕೆ ತಿಳಿಯದು. ವ್ಯಂಜನಗಳಲ್ಲಿ ವರ್ಗೀಯ,ಅವರ್ಗೀಯ, ಅಲ್ಪಪ್ರಾಣ,ಮಹಪ್ರಾಣ ಹಾಗು ಅನುನಾಸಿಕಗಳೆಂಬ ಬಗೆಗಳಿವೆ ಇದು ಎಲ್ಲರಿಗೂ ತಿಳಿದ ವಿಚಾರ. ವರ್ಣಮಾಲೆಯ ಪ್ರತಿಯೊಂದು ಗುಂಪಿನ ಎಲ್ಲ ಸದಸ್ಯರು ನಮ್ಮ ಶ್ವಾಸ ಪ್ರಕ್ರಿಯೆಯ ವಿವಿಧ ಹಂತಗಳಿಂದ ಕ್ರಮವಾಗಿ ಮೂಡಿಬರುತ್ತವೆ.   ಸ್ವರಗಳಿಂದ ಆರಂಭವಾಗುವ ಧ್ವನಿಗಳು ಹಂತ ಹಂತವಾಗಿ ಗಂಟಲಿನಿಂದ ಮೇಲೇರಿ ತುಟಿಯ ವರೆಗೂ ಬರುತ್ತವೆ. ಉದಾಹರಣೆಗೆ, ಅ,ಆ ಅಂದು ನೋಡಿ, ನಾಲಿಗೆಯ ಹಿಂದಿನ ಗಂಟಲ ಭಾಗದಿಂದ ಶಬ್ದ ಹೊರಡುತ್ತದೆ. ಕ,ಖ,ಗ ಗಳು ಅಲ್ಲಿಂದ ಮುಂದಕ್ಕೆ ಸರಿದು ನಾಲಿಗೆ ಮತ್ತು ಕಿರಿನಾಲಿಗೆಯ ಚಲನೆಯಿಂದ ಬರುತ್ತವೆ. ಹೀಗೆ ಪ.ಫ ಬ ದಲ್ಲಿ ಎರಡು ತುಟಿಗಳು ತಗುಲಿದಾಗ ಮಾತ್ರವೆ ಶಬ್ದ ಹೊರಡುವುದು. ಇಷ್ಟು ಸುಂದರವಾಗಿ, ವ್ಯವಸ್ಥಿತವಾಗಿ ಸಂಸ್ಕೃತದಿಂದ ಪ್ರೇರಿತವಾದ ಭಾರತದ ಭಾಷೆಗಳಲ್ಲದೆ ಬೇರೆ ಭಾಷೆಯಲ್ಲಿದೆಯೆಂದು ನನಗನಿಸದು. ಅದರಲ್ಲೂ, ಎಲ್ಲಾ ವರ್ಣಗಳಿಂದ ಸಮೃದ್ಧವಾದ ಕನ್ನಡ ಭಾಷೆಯಲ್ಲಿ  ಈ ಬೆಡಗನ್ನು ಕಾಣಬಹುದು. ಈ ಭಾಷಾ ಸೌಂದರ್ಯವನ್ನು ಕವಿತೆಯಲ್ಲಿ ಹಿಡಿದಿಡುವ,ಅಭಿವ್ಯಕ್ತಗೊಳಿಸುವ ಅಭಿಲಾಷೆ ನನ್ನದು.

ಆಅ,ಇ,ಈ ಉ,ಊ ಕನ್ನಡ ಅಕ್ಷರಮಾಲೆ
ಕಲಿಯಲು ಸುಲಭ ನಡೆಸುವ ನಾವು
ಮನೆಯಲಿ ಕನ್ನಡ ಶಾಲೆ

ಅ,ಆ,ಇ,ಈ,ಉ,ಊ ಜೊತೆಯಲಿ 
ಋ ೠ ಎ ಏ ಐ
ಒ,ಓ ಔ ಸ್ವರಗಳು ಅಂ ಅಃ 
ಯೋಗವಾಹಕವೆ ಸೈ

ಹ್ರಸ್ವವೆ ಮೊದಲು ದೀರ್ಘ್ಹ ಅನಂತರ
ಸ್ವರಗಳು ಕ್ರಮವಾಗಿ
ಸ್ವರಗಳು ಮುಗಿದಿರೆ ವ್ಯಂಜನ 
ವರ್ಣವು ಬರುವವು ಮೊದಲಾಗಿ

ವ್ಯಂಜನ ವರ್ಣದಿ ಅಣ್ಣ ತಮ್ಮರು 
ಅಲ್ಪ- ಮಹಾಪ್ರಾಣ
ಅನುನಾಸಿಕಗಳು ನಿನಗೊಲಿದರೆ 
ಮಗು ನೀನೆ ಬಲು ಜಾಣ

ಕನ್ನಡ ಭಾಷೆಯ ಅಕ್ಷರ ಮಾಲೆ 
ಸುಂದರ ಬಲು ಸರಳ
ಕಲಿತರೆ ಭಾಷೆಯ ಬೆಳಕದು 
ಕಳೆವುದು ಬಾಳಿನ ಕಾರಿರುಳ

ಬರೆಯಲು ಕನ್ನಡ ಲಿಪಿಯದು 
ಸುಂದರ ನುಡಿಯಲು ಅತಿ ಮಧುರ
ಅಕ್ಷರ ಮಾಲೆಯ ವರ್ಗೀಕರಣ 
ಜಾಣ್ಮೆಯ ಕೆನೆಪದರ

ಸ್ವರಗಳು ಹರಿದಿವೆ ನಾಲಿಗೆ ಹಿಂದಿನ
ಗಂಟಲ ಒಳಗಿಂದ
ವ್ಯಂಜನಗಳ ಕೊನೆ ಸಾಲಿದು 
ಸಿಡಿಯಿತು ತುಟಿಗಳ ಮುತ್ತಿಂದ

’ಅ’ ಎನ್ನುವ ಎದೆಯಾಳದ ಸ್ವರವಿದೆ 
ಅಕ್ಷರಮಾಲೆಯ ಮೊದಲಿನಲಿ
’ಮ’ ಎಂಬುವ ಅನುನಾಸಿಕವಿರುವುದು
ವರ್ಗೀಯ ವ್ಯಂಜನದೆಣೆಯಲ್ಲಿ

’ಅ’ಜೊತೆಯಲಿ  ’ಮ’ ಸೇರಿಸಿ ಒತ್ತಲು
’ಅಮ್ಮಾ’ ಎನ್ನುವ ಪದವಿಹುದು
ಅಂತರಾಳದ ಒಳಗಡೆಯಿಂದ ಪ್ರೀತಿಯ 
ಒಸರಿಸಿ  ಮೂಡುವುದು

’ಅಮ್ಮಾ’ ಎನ್ನುವ ಪದದೊಳಗಡಗಿದೆ
ಅಕ್ಷರಮಾಲೆಯ ಹಿರಿವ್ಯಾಪ್ತಿ
ತಾಯಿನುಡಿ ನಮ್ಮ ಕನ್ನಡ ಕಲಿತರೆ
ಬಾಳಿಗೆ ಜೇನಿನ ಸಿಹಿ ಪ್ರಾಪ್ತಿ

ಅ,ಆ ಎಂದು ಹಾಡುತ ಶಬ್ದವ ನೀವೇ 
ಮಾಡುತ ನೋಡಿ
ಗಂಟಲ ಗಾಳಿಯ ಕಂಪನದಿಂದ 
ಮೂಡುವ ಸುಂದರ ಮೋಡಿ

ನಾಲಿಗೆ ಹಿಂದಿನ ಜಾಗದೊಳಿಂದ
ಬರುವವು ಸ್ವರಗಳು ಮೂಡಿ
ಕಲಿಯುತ ನಲಿಯುತ ಕುಣಿಯುತ 
ಹಾಡಿರಿ ನೀವುಗಳೆಲ್ಲರು ಕೂಡಿ

ಅಕ್ಷರ ಮಾಲೆಯ ಮುಂದಿನ ಸಾಲಿನ
ವರ್ಣಗಳೆಲ್ಲವು ವ್ಯಂಜನವು
ಕ,ಖ ಗ,ಘ, ನಂತರ ಕಡೆಯಲಿ 
ಙ ಎನ್ನುವ ಅನುನಾಸಿಕವು

ಕಿರುನಾಲಿಗೆಯದು ಬಂದರೆ ಜಿಹ್ವೆಗೆ
ಮುತ್ತನು ತಾ ಕೊಡಲು
ಕ ಖ ಗ ಘ  ವ್ಯಂಜನ ಮಾಲೆಯು
ಸೇರ್ವುದು ನಿನ್ನಯ ಮಡಿಲು

ಮುಂದಿನ ಅಕ್ಷರ ಮಾಲೆಯ ಸಾಲು
ಚ,ಛ ಜ ಝ ಎಂದು
ನುಡಿಯದು ಮೂಡಲು ಅಂಗುಳ 
ಮುಟ್ಟಿಸು ನೀ ನಾಲಿಗೆಯನು ತಂದು

ಕ ಖ ಸಾಲಿನ ಮುಂದಕೆ ಸರಿದಿದೆ
ಚ,ಛ ಅಕ್ಷರ ಮಾಲೆ
ಕಲಿಯುತ ನಲಿಯಿರಿ ಮಕ್ಕಳೆ 
ವರ್ಣಗಳೀ ಚಂದದ ಲೀಲೆ

ಚ ಛ ಜ ಝ ಆಯಿತು ಮುಂದಿನ 
ವ್ಯಂಜನ ಯಾವುದೋ ಜಾಣ
ಟ ಠ ಡ ಢ ಎನ್ನುತ ಸೇರಿಸು ಣ 
ಅನುನಾಸಿಕ ವರ್ಣ

ದಂತದ ಹಿಂದಿನ ಭಾಗವು ಜಿಹ್ವೆಗೆ
ತಗುಲಿರೆ ಕೇಳುತಿದೆ
ಟ,ಠ ಡ ಢ ವರ್ಣದ ಬಣ್ಣನೆಯಲ್ಲಿಯೆ
ಸೊಗಸು ಇದೆ

ಮುಂದಿನ ಸಾಲಿಗೆ ಸರಿಯಿರಿ ಎಲ್ಲರು 
ನಾಲಿಗೆ ಆಡಿಸುತ
ಇಕ್ಕಳದಂತಿಹ ಹಲ್ಲಿನ ಮಧ್ಯಕೆ
ನಾಲಿಗೆ ತೂರಿಸುತ

ತ ಥ ದ ಧ ಹೇಳುತ ಕುಣಿಯಿರಿ 
ಎಲ್ಲರು ಕೈಹಿಡಿದು
ಹಾಡಿನ ಜೊತೆಯಲಿ ತಾಳವ 
ಹಾಕುತ ತನನನನ ಎಂದು

ದಂತದ ಮುಂದಿನ ಭಾಗವೆ ಬಾಯಿಯ
ಚಂದದ ಅಧರಗಳು
ಪ ಫ ಬ ಭ ಮ ಗಳೆ ಇಲ್ಲಿನ 
ವ್ಯಂಜನ ಪದರುಗಳು

ಮೇಲ್ದುಟಿ ಕೆಳಗಿನ ತುಟಿಗಿಡುತಿರೆ ತಾ
ಸುಂದರ ಮುತ್ತೊಂದು
ಪ ಫ ಬ ಭ ಮುಗಿಯಲು  ಉಳಿವುದು
ಕೊನೆಗಿಹ ಸಾಲೊಂದು

ಕಟ್ಟಿರಿ ಮಕ್ಕಳೆ ಗುಂಪಿಗೆ ಸೇರದ ಈ 
ವ್ಯಂಜನಗಳ ಕಂತೆ
ವೈವಿಧ್ಯತೆಯಲಿ ಏಕತೆ ತೋರುವ
ಭಾರತ ಜನಪದದಂತೆ

ಯ ರ ಲ ವ ಶ ಷ ಜೊತೆಯಲಿ
ಸ ಹ ಳ ಕ್ಷ ತ್ರ ಜ್ಞ
ದಿಕ್ಷೆಯ ತೊಡುತಲಿ ನಡೆಸುವ 
ನಾವು ಕನ್ನಡ ಉಳಿಸುವ ಯಜ್ಞ

ಡಾ. ಸುದರ್ಶನ ಗುರುರಾಜರಾವ್

ಹಸಿವು (ಕವನ)

ಹಸಿವು (ಕವನ)

ಓ ಮಾತೆ ನೀನೇಕೆ ಬೇಡುತಿಹೆ ಭಿಕ್ಷೆ
ಎಲ್ಲಿ ಹೋಯಿತು ನಿನ್ನ ಮನೆ ಮಂದಿ ರಕ್ಷೆ
ಬಾಡಿ ನಲುಗಿಹುದಲ್ಲ ಈ ನಿನ್ನ ವದನ
ಏನಾಯ್ತು ಆ ನಿನ್ನ ಬಹು ಭವ್ಯ ಸದನ

ಓ ಮಗುವೆ ಮನೆಯಿದ್ದು ಪರದೇಶಿ ನಾನು
ದಿನವು ನಾ ಅರೆ ಹೊಟ್ಟೆ ನೀ ತಿಳಿಯೆಯೇನು?
ನನ್ನ ಕೋರಿಕೆಗಿನಿತು ಕೊಡದೆ ಬೆಲೆಯನ್ನು
ಬೇಯಿಸುತ ಬಡಿಸಿಹರು ಕಲಬೆರಕೆಯನ್ನು

ಹಸಿವೆಯಿಂ ತತ್ತರಿಸಿ ದೇಹ ಸೊರಗಿಹುದು
ಭಿಕ್ಷೆ ಬೇಡಲು ನಡೆಯೆ ಕಾಲು ಸೋತಿಹುದು
ಕಲಬೆರಕೆ-ಅರೆಹೊಟ್ಟೆ ಸೌಖ್ಯವೆನಗಿಲ್ಲ
ನಾ ಪೊರೆದ ಮಕ್ಕಳಿಂ ಏನು ಸುಖವಿಲ್ಲ

ಹೆತ್ತ ಕರುಳಿನ ಹಸಿವ ತೀರಿಸದ ನಾನು
ಎಲ್ಲ ಭೋಗವ ಪಡೆದು ಬದುಕಿದ್ದರೇನು
ನಿನಗೇನು ಬೇಕೆಂದು ಅರುಹು ನೀ ನನಗೆ
ಮೂ ಲೋಕ ನಾ ಸುತ್ತಿ ತರುವೆ ಪದದಡಿಗೆ

ಅಕ್ಷರದ ಕಣಜದಿಂ ಪದಗಳಕ್ಕಿಯನಳೆದು
ಕಲಬೆರಕೆ ಕಲ್ಲುಗಳನದರಿಂದ ಸೆಳೆದು
ವ್ಯಾಕರಣದುದಕದಿಂ ಅಕ್ಕಿಯನು ತೊಳೆದು
ಬೇಯಿಸಲು ಅದು ನನ್ನ ಹಸಿವ ಕಳೆಯುವುದು

ಹೃದಯದಾ ಪಾತ್ರೆಯಲಿ ಅಕ್ಕಿಯನು ಇಟ್ಟು
ನಿನ್ನೆದೆಯ ಕುಲುಮೆಗೆ ಬೆಂಕಿಯನು ಒಟ್ಟು
ನಿನ್ನುಸಿರ ಬಿಸಿಗಾಳಿ ಊದುತಲಿ ನಿರತ
ನೀಡುವೆಯ ನೀ ಎನಗೆ ಭಿಕ್ಷೆ ಅನವರತ

ನಿನ್ನ ಮಣ್ಣಿನ ಋಣವು ನನ್ನ ಮೇಲಿರಲು
ನಿನ್ನ ಅನ್ನವನುಂಡು ನಾನು ಬೆಳೆದಿರಲು
ಭಿಕ್ಷೆಯನು ನೀಡೆಂದು ಬೇಡದಿರು ತಾಯೆ
ನನ್ನ ಸೇವೆಯನುಂಡು ಪ್ರೇಮದಲಿ ಪೊರೆಯೆ

ದೀಕ್ಷೆಯಾ ಕುಲುಮೆಗೆ ಸಂಕಲ್ಪದಿಟ್ಟಿಗೆ
ಉರಿವ ಬೆಂಕಿಗೆ ನನ್ನ ಕೈಗಳೇ ಕಟ್ಟಿಗೆ
ಬೇಯಿಸುವೆ ಅನ್ನವನು ನಾನಿನ್ನ ಹೊಟ್ಟೆಗೆ
ಅನುದಿನವು ಇರು ತಾಯೆ ನೀ ನನ್ನ ಒಟ್ಟಿಗೆ

ಕನ್ನಡದ ಕ್ಷೀರಾನ್ನ ಬಡಿಸಿದರೆ ದಿನವೂ
ಹಿಗ್ಗಿ ಕುಣಿಯುವುದಮ್ಮ ಈ ನನ್ನ ಮನವು
ಅರಳಲಿ ಮತ್ತೊಮ್ಮೆ ನಿನ್ನ ಚೆಲು ಮೊಗವು
ತುಂಬಿರಲಿ ಮನೆಯೆಲ್ಲ ನಿನ್ನ ಕಿರು ನಗುವು

ನಾ ನಿನ್ನ ಮಗನಾಗಿ ಬದುಕಿರುವವರೆಗೂ
ಪರದೇಶಿ ನೀನಲ್ಲ ಬಿಡು ನಿನ್ನ ಕೊರಗು
ದುಡಿದು ನಾ ಮರಳಿಸುವೆ ನಿನಗೆ ವೈಭವವ
ಭುವನೇಶ್ವರಿ ನೀ ಆಳು ಮತ್ತೆ ಈ ಜಗವ.

ಡಾ. ಸುದರ್ಶನ ಗುರುರಾಜರಾವ್

ತೀರ್ಪು ( ನೀಳ್ಗತೆ)

ತೀರ್ಪು ( ನೀಳ್ಗತೆ)

 

ಫೊನ್ ಕರೆ ೧: *******೭೮೬೭: ನೀವು ಕರೆ ಮಾಡಿದ ಸಂಖ್ಯೆ ಚಾಲನೆಯಲ್ಲಿಲ್ಲ-”…..”
ಫೋನ್ ಕರೆ ೨:*******೬೫೪೭: ನೀವು ಕರೆ ಮಾಡಿದ ಚಂದಾದಾರರು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ– .”……..ಥತ್”
ಫ಼ೋನ್ ಕರೆ ೩: *******೩೪೫೨:ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಡೆ ಇದ್ದಾರೆ–.”…..ಥತ್ತೇರಿ, ದರಿದ್ರ”
ಫೋನ್ ಕರೆ ೪: ******೫೪೭೮: ಚಂದಾದಾರರು ಬೇರೊಂದು ಸಂಭಾಷಣೆಯಲ್ಲಿ ನಿರತಾರಗಿದ್ದಾರೆ. ದಯವಿಟ್ಟು- “ಥತ್, ಇವನಜ್ಜಿ”
ಫೋನ್ ಕರೆ ೫:*********೮೭೩೪: ಟ್ರಿಣ್..ಟ್ರಿಣ್… ಸಂಬಂಧ ಕಡಿಯಿತು— ”ಇವನ್ಮನೆ ಕಾಯ್ವಾಗ”
ಫೋನ್ ಕರೆ ೬:*******೭೭೮೮ : ಟ್ರಿಣ್–ಟ್ರಿಣ್.. ಹಲೋ .. ಅಬ್ಬ.. ಸಧ್ಯ.. ಈಗಾದರೂ ಸಿಕ್ಕಿತಲ್ಲ. ಸಮಾಧಾನದ ನಿಟ್ಟುಸಿರು ಬಿಟ್ಟು ಯೋಗೀಶ ಆ ಕಡೆಯಿಂದ ಬರುವ ಪ್ರತಿಕ್ರಿಯೆಗಾಗಿ ಕಾದ.
” ಹಲೋ, ಮಾದಕ ಆದರೆ ಇಂಪಾದ ಕಂಠವೊಂದು ಆ ಕಡೆಯಿಂದ ಉಲಿಯಿತು.
ಹಲೋ.. ನಾನು ಯೋಗೀಶ ಅಂತ… ಅ…
ಹೇಳಿ
ನಿಮ್ಮ ಹೆಸರು ಸುಶೀಲಾ ರಾಣಿ ತಾನೆ? ..ಅ…
ಹೌದು ಹೇಳಿ
ಈ ದಿನ ರಾತ್ರಿ ನೀವು ಫ್ರೀಯಾಗಿದ್ದೀರ?…ಅ…
ಹೌದು ಎಂದರೆ ಹೌದು, ಇಲ್ಲ ಎಂದರೆ ಇಲ್ಲ
ಹಾಗೆಂದರೆ? ….
ನೋಡೀ ಸಾರ್, ನೀವ್ಯಾರೋ ನನಗ್ಗೊತ್ತಿಲ್ಲ. ನನ್ನ ಕೆಲಸ ನಿಮಗೆ ಗೊತ್ತು. ನಿಮ್ಮ ಚೌಕಾಸಿಯ ಮೇಲೆ ನನ್ನ ನಿರ್ಧಾರ
ನೋಡಿ, ನನಗೆ ಈ ರಾತ್ರಿ ನಿಮ್ಮ ಸಂಗ ಬೇಕೇ ಬೇಕು. ನಿಮ್ಮ ಚಾರ್ಜ್ ಎಷ್ಟು ತಿಳಿಸಿ.
ಸಾವಿರ ರೂಪಾಯಿ, ಆಗಬಹುದೇ. ನಾನು ಯಾವಾಗ ಬೇಕಾದರೂ ಹೊರಟು ಹೋಗುವುದಕ್ಕೆ ನೀವು ಒಪ್ಪಿಕೊಳ್ಳಬೇಕು.
ಸಾವಿರ ರೂಪಾಯಿ ಸರಿ. ಆದರೆ ಇನ್ನೊಂದು ಶರತ್ತು ಯಾಕೆ?
ನನಗೆ ಬೇಕೆನಿಸಿದರೆ ಇರಬಲ್ಲೆ. ಇಲ್ಲವಾದರೆ ನಿಮ್ಮ ಕೆಲಸದ ನಂತರ ಹೊರಟು ಹೋಗುವ ಸ್ವಾತಂತ್ರ್ಯ ನನಗೆ ಬೇಕು.
ಹಾಗಾದರೆ ಸರಿ
ಮುಂಗಡ ಮುನ್ನೂರೈವತ್ತು ಕೊಡಬೇಕು
ಈಗಲೇ?!! ಏಕೆ
ನೋಡಿ ನಿಮ್ಮನ್ನು ನಂಬಿ ನನ್ನ ಈಗಿರುವ ಅನ್ನಕ್ಕೆ ಕಲ್ಲು ಹಾಕಿಕೊಳ್ಳಲಾರೆ. ನಿಮ್ಮ ಬಳಿಇರುವ ಕಂಪ್ಯೂಟರ್ನಿಂದ ದುಡ್ಡು ವರ್ಗಾಯಿಸಿ ತಿಳಿಸಿ ನಂತರ ಉಳಿದ ವಿಷಯ.
ನನ್ನ ಬಳಿ ಏನಿದೆ, ಏನಿಲ್ಲವೆಂದು ನಿಮಗೆ ಹೇಗೆ ತಿಳಿಯಿತು
ಸ್ವಾಮಿ, ನಾನು ನನ್ನ ಕಸುಬಿನಲ್ಲಿ ಪಳಗಿದವಳು. ಅದಿರಲಿ ಮೊದಲು ನನಗೆ ಹಣ ವರ್ಗಾವಣೆ ಮಾಡಿ.
ನಿಮ್ಮನ್ನು ನಾನು ಹೇಗೆ ನಂಬಲಿ
ಫೋನು ಮಾಡಿದ್ದು ನೀವು. ನನ್ನ ಅವಶ್ಯಕತೆ ಇರುವುದು ನಿಮಗೆ.ಬೇಕಾದರೆ ಮಾಡಿ. ನನಗೀಗಾಗಲೇ ಒಂದು ಬುಕಿಂಗ್ ಇದೆ.
ನೀವು….. ಹೇಗಿದ್ದೀರೋ….???
ಹಾಗೋ.., ನಿಮ್ಮ ನಂಬರಿಗೆ ನನ್ನ ಫೋಟೊ ಕಳಿಸುವೆ. ನೋಡಿ, ನಂತರ ವರ್ಗಾಯಿಸಿ.. ನಿಮಗೆ ಬೇಕಾದರೆ
ಸರಿ..

ಆಧುನಿಕ ವಿದ್ಯುನ್ಮಾನ ಯುಗದ ಅನುಕೂಲತೆಗಳ ಪ್ರಮುಖ ಪ್ರತಿನಿಧಿಯಾದ ಈ ಮೊಬೈಲ್ ಫೋನ್ ಎಂಬ ಮಾಯಿಲ್ ಮರಾಠಿ ಮಂತ್ರವಾದಿಯ ಮಾಯಾಗನ್ನಡಿಯಲ್ಲಿ ಆ ಸಿಹಿಕಂಠದ ಒಡತಿಯ ಭಾವಚಿತ್ರವೊಂದು ಠಣ್ಣನೆ ಪ್ರತ್ಯಕ್ಷವಾಯ್ತು. ಪರವಾಗಿಲ್ಲ ಎಂದುಕೊಂಡ ಯೋಗೀಶ ಬೇಗನೆ ಹಣ ಸಂದಾಯ ಮಾಡಿ ಅವಳಿಗೆ ಕರೆ ಮಾಡಿ ತಿಳಿಸಿ, ಭೇಟಿಯಾಗುವ ಜಾಗವೆಲ್ಲಿಯೆಂದು ಖಾತ್ರಿ ಪಡಿಸಿಕೊಂಡು ತನ್ನ ಕಾರನ್ನೇರಿ ರೊಂಯ್ಯನೆ ಹೊರಟ.
ಸರಿಯಾಗಿ ಏಳು ಮುಕ್ಖಾಲು ಗಂಟೆಗೆ ಹೇಳಿದ ಜಾಗಕ್ಕೆ ಅವನು ಬರುವ ಮೊದಲೇ ಆಕೆ ಬಂದು ನಿಂತಿದ್ದಳು. ಯಾವುದೋ ಸಂಚಿಕೆಯನ್ನು ಮುಖದ ಮುಂದೆ ಹಿಡಿದಿದ್ದಳಾಗಿ ಅದು ಮರೆಯಾಗಿದ್ದರೂ, ಉಟ್ಟ ಬಟ್ಟೆಯ ಮೇಲೆ ಗುರುತು ಹಿಡಿದ ಯೋಗೀಶ ಕಾರು ನಿಲ್ಲಿಸಿ ಅವಳೆಡೆಗೆ ನಡೆದು ಬಂದ.
ಹಲೋ.. ನಾನು ಯೋಗೀಶ .. ಪರಿಚಯಿಸಿಕೊಂಡ
ಹಲೋ ,, ಮುಖದ ಮುಂದಿನ ಪುಸ್ತಕ ತೆಗೆದು ಆಕೆಯೂ ಪ್ರತಿಕ್ರಿಸಿದಳು
ತಾನು ಫೋಟೋದಲ್ಲಿ ಕಂಡ ಮುಖಕ್ಕೂ , ಇಲ್ಲಿದ್ದುದಕ್ಕೂ ವ್ಯತ್ಯಾಸವಿತ್ತು. ಕಣ್ಣು , ಮೂಗು, ಬಾಯಿ, ಹಣೆ, ಎಲ್ಲ ಅದೇ ರೀತಿ ಇದ್ದರೂ, ಅದಷ್ಟೂ ಒಟ್ಟಿಗೆ ಸೇರಿಸಿನೋಡಿದಾಗ ಅಲ್ಲಿಯಷ್ಟು ಸುಂದರವಾಗಿರಲಿಲ್ಲ. ಕಲ್ಪನಾಕಾವ್ಯವನ್ನು ಕಟ್ಟುತ್ತ ಬಂದಿದ್ದ ಯೋಗೀಶನ ಉತ್ಸಾಹ ಜರ್ರನೆ ಇಳಿಯಿತು.
ನೀವು ನಾನು ಮಾತನಾಡಿದ್ದ ಸುಶೀಲಾರಾಣಿ ಅಲ್ಲ. ನನಗೆ ನೀವು ಮೋಸ ಮಾಡಿದ್ದೀರಾ.. ಎಂದ
ಆಕೆ ಸರಕ್ಕನೆ ತಿರುಗಿ.. ನೋಡೀ ಸಾರ್, ನಾನೇ ಸುಶೀಲಾರಾಣಿ.ಧ್ವನಿ, ಹಾವ ಭಾವ ಗೊತ್ತಾಗಲಿಲ್ಲವೇ. ಸುಮ್ಮನೆ ಗಲಾಟೆ ಮಾಡಬೇಡಿ. ನಡೆಯಿರಿ, ನನಗೂ ಬೇರೆ ಕೆಲಸ ಇವೆ. ಜೋರು ಮಾಡಿದಳು
ಇಲ್ಲಿ ನೋಡ್ರೀ, ನೀವೇ ಕಳಿಸಿದ ಫೋಟೊ.ಇಲ್ಲಿಯಷ್ಟು ಸುಂದರವಾಗಿಲ್ಲ.ಆದ್ದರಿಂದ ನೀವು ನನಗೆ ಬೇಡ; ನನ್ನ ಹಣ ನನಗೆ ವಾಪಸ್ ಕೊಡಿ. ಗಲಾಟೆ ಮಾಡಿದ
ಸ್ವಾಮೀ.. , ನಿಮ್ಮಂಥವರನ್ನು ನಾವು ದಿನಾ ನೋಡುತ್ತಲೇ ಇರುತ್ತೇವೆ. ಬಹಳ ಜನ ಕೆಲಸ ಮುಗಿದ ಮೇಲೆ ತಕರಾರು ತೆಗೆಯುತ್ತಾರೆ, ನೀವು ನೋಡಿದರೆ ಮುಂಚೆಯೇ ಮಾಡುತ್ತಿದ್ದೀರ. ಉಳಿದ ಹಣ ಕೊಡಬೇಡಿ. ನೀವು ಬೇಕೆನಿಸಿದರೆ ಬರಬಹುದು. ಇಲ್ಲವಾದರೆ ನಿಮ್ಮ ದಾರಿ ನಿಮಗೆ,ನನ್ನ ದಾರಿ ನನಗೆ. ಸೇರಿಗೆ ಸವ್ವಾ ಸೇರು ಮಾತು ಹುರಿದಳು.
ಇದೇನ್ರೀ, ಧರ್ಮಕ್ಕೆ ಕೊಟ್ಟಹಾಗೆ ಮಾತಾಡ್ತೀರಲ್ಲ. ನಿಮ್ಮನ್ನು ಮುಟ್ಟಿಕೂಡಾ ಇಲ್ಲ.ಮುಂಗಡ ಹಣ ಕೊಡ್ರೀ.ಇಲ್ಲವಾದರೆ ಪೋಲಿಸ್ ಕಂಪ್ಲೇಂಟ್ ಕೊಡ್ತೇನೆ
ಪೋಲೀಸರು ನಾವು ಕಂಡಿರದ ಮೇಯಿಸದ ಪೋಲೀ ದನಗಳೇನಲ್ಲ. ಹೇಳ್ಕೋ ಹೋಗ್ರೀ…
ಕೋರ್ಟಿಗೆ ಹೋಗ್ತೇನೆ
ಅವರಪ್ಪನ ಮನೆಗೂ ಹೋಗ್ರೀ ಬೇಕಾದ್ರೆ. ಸರ ಸರನೆ ಹೊರಟುಬಿಟ್ಟಳು.
ಬೇಡ ನೋಡ್ರೀ,ನನ್ನ ಹಣ ಕೊಡ್ರೀ,ನಾನು ಖಡಕ್ಕಾದ ಮನುಷ್ಯ… ನ್ಯಾಯ ನ್ಯಾಯವೇ…. ಬನ್ರೀ ,,.ರೀ……
ಅವಳು ಹೊರಟೇ ಹೋದಳು
ನಖ ಶಿಖಾಂತ ಕುದಿಯುತ್ತ ಯೋಗೀಶ ತನ್ನ ಫ್ಲ್ಯಾಟಿಗೆ ಮರಳಿದ.
******* *********
ನಗರದ ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯೋಗೀಶ ಸ್ವಭಾವತಃ ಒಳ್ಳೆಯ ಯುವಕನೇ. ಸಾಹಿತ್ಯ ಸಂಗೀತ ಕಲೆ ಧರ್ಮಗಳಲ್ಲಿ ಬಹಳೆ ಆಸಕ್ತಿಯುಳ್ಳವನಾಗಿದ್ದ್ದು ಸಂಸ್ಕೃತದಲ್ಲೂ ಸಾಕಷ್ಟು ಪಾಂಡಿತ್ಯ ಪಡೆದಿದ್ದ. ತಂದೆ ತಾಯಿ ಇಲ್ಲದೆ ಅಜ್ಜಿಯ ಅಶ್ರಯದಲ್ಲಿ ಬೆಳೆದಿದ್ದ ಅವನು ಓದಿಗೆಂದು ಮಠದವರು ನಡೆಸುವ ಶಾಲೆ ಸೇರಿ ಅಲ್ಲಿಯೇ ತನ್ನ ಸ್ವಪ್ರಯತ್ನದಿಂದ ಓದಿ ಮುಂದೆ ಬಂದಿದ್ದ. ಧಾರ್ಮಿಕ ಪರಿಸರದಲ್ಲಿ ಬೆಳೆದ ಅವನಿಗೆ ಸಂಸ್ಕೃತ ಕಥೆ ಕಾವ್ಯಗಳನ್ನು ಓದುವ ಗೀಳು ಇತ್ತು.ನ್ಯಾಯ-ನಿಷ್ಠೆಯಲ್ಲಿ ಅಚಲವಾದ ನಿಲುವು. ಕೆಲವು ಸಲ ಸಣ್ಣ ಸಣ್ಣ ವಿಷಯಗಳಲ್ಲೂ ನ್ಯಾಯಾನ್ಯಾಯದ ವಿಶ್ಲೇಷಣೆ ಮಾಡುತ್ತಾ ವಾದಿಸುವುದು, ಯಾರಿಗೇ,ಯಾವುದೇ ಸಂದರ್ಭದಲ್ಲಿ ಅನ್ಯಾಯ ಆಗಿದೆಯೆಂದು ತನಗನಿಸಿದರೆ ಆ ವಿಚಾರ ತನಗೆ ನೇರ ಸಂಬಂಧಿಸಿಲ್ಲದಿದ್ದರೂ ಅಲ್ಲಿ ಜಗಳ ಆಡುವುದು ಮಾಡುತ್ತಿದ್ದ ಹಾಗೂ ತೊಂದರೆಗೂ ಸಿಕ್ಕಿಹಾಕಿಕೋಳ್ಳುತ್ತಿದ್ದ. ಮದುವೆ ಇನ್ನೂ ಆಗಿರಲಿಲ್ಲ. ಅವನದೆನ್ನುವವರು ಈಗ ಯಾರೂ ಇರಲೂ ಇಲ್ಲ. ಹಾಗೆಂದು ಈ ಕಾಲದ ಫ್ಯಾಷನ್ ಆದ ಲಿವಿಂಗ್ ಇನ್ ಸಂಬಂಧ ಮುಂತಾದುವುಗಳಿಗೂ ಪಕ್ಕಾಗಿರಲಿಲ್ಲ. ಹೆಚ್ಚು ಜನ ಗೆಳಯರು ಇರದ ಕಾರಣ ತನ್ನ ಕೆಲಸ ಮುಗಿದರೆ ಸ್ವಲ್ಪ ಅಡ್ಡಾಡುವುದು, ಅಡಿಗೆ, ಓದು, ಅವನ ದಿನಚರಿಗಳಾಗಿದ್ದವು. ಹೀಗಿರುವಲ್ಲಿ ಒಮ್ಮೆ ಕಾಳಿದಾಸನ ಕುಮಾರಸಂಭವ ಓದಲು ಮೊದಲು ಮಾಡಿದ. ಶುಕ್ರವಾರ ರಾತ್ರಿಯಿಂದ ಸತತ ಓದುತ್ತಿದ್ದವನು ಅದರಲ್ಲಿ ಬರುವ ಶಿವ ಪಾರ್ವತಿಯರ ಪ್ರಣಯವಿಲಾಸದ ವರ್ಣನೆ ಓದುತ್ತಿದ್ದ. ಆ ವಿಲಾಸದ ಸೂಕ್ಷಾತಿಸೂಕ್ಷ್ಮ ಬಣ್ಣನೆ ಓದುತ್ತ-ಓದುತ್ತ ಕಲ್ಪನಾಲೋಕಕ್ಕೆ ಜಾರಿದ ಅವನಿಗೆ ತಕ್ಷಣ ಹೆಣ್ಣಿನ ಸಂಗ ಬೇಕೆಂಬ ಅದಮ್ಯ ಬಯಕೆ ಉಂಟಾಯಿತು. ಮನಸ್ಸಿನಿಂದ ದೂರ ತಳ್ಳಲು ಪ್ರಯತ್ನಿಸಿದಷ್ಟೂ ಮತ್ತೆ ಮತ್ತೆ ನುಗ್ಗಿ ಬರುತ್ತಿತ್ತು. ಹೀಗಾಗಿ ಪ್ರಕೃತಿದತ್ತ ವಾಂಛೆ ಅವನನ್ನು ವೇಶ್ಯೆಯ ಸಂಪರ್ಕಕ್ಕೆ ಬರಲು ಪ್ರೇರೇಪಿಸಿತ್ತು.
ತರಾತುರಿಯಿಂದ ಬಟ್ಟೆ ಹಾಕಿಕೊಂಡು, ಸುಗಂಧ ಪೂಸಿಕೊಂಡು ಕಾರು ತೆಗೆದುಕೊಂಡು ಹೊರತಿದ್ದ. ಅಲ್ಲಿ ಹೋಗಿ ಅವಳನ್ನು ಕಂಡು ಭ್ರಮನಿರಸನಗೊಂಡು ಕುದಿಯುತ್ತಾ ಹಿಂದಿರುಗಿದ್ದ.
***** ******
ಹೆಲ್ಲೊ… ಇದು ಪೋಲೀಸ್ ಸ್ಟೇಷನ್ನಾ…?
ಹೌದು.. ಹೇಳಿ ಏನಾಗ್ಬೇಕು? ಮಹಿಳಾ ಪೇದೆ ಅಲಮೇಲು ಮಾತನಾಡಿದಳು
ಕಂಪ್ಲೇಂಟ್ ಕೊಡಬೇಕು
ಏನು ವಿಚಾರ
ಯೋಗೀಶ ತನ್ನ ಅಹವಾಲು ಹೇಳಿದ; ಅಲಮೇಲು ತಬ್ಬಿಬ್ಬಾದಳು. ಆದರೂ ಸುಧಾರಿಸಿಕೊಂಡು ಸ್ವಲ್ಪ ಜೋರು ದನಿ ಮಾಡಿ ” ಇದೂ ಒಂದು ಕಂಪ್ಲೇಂಟ್ ಕೊಡೋ ವಿಚಾರ ಏನ್ರೀ… ವೇಶ್ಯಾವಾಟಿಕೆಗೆ ಕೈ ಹಾಕಿದ್ದಲ್ಲದೆ ಅವಳ ಮೇಲೆ ದೂರು ಕೊಡುತ್ತೀರಲ್ಲ?! ನಿಮ್ಮನ್ನೇ ಅರೆಸ್ಟ್ ಮಾಡಬಹುದು
ನೋಡಿ ಮೇಡಂ, ಇವಳು ಅಧಿಕೃತವಾಗಿ ನೋಂದಾಯಿಸಿಕೊಂಡಿರುವ ಕಸುಬಿನವಳು. ಇದರಲ್ಲಿ ಕಾನೂನಿನ ಮಿತಿ ನಾನು ಮೀರಿಲ್ಲ.ಅಷ್ಟಕ್ಕೂ ನನ್ನನ್ನು ಅರೆಸ್ಟ್ ಮಾಡಬೇಕೆಂದರೆ ಮಾಡಿ. ಆದರೆ ಇದು ನ್ಯಾಯ ಅನ್ಯಾಯದ ವಿಷಯ. ನನಗೆ ಅನ್ಯಾಯ ಆಗಿರುವುದರಿಂದ ಈ ಕಂಪ್ಲೇಂಟ್. ಅದಕ್ಕೇ ದೂರು ದಾಖ್ಲು ಮಾಡಬೇಕಾಗಿದೆ.ನನ್ನ ಹಣ ನನಗೆ ವಾಪಸ್ ಬೇಕು.
ಇವನು ಯಾರೋ ಬಡಪೆಟ್ಟಿಗೆ ಬಗ್ಗುವ ಅಸಾಮಿಯಲ್ಲ ಎಂದೆಣಿಸಿದ ಅವಳು ” ರೀ ಬರೀ ಮುನ್ನೂರು ರುಪಾಯಿಗೆ ರಾದ್ಧಾಂತ ಮಾಡ್ತೀರೇನ್ರೀ,, ಹೆಣ್ಣೆಂಗುಸು ಹೋಗ್ಲೀ ಬಿಡ್ರೀ.ಈ ಕೆಲಸಕ್ಕೆ ಬಾರದ ಕಂಪ್ಲೇಂಟ್ನಿಂದ ಎಲ್ಲರ ಸಮಯ ಹಾಳು.ಊಟ ಮಾಡಿ ಮಲಿಕ್ಕಳ್ರೀ”
”ಮುನ್ನೂರಲ್ಲ ಮೇಡಂ. ಮುನ್ನೂರೈವತ್ತು!. ಅವಳು ಮೋಸ ಮಾಡಿಲ್ದಿದ್ರೆ ಹಣಕ್ಕೆ ಕೇರ್ ಮಾಡ್ತಿರ್ಲಿಲ್ಲ. ಇದು ಮೋಸದ ವ್ಯವಹಾರ.ನನ್ನ ಹಾಗೆ ಇನ್ನೂ ಬೇರೆಯವ್ರು ಮೋಸ ಹೋಗಬಹುದು. ಅದಕ್ಕೇ ಕಂಪ್ಲೇಂಟ್ ಮಾಡ್ತಿರೋದು.
ಇವನೆಲ್ಲಿ ಗಂಟು ಬಿದ್ದ್ನಪ್ಪಾ ಮಹಾಶಯ.ಶನಿವಾರ ರಾತ್ರಿ ಸ್ವಲ್ಪ ಆರಾಮಾಗಿರೋಣ ಅಂದ್ರೆ … ಎಂದು ಗೊಣಗಿಕೊಳ್ಳುತ್ತಾ,, ತಾನಾದರೂ ಯಾಕಾಗಿ ಈ ಫೋನ್ ಎತ್ತಿಕೊಂಡೆನೋ ಎಂದು ಸಿಟ್ಟು ಬರದಿರಲಿಲ್ಲ ಅವಳಿಗೆ. ತನ್ನ ಎದುರಲ್ಲೇ ಬೀಡಿ ಸೇದುತ್ತ ಕುಳಿತಿದ್ದ ಕಾಳಯ್ಯನ ಮೇಲೆ ಅಸಾಧ್ಯ ಸಿಟ್ಟು ಬಂತು ಅವಳಿಗೆ.ಭಡವ ತಾನು ಫೋನೆತ್ತದೇ ಈಗ ವ್ಯಂಗ್ಯ ನಗು ನಗುತ್ತಿದ್ದಾನೆ.ಅದಕ್ಕೂ ಹೆಚ್ಚಾಗಿ ಈ ರೀತಿಯ ದೂರು ಅವಳಿಗೂ ಹೊಸದು. ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ಕೇಳೋಣವೆಂದರೆ ಮುಜುಗರ. ಈ ದೂರು ದಾಖಲಿಸಿದರೂ, ದಾಖಲಿಸದಿದ್ದರೂ ತನಗೆ ಮಂಗಳಾರತಿ ಗ್ಯಾರಂಟಿ ಎಂದು ಅವಳಿಗೆ ಅನಿಸದಿರಲಿಲ್ಲ. ತನಗಿಂತ ಕೇವಲ ಎರಡು ವರ್ಷ ಸೀನಿಯರ್ ಆಗಿದ್ದರೂ ದೊಣ್ಣೆನಾಯಕನಂತೆ ಆಡುವ ಕಾಳಯ್ಯನ ಮೇಲೆ ಅವಳ ಎಲ್ಲಾ ಕೋಪ ತಿರುಗತೊಡಗಿತು. ಸರಿ, ಏನಾದರಾಗಲಿ. ದೂರು ದಾಖಲಿಸಿ ನೋಡುವ, ನಾಳೆ ಕಳೆಯುವುದರಲ್ಲಿ ಅವನು ತಣ್ಣಗಾಗಿ ಈ ವಿಷಯ ಮರೆತುಬಿಡಬಹುದೆಂದು ಅವನ ವಿವರಗಳನ್ನು ಬರೆದುಕೊಳ್ಳಲು ಪುಸ್ತಕ ತರಲೆಂದು ಧುಮು-ಧುಮು ಗುಡುತ್ತಾ, ಕಾಳಯ್ಯ್ಯನನ್ನು ಕೆಕ್ಕರಿಸಿ ನೋಡುತ್ತ ಹೋದವಳು ಕುರ್ಚಿಯಲ್ಲಿ ಕುಕ್ಕರಿಸಿ, ಬರೆದುಕೊಂಡು ಯೋಗೀಶನಿಗೆ ರೆಫ಼ೆರೆನ್ಸ್ ನಂಬರನ್ನು ಕೊಟ್ಟು ಫೋನು ಕುಕ್ಕಿದಳು. ಕಾಳಯ್ಯ ಮೀಸೆಯಡಿಯಲ್ಲಿ ಕುತ್ಸಿತ ನಗೆ ಬೀರುತ್ತಲೇ ಇದ್ದ. ತನ್ನ ಮೀಸೆಯಂಚಿನಲ್ಲಿ.
**** ***
ಮರುದಿನ ಇನ್ಸ್ ಪೆಕ್ಟರ್ ಸಿದ್ಧಯ್ಯ ಕಛೇರಿಗೆ ಬಂದು ಕಣ್ಣಾಡಿಸಿದಾಗ ಈ ದೂರನ್ನು ಕಂಡು ಅವಾಕ್ಕಾದರು. ಈ ಪ್ರಪಂಚ ಹೀಗೂ ಬದಲಾಯ್ತೇ.. ಎಂದು ಅವರಿಗೆ ಸೋಜಿಗವಾಗದೆ ಇರಲಿಲ್ಲ. ಇದು ಮೋಸದ ಕಾಲಮಿನಡಿ ಬರುತ್ತದೆಯೋ ಅಥವಾ ಗ್ರಾಹಕ ರಕ್ಷಣ ಕಾಯಿದೆಯ ಕಾಲಮಿನಡಿ ಬರುತ್ತದೆಯೋ ಎಂಬ ಗೊಂದಲದಲ್ಲಿ ಬಿದ್ದರು. ತಕ್ಷಣ ಗ್ರಾಹಕ ರಕ್ಷಣಾ ನ್ಯಾಯಾಲಯದ ಮುಖ್ಯಸ್ಥ ಚಿದಂಬರ ಮೂರ್ತಿಗೆ ಫೋನಾಯಿಸಿದರು. ಅ ಕಡೆಯಿಂದ ಚಿದಂಬರ ಮೂರ್ತಿ ಆಗ ತಾನೇ ಈ ದೂರು ದಾಖಲು ಮಾಡಿಕೊಂಡು ಎಲ್ಲಿಂದ ಇದರ ವಿಶ್ಲೇಷಣೆ ಶುರು ಮಾಡಬೇಕೆಂದು ಯೋಚಿಸುತ್ತಿದ್ದರು. ಸಿದ್ಧಯ್ಯನ ಫೋನ್ ಬಂದಿದ್ದು ಅವರಿಗೂ ಸಂತೋಷತಂದಿತು. ಬಹಳ ದಿನಗಳಿಂದ ಭೇಟಿಯಾಗದೇ ಇದ್ದುದರಿಂದಲೂ, ಈ ವಿಚಾರ ತಾವು ನಿಭಾಯಿಸುವ ಇತರ ದೂರುಗಳಿಗಿಂತ ಭಿನ್ನವಾಗಿದ್ದುದರಿಂದಲೂ, ಕಾನೂನಿನಲ್ಲಿ ಈ ವಿಚಾರವಾಗಿ ಇರಬಹುದಾದ ಮಾರ್ಗದರ್ಶನ ಅರಿಯುವ ಕುತೂಹಲದಿಂದಲೂ ಭೇಟಿಯಾಗಿ ಮಾತನಾಡಲು ನಿರ್ಧರಿಸಿದರು. ಸಿದ್ಧಯ್ಯ ತಮ್ಮ ಜೀಪಿನಲ್ಲಿಯೇ ಚಿದಂಬರಮೂರ್ತಿಯ ಕಾರ್ಯಾಲಯಕ್ಕೆ ಧಾವಿಸಿದರು.
ಉಭಯ ಕುಶಲೋಪರಿ- ಕಾಫಿಗಳಾದನಂತರ ಅವರ ಸಂಭಾಷಣೆ ಯೋಗೀಶನ ವಿಚಾರದಲ್ಲಿ ಹೊರಳಿತು. ಈ ಬಗ್ಗೆ ಕಾನೂನಿನಲ್ಲಿ ನಿಖರವಾದ ಸೂಚನೆ ಮಾರ್ಗದರ್ಶನಗಳು ಇರಲಿಲ್ಲ. ಟಿ.ವಿ, ಟೇಪ್ ರೆಕಾರ್ಡೆರ್, ಚಪ್ಪಲಿ, ಫೋನು, ಬಟ್ಟೆ, ಹೀಗೆ ಗ್ರಾಹಕರು ಬಳಸುವ ನಿರ್ಜೀವ ವಸ್ತುಗಳ ಗುಣಮಟ್ಟ,ಕಂಪನಿಗಳ ಗ್ರಾಹಕ ಸೇವೆ ಕುರಿತಾದ ಭಿನ್ನಭಿಪ್ರಾಯಗಳು, ದುಃಖ, ದುಮ್ಮಾನಗಳು ದಾಖಲಾಗಿ ವಿಚಾರಣೆಗೊಳಪಡುತ್ತಿದ್ದವೇ ವಿನಃ ಒಂದು ಜೀವಿಯ ಅದರಲ್ಲೂ ಒಬ್ಬ ವೃತ್ತಿಪರ ವೇಶ್ಯೆಯ ಅಂದ-ಚೆಂದಗಳನ್ನು ಕುರಿತಾದ ಹಾಗೂ ವ್ಯಕ್ತಿನಿಷ್ಠ (ಸಬ್ಜೆಕ್ಟಿವ್) ಅಭಿಪ್ರಾಯಗಳಿಂದ ಬಣ್ಣ ಪಡೆದಿರಬಹುದಾದ ದೂರು ಅವರ ಅನುಭವದಲ್ಲಿ ಇದೇ ಮೊದಲು. ಅಂದ ಚಂದಗಳು ನೋಡುಗರ ಮನಸ್ಥಿತಿ, ಅಭಿರುಚಿ ಮೊದಲಾದ ಅಳೆಯಲಾಗದ ಅಂಶಗಳನ್ನು ಒಳಗೊಂಡಿರುವುದರಿಂದ ಈ ವಿಚಾರದಲ್ಲಿ ಹೇಗೆ ಮುಂದುವರಿಯಬೇಕೆಂಬ ಗೊಂದಲ ಅವರಿಬ್ಬರಿಗೂ. ಯೋಗೀಶನನ್ನು ಕರೆಸಿ ಬೆದರಿಸಿ ಬಲವಂತವಾಗಿ ದುರನ್ನು ಬರಾಖಾಸ್ತು ಗೊಳಿಸುವ ಯೋಚನೆ ಅವರಿಗೆ ಬಂತಾದರೂ ಸಿದ್ಧಯ್ಯ ಆ ರೀತಿಯ ಅಪ್ರಮಾಣಿಕ , ಅಸಡ್ದೆಯಯ ವ್ಯಕ್ತಿ ಅಲ್ಲ. ಚಿದಂಬರ ಮೂರ್ತಿ ಕೂಡಾ ಈ ದೂರು ಪಡೆದುಕೊಳ್ಳಬಹುದಾದ ಹೊಸ ರೂಪಾಂತರಗಳನ್ನೂ,ಭವಿಷ್ಯದಲ್ಲಿ ರೂಪಿಸಬಹುದಾದ ಸಮಾಜಿಕ ಅಯಾಮಗಳ ಸಾಧ್ಯತೆಗಳನ್ನೂ ಕುರಿತು ಕುತೂಹಲಗೊಂಡಿದ್ದರು. ತಾವು ಇದನ್ನು ಬಲವಂತವಾಗಿ ಬರ್ಖಾಸ್ತು ಗೊಳಿಸುವ ಪ್ರಯತ್ನ ಮಾಡಿದರೆ ಯೋಗೀಶ ಹುಟ್ಟಿಸಬಹುದಾದ ಅವಾಂತರಗಳ ಸಾಧ್ಯತೆಯನ್ನು ಅವರು ಪರಿಗಣಿಸದೆ ಇರಲಿಲ್ಲ.
ಸಿದ್ಧಯ್ಯ ಚಿದಂಬರ ಮೂರ್ತಿಯನ್ನು ಕುರಿತು ಹೇಳಿದರು ” ಚಿದಂಬರ, ಈ ಕೇಸು ನೀನೇ ನಿಭಾಯಿಸು;ನಿನಗೆ ಬೇಕಾದ ಸಹಕಾರ, ಸಹಾಯ ನಾನು ಕೊಡುತ್ತೇನೆ”
ಚಿದಂಬರ ಮೂರ್ತಿ ತಲೆಯಾಡಿಸಿದರು; ಸಿದ್ಧಯ್ಯ ಅಲ್ಲಿಂದ ಹೊರಬಿದ್ದರು.
****** ******** *********
ಕೋರ್ಟು ಕಾರ್ಯಾಚರಣೆಗೆ ತಯಾರಾಗಿತ್ತು. ಯೋಗೀಶ ಬಂದಿದ್ದ. ಅವನ ಜೊತೆಗೆ ಯಾರಿರಲಿಲ್ಲ- ಅವನ ಮೊಬೈಲ್ ಫೋನ್ ಹೊರತು. ತಾನು ಹಣ ವರ್ಗಾಯಿಸಿದ್ದ ವಿವರಗಳ ಕಾಗದದ ಪ್ರತಿಗಳನ್ನು ತಂದಿದ್ದ.
ಸುಶೀಲಾರಾಣಿ ಕೂಡಾ ಬಂದಿದ್ದಳು.
ಸಿದ್ಧ್ಯಯ್ಯ, ಮಹಿಳಾ ಪೇದೆ ಅಲಮೇಲು ತಮ್ಮ ಕಂಪ್ಲೇಂಟ್ ಪುಸ್ತಕದ ಸಮೇತ ಬಂದಿದ್ದರು.
ಚಿದಂಬರ ಮೂರ್ತಿ ಬಂದು ತಮ್ಮ ಪೀಠದಲ್ಲಿ ಆಸೀನರಾದರು. ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಿ ಕುಳಿತುಕೊಂಡರು.
ಯೋಗೀಶ ತನ್ನ ಪ್ರವರವನ್ನು ಹೇಳಿಕೊಂಡು ಈ ಪ್ರಹಸನದ ವಿವರಗಳನ್ನು ಕೊಟ್ಟು ತನಗಾದ ಅನ್ಯಾಯವನ್ನು ಸರಿಪಡಿಸುವಂತೆ ವಿನಂತಿಸಿಕೊಂಡ. ಭಾವಚಿತ್ರದಲ್ಲಿ ಕಂಡ ಸುಶೀಲಾರಾಣಿ ಜೀವಚಿತ್ರದಲ್ಲಿ ಬೇರೆಯೇ ಆಗಿರುವ ಕಾರಣ ತನಗೆ ಬರೀ ಹಣದ ಮೋಸವಷ್ಟೇ ಅಲ್ಲ, ಭಾವ ಪ್ರಾಪ್ತಿ, ಆ ಉತ್ಕಟ ಮನೋಸ್ಥಿತಿ, ಭ್ರಮನಿರಸನ ಎಲ್ಲ ನಷ್ಟವೇ ಆಗಿರುವುದರಿಂದ ಒಟ್ಟು ಅನ್ಯಾಯದ ಪರಿಮಾಣ ಹೆಚ್ಚ್ಹೇ ಆದರೂ ತಾನು ಮಾನವೀಯ ದೃಷ್ಟಿಯಿಂದ ಬರೀ ತನ್ನ ಹಣದ ಮೊತ್ತವನ್ನು ಮಾತ್ರವಷ್ಟೇ ವಾಪಸ್ ಕೇಳುತ್ತಿದ್ದೇನೆಂದೂ ವಿವರಿಸಿದ. ಅವನ ವಿಚಾರ ಸರಣಿಗೆ, ವಾಗ್ವೈಖರಿಗೆ ನ್ಯಾಯಾಧೀಶರು ತಲೆದೂಗಿದರು. ಅವನ ವಿದ್ವತ್ತು, ಭಾಷೆಯ ಮೇಲಿನ ಹಿಡಿತ, ತಾನಾಡುತ್ತಿರುವ ಮಾತಿನಮೇಲಿನ ನಂಬಿಕೆ ವಿಶ್ವ್ವಸಗಳು ಅವನ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.
ಸುಶೀಲಾರಾಣಿಯನ್ನು ಕಟಕಟೆಗೆ ಕರೆಯಲಾಯ್ತು.ಬಂದು ನಿಂತುಕೊಂಡಳು. ಅವಳನ್ನು ಅಪಾದಮಸ್ತಕ ದಿಟ್ಟಿಸಿದ ಚಿದಂಬರ ಮೂರ್ತಿಗಳಿಗೆ ಯೋಗೀಶ ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಕಾಣಲಿಲ್ಲ. ಬಹಳ ಸಾಧಾರಣ ರೂಪ ಆದರೆ ಒಳ್ಳೆಯ ಮೈಕಟ್ಟು. ವೇಶ್ಯೆಯರಿಗಿರಬಹುದಾದ ಚೆಲ್ಲು ಚೆಲ್ಲು ಹಾವ ಭಾವ ಅವಳಲ್ಲಿರಲಿಲ್ಲ.ಒಂದು ಬಗೆಯ ಗಾಂಭೀರ್ಯ ಅವಳ ವ್ಯಕ್ತಿತ್ವದಲ್ಲಿ ಕಂಡು ಬರುತ್ತಿತ್ತು. ನಿನ್ನ ಅಹವಾಲು ಏನು ಎಂಬುದಾಗಿ ಅವಳನ್ನು ಪ್ರಶ್ನಿಸಿದರು.
ಗಂಟಲು ಸರಿಪಡಿಸಿಕೊಂಡ ಸುಶೀಲಾರಾಣಿ ಹೇಳಿದಳು. ನೋಡಿ ಸ್ವಾಮಿ,ಈ ವ್ಯಕ್ತಿ ನನಗೆ ಕರೆ ಮಾಡಿದಾಗ ನಾನು ಆಗಲೇ ಒಂದು ಒಪ್ಪಂದ ಮಾಡಿಕೊಂಡಿದ್ದೆ. ಇವರು ತಮ್ಮ ಫೋನಿನಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ತಾವು ಕಾವ್ಯವೊಂದನ್ನು ಓದಿದ್ದಾಗಿಯೂ,ಅದರಿಂದಾಗಿ ಬಹಳ ಉತ್ಕಟವಾದ ವಾಂಛೆಯಲ್ಲಿ ಸಿಲುಕಿರುವುದಾಗಿಯೂ, ಆ ಕ್ಷಣದಲ್ಲಿ ಹೆಣ್ಣಿನ ಸಹವಾಸಕ್ಕೆ ಹಾತೊರೆಯುತ್ತಿರುವುದಾಗಿಯೂ, ಇದೇ ಅವರ ಮೊದಲ ಅನುಭವವಾಗಲಿರುವುದೆಂದೂ ಹೇಳಿ ಪ್ರಲಾಪಿಸಿಕೊಂಡಾಗ ಇವರ ಮೇಲಿನ ಒಂದು ಬಗೆಯ ಕನಿಕರಕ್ಕೆ ಪಕ್ಕಾಗಿ ನಾನು ಆ ಮೊದಲೇ ನಿಗದಿ ಮಾಡಿದ್ದ ಗ್ರಾಹಕರಿಗೆ ಕರೆ ಮಾಡಿ ಬರುವುದಾಗುವುದಿಲ್ಲ ಎಂದು ಹೇಳಿ ಬಿಟ್ಟೆ. ಅವರಿನ್ನೂ ತಮ್ಮ ಮುಂಗಡ ಹಣ ಸಂದಾಯ ಮಾಡಿರಲಿಲ್ಲವಾದ ಕಾರಣ ಆ ರೀತಿ ಹೇಳುವ ನನ್ನ ಹಕ್ಕನ್ನು ನಾನು ಚಲಾಯಿಸಿ ಇವರಿಗೆ ಒಪ್ಪಿಕೊಂಡದ್ದು. ಆತನೇನೂ ನನ್ನ ಭಾವಚಿತ್ರ ಮಣ್ಣು ಮಸಿ ಕೇಳಿರಲಿಲ್ಲ. ಇವರಿಗೆ ಅದನ್ನೂ ಕಳಿಸಿದ್ದೆ. ಎಲ್ಲ ನೋಡಿ,ನಿರ್ಧರಿಸಿ ಬಂದು ಕಡೆಯಲ್ಲಿ ಕ್ಯಾತೆ ತೆಗೆದರೆ ನಮ್ಮ ಹೊಟ್ಟೆಯ ಪಾಡೇನು ಸಾರ್. ಅಷ್ಟಕ್ಕೂ ನನಗೆ ಸಾವಿರ ರೂಪಾಯಿಯ ನಷ್ಟವೇ ಆಗಿದೆ. ಏನೋ ಈತನಲ್ಲಿ ಇರುವ ಮುಗ್ಧತೆಗೆ ನಾನು ರಿಯಾಯಿತಿ ತೋರಿಸಿ ಅವರು ಕೊಟ್ಟ ಮುಂಗಡ ಹಣ ಮಾತ್ರ ಹಿಡಿದುಕೊಂಡಿದ್ದೇನೆ.ನಮ್ಮ ಸಮಯಕ್ಕೂ ಬೆಲೆ ಇಲ್ಲವೇ ?ಬರೀ ದೇಹಕ್ಕೆ ಮಾತ್ರ ಬೆಲೆಯೋ? ಈ ಗಂಡಸು ಜಾತಿಗೆ ತಮ್ಮ ಸ್ವಾರ್ಥದ ಪರಿಧಿಯ ಒಳಗೆ ಮಾತ್ರವೇ ಯೋಚಿಸಲು ಬರುತ್ತದೆ. ಅದರಾಚೆಗಿನ ಜೀವಿಗಳ ಪರಿವೆಯೇ ಇಲ್ಲ”” ಎಂದು ಅಲವತ್ತುಕೊಂಡಳು.
ಚಿದಂಬರ ಮೂರ್ತಿ ಗೊಂದಲದಲ್ಲಿ ಬಿದ್ದರು.ಇಬ್ಬರ ವಾದವೂ ಅವರವರ ದೃಷ್ಟಿಯಲ್ಲಿ ಸರಿಯೇ. ಇಲ್ಲಿ ನ್ಯಾಯ ಅನ್ಯಾಯಗಳ ನಿಷ್ಕರ್ಷೆ ಕಠಿಣ.ಅದನ್ನು ಮೀರಿದ ಆಯಾಮಗಳಲ್ಲಿ ಇದರ ಪರಿಶೀಲನೆ ಅವಲೋಕನೆ ಆಗಬೇಕೆಂದು ಯೋಚಿಸಿದರು.
ಇಲ್ಲಿ ಇರುವುದು ಭಾವಚಿತ್ರ ಹಾಗೂ ಜೀವಚಿತ್ರಗಳಲ್ಲಿನ ಸಾಮ್ಯತೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯ. ಇದನ್ನು ಮೊದಲು ಬಗೆ ಹರಿಸಿದರೆ ಹಣದ ಸಂಬಂಧಿ ವ್ಯಾಜ್ಯವನ್ನು ಇತ್ಯರ್ಥಗೊಳಿಸಬಹುದೆಂದು ಯೋಚಿಸಿ ಅದರಂತೆ ಅವರಿಬ್ಬರಿಗೂ ತಮ್ಮ ತಮ್ಮ ಬಳಿಯಿರುವ ಹಾಗೂ ಈ ಭಿನ್ನಾಭಿಪ್ರಾಯಕ್ಕೆ ಮೂಲಕಾರಣವಾಗಿರುವ ಚಿತ್ರಗಳನ್ನು ತಮ್ಮ ಪರಿವೀಕ್ಷಣೆಗೆ ಒಪ್ಪಿಸಬೇಕೆಂದು ಸೂಚಿಸಿದರು.
ಎಲ್ಲ ತಯಾರಿ ಮಾಡಿಕೊಂಡು ಬಂದಿದ್ದ ಯೋಗೀಶ ತನ್ನ ಬಳಿಯಿದ್ದ ಭಾವಚಿತ್ರದ ಪ್ರತಿಯನ್ನು ಕೊಟ್ಟ. ಸುಶೀಲಾರಾಣಿ ತಾನು ತನ್ನ ಫೋನಿನಲ್ಲಿ ತಾನೇ ತೆಗೆದಿದ್ದ ಫೋಟೋವನ್ನು ಪರದೆಯ ಮೇಲೆ ತರಿಸಿ ಅವರ ಪರಾಮರ್ಶೆಗೆ ಒಪ್ಪಿಸಿದಳು.
ಏನಾಶ್ಚರ್ಯ!!! ಎರಡೂ ಭಾವಚಿತ್ರಗಳು ಒಂದನ್ನೊಂದು ಹೋಲುತ್ತಿದ್ದವು. ಇಬ್ಬರೂ ಸುಳ್ಳು ಹೇಳುತ್ತಿಲ್ಲ!! ಕತ್ತೆತ್ತಿ ಸುಶೀಲಳನ್ನು ನೋಡಿದರು. ಅವಳು ಆ ದಿನ ಹೇಗಿದ್ದಳೋ ಅದೇ ರೀತಿ ಸಿಂಗರಿಸಿಕೊಂಡು, ಅದೇ ಬಟ್ಟೆಗಳನ್ನು ತೊಟ್ಟು ಬಂದಿದ್ದಳು. ಕಣ್ಣು ಕಿವಿ, ಮೂಗು, ಬಾಯಿ, ಕೇಶ ವಿನ್ಯಾಸ ಎಲ್ಲವು ಅದೇ ಆದರೆ ಫೋಟೋದಲ್ಲಿದ್ದಷ್ಟು ಮುಖ ಸುಂದರವಾಗಿಲ್ಲ. ಅರೇ ಇದು ಹೇಗೆ ಸಾಧ್ಯ? ಅವರಿಗೆ ಅನುಮಾನ ಮೂಡಿತು. ಸುಶೀಲಾ ಏನೋ ಮಸಲತ್ತು ಮಾಡುತ್ತಿರಬಹುದೆಂದು ಅವರಿಗೆ ಅನ್ನಿಸಿತು. ತನ್ನದಲ್ಲದ ಫೋಟೊ ಕಳಿಸಿ ಜನರಿಗೆ ಮರುಳು ಮಾಡುತ್ತಿರಬಹುದೆಂಬ ಸಂದೇಹ ಮೂಡಿತು. ಹೇಳಿದರು,..
” ಸುಶೀಲಾ, ನಿಮ್ಮ ಭಾವಚಿತ್ರಕ್ಕೂ ,ನಿಜರೂಪಕ್ಕೂ ಇರುವ ವ್ಯತ್ಯಾಸ ಖಚಿತವಾಗಿದೆ. ಇದು ನೀವು ಉದ್ದೇಶಪೂರ್ವಕವಾಗಿ ಗ್ರಾಹಕರಿಗೆ ಮರುಳುಮಾಡುವ ಸಂಚಿನಂತೆ ನನಗೆ ಭಾಸವಾಗುತ್ತಿದೆ.ನಿನ್ನಂತೆ ಮೈಕಟ್ಟಿರುವ ಬೇರೆ ಯಾವುದೋ ಫೋಟೊವನ್ನು ತೋರಿಸಿ ಗ್ರಾಹಕರನ್ನು ಆಕರ್ಷಿಸಿ ಅನಂತರ ಅವರಿಂದ ಸುಲಿಗೆ ಮಾಡುವ ಹುನ್ನಾರದಂತೆ ನನಗೆ ಅನಿಸುತ್ತಿದೆ. ಇದಕ್ಕ್ಕೆ ನೀನೇನಾದರೂ ಹೇಳುವುದಿದೆಯೋ?? ಕೇಳಿದರು.
ಸುಶೀಲೆಯ ಕಣ್ಣುಗಳಲ್ಲಿ ನೀರುತುಂಬಿತು. ಗದ್ಗದವಾದ ಕಂಠವನ್ನು ಸರಿಮಾಡಿಕೊಂಡು, ಧೈರ್ಯದಿಂದಲೇ ಹೇಳಿದಳು” ನ್ಯಾಯಾಧೀಶರೇ, ಈ ಪ್ರಪಂಚದಲ್ಲಿ ಯಾವಾಗಲೂ ದುರ್ಬಲ, ನಿರಾಯುಧ, ದೀನ ಹಾಗೂ ಅಸಹಾಯಕರಿಗೆ ಅನ್ಯಾಯವಾಗುವುದೇ ಹೊರತು ಸಶಕ್ತರಿಗಲ್ಲ. ಅದರಲ್ಲೂ ಹೆಣ್ಣು,ವೃತ್ತಿಯಿಂದ ವೇಶ್ಯೆಯಾಗಿರುವ ನನ್ನಂಥವರನ್ನು ಅನುಮಾನಿಸಲು, ದೂರಲು, ಗೂಬೆ ಕೂರಿಸಲು ಪ್ರಪಂಚ ಹೆಚ್ಚು ಕಷ್ಟಪಡಬೇಕಾದ್ದಿಲ್ಲ. ನದಿ ಪ್ರವಾಹದಲ್ಲಿ ದುರ್ಬಲರ ಕಟ್ಟಡಗಳು ಕೊಚ್ಚಿಹೋಗುವಂತೆ, ಕಾಲನ ಪ್ರವಾಹದಲ್ಲಿ ನಾವುಗಳು, ನಮಗಾಗಿರುವ ಅನ್ಯಾಯಗಳು ಜಗತ್ತಿನ ಸ್ಮೃತಿಪಟಲದಿಂದ ಕೊಚ್ಚಿಹೋಗುತ್ತವೆ.ದುರ್ಬಲರಿಗೆ ನ್ಯಾಯಾನ್ಯಾಗಳನ್ನು ಅಧಿಕಾರಯುತವಾಗಿ ಆಗ್ರಹಿಸುವ ಹಕ್ಕನ್ನು ಸಮಾಜ ಯಾವತ್ತಿಗೂ ಕೊಟ್ಟಿಲ್ಲ. ನಾವುಗಳು ಅದನ್ನು ಯಾಚಿಸಬಹುದಷ್ಟೇ. ಸಮಾಜದ ಆತ್ಮಸಾಕ್ಷಿ ನಮಗಾಗಿ ಎಂದೂ ಮಿಡಿದಿಲ್ಲ. ಅದು ಬರೀ ಕಥೆ ಪುರಾಣಗಳ ಆದರ್ಶಗಳಲ್ಲಿ ಮಾತ್ರ. ಸಮಾಜದ ಸೇವೆ ನಾವು ಮಾಡಿದಾಗ್ಯೂ,ಜನರ ವಿಕೃತ ವಾಂಛೆಗಳನ್ನು ಪೂರೈಸಿದ್ದಾಗ್ಯೂ,ನಮಗೆ ತಿರಸ್ಕಾರ ನಿಂದನೆ ದೂಷಣೆಗಳು ಬಳುವಳಿಯೇ ಹೊರತು ಪುರಸ್ಕಾರ, ಆದರ ಪೋಷಣೆಗಳಲ್ಲ.ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಉದ್ದೇಶಪೂರ್ವಕವಾಗಿ ಯಾವ ಅಪಚಾರ ಮಾಡಿಲ್ಲ. ಈತ ಕೇಳಿದ ತಕ್ಷಣ ಆ ಫೋಟೊ ತೆಗೆದು ಕಳಿಸಿದ್ದೇನೆ. ಬೇಕಾದರೆ ಅದರ ಅಡಿಯಲ್ಲಿರುವ ದಿನಾಂಕ ಮತ್ತು ಸಮಯಗಳನ್ನು ಗಮನಿಸಿ. ಕೇವಲ ಎರಡು ನಿಮಿಷಗಳ ಅಂತರ ಇರಬಹುದಷ್ಟೇ. ಅಷ್ಟರಲ್ಲಿ ನಾನು ಪವಾಡ ಸೃಷ್ಟಿಸಲು ಸಾಧ್ಯವಿಲ್ಲ.ಅಂತಹ ಕುಕೃತ್ಯದ ಅವಶ್ಯಕತೆಯೂ ನನಗಿಲ್ಲ.ನನಗಿಲ್ಲಿ ನ್ಯಾಯ ಸಿಗದಿದ್ದರೆ ಮೇಲಿನ ಕೋರ್ಟಿಗೂ ಹೋಗುತ್ತೇನೆ,ಫೀರ್ಯಾದು ಮಾಡುತ್ತೇನೆ ” ಎಂದಳು
ಅವಳ ವಾಗ್ಸರಣಿ,ಯೋಚನಾಲಹರಿ, ದಿಟ್ಟತನ,ತನ್ನಲ್ಲಿ ತಾನು ನಂಬಿಕೆಯಿಟ್ಟು ಮಾತನಾಡಿದ ಪರಿ ಚಿದಂಬರ ಮೂರ್ತಿಯನ್ನು ಮೂಕವಿಸ್ಮಿತರನ್ನಾಗಿಸಿದವು. ಸಿದ್ಧಯ್ಯ ತಲೆದೂಗಿದರು. ತಲೆದೂಗಿದ ಚಿದಂಬರ ಮೂರ್ತಿ ಅವಳು ಹೇಳಿದಂತೆ ಫೋಟೊ ತೆಗೆದ ಸಮಯ ದಿನಾಂಕ ಇತ್ಯಾದಿ ಪರಿಶೀಲಿಸಿದರು.ಯೋಗೀಶ ನೀಡಿದ್ದ ಫೋಟೊ ಕೆಳಗಿನ ವಿವರಗಳಿಗೆ ತಾಳೆ ನೋಡಿದರು.ಯೋಗೀಶನ ಫೋನ್ ಸಂಭಾಷಣೆ ಮುಗಿದ ಸಮಯಕ್ಕೂ, ಸುಶೀಲಾ ಫೋಟೊ ತೆಗೆದ ಸಮಯಕ್ಕೂ ನಲವತ್ತು ಸೆಕೆಂಡುಗಳ ಅಂತರವಿದ್ದು ಅವನ ಮೊಬೈಲಿಗೆ ಫೋಟೊ ಬಂದ ಕ್ಷಣಕ್ಕೆ ಒಂದು ನಿಮಿಷದ ಅಂತರವಿತ್ತು.ಅಂದರೆ ಕೇವಲ ಎರಡು ನಿಮಿಷಗಳ ಒಳಗೆ ಎಲ್ಲ ಪ್ರಕ್ರಿಯೆಗಳು ನಡೆದಿರಬೇಕು.ಅದರೊಳಗೆ ಮೋಸ ನಡೆದಿರಬಹುದಾದ ಸಾಧ್ಯತೆಗಳು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಹಾಗಾದರೆ ಈ ಗೋಜಲು ಬಿಡಿಸುವುದು ಹೇಗೆ?
ಸಿದ್ಧ್ಯಯ್ಯನವರ ಕಡೆಗೆ ನೋಡಿದರು. ಮಧ್ಯಂತರ ವಿಶ್ರಾಂತಿ ಬೇಕೆಂದೂ, ಎಲ್ಲರೂ ಊಟಕ್ಕೆ ಹೋಗಬಹುದೆಂದೂ, ನಂತರ ಉಳಿದ ವಿಚಾರಣೆ ನಡೆಸುವುದಾಗಿಯೂ ಹೇಳಿ ಎದ್ದರು. ಯೋಗೀಶ ಸುಶೀಲಳನ್ನು ಕೆಕ್ಕರಿಸಿ ನೋಡುತ್ತಾ ಧಢ ಧಢನೆ ಇಳಿದು ಹೋದ. ಸುಶೀಲ ಗಂಭೀರವಾಗಿ ತಲೆ ತಗ್ಗಿಸಿ ನಡೆದು ಹೋದಳು.
******* *********
ವಿಚಾರಿಸಿದಷ್ಟೂ ಸಂಕೀರ್ಣವಾಗುತ್ತಿದ್ದ ಈ ಕೇಸಿನ ವೈಚಿತ್ರತೆಯನ್ನು ಚಿಂತಿಸುತ್ತಾ ಇಬ್ಬರೂ ಸ್ನೇಹಿತರು ಊಟ ಮಾಡುತ್ತಿದ್ದರು. ತನಿಖೆ ನಡೆಸುವುದರಲ್ಲಿ ಪಳಗಿದ ಸಿದ್ಧಯ್ಯನವರ ಪೋಲೀಸ್ ತಲೆ ಈ ಘಟನೆಯಲ್ಲಿ ಬಂದಿರುವ ಪಾತ್ರಗಳನ್ನು ಮೆಲುಕು ಹಾಕುತ್ತ ಮೌನವಾಗಿ ಊಟ ಮಾಡುತ್ತಿದ್ದರು. ಚಿದಂಬರ ಮೂರ್ತಿ ಅನ್ಯಮನಸ್ಕರಾಗಿದ್ದರು. ಸುಶೀಲಳ, ಸಮಾಜದ ಸೋಗಲಾಡಿತನವನ್ನು ಬೆತ್ತಲೆಗೊಳಿಸುವಂತಿದ್ದ ಮಾತುಗಳು ಅವರ ತಲೆಯಲ್ಲಿ ಅನುರಣಿಸುತ್ತಿದ್ದವು. ಹೃದಯಾಂತರಾಳದಿಂದ ಬಂದಿದ್ದ ಅವಳ ಮಾತುಗಳ ಹಿನ್ನೆಲೆಯಲ್ಲಿ, ಅವಳಲ್ಲಿ ನಡೆದಿರಬಹುದಾದ ತಾಕಲಾಟಗಳನ್ನು ಊಹಿಸಿಕೊಂಡ ಅವರ ಅಂತರಂಗ ಕಲಕದಿರಲಿಲ್ಲ. ಸಹಾನುಭೂತಿ ಅವಳ ಕಡೆಗಿದ್ದರೂ ನ್ಯಾಯಾಧೀಶರಾಗಿ ಅವರ ಕರ್ತವ್ಯ ಅವರು ಮಾಡಲೇ ಬೇಕಾಗಿತ್ತು. ಇಷ್ಟಕ್ಕೂ ಯೋಗೀಶನದ್ದೇನೂ ತಪ್ಪಿರಲಿಲ್ಲ. ದಾರಿ ಅವರಿಗೆ ಕಾಣಿಸುತ್ತಿರಲಿಲ್ಲ.
ಸಿದ್ಧಯ್ಯನವರ ಪೋಲಿಸ್ ತಲೆ ಕೆಲಸ ಮಾಡಿತು. ತಲೆಯೆತ್ತಿ ”ಚಿದಂಬರ ” ಎಂದರು.
”ಹೇಳು ಸಿದ್ಧ,. ನಿನಗೇನಾದ್ರೂ ಬೆಳಕು ಕಂಡಿತೋ””
” ನೋಡು ಚಿದಂಬರ, ಈಗ ಅವರಿಬ್ಬರ ಹೇಳಿಕೆಗಳಲ್ಲಿ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿಲ್ಲ.ಇಬ್ಬರೂ ಅವರವರ ಅಭಿಪ್ರಾಯಗಳಿಗೆ ಬದ್ಧರು ಹಾಗೂ ಸತ್ಯವನ್ನೇ ಹೇಳುತ್ತಿದ್ದಾರೆ. ಆದರೆ ಇಲ್ಲಿ ಮೂಡಿರುವ ಭಿನ್ನಭಿಪ್ರಾಯ ಫೋಟೋಗೆ ಕುರಿತದ್ದು.ಫೋಟೊಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಆದರೆ ಫೋಟೊ ಹಾಗೂ ಅದರ ಮೂಲ ವ್ಯಕ್ತಿಯರ ಸಾಮ್ಯತೆಯಲ್ಲಿ ವ್ಯತ್ಯಾಸ ಗೋಚರಿಸುತ್ತಿದೆ.ಈ ಎರಡು ಅಂಶಗಳ ಮಧ್ಯದ ಪಾತ್ರವೆಂದರೆ ಕ್ಯಾಮೆರಾ. ಕ್ಯಾಮರಾ ಇರುವುದು ಮೊಬೈಲ್ ಫೋನಿನಲ್ಲಿ. ಬೇರೆ ಎಲ್ಲವನ್ನು ಪಕ್ಕಕ್ಕೆ ಸರಿಸಿ ನೋಡಿದಾಗ ಇಲ್ಲಿ ಇನ್ನಷ್ಟು ಕೆದಕಬೇಕಾದ ಅವಶ್ಯಕತೆ ಇದೆ. ಈ ಹಂತದಲ್ಲಿ ಇನ್ನಷ್ಟು ವಿಚಾರಣೆ ನಡೆಸಬೇಕಾಗಿದೆ.ಫೋಟೋಗಳನ್ನು ಬದಲು ಮಾಡುವ ತಂತ್ರಾಂಶಗಳು, ಸಾಫ್ಟ್ ವೇರ್ಗಳು ಇರುವುದು ನಿನಗೂ ತಿಳಿದ ವಿಷಯ. ಅದನ್ನು ಸ್ವಲ್ಪ ಪರೀಕ್ಷಿಸಿ ಬಿಡುವ ಏನಂತೀಯ? ಎಂದರು.
”ಅಂದರೆ ನಿನಗೆ ಸುಶೀಲಳ ಮೇಲೆ ಇನ್ನೂ ಸಂದೇಹವೇ??” ಚಿದಂಬರ ಕೇಳಿದರು.
”ಹಾಗಲ್ಲ. ಯಾವುದನ್ನೂ ಊಹೆಗೆ ಬಿಡಬಾರದೆಂದು ನನ್ನ ಪ್ರಾಮಾಣಿಕ ಅನಿಸಿಕೆ” ಸಿದ್ಧಯ್ಯ ನುಡಿದರು
ಚಿದಂಬರ ತಮ್ಮ ಸ್ನೇಹಿತನ ಕೆಡೆಗೆ ಮೆಚ್ಚುಗೆಯಿಂದ ನೋಡಿದರು.ಇಬ್ಬರು ಊಟ ಮುಗಿಸಿ ವಿಚಾರಣೆಗೆ ಮರಳಿದರು.
ಮತ್ತೆ ಪೀಠಿಕೆ ಹಾಕುತ್ತಾ ಚಿದಂಬರ ಸುಶೀಲಾಳಿಗೆ ಅವಳ ಫೋನು ಕೊಡಲು ಹೇಳಿದರು. ಸಿದ್ಧಯ್ಯನವರಿಗೆ ಅದನ್ನು ಕೊಡುತ್ತಾ ಆಕೆಯ ಫೋಟೋ ತೆಗೆಯಲು ಕೋರಿದರು. ಸುಶೀಲೆಯ ಅನುಮತಿ ಪಡೆದು ಸಿದ್ಧಯ್ಯ ತಾವೆ ಮುತುವರ್ಜಿ ವಹಿಸಿ ಅವಳ ಭಾವಚಿತ್ರವನ್ನು ಫೋನಿನ ಕ್ಯಾಮೆರಾವನ್ನು ಉಪಯೊಗಿಸಿ ತೆಗೆದು ನೋಡಿ ಅವಕ್ಕಾದರು. ಮತ್ತೆ ಅದೇ ರೀತಿಯ ಸುಂದರ ಫೋಟೊ.ಎದುರಿಗಿದ್ದ ಸುಶೀಲಳಿಗಿಂತ ಅತೀ ಸುಂದರ, ಮೊದಲಿನ ಫೋಟೊದಲ್ಲಿದ್ದಂತೆ!! ಚಿದಂಬರಮೂರ್ತಿಗೆ ತೋರಿಸಿದರು. ಈಗ ಅವಾಕ್ಕಾಗುವ ಸರದಿ ಅವರದಾಗಿತ್ತು. ಮತ್ತೊಮ್ಮೆ ತೆಗೆದು ನೋಡಿದರು. ಏನೂ ಬದಲಾವಣೆ ಇರಲಿಲ್ಲ.
ಕೋರ್ಟಿನ ಕ್ಯಾಮೆರಾ ತಂದು ಅದರಲ್ಲಿ ಚಿತ್ರಗಳನ್ನು ತೆಗೆಯಲಾಯಿತು. ಮತ್ತೆ ಅವಾಕ್ಕಾದರು.ಅದರಲ್ಲಿ ಎದುರಿಗಿದ್ದ ಸುಶೀಲಳ ಯಥಾವತ್ ಚಿತ್ರ ಮೂಡಿ ಬಂದಿತ್ತು. ಅಂದರೆ ಈ ಕ್ಯಾಮೆರಾಗಳಲ್ಲಿ ಏನೋ ವ್ಯತ್ಯಾಸ ಇರುವುದು ಸ್ಪಷ್ಟವಾಯಿತು.ಮತ್ತೆ ಪರೀಕ್ಷಿಸಿದರು. ಏನೂ ಹೊಸ ವ್ಯತ್ಯಾಸ ಕಾಣಲಿಲ್ಲ.
ಯೋಗೀಶನ ಚಿತ್ರ ತೆಗೆದರು. ಸುಶೀಲಳ ಕ್ಯಾಮೆರಾದಲ್ಲಿ ಅವನು ಇನ್ನೂ ಸ್ಫುರದ್ರೂಪಿಯಾಗಿ ಕಳೆಯಿಂದ ಕಾಣುತ್ತಿದ್ದ- ಮುಖ ಊದಿಸಿಕೊಂಡಿದ್ದರೂ! ಕೋರ್ಟಿನ ಕ್ಯಾಮೆರಾದಲ್ಲಿ ಮಾಮೂಲಿಯಾಗೆ ಕಂಡುಬಂದ. ಇನ್ನಷ್ಟು ಗೋಜಲಾಯಿತು.
ಸುಶೀಲಳ ಅನುಮತಿ ಪಡೆದು ಅವಳ ಕ್ಯಾಮೆರಾವನ್ನು ತಮ್ಮ ಸುಪರ್ದಿನಲ್ಲಿ ಇಟ್ಟುಕೊಂಡರು.ಅದಕ್ಕೆ ಪ್ರತಿಯಾಗಿ ಆಕೆಗೆ ಉಪಯೋಗಿಸಲು ಬೇರೊಂದು ಫೋನ್ ಕೊಡಮಾಡಿಸಿದರು.ತಮ್ಮ ವಿಶೇಷ ಅಧಿಕಾರವನ್ನು ಬಳಸಿ ಆಕೆಗೆ ಮೂರು ದಿನಗಳ ಭತ್ಯೆಯನ್ನೂ ಕೊಡಮಾಡಿಸಿದರು.ಯೊಗೀಶನ ಮೊಬೈಲ್ ಅನ್ನೂ ತಮ್ಮ ವಶಕ್ಕೆ ತೆಗೆದುಕೊಂಡರು.ಅವನು ತನಗೆ ಯಾವುದೇ ಭತ್ಯೆ ಇತ್ಯಾದಿ ಬೇಡವೆಂದ. ಎರಡು ದಿನ ಕಳೆದು ವಿಚಾರಣೆ ನಡೆಸುವುದಾಗಿ ಹೇಳಿ ಅಂದಿನ ಕಲಾಪ ಮುಗಿಸಿದರು.
ತಲೆ ಬಿಸಿಯಾಗಿತ್ತು. ಡಬಲ್ ಕಾಫಿ ಕುಡಿಯೋಣವೆಂದು ಇಬ್ಬರೂ ಹತ್ತಿರದ ಉಡ್ ಲ್ಯಾಂಡ್ ಹೋಟೆಲ್ಲಿಗೆ ಹೋಗಿ ಒಂದು ಮೂಲೆ ಹಿಡಿದು ಕೂತರು. ಕಾಫಿ ಬರುವವರೆಗೆ ಸುಶೀಲಳ ಮೊಬೈಲ್ ಅನ್ನೂ,ಯೋಗೀಶನದ್ದನ್ನೂ, ತಮ್ಮದನ್ನೂ ಮೇಜಿನ ಮೇಲಿಟ್ಟು ದಿಟ್ಟಿಸತೊಡಗಿದರು.
ಸುಶೀಲಳ ಮಾತು ಕತೆ ನಡತೆಯಲ್ಲಿ ಅವರಿಗೆ ಯಾವ ಮೋಸದ ಕುರುಹುಗಳೂ ಕಂಡುಬರಲಿಲ್ಲ. ಮೊಬೈಲನ್ನು ದಿಟ್ಟಿಸುತ್ತಿದ್ದ ಅವರಿಗೆ ಅದು ಉಳಿದ ಮೊಬೈಲುಗಳಿಗಿಂತ ಭಿನ್ನವಾಗಿದ್ದು ಗಮನಕ್ಕೆ ಬಂತು.ಬರೀ ಚಿತ್ರಗಳನ್ನು ಗಮನಿಸುತ್ತಾ ಉಪಕರಣವನ್ನು ಇಲ್ಲಿಯವರೆಗೆ ಗಮನಿಸಿರಲಿಲ್ಲ. ಅದಕ್ಕೊಂದು ತಯಾರಕ ಕಂಪನಿಯ ಹೆಸರೂ ಇರಲಿಲ್ಲ. ಅಚ್ಚುಕಟ್ಟಾಗಿ ಇದ್ದರೂ ಅದೊಂದು ಕಂಪನಿಯ ಉತ್ಪನ್ನದಂತೆ ಇರದೇ ಇದ್ದುದು ಸಿದ್ಧಯ್ಯನವರ ಅರಿವಿಗೆ ಬಂತು. ಇದನ್ನು ಯಾರೋ ವಿಶೇಷವಾಗಿ ತಯಾರಿಸಿರಬೇಕು ಎಂದೆನ್ನಿಸಿ ತಮ್ಮ ಮಿತ್ರನಿಗೆ ಹೇಳಿದರು. ಅವರೂ ಅನುಮೋದಿಸಿದರು.
ಅಷ್ಟರಲ್ಲಿ ಅಲ್ಲಿಗೊಂದು ಜೋಡಿ ಬಂತು ಹಾಗೂ ಅವರ ಜೊತೆಯಲ್ಲಿ ಒಂದು ನಾಯಿಯೂ ಇತ್ತು. ಸಿದ್ಧಯ್ಯನವರು ಪ್ರಾಣಿಯ ಚಿತ್ರ ಇದರಲ್ಲಿ ಹೇಗೆ ಬರಬಹುದೆಂದು ನೋಡಲು ಅದರ ಕಡೆಗೆ ಕ್ಯಾಮೆರಾ ತಿರುಗಿಸಿ ಕ್ಲಿಕ್ ಮಾಡಿ ಲಗುಬಗೆಯಿಂದ ಪರೀಕ್ಷಿಸಿದರು. ಮತ್ತೊಂದು ಆಶ್ಚರ್ಯ ಅವರಿಗೆ ಕಾದಿತ್ತು. ನಾಯಿಯ ಜೊತೆಯಲ್ಲಿ ಆ ಜೋಡಿಯ ಚಿತ್ರವೂ ಇದ್ದು ನಾಯಿ ಯಥಾವತ್ ಇದ್ದರೂ ಆ ಜೋಡಿಯ ಚಿತ್ರ ಭಿನ್ನವಾಗಿತ್ತು. ಎದುರಿನಿಂದ ನೋಡಲು ಸಭ್ಯ ಸುಂದರಾಗಿದ್ದರೂ ಆ ಕ್ಯಾಮೆರಾದಲ್ಲಿ ಅವರು ಕುರೂಪಿಗಳಾಗಿ ಕಂಡುಬಂದರು!
ನಾಯಿಯ ನೆವ ಇಟ್ಟುಕೊಂಡು ಮತ್ತೆರೆಡು ಫೋಟೋಗಳನ್ನು ಹತ್ತಿರದಿಂದಲೇ ತೆಗೆದರು. ಅವೆರೆಡೂ ಕುರೂಪ ಮನುಷ್ಯರ ಚಿತ್ರಗಳನ್ನೇ ತೋರಿಸಿದವು. ಚಿದಂಬರ ತಮ್ಮ ಕ್ಯಾಮೆರಾದಿಂದ ನಾಯಿಯ ಜೊತೆಗೆ ಅವರ ಫೋಟೊಗಳನ್ನು ತೆಗೆದುಕೊಂಡು ಮತ್ತೆ ತಮ್ಮ ಟೇಬಲ್ಲಿಗೆ ಬಂದು ಕುಳಿತು ಪರೀಕ್ಷಿಸತೊಡಗಿದರು. ಚಿದಂಬರರ ಕ್ಯಾಮೆರಾದಲ್ಲಿ ಆ ಜೋಡಿಯೂ ನಾಯಿಯೂ ಯಾವುದೇ ಬದಲಾವಣೆ ತೋರಿಸಿರಲಿಲ್ಲ. ಇವರಿಬ್ಬರೂ ಗಹನ ಚರ್ಚೆಯಲ್ಲಿರುವುದನ್ನೂ, ಸಿದ್ಧಯ್ಯನವರ ಪೋಲೀಸ್ ದಿರಿಸನ್ನೂ ಗಮನಿಸಿದ ಆ ಜೋಡಿ ಇರುಸು ಮುರುಸು ಮಾಡಿಕೊಂಡು ಹೊರಡಲು ಅನುವಾಗುತ್ತಿದ್ದಂತೆಯೇ ಸಿದ್ಧಯ್ಯನವರ ಪೋಲೀಸ್ ತಲೆ ಮತ್ತೆ ಕೆಲಸ ಮಾಡಿತು. ತಕ್ಷಣ ಅವರಿದ್ದಲ್ಲಿಗೆ ಹೋಗಿ,ಅವರಿಂದ ಸಹಾಯ ಬೇಕಿದೆಯೆಂದೂ, ತಮ್ಮ ಅನುಮತಿಯಿಲ್ಲದೆ ಹೋಗಕೂಡದೆಂದೂ ತಾಕೀತು ಮಾಡಿ ವಾಪಸ್ ಬಂದು ”ಚಿದಂಬರ ಇದೊಂದು ಅಸಾಧಾರಣವಾದ ಉಪಕರಣ.ಆ ಇಬ್ಬರನ್ನು ಈಗ ಠಾಣೆಗೆ ಕರೆದೊಯ್ದು ವಿಚಾರಿಸಿದರೆ ಇದರ ಮಹತ್ವ ತಿಳಿಯುವುದು ನಡಿ ಹೋಗೋಣ ” ಎಂದು ಕಾಫಿಯೆಲ್ಲವನ್ನೂ ಒಂದೇ ಗುಟುಕಿಗೆ ಮುಗಿಸಿ, ಆ ಜೋಡಿಯನ್ನು ಕರೆದುಕೊಂಡು ಹೊರಟರು. ಗಲಿಬಿಲಿಗೊಂಡ ಆ ಜೋಡಿ ಗಾಭರಿ ಆತಂಕಗಳಿಗೆ ಒಳಗಾಗಿದ್ದನ್ನು ಇಬ್ಬರೂ ಗಮನಿಸದಿರಲಿಲ್ಲ.
ಠಾಣೆಯಲ್ಲಿ ಕೂಡಿಸಿ ವಿಚಾರಿಸಿದಾಗ ಅವರು ಏನೋ ಮುಚ್ಚು ಮರೆ ಮಾಡುತ್ತಿರುವುದು ತಿಳಿದು ಜೋರು ಮಾಡಿ ದಬಾಯಿಸಿದರು.ಶಿಕ್ಷೆಯ ಭಯವನ್ನೂ ಮೂಡಿಸಿದಾಗ ಅವರಿಬ್ಬರೂ ಕೂಡಿ ಆ ಹೆಂಗಸಿನ ಗಂಡನನ್ನು ಮುಗಿಸುವ ಸಂಚು ರೂಪಿಸುತ್ತಿದ್ದಾರೆಂದು ತಿಳಿದು ದಿಗ್ಭ್ರಮೆಗೊಂಡರು- ಅವರ ಅಪರಾಧಕ್ಕಲ್ಲ- ಕ್ಯಾಮೆರಾ ಅದನ್ನು ಕಾಣಿಸಿದ್ದಕ್ಕೆ!!!. ಅವರ ದಾಖಲೆಗಳನ್ನು ತೆಗೆದುಕೊಂಡು ಎಚ್ಚರಿಕೆ ನೀಡಿ, ಏನಾದರೂ ಪ್ರಮಾದ ನಡೆದರೆ ಜೈಲು ಕಂಬಿ ಎಣಿಸುವ ಗ್ಯಾರಂಟಿ ನೀಡಿ ಅವರನ್ನು ಕಳಿಸಿದರು.
ಈಗ ಈ ಸುಶೀಲಳ ಬಳಿಯಿದ್ದ ಫೋನು ಅಸಾಧಾರಣವೆಂದು ಸಾಬೀತಾಗಿತ್ತು. ತಮ್ಮ ಫೋಟೋಗಳನ್ನು ತೆಗೆದು ನೋಡಿಕೊಳ್ಳಲು ಇಬ್ಬರಿಗೂ ಭಯವಾಯಿತು. ಅದನ್ನು ಜೋಪಾನವಾಗಿಟ್ಟು ತಂತಮ್ಮ ಮನೆಗಳಿಗೆ ನಡೆದರು. ತಮ್ಮ ಮನೆಯವರೆಲ್ಲ ರ ಫೋಟೊ ತೆಗೆದು ಅವರ ಒಳಮರ್ಮ ಅರಿಯುವ ಮನಸ್ಸಾಗದೇ ಇರಲಿಲ್ಲ!! ಆದರೆ ಅದು ತೆರೆಯ ಬಹುದಾದ ಕರಾಳ ಜಗತ್ತು ಇವರಿಗೆ ನಿಭಾಯಿಸಲಸಾಧ್ಯವಾಗುವ ಸಾಧ್ಯತೆ ಮನಗಂಡು ಅ ದುಸ್ಸಾಹಸಕ್ಕೆ ಇಬ್ಬರೂ ಕೈಹಾಕಲಿಲ್ಲ!!.
******** ******
ಎರಡು ದಿನಗಳಲ್ಲಿ ಸಿದ್ಧ್ಹಯ್ಯ ತಮ್ಮ ಪರಿಚಯದ ಹಾಗೂ ಅಪರಾಧ ವಿಭಾಗದ ತಂತ್ರಜ್ಞರ ಭೇಟಿಮಾಡಿ ಸಲಹೆ ಸೂತ್ರಗಳನ್ನು ಕ್ರೋಢೀಕರಿಸಿದರು. ಇತ್ತೀಚಿನ ತಂತ್ರಜ್ಞಾನದ ಬೆಳವಣಿಗೆಗಳು, ತಂತ್ರಾಂಶಗಳ ಕಾರ್ಯ ವೈಖರಿಯ ವಿಧಿ ವಿಧಾನಗಳನ್ನು ಚರ್ಚಿಸಿದರು. ಟಿಪ್ಪಣಿ ಮಾಡಿಕೊಂಡರು. ತಮ್ಮ ಬಳಿ ಇದ್ದ ಫೋನಿನ ಸುಳಿವು ಮಾತ್ರ ಯಾರಿಗೂ ಬಿಟ್ಟುಕೊಡಲಿಲ್ಲ. ತಮ್ಮ ಕಾರ್ಯ ಕಲಾಪಗಳಿಗೆ ಆಸರೆಯಾಗಿರಲೆಂದು ಈ ವಿಷಯದ ಬಗ್ಗೆ ಕಲಿಯುತ್ತಿದ್ದೇನೆಂದಷ್ಟೆ ಅವರು ತಮ್ಮ ಸಂಪರ್ಕಕ್ಕೆ ಬಂದವರಿಗೆ ಮನವರಿಕೆ ಮಾಡಿಕೊಟ್ಟರು. ಹೊಸ ಮಾಹಿತಿಯೊಂದಿಗೆ ತಮ್ಮ ಇಲ್ಲಿಯವರೆಗಿನ ಅನುಭವಗಳನ್ನು ಮಿಳಿತಗೊಳಿಸಿ ಒಂದು ವಿವರಣಾತ್ಮಕ ವರದಿ ಸಿದ್ಧಪಡಿಸಿ ಚಿದಂಬರ ಮೂರ್ತಿಯೊಂದಿಗೆ ಚರ್ಚಿಸಿದರು ಅನಂತರದಲ್ಲಿ ಅವರಿಬ್ಬರೂ ಮುಂದಿನ ಅನ್ವೇಷಣೆಯ ರೂಪು ರೇಷೆ ತಯಾರಿಸಿ ಮರುದಿನಕ್ಕೆ ಮಾನಸಿಕವಾಗಿ ತಯಾರಾದರು. ಇಬ್ಬರಲ್ಲೂ ಆತ್ಮವಿಶ್ವಾಸ ಮೂಡಿತ್ತು,.!!

******* ******
ವಿಚಾರಣೆ ಪುನರಾರಂಭವಾಯ್ತು. ಎಲ್ಲರೂ ತಂತಮ್ಮ ಜಾಗಗಳಲ್ಲಿ ಬಂದು ಕುಳಿತರು. ಮೊದಲು ಸುಶೀಲಳನ್ನು ಕರೆಸಲಾಯ್ತು.ಅವಳನ್ನು ಉದ್ದೇಶಿಸಿ,
ಆ ತನ್ನ ಮೊಬೈಲ್ ಅವಳ ಬಳಿ ಹೇಗೆ ಬಂತು? ಆಕೆ ಅದನ್ನು ಕೊಂಡದ್ದೆಲ್ಲಿ? ಅದನ್ನು ಆಕೆಗೆ ಮಾರಿದವರ್ಯಾರು? ಕೊಂಡುಕೊಂಡ ತದನಂತರದಲ್ಲಿ ಅದರಲ್ಲಿ ಮಾಡಲ್ಪಟ್ಟ ಬದಲಾವಣೆಗಳೇನು? ಅದನ್ನು ಎಷ್ಟು ದಿನದಿಂದ ಉಪಯೋಗಿಸುತ್ತಿದ್ದಾಳೆ? ಅದರಲ್ಲಿ ತೆಗೆದಿರುವ ಫೋಟೊಗಳು ಯಾವುವು? ಎಲ್ಲ ವಿವರಗಳನ್ನು ಕೂಲಂಕುಶವಾಗಿ ವಿವರಿಸಲು ಸೂಚಿಸಿದರು.
ಸುಶೀಲಳಿಗೆ ಆ ಫೋನು ಎಂಟು ತಿಂಗಳ ಹಿಂದೆ ಸಿಕ್ಕಿತೆಂದೂ.ಅದನ್ನು ಅವಳು ಕೊಳ್ಳಲಿಲ್ಲವೆಂದೂ,ಅವಳ ಬಳಿಗೆ ಸತ್ಯವಾನ ಎಂಬ ವ್ಯಕ್ತಿ ಆಗಾಗ್ಗೆ ಬರುತ್ತಿದ್ದನೆಂದೂ,ಬಹಳ ಸೂಕ್ಷ್ಮ ಮತಿ ಹಾಗೂ ಸಹೃದಯಿ ಎಂದೂ, ಮೃದುಸ್ವಭಾವದ ಅವನಿಗೆ ಸಂಬಂಧಿಕರಿದ್ದ ಬಗ್ಗೆ ತನ್ನ ಬಳಿ ಏನೂ ಹೇಳಿರಲಿಲ್ಲವೆಂದೂ,ಬಹಳ ಅಪ್ಯಾಯಮಾನ್ವಾಗಿ ತನ್ನ ಬಳಿ ವ್ಯವಹರಿಸುತ್ತಿದ್ದನೆಂದೂ, ತಮ್ಮನ್ನು ಬರೀ ಭೋಗವಸ್ತುಗಳಾಗಿ ನೋಡುವ ಈ ಜಗತ್ತಿನಲ್ಲಿ ತನಗೂ ಒಂದು ಅಸ್ತಿತ್ವವನ್ನು ಕೊಡುತ್ತಿದ್ದ ಉದಾರ ಮನೋಭಾವಿಯೆಂದೂ,ಎಲ್ಲ ಗುಣವಂತರನ್ನು ಭಗವಂತ ಬೇಗ ಕರೆಸಿಕೊಳ್ಳುವಂತೆ ಅವನೂ ಬೇಗನೆ ತೀರಿಕೊಂಡನೆಂದೂ,ವಾಸ್ತವವಾಗಿ ಈ ಮೊಬೈಲ್ ಫೋನು ಅವನಿಗೇ ಸೇರಿದ್ದೆಂದೂ ಹೇಳಿದಳು.ಕಣ್ಣಲ್ಲಿ ನೀರು ತುಂಬಿ ಬಂದು ಒರೆಸಿಕೊಂಡಳು.
ಸಮಸ್ಯೆ ಇನ್ನೊಂದು ತಿರುವು ಪಡೆದುಕೊಂಡಿತು!!
ಮೊಬೈಲಿಗೆ ಸಂಬಂಧಿಸಿದಂತೆ ಅವನ ವಿಚಾರ ಏನಾದರೂ ಇದೆಯೋ? ಕೇಳಿದರು
ತಲೆದೂಗಿದ ಸುಶೀಲೆ ” ಸತ್ಯವಾನ ಯಾವುದೂ ಗಹನ ವಿಚಾರದಲ್ಲಿ ಮುಳುಗಿದ್ದ. ಅವನು ಇರುವ ಕೆಲಸ ಬಿಟ್ಟು ಯಾವುದೋ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ತನ್ನ ಖರ್ಚು ವೆಚ್ಚಗಳ ನಿಭಾವಣೆಗೆ ಅಗಾಗ್ಗೆ ಅರೆಕಾಲಿಕ ಕೆಲಸಗಳನ್ನು ಮಾಡುತ್ತಿದ್ದ. ತನ್ನ ಸಾಧನೆ ಕೈಗೂಡಿದಲ್ಲಿ ಈ ಜಗತ್ತಿನಲ್ಲೇ ಒಂದು ಕ್ರಾಂತಿಕಾರಕ ಬದಲಾವಣೆ ಕಾಣಲಿದೆಯೆಂಬ ಆಶಾಭಾವನೆ ಇಟ್ಟುಕೊಂಡಿದ್ದ. ಅದರಲ್ಲಿ ಯಶಸ್ಸು ಕಂಡಾಕ್ಷಣ ತನ್ನನು ಈ ವೇಶ್ಯಾವೃತ್ತಿಯಿಂದ ಬಿಡಿಸಿ ನನಗೆ ಒಂದು ಬದುಕು ಕಟ್ಟಿಕೊಡುವುದಾಗಿ ಭರವಸೆ ಕೊಟ್ಟಿದ್ದ. ಕೆಲವು ದಿನ ಬಂದಾಗ ಈ ಮೊಬೈಲ್ ಫೋನು ತಂದಿರುತ್ತಿದ್ದಾಗಿಯೂ, ತನ್ನ ಕನಸುಗಳನ್ನು ಸಾಕಾರಗೊಳಿಸುವ ಮಂತ್ರದಂಡ ಅದೆಂದೂ, ತನ್ನಾಸೆ ಕೈಗೂಡುವ ಸಮಯ ದೂರವಿಲ್ಲವೆಂದೂ ಹೇಳಿ, ತನ್ನದೊಂದು ಫೋಟೋ ತೆಗೆದು ತೋರಿಸಿ ತನ್ನನ್ನು ಮುದ್ದಾಡಿದ್ದಾಗಿಯೂ, ಅಂದು ಹೋಗುವ ಅವಸರದಲ್ಲಿ ಮರೆತು ಹೋದವನು ದಾರಿಯ ಅಪಘಾತದಲ್ಲಿ ಅಕಸ್ಮಾತ್ತಾಗಿ ಮೃತನಾದದ್ದಾಗಿಯೂ ಹೇಳಿ ಕಂಬನಿ ಒರೆಸಿಕೊಂಡಳು. ಅವನ ನೆನಪಿಗಾಗಿ ಅದನ್ನು ಕಣ್ಣಿನಲ್ಲಿ ಕಣ್ಣಿಟ್ಟು ಜೋಪಾನ ಮಾಡುತ್ತಿರುವುದಾಗಿ ಹೇಳಿದಳು. ಆ ಫೋನಿನ ಕ್ಯಾಮೆರಾದಲ್ಲಿ ತನ್ನ ಎರಡು ಚಿತ್ರಗಳಲ್ಲದೆ ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ ಅನಾಥಾಶ್ರಮದಲ್ಲಿ ಬೆಳೆಯುತ್ತಿರುವ ತನ್ನ ಗೆಳತಿಯ ಮಗುವಿನ ಫೋಟೋವೊಂದನ್ನು ತೆಗೆದಿರುವುದಾಗಿಯೂ ಹೇಳಿದಳು.
ಹಳೆಯ ಸುಶೀಲಳ ಹಾಗು ಆ ಮಗುವಿನ ಭಾವಚಿತ್ರವನ್ನು ಪರೀಕ್ಷಿಸಲಾಗಿ, ಸುಶೀಲ ತನ್ನ ಸಾತ್ವಿಕ ಸೌಂದರ್ಯದಿಂದ ಕಂಗೊಳಿಸಿದರೆ, ಮಗುವು ಎಲ್ಲ ಮಕ್ಕಳಂತೆ ಮುದ್ದಾಗಿತ್ತು!!
ಯೋಗೀಶನನ್ನು ಉದ್ದೇಶಿಸಿ ಏನಾದರೂ ಹೇಳುವುದಿದೆಯೇ ಕೇಳಿದರು, ಇಲ್ಲವೆಂದು ತಲೆ ಅಲ್ಲಾಡಿಸಿದ.
ಮಧ್ಯಂತರ ವಿರಾಮ ಘೋಷಿಸಿ, ಒಂದು ಗಂಟೆಯ ನಂತರ ಮತ್ತೆ ಸೇರಬೇಕೆಂದು ಸೂಚಿಸಿದರು.
ಚಿದಂಬರ -ಸಿದ್ಧಯ್ಯ ಒಳಗೆ ನಡೆದರು. ಸುಶೀಲ ಎಂದಿನಂತೆ ಗಂಭೀರವಾಗಿ ತಲೆತಗ್ಗಿಸಿ ಹೊರನಡೆದಳು. ಯೋಗೀಶ ಸ್ವಲ್ಪ ಮೆತ್ತಗಾದಂತೆ ಇದ್ದ.
ವಿಚಾರ ವಿನಿಮಯದ ಬಳಿಕ ಒಂದು ನಿರ್ಧಾರಕ್ಕೆ ಬಂದ ಸಿದ್ಧಯ್ಯ -ಚಿದಂಬರರು ಒಂದು ರೀತಿಯ ನೆಮ್ಮದಿಯ ನಿಟ್ಟುಸಿರು ಬಿಟ್ಟರು.ಅಂದಿನ ಊಟ ಅವರಿಗೆ ಹೊಸ ರುಚಿಯ ಅನುಭವ ನೀಡಿತು.
ಎಲ್ಲರೂ ತಿರುಗಿ ಬಂದ ನಂತರ ಚಿದಂಬರ ಮೂರ್ತಿ ಸುಶೀಲೆಯನ್ನು ಉದ್ದೇಶಿಸಿ,.ಸತ್ಯವಾನನ ಸಾವಿನಿಂದ ಸುಶೀಲೆಗಾದ ದುಃಖಕ್ಕೆ ಸಂತಾಪ ವ್ಯಕ್ತಪಡಿಸಿ ಆತ ಆಕೆಯ ಬಳಿ ಬೇರೆ ಏನನ್ನದರೂ ಉಳಿಸಿ ಹೋಗಿದ್ದಾನೆಯೇ ಎಂದು ಕೇಳಿದರು.
ಹೌದೆಂದು ತಲೆ ಆಡಿಸಿದ ಅವಳು ಕೆಲವು ಕಾಗದದ ಹಾಳೆ ಗಳನ್ನೂ, ಒಂದು ನೋಟ್ ಪುಸ್ತಕವನ್ನೂ ಇಟ್ಟಿದ್ದಿದ್ದಾಗಿಯೂ, ಅವುಗಳ ಅಂಕಿ- ಸಂಖ್ಯೆಗಳು, ರೇಖಾಚಿತ್ರಗಳೂ, ಸಾಂಕೇತಿಕ ಚಿನ್ಹೆಗಳು ತನಗೆ ಅರ್ಥವಾಗಲಿಲ್ಲವೆಂದೂ, ಅವನ ಮರಣಾನಂತರ, ಎಸೆಯಲು ಮನಸ್ಸಾಗದೆ ಅಟ್ಟದ ಮೇಲೆ ಇಟ್ಟಿರುವುದಾಗಿಯೂ ಹೇಳಿದಳು.
ಅದನ್ನು ತಂದು ಕೊಡುವುದು ಸಾಧ್ಯವೋ? ಕೇಳಿದರು
ಅಗಬಹುದೆಂದು ಅವಳು ನುಡಿದ ನಂತರ ಸಿದ್ಧಯ್ಯನವರೇ ತಮ್ಮ ಜೀಪಿನಲ್ಲಿ ಕರೆದೊಯ್ದು ನೋಡಿದಾಗ ಕೆಲವು ಜೀರ್ಣವಾಗಿ, ಮಳೆಯ ನೀರಿನಲ್ಲಿ ತೊಪ್ಪೆಯಾಗಿ, ಇನ್ನಷ್ಟು ಹರಿದು ಹೋಗಿ, ಅಕ್ಷರಗಳು ಚಿತ್ರಗಳು ಅಳಿಸಿ ಹೋಗಿದ್ದವು.
ಕೋರ್ಟಿನ ಸಮಕ್ಷಮದಲ್ಲಿ ಪರೀಕ್ಷಿಸಿದ ಚಿದಂಬರ ಸಿದ್ಧಯ್ಯ ಇಬ್ಬರೂ ನಿಟ್ಟುಸಿರು ಬಿಟ್ಟರು.
******* ******* ******
ತೀರ್ಪು ನೀಡುವ ಸಮಯ. ಕೋರ್ಟಿನ ಅವರಣದಲ್ಲಿ ಗದ್ದಲ ಗುಸು-ಗುಸು ಪ್ರಾರಂಭವಾಯ್ತು. ನಿಮಿಷದಿಂದ ನಿಮಿಷಕ್ಕೆ ಹೆಚ್ಚುತ್ತಲೇ ಹೋಯ್ತು. ಗಲಾಟೆ ನಿಲ್ಲಿಸಲು ನ್ಯಾಯಾಧೀಶರ ಸುತ್ತಿಗೆ ಮೇಜನ್ನು ಬಡಿಯುವಾಗ ಕೆಳಗೆ ಸಿಕ್ಕ ಸುಶೀಲಳ ಫೋನು ಪುಡಿ ಪುಡಿಯಾಯ್ತು.ಚಿದಂಬರ ಕುಟ್ಟುತ್ತಲೇ ಇದ್ದರು. ಗಲಾಟೆ ಕಡಿಮೆಯಾಯ್ತು.
ತೀರ್ಪಿಗೆ ಎಲ್ಲರೂ ಕಿವಿ ನಿಮಿರಿಸಿದರು. ತೀರ್ಪು ಸುಶೀಲಳ ಪರವಾಗಿ ಬಿತ್ತು. ಚಿದಂಬರ, ಯೋಗೀಶನನ್ನೇ ಗಮನಿಸುತ್ತ ,ಸುಶೀಲ ತನ್ನ ಸಾಮರ್ಥ್ಯದ ಪರಿಮಿತಿಯಲ್ಲಿ ಪ್ರಾಮಾಣಿಕವಾಗಿ ವ್ಯವಹರಿಸಿದ ಕಾರಣ ಇದರಲ್ಲಿ ಅವಳ ತಪ್ಪು ಸಾಬೀತಾಗುವುದಿಲ್ಲವೆಂದೂ, ಈ ವ್ಯವಹಾರದಲ್ಲಿ ಸಾಂದರ್ಭಿಕ ಕಾರಣಗಳಿಂದ ಹೊಂದಾಣಿಕೆಯಾಗದೆ ಯೋಗೀಶನ ಉದ್ದೇಶ ಸಾಧನೆ ಆಗದೆ ರಸಾಭಾಸ ಅನುಭವಿಸಿದ್ದಕ್ಕಾಗಿ ತಮ್ಮ ಮನಃಪೂರ್ವಕ ಸಹಾನುಭೂತಿ ಇದೆಯೆಂದೂ, ಈ ರೀತಿಯ ಕಟ್ಟಳೆ ತಮಗೆ ಹೊಸ ಅನುಭವವೆಂದೂ, ಇದಕ್ಕೆ ಸಂಬಂಧಿಸಿದಂತೆ ಕಾನೂನು ಮೌನಿಯೆಂದೂ, ಮಾನವೀಯತೆಯನ್ನು ಪ್ರಮುಖ ಅಧಾರವಾಗಿಟ್ಟುಕೊಂಡು ತಮ್ಮ ತೀರ್ಪನ್ನು ನೀಡಿದ್ದಾಗಿಯೂ ವಿವರಿಸಿ ಈ ಕಲಾಪದ ನಂತರ ಇಬ್ಬರೂ ಬಂದು ತಮ್ಮನ್ನು ಭೇಟಿಯಾಗಬೇಕೆಂದು ಸೂಚಿಸಿ ಒಳನಡೆದರು.
ಸಿದ್ಧಯ್ಯ ತಾವೇ ಖುದ್ದಾಗಿ ಯೋಗೀಶ ಸುಶೀಲರನ್ನು ನ್ಯಾಯಾಧೀಶರ ಖಾಸಗೀ ಕೋಣೆಗೆ ಕರೆದೊಯ್ದರು. ಅವರನ್ನು ಸ್ವಾಗತಿಸಿ ಕಾಫೀ ತಿಂಡಿಗಳಿಂದ ಸತ್ಕರಿಸಿದ ಚಿದಂಬರ ಮೂರ್ತಿ ಬಲು ಅಪ್ಯಾಯತೆಯಿಂದ ಅವರ ಕುಶಲ ವಿಚಾರಿಸಿದರು. ಖಟ್ಲೆಯಲ್ಲಿ ಸೋತ ಯೋಗೀಶನ ನಡತೆಯಲ್ಲಿ ಮುಖ ಭಾವದಲ್ಲಿ ಯಾವ ಅಸಮಾಧಾನವೂ ಇರಲಿಲ್ಲ. ಆದರೆ, ಸುಶೀಲೆಯಿಂದ ದೂರಸರಿದು ಕುಳಿತ ಅವನು ಅವಳೊಡನೆ ಯಾವುದೇ ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.
ಚಿದಂಬರ ಮೂರ್ತಿಗಳು ವಿಷಯಕ್ಕೆ ಬಂದರು. ಸುಶೀಲಳ ಬಳಿಯಿದ್ದ ಕ್ಯಾಮೆರಾ ವಿಶೇಷವಾದ ಕ್ಯಾಮೆರಾ ಎಂದೂ ಅದು ಕಣ್ಣಿನ ಮೂಲಕ ತಾನು ಚಿತ್ರ ತೆಗೆಯುವ ಮನುಷ್ಯನ ಆ ಕ್ಷಣದ ಅಂತರಂಗವನ್ನು ಭೇದಿಸಿ ಅದನ್ನು ಮುಖಚಹರೆಯೊಂದಿಗೆ ಮಿಳಿತಗೊಳಿಸಿ ಪರದೆಯ ಮೇಲೆ ಮೂಡಿಸಬಲ್ಲ ಅನೂಹ್ಯ ಸಾಧನವಾಗಿತ್ತೆಂದೂ ತಮ್ಮ ಪ್ರಾಯೋಗಿಕ ಸಂಶೋಧನೆಗಳಿಂದ ಅದು ಧೃಢಪಟ್ಟು ಅದರಿಂದುಂಟಾಗಬಹುದಾದ ಅಲ್ಲೋಲ ಕಲ್ಲೋಲಗಳನ್ನು ತಪ್ಪಿಸಲು ಕೋರ್ಟಿನಲ್ಲಿ, ಎಲ್ಲರ ಸಮಕ್ಷಮದಲ್ಲಿ ಅದನ್ನು ತಾವೇ ಕೈಯ್ಯಾರ ಕುಟ್ಟಿ ಪುಡಿ ಮಾಡಿದೆಯೆಂದೂ, ಅದಕ್ಕಾಗಿ ಸಿದ್ಧಯ್ಯ ಗದ್ದಲ ನಡೆಯುವ ವ್ಯವಸ್ಥೆ ಮಾಡಿದರೆಂದೂ ಹೇಳಿದರು.
ಇವರಿಬ್ಬರಿಗೂ ನಂಬಲಾಗಲಿಲ್ಲ!!
ಸಿದ್ಧಯ್ಯ ತಾವು ಫೋನನ್ನು ಪರೀಕ್ಷಿಸಿದ್ದು, ಹೋಟೆಲಿನಲ್ಲಿ ಆದ ನಾಯಿಯ ಪ್ರಹಸನ,ಅದರ ಮಾಲಿಕರನ್ನು ವಿಚಾರಣೆಗೆ ಒಳಪಡಿಸಿದಾಗ ಹೊರಬಿದ್ದ ಸತ್ಯ, ಅದರಿಂದ ತಾವು ಫೋನು, ಅದರಲ್ಲಿರುವ ಕ್ಯಾಮೆರಾದ ಜಗದಾಶ್ಚರ್ಯಕರವಾದ ಶಕ್ತಿ,ಅದರ ಸಾರ್ವತ್ರಿಕ ಉಪಯೋಗದಿಂದ ಆಗುವ ಪರಿಣಾಮಗಳ ಸಾಧ್ಯತೆ ಬಾಧ್ಯತೆಗಳ ವಿಚಾರ,ತಾವಿಬ್ಬರೂ ನಿದ್ದೆಗೆಟ್ಟು ಮಾಡಿದ ಕೆಲಸಗಳು, ಯೋಚನೆಗಳು, ವಿಚಾರ ವಿನಿಮಯಗಳು ಎಲ್ಲವನ್ನು ತಿಳಿಸಿದರು.
ವೃತ್ತಿಯಿಂದ ತಂತ್ರಜ್ಞನಾದ ಯೋಗೀಶನ ಕುತೂಹಲ ಕೆರಳಿತು. ”ಈ ರೀತಿಯ ಸಾಧನದಿಂದ ಮನುಷ್ಯ ಮನುಷ್ಯನನ್ನು ಅರಿಯಲು ಬಹಳ ಸಹಕಾರಿಯಲ್ಲವೇ ಸಾರ್. ಅದನ್ನು ಹಾಳುಗೆಡವಿ ನೀವು ಅನ್ಯಾಯ ಮಾಡಿದಿರಿ, ಅದ್ಭುತ ಆವಿಷ್ಕಾರವನ್ನು ನಿರ್ನಾಮ ಮಾಡಿದಿರಿ.ಭಿನ್ನಾಭಿಪ್ರಾಯಗಳನ್ನು,ಸಂಬಂಧಗಳನ್ನು ಮುರಿಯುವ ಸಂದರ್ಭಗಳನ್ನು ಸುಲಭವಾಗಿ ನಿವಾರಿಸಬಹುದಿತ್ತು. ಎಂತಹ ಅಕಾರ್ಯ”” ಯೋಗೀಶ ಹಲುಬಿದ.
ಸಿದ್ಧಯ್ಯ ನಿಧಾನವಾಗಿ ಹೇಳಿದರು. ” ನೋಡು ಯೋಗೀಶ್,ಎಲ್ಲರೂ ನಿನ್ನಂತೆ ನ್ಯಾಯಾನ್ಯಾಯಗಳ ವಿವೇಚನೆ ಇರುವ ಜೀವಿಗಳಾಗಿದ್ದರೆ ಸರಿ. ಆದರೆ ಈ ಪ್ರಪಂಚ ಹಾಗಲ್ಲ. ಈ ಉಪಕರಣ ಸಿಕ್ಕಿದರೆ ಕೋತಿಗೆ ಕಳ್ಳು ಕುಡಿಸಿದಂತೆ. ಮನುಷ್ಯನಿಗೆ ಮನುಷ್ಯನ ಮೇಲಿನ ನಂಬಿಕೆ ಕುಸಿಯುತ್ತದೆ.ಸರಿಯೋ ತಪ್ಪೋ ಈ ಜಗತ್ತು ನಡೆಯುವುದೇ ನಂಬಿಕೆ ಮೇಲೆ. ಇದರ ಜೊತೆಗೆ ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದರೂ ನೀತಿ ನಿಯಮಗಳ ಚೌಕಟ್ಟು ಇರುವುದರಿಂದ ಅನ್ಯಾಯ ಅಕ್ರಮಗಳು ಹದ್ದುಬಸ್ತಿನಲ್ಲೇ ಇರುತ್ತವೆ. ಅವು ಮಿತಿ ಮೀರಿದಾಗ ಸಮಾಜ ಒಂದು ಬಗೆಯ ಯುಗ ಪಲ್ಲಟಕ್ಕೊಳಗಾಗಿ ಮತ್ತೆ ಹೊಸ ಸಮತೋಲನ ಪಡೆಯುತ್ತದೆ. ಇದೆಲ್ಲವೂ ತನ್ನಿಂತಾನೆ,ತನ್ನೊಳಗಿನಿಂದ ಮೂಡುವ, ನಡೆಯುವ, ಆಗುವ ಪ್ರಕ್ರಿಯೆಯಾದರೇ ಸರಿ. ಲಾಭ ನಷ್ಟ ಸಾವು ನೋವು ಆಯಾ ಸಂದರ್ಭಕ್ಕೆ ತಕ್ಕಂತೆ ಆಗುತ್ತವೆ. ಇಷ್ಟಕ್ಕೂ ಈ ಸಾಧನ ಅನುಮಾನಗಳನ್ನು ಬಲಗೊಳಿಸುವುದೇ ವಿನಃ ತೊಡೆದು ಹಾಕುವ ಸಾಧನವಾಗಲಾರದು.ಒಬ್ಬರ ಮೇಲೆ ಇನ್ನೊಬ್ಬರಿಗಿರಲಿ,ವ್ಯಕ್ತಿ ತನ್ನನ್ನು ತಾನೇ ನಂಬದಂತಾಗುವ ಹಾಗಾಗಿ ಮಾನಸಿಕ ಕ್ಷೋಭೆಗೆ ತುತ್ತಾಗಿ ಸಮಾಜದಲ್ಲಿ ಸಮೂಹ ಸನ್ನಿಯ ಸುನಾಮಿ ಏಳುವುದು ನಿಸ್ಸಂದೇಹವಾಗಿ ಸಾಧ್ಯ. ಆದ್ದರಿಂದಲೇ ನಾವೀ ಈ ಕಷ್ಟಸಾಧ್ಯ ನಿರ್ಧಾರಕ್ಕೆ ಬಂದೆವು ಎಂದರು.
“”ಇನ್ನೂ ಸ್ವಲ್ಪ ವಿವರಿಸುವಿರಾ”” ಸುಶೀಲ ಕೇಳಿದಳು
”ಏಕಿಲ್ಲ” ಎಂದ ಸಿದ್ಧಯ್ಯ ಹೇಳಿದರು. ”ಎದುರಲ್ಲಿ ನಿಂತ ನಿನಗೂ,ಈ ಫೋನಿನಲ್ಲಿ ಮೂಡಿದ ಫೋಟೊ ಗೂ ಸಾಮ್ಯತೆ ಇಲ್ಲದಿದ್ದಾಗ ಇಲ್ಲಿ ಎಲ್ಲವೂ ಸರಳ ವಾಗಿಲ್ಲವೆಂಬ ಅನುಮಾನ ಬಂತು. ಈ ಅನುಮಾನಗಳನ್ನು ಪರಿಹರಿಸಿಕೊಳುವ ವ್ಯವಸ್ಥಿತ ಯೋಜನೆಯೊಂದನ್ನು ನಾವು ರೂಪಿಸಿಕೊಂಡೆವು. ಇದರಲ್ಲಿ ನೀವಿಬ್ಬರೂ ಸುಳ್ಳು ಹೇಳದ ಪ್ರಾಮಾಣಿಕರೆಂದು ನಮಗಾಗಲೇ ಮನವರಿಕೆಯೂ ಆಗಿತ್ತು. ಒಂದೊಂದೇ ಕೊಂಡಿಗಳನ್ನು ಜೋಡಿಸುತ್ತ ಬಂದಾಗ ನಿನ್ನ ಯಥಾರೂಪ,ಕ್ಯಾಮೆರಾ,ಯೋಗೀಶನ ಬಳಿ ಇದ್ದ ಚಿತ್ರ ಹಾಗೂ ಅವುಗಳ ಭಿನ್ನತೆ ಮತ್ತು ಈ ವಿಷಯಗಳ ಅರ್ಥ ಕಲ್ಪಿಸುವ ಕೊಂಡಿ ನಮಗೆ ಸಿಗದ ಕಾರಣ ನಿನ್ನ ಕ್ಯಾಮೆರಾವನ್ನು ಪರೀಕ್ಷೆಗೆ ಒಳಪಡಿಸುವ ನಿರ್ಧಾರ ಮಾಡಿದೆವು. ಇದು ಒಂದು ವಿಶೇಷ ಮಸೂರದ ಮೂಲಕ ಕಣ್ಣಿನ, ಮುಖದ ಸ್ನಾಯುಗಳ ವಿದ್ಯುತ್ತರಂಗಗಳನ್ನು ಸೆರೆಹಿಡಿದು ತನ್ನೊಳಗಿರುವ ತಂತ್ರಾಂಶಕ್ಕೆ ರವಾನಿಸುತ್ತದೆ.ಅದು ತನ್ನ ಪ್ರೊಟೋಕಾಲ್ಗೆ ಅನುಸಾರವಾಗಿ ವ್ಯಕ್ತಿಯ ಮನಸ್ಥಿತಿಯನ್ನು ವ್ಯಕ್ತಿತ್ವವನ್ನು ಗೊತ್ತು ಹಿಡಿದು ಅದನ್ನು ಮುಖಚಹರೆಗೆ ಆರೋಪಿಸಿ ಅದರನುಸಾರವಾಗಿ ರೂಪುಗೊಂಡ ಆ ವ್ಯಕ್ತಿಯ ಚಿತ್ರವನ್ನು ಪರದೆಗೆ ರವಾನಿಸುತ್ತದೆ. ನೀನು ಸದಾ ನಿರ್ಮಲ ಚಿತ್ತಳಾಗಿರುವ ಕಾರಣ ನಿನ್ನ ಸೌಂದರ್ಯ ಆ ಫೋಟೋದಲ್ಲಿ ವೃದ್ಧಿಸಿತ್ತು. ಯೋಗೀಶ ಕೂಡಾ ಸ್ಫುರದ್ರೂಪಿಯೇ ಆಗಿದ್ದ. ನಿಷ್ಕಲ್ಮಷ ಮನಸ್ಸಿನ ಮಗು ಮುದ್ದಾಗಿ ಕಂಗೊಳಿಸಿತ್ತು. ಆದರೆ ತಾವು ಪರೀಕ್ಷಾತ್ಮಕವಾಗಿ ತೆಗೆದ ಹಲವಾರು ಇತರರ ಚಿತ್ರಗಳು ಅವರ ಮನಸ್ಥಿತಿಗೆ ,ಆಲೋಚನೆಗೆ ಹೊಂದಾಣಿಕೆ ತೋರಿಸಿ ಕೆಲವರನ್ನೂ ಕುರೂಪಿಗಳಾಗಿಯೂ ತೋರಿಸಿತು!. ಅದರಿಂದ ನಮ್ಮ ಸಂಶೋಧನೆಗಳ ಮೇಲಿನ ನಂಬಿಕೆ ಬಲಗೊಂಡು ನಿನ್ನಿಂದ ಹಲವು ವಿವರಗಳನ್ನು ಪಡೆದೆವು.ಅನಂತರದಲ್ಲಿ ಸಾಧಕ ಬಾಧಕಗಳನ್ನು ತರ್ಕಿಸಿದೆವು. ಮೂಲಭೂತವಾಗಿ ಇದು ” ಹೃದಯಕೆ ಕಣ್ಣೇ ಸಾಕ್ಷಿ” ಅಥವಾ ’ಫೇಸ್ ಈಸ್ ದ ಇಂಡೆಕ್ಸ್ ಆಫ್ ಮೈಂಡ್” ಎಂಬ ದಾರ್ಶನಿಕರ ಹೇಳಿಕೆಯನ್ನು ಸಾಕಾರಗೊಳಿಸುವ ಅಭೂತಪೂರ್ವ ಆವಿಷ್ಕಾರ. ಆದರೆ ಸತ್ಯ ಯಾವಾಗಲೂ ಸಹ್ಯವಲ್ಲ. ಅದು ಅಲ್ಲದೆ ಎಲ್ಲರೂ ಎಲ್ಲಾ ಸಮಯದಲ್ಲೂ ಸತ್ಯ ನುಡಿಯಲಾರರು.ಹಲವಾರು ಸಂದರ್ಭಗಳಲ್ಲಿ ಸುಳ್ಳುಹೇಳುವುದು ಅನಿವಾರ್ಯವಾಗುತ್ತದೆ. ಜಗತ್ತಿನಲ್ಲಿ ಎಷ್ಟೋ ಬಗೆಯ ಜನಗಳು ಇರುತ್ತಾರೆ. ಒಬ್ಬಬ್ಬರ ಮನೋವ್ಯಾಪಾರವೂ ವಿಭಿನ್ನ. ಈ ವೈವಿಧ್ಯತೆಯಲ್ಲಿ ಏಕತೆ ಮೂಡಿ ಜೀವಿಗಳ ನಡುವಿನ ವ್ಯಾಪಾರ ನಡೆಯುವುದು ನಂಬಿಕೆಯಿಂದ. ಈ ನಂಬಿಕೆ ಗಳು ಬೆಳೆಯಬೆಕಾದರೆ ಏನು ಮಾಡಬೇಕು -ಏನು ಮಾಡಬಾರದು ಎಂಬುದು ನಿಮ್ಮ ಅನುಭವಕ್ಕೆ ಬಂದೇ ಇರುತ್ತದೆ.ಈ ರೀತಿಯ ಕ್ಯಾಮೆರಾ ಸರ್ವವ್ಯಾಪಿಯಾಗಿ ಬಳಕೆಗೆ ಬಂದರೆ ಏನಾಗಬಹುದು ನೀವೇ ಯೋಚಿಸಿ. ಜನಗಳು ಮಾತುಕೇಳಿಸಿಕೊಳ್ಳದೆ ಕ್ಯಾಮೆರಾ ನಿಮ್ಮ ಮುಖಕ್ಕೆ ಹಿಡಿದು ಕೂಡಬಹುದು; ಕೋತಿಗೆ ಮಾಣಿಕ್ಯ ಕೊಟ್ಟಂತಾಗುತ್ತದೆ ಪರಿಸ್ಥಿತಿ. ಹಿಟ್ಲರ್ ಅಥವಾ ಸ್ಟಾಲಿನ್ ರಂತಹ ನರಹಂತಕರ ಕೈಗೆ ಸಿಕ್ಕಿದರೆ, ದುರ್ಮಾರ್ಗಿಗಳ ವಶವಾದರೆ ಆಗಬಹುದಾದ ಅನಾಹುತ ಊಹಿಸಿಕೊಳ್ಳಿ. ನಮ್ಮ ಸುತ್ತಲೂ ಇರುವ ಧೂರ್ತರ ಸಂತೆ ನೋಡಿಯೇ ನಾವು ಈ ವಿಷಯವನ್ನು ಯಾವುದೇ ಕಾರಣಕ್ಕೆ ಬಹಿರಂಗ ಗೊಳಿಸದಂತೆ ಗುಟ್ಟು ಕಾಯ್ದುಕೊಂಡೆವು.ಈ ಉಪಕರಣ ಯಾರ ಅರಿವಿಗೂ ಬಾರದಂತೆ ಮರೆಯಾದರೆ ಒಳಿತು ಎಂಬ ನಮ್ಮ ಮನಸ್ಸಾಕ್ಷಿಯ ತೀರ್ಪಿಗೆ ಅನುಗುಣವಾಗಿ ನಡೆದೆವು. ಇದಕ್ಕೆ ನಿಮ್ಮ ಕ್ಷಮೆ ಇರಲಿ ಎಂದು ಹೇಳಿ ನಿಲ್ಲಿಸಿದರು.
ಯೋಗೀಶ ಸುಶೀಲಳ ಮುಖ ನೋಡಿದ. ಹೊಸ ಕ್ಯಾಮೆರಾದಂತಾದ ಅವನ ಕಣ್ಣಿಗೆ ಅವಳು ಅಪ್ರತಿಮ ಸುಂದರಿಯಾಗಿ ಕಾಣಿಸಿದಳು. ಮೆಟ್ಟಿಲುಗಳನ್ನಿಳಿದು ಜೊತೆಗೆ ಹೋಗುವಾಗ ಅವನ ಅಂತರಾತ್ಮನ ತೀರ್ಪಿಗೆ ಬದ್ಧನಾಗಿ ಅವಳ ಕೈಹಿಡಿದ. ಸುಶೀಲ ಆಕ್ಷೇಪಿಸಲಿಲ್ಲ.

*******************************************************************
ಸುದರ್ಶನ ಗುರುರಾಜರಾವ್.

 

 

 

 

 

ಶಕುಂತಲಾ

ಶಕುಂತಲಾ
ಬೆಂಗಳೂರಿನ ಗೌಜು ಗದ್ದಲಗಳಿಂದ ಮುಕ್ತರಾಗಿ ಪ್ರಶಾಂತವಾದ ವಾತಾವರಣದಲ್ಲಿ ತಮ್ಮ ನಿವೃತ್ತ ಜೀವನವನ್ನು ಕಳೆಯುವುದು ಸುಧಾಕರ ಹಾಗೂ ರಮ್ಯಾ ದಂಪತಿಗಳ ಕನಸು.ಅದರಂತೆಯೇ ನಿವೃತ್ತಿಯಾದಾಗ ಬಂದ ಹಣವನ್ನು ಒಟ್ಟುಗೂಡಿಸಿ, ತಮ್ಮಲ್ಲಿದ್ದ ಎರಡು ನಿವೇಶನಗಳನ್ನು ಮಾರಿ ಬಂದ ಹಣದಲ್ಲಿ ಮೈಸೂರಿನಲ್ಲಿ ಅನುಕೂಲಕರವಾದ ಮನೆಯೊಂದನ್ನು ಖರೀದಿಸಿದ್ದರು. ಎರಡು ಅಂತಸ್ತಿನ ಮನೆಗೆ ಒಳಗಡೆಯಿಂದಲೇ ಮೆಟ್ಟಿಲುಗಳಿದ್ದು ಮೇಲಿನ ಮಜಲಿನಲ್ಲಿದ್ದ ಕೋಣೆಗಳನ್ನು ಮಲಗಲು ಉಪಯೋಗಿಸುತ್ತಿದ್ದರು. ರಮ್ಯಾ ಸುಧಾಕರನಿಗಿಂತ ಮೂರು ವರ್ಷ ಚಿಕ್ಕವರಾಗಿದ್ದರೂ ಸ್ವಯಮ್ ಪ್ರೇರಣೆಯಿಂದ ನಿವೃತ್ತಿ ತೆಗೆದುಕೊಂಡಿದ್ದರು. ಇದ್ದ ಒಬ್ಬಳೆ ಮಗಳು ಶಕುಂತಲ ಡಾಕ್ಟರಾಗಿ ಸ್ನಾತಕೋತ್ತರ ಪದವಿ ಪಡೆದು ಮೈಸೂರಿನಲ್ಲೇ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಮಹಡಿಯ ಮೇಲಿನ ಕೋಣೆಯಲ್ಲಿ ಅಂದು ಕುಳಿತು ಶಕುಂತಲೆಯ ಬಗೆಗೇ ಮಾತುಕತೆ ನಡೆಸುತ್ತಿದ್ದರು.
ಎಲ್ಲ ತಂದೆ ತಾಯಿಗಳಂತೆ ಬೆಳೆದ ಮಗಳಿಗೆ ಮದುವೆ ಮಾಡಿ ಕಳಿಸುವ ಯೋಚನೆ ಇವರಿಗೂ ಇತ್ತು. ಓದಿದ, ಲಕ್ಷಣವಾಗಿರುವ, ಬುದ್ಧಿವಂತ,ಚುರುಕು ಬುದ್ಧಿಯ ಹಾಗೂ ಗೌರವಾನ್ವಿತ,ಸ್ಥಿತಿವಂತ ತಂದೆ ತಾಯಿಯರಿರುವ ಅವಳಿಗೆ ಗಂಡು ಸಿಗುವುದೇನೂ ಕಷ್ಟದಾಯಕವಾದ ಕೆಲವಾಗಿರಲಿಲ್ಲ. ಅದೂ ಉತ್ತಮ ಸಂಸ್ಕೃತಿ, ಹಿನ್ನೆಲೆ ಇರುವ ಹೆಣ್ಣುಗಳಿಗೇ ಬರ ಬಂದಿರುವ ಈಗಿನ ಕಾಲದಲ್ಲಿ!. ಆದರೆ ಅವರ ಮುಂದಿದ್ದ ಸಮಸ್ಯೆಯೇ ಬೇರೆ. ಶಕುಂತಲಾಳ ಜನ್ಮ ರಹಸ್ಯ.
****
ಸುಧಾಕರ ಮತ್ತು ರಮ್ಯ ಮದುವೆಯಾಗಿ ಹನ್ನೆರೆಡು ವರ್ಷ ಕಳೆದಿದ್ದರೂ ಅವರಿಗೆ ಮಕ್ಕಳಾಗಿರಲಿಲ್ಲ. ಅನುರೂಪ ದಂಪತಿಗಳಾದ ಅವರು ಮಕ್ಕಳಗಾಗಿ ಮಾಡದ ಪ್ರಯತ್ನವೇ ಇರಲಿಲ್ಲ.ವ್ರತ, ನೇಮ ನಿಷ್ಠೆ, ತೀರ್ಥಯಾತ್ರೆ, ವೈದ್ಯಕೀಯ ತಪಾಸಣೆ ಹೀಗೆ ಲೌಕಿಕ, ಪಾರಮಾರ್ಥಿಕವಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದರು.ದತ್ತು ಪಡೆಯೋನ ಎಂದರೆ ಇನ್ನೂ ವಯಸ್ಸು ಮೀರಿರಲಿಲ್ಲ.ಹಣ ಹೀಗೆ ಖರ್ಚು ಮಾಡಿದ್ದರೂ ಸ್ವಭಾವತಃ ವ್ಯವಹಾರ ಚತುರನಾದ ಸುಧಾಕರನ ಹೂಡಿಕೆಗಳು ಫಲ ಕೊಟ್ಟು ಇಂದು ಅವರು ಸ್ಥಿತಿವಂತರಾಗಿರಲು ಕಾರಣವಾಗಿತ್ತು. ಕಡೆಯ ಪ್ರಯತ್ನವಾಗಿ ಮಾಡಿದ ಕೃತಕ ಗರ್ಭಧಾರಣೆ ಫಲವಾವಿ ರಮ್ಯಾ ಕಡೆಗೂ ತನ್ನ ಬಸಿರಲ್ಲಿ ಮಗುವನ್ನು ಹೊತ್ತು ಬೆಳೆಸತೊಡಗಿದ್ದಳು. ಎಲ್ಲ್ಲಾ ಸುಸೂತ್ರವಾಗಿಯೇ ನಡೆದಿತ್ತು.ಹೆರಿಗೆಯ ದಿನಗಳು ಸಮೀಪಿಸುತ್ತಾ ರಕ್ತದೊತ್ತಡದಲ್ಲಿ ಏರು-ಪೇರುಗಳು ಕಾಣಿಸಿಕೊಂಡು ಪ್ಲಾಸೆಂಟಲ್ ಅಬ್ರುಪ್ಷನ್ ಎಂಬ ಪರಿಸ್ಥಿತಿ ಉದ್ಭವಿಸಿ ರಮ್ಯಾ ಪರಿಸ್ಥಿತಿ ಗಂಭೀರವಾಗಿತ್ತು. ಮಗುವಿಗೆ ತೀವ್ರ ತೊಂದರೆಯುಂಟಾಗಿ ಹುಟ್ಟುವಾಗಲೇ ಸಾವನ್ನಪ್ಪಿತ್ತು.ರಮ್ಯಾ ಉಳಿದದ್ದೇ ಒಂದು ಪವಾಡವಾಗಿತ್ತು.
ತುಂಬಿದ ಬಸಿರಿನ ಪರಿಣಾಮಗಳು ರಮ್ಯಾ ಮೈಮೇಲೆ ಆಗದೇ ಇರಲಿಲ್ಲ. ಮಗುವಿಲ್ಲದಿದ್ದರೂ ಎದೆ ಹಾಲು ಉಕ್ಕುತ್ತಿತ್ತು. ಮಗುವಿಲ್ಲದ ನೋವು ಮನಸ್ಸನ್ನು ಘಾಸಿಗೊಳಿಸಿತ್ತು. ಹೀಗಿರುವಲ್ಲಿ ಮೈ ಮನಗಳ ನೋವನ್ನು ಶಮನಗೊಳಿಸಲು ಬಂದ ಮಗುವೇ ಶಕುಂತಲ. ಅಗೆಲ್ಲಾ ಕಾನೂನಿನ ಕಟ್ಟಳೆಗಳು, ಔಪಚಾರಿಕತೆಯ ಕಬಂಧ ಬಾಹುಗಳು,ಮಾನವೀಯತೆಯ ತುಡಿತಗಳನ್ನು ಹಿಡಿತದಲ್ಲಿಟ್ಟು ಕರುಣೆಯ ಕೊರಳ್ನ್ನು ಹಿಸುಕಿ ಉಸಿರು ಕಟ್ಟಿಸುವ ಕಾಲವಾಗಿರಲಿಲ್ಲ. ಅನಾಥವಾಗಲಿದ್ದ ಮಗುವನ್ನು ತಮ್ಮದಾಗಿಸಿಕೊಳ್ಲಲು ಅವರಿಗೆ ಯಾವ ಅಡ್ಡಿ ಅತಂಕಗಳೂ ಎದುರಾಗಲಿಲ್ಲ. ಆಸ್ಪತ್ರೆಯ ಹಿರಿಯ ವೈದ್ಯರು ಹಾಗು ಹಿರಿಯ ಶಶ್ರೂಶಕಿಯರ ಸಹಕಾರ -ಸಹಮತದೊಂದಿಗೆ ಮಗುವನ್ನು ಕರೆದೊಯ್ದು ಸಾಕಿಕೊಂಡರು. ಹಸಿ ಬಾಣಂತಿಯ ಸ್ಥಿತಿಯಲ್ಲೇ ಮಗುವಿನ ಸಾನ್ನಿಧ್ಯ ದೊರೆತದ್ದಕ್ಕೂ, ಎದೆಹಾಲು ಉಣಿಸುವ ಬಾಂಧವ್ಯಕ್ಕೂ ಪಕ್ಕಾಗಿ ರಮ್ಯಾಳಿಗೆ ಈ ಮಗು ತನ್ನದಲ್ಲವೆಂಬ ಭಾವ ಬರಲೇ ಇಲ್ಲ. ಸುಧಾಕರನಲ್ಲಿ ಆ ಬದಲಾವಣೆ ಬರಲು ಸ್ವಲ್ಪ ಕಾಲ ಹಿಡಿಯಿತು. ಎಷ್ಟೆ ಅಂದರೂ ಗಂಡಸಲ್ಲವೇ! ತನ್ನ ಜೀವತಂತು ಹೊತ್ತು ಬಂದಿರದ ಮಗುವನ್ನು ಮುಕ್ತ ಮನಸ್ಸಿನಿಂದ ಅಂಗೀಕರಿಸಲು ಸ್ವಲ್ಪ ಹಿಂಜರಿಕೆಯಾದರೂ, ಸ್ವಭಾವತಃ ವಿಶಾಲ ಹೃದಯಿಯಾದ ಅವರಿಗೆ ಅದೇನೂ ಅಸಾಧ್ಯವಾಗಲಿಲ್ಲ. ಇತ್ತ ಹೆಂಡತಿ ಅರೋಗ್ಯವಾಗಿ ಸಂತೋಷದಿಂದ ಇದ್ದುದು ಅವರಿಗೆ ನೆಮ್ಮದಿಯನ್ನು ತಂದಿತ್ತು. ಮಗುವಿನ ಜಾತಕ ಇತ್ಯಾದಿಗಳಲ್ಲಿ ತಮ್ಮದೇ ಕುಲ, ಗೋತ್ರ ದಾಖಲಿಸಿದ್ದರು.ವ್ಯವಹಾರ ಹಾಗು ಆಡಳಿತಕ್ಕೆ ಸಂಬಂಧಿಇದ ದಾಖಲೆಗಳಲ್ಲೂ ಶಕುಂತಲಾ ಹೆಸರನ್ನೇ ವಾರಸುದಾರಳನ್ನಾಗಿ ನಮೂದಿಸಿದ್ದರು. ಆದರೆ ಸತ್ಯ ಸತ್ಯವೇ. ಸತ್ಯವನ್ನು ಬಚ್ಚಿಡುವುದೋ ಅಥವಾ ಬಿಚ್ಚಿಡುವುದೋ? ಬಿಚ್ಚುವುದಾದರೆ ಹೇಗೆ ಬಿಚ್ಚುವುದು? ಇದರಿಂದ ಆಗಬಹುದಾದ ಸಾಧಕ ಬಾಧಕಗಳೇನು? ಬಚ್ಚಿಡುವುದರಿಂದಾಗುವ ಅನುಕೂಲಗಳೇನು?ಎನೇ ಮಾಡಿದರೂ ಅದರಿಂದೊದಗಬಹುದಾದ ಮುಂಪರಿಣಾಮಗಳಿಗೆ ಹೇಗೆ ತಯಾರಾಗುವುದು? ಮೂಡಬಹುದಾದ ಪ್ರಶ್ನೆಗಳೇನು?ಅವುಗಳಿಗೆ ತಮ್ಮಲ್ಲಿ ಉತ್ತರವಿದೆಯೇ? ಸತ್ಯ ತಿಳಿದು ಶಕುಂತಲ ತಮ್ಮನ್ನು ತೊರೆಯುವ ನಿರ್ಧಾರಕ್ಕೆ ಬಂದರೆ ಏನು ಮಾಡುವುದು? ಅವಳು ತಮ್ಮನ್ನು ದ್ವೇಷಿಸಿದರೆ ಹೇಗೆ ಸ್ವೀಕರಿಸುವುದು? ಸತ್ಯ ತಿಳಿದು ವಿಚಲಿತಳಾಗಿ ಜೀವನದ ಮುಂದಿನ ನಿರ್ಧಾರಗಳನ್ನು ದುಡುಕಿ ತೆಗೆದುಕೊಂಡರೆಏನು ಮಾಡುವುದು?ಅವಳ ನಿರ್ಧಾರಗಳು ಸರಿಕಾಣದೆ ಹೋದರೆ ತಿಳಿಹೇಳಲು ತಮಗೆ ನೈತಿಕ ಹಕ್ಕು ಇರುವುದೇ? ತಾವೇ ಬೆಳೆಸಿದ ಬಳ್ಳಿ ತಮ್ಮ ಕಣ್ಮುಂದೆಯೇ ಬಾಡುವಂತಾದರೆ ನೋಡಿಕೊಂಡು ಸುಮ್ಮನಿರಲಾದೀತೆ? ಹೀಗೆ ನಾನಾ ಯೋಚನೆಗಳು, ಜಿಜ್ಞಾಸೆಗಳು ಅವರ ಮನದಲ್ಲಿ ಪುಟಿದೇಳುತ್ತಿದ್ದವು. ದಿನವೂ ಸುಧಾಕರನ ಮನದಲ್ಲಿ ಕೊರೆಯುತ್ತಿದ್ದ ವಿಚಾರಗಳವು. ಅದಕ್ಕಾಗಿಯೇ ಈ ದಿನ ಧೃಢನಿರ್ಧಾರ ಮಾಡಿಕೊಂಡು ತಮ್ಮ ಈ ಸಮಸ್ಯೆಗಳ ಸಾಧಕ ಬಾಧಕ ಚರ್ಚಿಸಲು ಕುಳಿತಿದ್ದರು. ಸುಧಾಕರ ಒಂದು ಪೆನ್ನು- ಪೇಪರು ತೆಗೆದುಕೊಂಡು ರಮ್ಯಾಳನ್ನೂ ಕುಳ್ಳಿರಿಸಿಕೊಂಡು ತಮ್ಮ ಮನದಲ್ಲಿ ಮೂಡಿದ ಭಾವನೆಗಳಿಗೆ ಒಂದು ಮೂರ್ತರೂಪ ಕೊಡಲು ಪಟ್ಟಿ ಮಾಡುತ್ತ ವಿಶ್ಲೇಷಿಸುತ್ತಾ ಬರೆದಿಡುತ್ತಿದ್ದರು. ರಮ್ಯಾ ನಡು ನಡುವೆ ಮಾತೃ ಸಹಜವಾದ, ಸ್ತ್ರೀ ಸಹಜವಾದ ಭಾವಾತಿರೇಕಕ್ಕೆ ಒಳ್ಗಾಗಿ ಅಳುವುದೂ,ಬಿಕ್ಕಳಿಸುವುದೂ ನಡೆಸಿದ್ದರೂ ಅವಳನ್ನು ಸಮಾಧಾನಗೊಳಿಸುತ್ತ,ತಿಳಿಹೇಳುತ್ತ ಈ ಸೂಕ್ಷ್ಮವಾದ ವಿಚಾರದಲ್ಲಿ ಆದಷ್ಟೂ ವಸ್ತುನಿಷ್ಠವಾಗಿ ಆಲೋಚಿಸಲು ಉತ್ತೇಜಿಸುತ್ತದ್ದರು. ಎರಡು ಮೂರು ಗಂಟೆಗಳ ಕಾಲ ವಿಚಾರ ವಿನಿಮಯ ಮಾಡಿ ಬಳಲಿದ ಜೀವಗಳು ಹಾಗೆಯೇ ನಿದ್ರೆ ಹೋದರು.
ಅಂದು ಶಕುಂತಲಾ ನಾಲ್ಕು ಗಂಟೆಗೇ ಕೆಲಸ ಮುಗಿಸಿ ಮನೆಗೆ ಬಂದಳು. ತಾಯಿಗಾಗಿ ಅವಳ ಇಷ್ಟದ ಧಾರವಾಹಿಗಳ ಡಿ.ವಿ.ಡಿ ಗಳನ್ನೂ, ತಂದೆಗಾಗಿ ಒಂದು ಟ್ಯಾಬ್ಲೆಟ್ ಕಂಪ್ಯೂಟರನ್ನೂ ಕೊಂಡು ತಂದವಳು ಅಚ್ಚರಿಯ ಉಡುಗೊರೆಯಾಗಿ ಅವರಿಗೆ ಕೊಡಲೆಂದು ಸದ್ದಿಲ್ಲದೆ ಒಳಗೆ ಬಂದಾಗ ಅವರಿಬ್ಬರೂ ಗಾಢ ನಿದ್ರೆಯಲ್ಲಿದ್ದರು. ಅವರವರ ಉಡುಗೊರೆಗಳನ್ನು ಅವರವರ ಪಕ್ಕದಲ್ಲಿಟ್ಟು ಅಲ್ಲಿದ್ದ ಕಾಗದಗಳನ್ನು ಕಂಡು ತನ್ನ ಮದುವೆಗೆ ತಯಾರಿ ನಡೆಸಿರಬಹುದೆಂದು ಯೋಚಿಸಿ ಹೊರಳಿದವಳ ಕಣ್ಣಿಗೆ ಸಾಧ್ಯತೆ-ಬಾಧ್ಯತೆ ಎಂಬ ಒಕ್ಕಣೆಯೂ,ತನ್ನ ಹೆಸರೂ ಅಲ್ಲಲ್ಲಿ ಇಣುಕಿರುವುದೂ ನೋಡಿದಳು. ಒಂದಕ್ಕೊಂದು ಸಂಬಂಧ ಇದೆಯೋ ಇಲ್ಲವೋ ಎಂಬಂತ್ತಿದ್ದ ಒಕ್ಕಣೆಗಳು ಅವಳಿಗೆ ನೇರವಾಗಿ ಅರ್ಥ ಆಗಲಿಲ್ಲ. ಕುತೂಹಲ ಮೂಡಿದರೂ, ಇದುವರೆಗೆ ಬರೀ ವಾತ್ಸಲ್ಯವನ್ನೇ ಸುರಿದಿದ್ದ ತಂದೆ ತಾಯಿಗಳನ್ನು ಸಂಶಯಿಸಲು ಅವಳಿಗೆ ಯಾವ ಕಾರಣಗಳೂ ಇರಲಿಲ್ಲ. ಕಾಗದ ಅಲ್ಲಿಯೇ ಬಿಟ್ಟು ಮುಖತೊಳೆದು ಬಟ್ಟೆ ಬದಲಾಯಿಸಿ ಕೆಳಗೆ ಹೋದಳು.
ಸಂಜೆ ಐದೂವರೆ ವೇಳೆಗೆ ಗಡಿಬಿಡಿಯಿಂದೆದ್ದ ರಮ್ಯಾ-ಸುಧಾಕರ ತಮ್ಮ ಪಕ್ಕದಲ್ಲಿದ್ದ ಉಡುಗೊರೆಯ ಡಬ್ಬಿಗಳನ್ನು ಕಂಡು ಆಶ್ಚರ್ಯ ಆತಂಕ ಗಳಿಂದ ಮುಖ ಮುಖ ನೋಡಿಕೊಂಡರು. ಮೇಜಿನ ಮೇಲಿನ ಹಾಳೆಗಳು ಹಾಗೇ ಇದ್ದವು. ಶಕುಂತಲಾ ಬಂದಿರುವುದು ಸ್ಪಷ್ಟ; ಈ ಬರಹಗಳನ್ನು ನೋಡಿರುವಳೋ ಇಲ್ಲವೋ ಅಸ್ಪಷ್ಟ;ಆಕೆಯ ಮನಸ್ಥಿತಿ ಅನೂಹ್ಯ! ಎಲ್ಲಿಂದ ಹೇಗೆ ಪ್ರಾರಂಭಿಸುವುದು -ಅನಿರ್ಧರಿತ. ಹೀಗೆ ನಾನಾ ಭಾವನೆಗಳು ಅವರ ಮನವನ್ನಾಳಲು ಉಪಕ್ರಮಿಸಿದವು. ಒಬ್ಬರ ಮನಸ್ಸನ್ನು ಒಬ್ಬರು ಓದಿದವರಂತೆ ನಿಟ್ಟುಸಿರು ಬಿಟ್ಟು ಮುಖ ತೊಳೆದು ಕೆಳಕ್ಕೆ ನಡೆದರು.
ಸೋಫ಼್ಹಾ ಮೇಲೆ ಕುಳಿತು ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ ಶಕುಂತಲಾ ಇವರನ್ನು ಕಂಡು ಛಂಗನೆದ್ದು ಅಮ್ಮನನ್ನು ಆಲಂಗಿಸಿಯೂ, ಅಪ್ಪನಿಗೆ ಜೋತು ಬೀಳುತ್ತಲೂ ಎಂದಿನಂತೆ ವ್ಯವಹರಿಸಿದಳು. ರಮ್ಯಾ ಕಾಫಿ ಮಾಡಲು ತೆರಳಿದರೆ ಅಪ್ಪ ಮಗಳು ಲೋಕಾಭಿರಾಮ ಹರಟೆಗೆ ತೊಡಗಿದರು. ಆದರೂ ಸುಧಾಕರನಿಗೆ ಸ್ವಲ್ಪ ಕಸಿವಿಸಿ.
ಕಾಫಿ ಬಂತು. ಕುಡಿಯುತ್ತಾ ಶಕುಂತಲ ” ಏನೋ ಗಂಡ ಹೆಂಡತಿ ನನ್ನ ಮದುವೆಯ ಬಗ್ಗೆ ಮಸಲತ್ತು ನಡೆಸಿದಂತಿದೆ ” ಮಾತು ತೆಗೆದಳು. ರಮ್ಯಾ ಕೆಮ್ಮಿದಳು ಸುಧಾಕರ ಸ್ವಲ್ಪ ಕಾಫಿ ಮೈಮೇಲೆ ಚೆಲ್ಲಿಕೊಂಡರು. ನಕ್ಕರು ಎಲ್ಲರೂ. ನಂತರದಲ್ಲಿ ಸುಧಾಕರ ಎದ್ದು, ಮುಂದಿನ ಬಾಗಿಲ ಚಿಲಕ ಭದ್ರಪಡಿಸಿ ಬಂದು, ನಡೆಯಿರಿ ಎಲ್ಲರೂ ಮೇಲೆ ಹೋಗಿ ಮಾತನಾಡುವ ಎಂದು ನಡೆದರು. ಇನ್ನು ಎಳೆದಾಡುವುದರಲ್ಲಿ ಅರ್ಥವಿಲ್ಲ ಎಂದೆನಿಸಿತವರಿಗೆ.
ಹಾಸಿಗೆಯ ಮೇಲೆ ಕುಳಿತು ಮಗಳನ್ನು ಪಕ್ಕದಲ್ಲೇ ಕರೆದು ಕುಳ್ಳಿರಿಸಿಕೊಂಡ ಸುಧಾಕರ, ಹಾಳೆಯ ಮೇಲೆ ಕಣ್ಣಾಡಿಸಿದಂತೆ ಮಾಡಿ ಮಗಳೆ ಮುಖ ನೋಡುತ್ತಾ ಹೇಳತೊಡಗಿದರು.
”ನೋಡು ಶಕುಂತಲ ಇದುವರೆಗೆ ನಿನಗೆ ತಿಳಿಯದೇ ಇರುವ ವಿಷಯವೊಂದನ್ನು ಹೇಳಲು ಬಯಸುತ್ತೇವೆ. ಈ ವಿಚಾರವಾಗಿ ನಾನೂ ನಿನ್ನ ತಾಯಿಯೂ ಈ ಮದ್ಯಾಹ್ನ ಚರ್ಚಿಸುತ್ತಿದ್ದೆವು. ನಿನಗೆ ಇಷ್ಟರಲ್ಲೇ ಮದುವೆ ಮಾಡುವುದು ಸರಿಯಷ್ಟೇ? ಆನಂತರದಲ್ಲಿ ನೀನು, ನಿನ್ನ ಸಂಸಾರ, ಮಗು, ಮಕ್ಕಳು ಹೀಗೆ ನಿನ್ನ ಜೀವನದ ನದಿಯ ಪಾತ್ರ ಬೇರೆಡೆಗೆ ಹೊರಳುತ್ತದೆ. ನಾವು ಕೂಡಾ ಇನ್ನೆಷ್ಟುದಿನ ಇರಬಲ್ಲೆವು? ಮನುಷ್ಯನಿಗೆ ಸಂಬಂಧಗಳು ದೈಹಿಕವಾಗಿಯೂ,ಭಾವನಾತ್ಮಕವಾಗಿಯೂ, ದೈವೀಕ ಪ್ರೇರಣೆಯಿಂದಲೂ ಕೂಡಿ ಬರುತ್ತವೆ. ಕೆಲವು ಸಂಬಂಧಗಳು ಗಟ್ಟಿಯಾದರೆ ಮತ್ತೆ ಕೆಲವು ಜೊಳ್ಳು. ಪ್ರತಿಯೊಂದು ಸಂಬಂಧವನ್ನೂ ಸತ್ಯದ ಒರೆಗೆ ಹಚ್ಚಿ ಸತ್ಯದ ತಳಹದಿಯ ಮೇಲೇ ನಿಲ್ಲಿಸುವುದು ಜೀವನಕ್ಕೆ ಅತ್ಯಗತ್ಯ. ಸುಳ್ಳಿನ ಬುನಾದಿಯ ಮೇಲೆ ಕಟ್ಟಿದ ಸಂಬಂಧದ ಸೌಧಗಳು ಬಲಹೀನವಾಗಿದ್ದು ಬಿದ್ದುಹೋಗುತ್ತವೆ. ಸಂಬಂಧಗಳಿಗೆ ಸತ್ಯದ ಪ್ರಮಾಣ ಕೊಡಲು ಕಾಲ ಪ್ರಶಸ್ತವಾಗಿರಬೇಕಷ್ಟೆ. ಈ ದಿನ ನಮಗೆ-ನಿನಗೆ ಆ ಘಳಿಗೆ ಕೂಡಿಬಂದಿರುವುದರಿಂದಲೇ ನಾವೀಗ ಇಲ್ಲಿ ಕುಳಿತು ಮಾತನಾಡುತ್ತಿರುವುದು ಎಂದು ಹೇಳಿ ಕ್ಷಣ ಕಾಲ ಸುಮ್ಮನಾದರು.
ಯಾವತ್ತೂ ತಾತ್ತ್ವಿಕ ನೆಲೆಯಲ್ಲಿ ಚಿಂತಿಸಿ ಸಾತ್ವಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ತನ್ನ ತಂದೆಯ ಈ ಪೀಠಿಕೆಯಿಂದ ಶಕುಂತಲೆಗೇನೂ ಆಶ್ಚರ್ಯವಾಗಲಿಲ್ಲ. ಆದರೂ ಅವರು ಉಲ್ಲೇಖಿಸುತ್ತಿರುವ ಈ ”ಸತ್ಯ” ಏನೆಂಬುದು ಅವಳಿಗೆ ಸ್ಪಷ್ಟವಾಗಲಿಲ್ಲ. ಸುಮ್ಮನೆ ತಲೆಯಾಡಿಸಿದಳು.
ಮುಂದುವರಿದು ಸುಧಾಕರ ಹೇಳಿದರು..
”ನೀನು ಹುಟ್ಟಿದಾಗಲಿಂದ ನಮ್ಮ ಆರೈಕೆ ಯಲ್ಲಿಯೇ ಬೆಳೆದು ನಿಮ್ಮ ತಾಯಿಯ ಹಾಲನ್ನೇ ಕುಡಿದು ದೊಡ್ಡವಳಾಗಿದ್ದರೂ ಜೀವಶಾಸ್ತ್ರದ ನಿಯಮಗಳ ಪ್ರಕಾರ ನಮ್ಮ ಮಗಳಲ್ಲ; ಅದರೆ ಭಾವಶಾಸ್ತ್ರದ ತತ್ವಗಳ ಅನ್ವಯ ನಮ್ಮ ಮಗಳೆ. ನಮ್ಮ ಜೀವತಂತುಗಳು ನಿನ್ನಲ್ಲಿ ಇಲ್ಲದೇ ಇರಬಹುದು ಅದರೆ ನಮ್ಮ ಭಾವತಂತುಗಳು ನಿನಗಾಗಿಯೂ ನಿನ್ನ ಭಾವತಂತುಗಳು ನಮಗಾಗಿಯೂ ಮಿಡಿಯುತ್ತವೆ- ಸಂಶಯವಿಲ್ಲ. ಇದನ್ನು ನೀನು ಕೂಡಾ ಅನುಮೋದಿಸುವಿಯೆಂದು ಭಾವಿಸುತ್ತೇನೆ ” ಎಂದೆಂದು ಮಗಳ ಮುಖ ನೋಡಿದರು. ಅವಳ ಕಣ್ಣಾಲಿಗಳು ತುಂಬಿದ್ದವು. ರಮ್ಯಾ ಮುಖವನ್ನು ಬೇರೆಡೆಗೆ ತಿರುಗಿಸಿಕೊಂಡಿದ್ದಳು.
ಸುಧಾಕರ ಮೌನ ಮುರಿದು ಹೇಳಿದರು…
ಅಸ್ಪತ್ರೆಯಲ್ಲಿ ಹೆರಿಗೆ ಸಮ್ಯದಲ್ಲಿ ನಡೆದ ಘಟನೆಗಳು, ರಮ್ಯಾಳ ಸಂಕಷ್ಟಗಳು,ರಮ್ಯಾಳ ಜೀವಕ್ಕೆ ಒದಗಿದ್ದ ಅಪಾಯ,ತಮ್ಮದೇ ಮಗು ಉಳಿಯದೇ ಇದ್ದದ್ದು,ಶಕುಂತಲಾ ಹೇಗೆ ಅ ಸಮಯದಲ್ಲಿ ಒದಗಿ ಬಂದದ್ದು ತಮ್ಮ ಬಾಳಿಗೆ ಬೆಳಕನ್ನು ತಂದದ್ದು ಎಲ್ಲವನ್ನು ವಿವರಿಸಿದರು.ಶಕುಂತಲಾ ತನ್ನ ಕಣ್ಣುಗಳನ್ನು ಒರೆಸಿಕೊಂಡು ಅವರಮ್ಮನ ಬಳಿಸರಿದು ಅವಳ ಭುಜ ಹಿಡಿದು ನೀರು ತುಂಬಿದ್ದ ಅವಳ ಕಣ್ಣಿನಲ್ಲಿ ಕಣ್ಣಿಟ್ಟು ಹೇಳಿದಳು.
” ನೀವು ಸತ್ಯ ಹೇಳಿದರೂ ಹೇಳದಿದ್ದರೂ ನಾನು ನಿಮ್ಮ ಮಗಳೇ ಆಗಿರುತ್ತೇನೆ. ಅದರಲ್ಲೂ ಸತ್ಯದ ವೀನೆಯ ಮೇಲಿನ ಭಾವನಾತ್ಮಕ ತಂತುಗಳು ಮಿಡಿಯುವ ಸ್ವರ ಎಂದೂ ಅಪಸ್ವರವಾಗಿರಲಾರದು. ನೀವು ನನ್ನನ್ನು ಹುರಿದುಂಬಿಸಿ ವೈದ್ಯ ಶಾಸ್ತ್ರ ಓದಿಸಿದ ಅರಿವು ಇಂದು ನನಗಾಯಿತು. ನಾನು ಬೇರೆ ಏನೋ ಆಗಿದ್ದರೆ ಈ ವಿಚಾರವನ್ನು ಹೇಗೆ ಸ್ವೀಕರಿಸುತ್ತಿದ್ದೆನೋ ತಿಳಿಯದು. ಆದರೆ ಈ ಹಿನ್ನೆಲೆಯಿಂದ ಯೋಚಿಸಿದಾಗ ನನಗೆ ಯಾವ ಖೇದವೂ ಇಲ್ಲ. ಭಾವನೆಗಳಿಲ್ಲದೆ ಬರೀ ಜೀವತಂತುಗಳಿಂದ ಹೊಮ್ಮುವ ಶಬ್ದ ಶಬ್ದವಾಗುವುದೇ ವಿನ್ಃ ನಾದವಾಗುವುದಿಲ್ಲ.ಅದರ ಅರಿವೂ ಇಂದು ನನಗೆ ಸಾಕಾರವಾಯಿತು. ನಿಮಗೆ ನನ್ನ ಮೇಲಿನ ಅಧಿಕಾರವಾಗಲೀ ,ಹಕ್ಕುಗಳಾಗಲಿ ಯಾವತ್ತೂ ತಂದೆ ತಾಯಿಗಳಾಗಿ ನಿಮ್ಮದೇ. ನಿಮ್ಮ ಅಭಿಲಾಷೆ ಮೀರಿ ನಾನೇನೂ ಮಾಡಲಾರೆ.ಇಷ್ಟು ದಿನದ ನಿಮ್ಮ ಕನಸುಗಳಿಗೆ,ಅಕಾಂಕ್ಷೆಗಳಿಗೆ ಮಣ್ಣೆರೆಚಲಾರೆ. ನೀವು ಹೇಗೆ ಎಲ್ಲ ಪ್ರೀತಿಯನ್ನು ನಿಸ್ವಾರ್ಥದಿಂದ ನನಗೆ ಧಾರೆಯೆರೆದಿದ್ದೀರೋ ಹಾಗೆ ನಾನು ಕೂಡಾ ನಿಮ್ಮ ಮುದ್ದಿನ ಮಗಳಾಗಿಯೇ ಇರುತ್ತೇನೆ ಎಂದಳು- ಹೃದಯ ತುಂಬಿ.
ವಾಸ್ತವತೆಯ ಕಲ್ಲೊಂದು ಅವರ ಮನಗಳ ಕೊಳದಲ್ಲಿ ಮುಳುಗಿ ತರಂಗಗಳನ್ನೆಬ್ಬಿಸಿ ತಳ ಸೇರುವವರೆಗೆ ಅಲ್ಲಿ ಮೌನ ಆವರಿಸಿತ್ತು. ಶಕುಂತಲೆಯೇ ಮೌನ ಮುರಿದು ಮಾತನಾಡಿದಳು.
ಅಪ್ಪಾಜಿ ನಿಮ್ಮ ಕೈಗೆ ನಾನು ಯಾರಿಂದ ಹೇಗೆ ಬಂದೆನೆಂಬ ವಿಚಾರ ನನಗೆ ಹೇಳಲಿಲ್ಲ? ಎಂದಳು.
ಸುಧಾಕರ ತಲೆಯಾಡಿಸುತ್ತಾ,” ಹೌದು ಈ ವಿಚಾರ ನಾನು ನಿನಗಷ್ಟೇ ಅಲ್ಲ ನಿನ್ನ ಅಮ್ಮನಿಗೂ ಕೂಡಾ ಇಲ್ಲಿಯವರೆಗೆ ಹೇಳಿಲ್ಲ. ನೀನು ಸಿಕ್ಕ ಸಂಭ್ರಮದಲ್ಲಿ ಅವಳೂ ಕೂಡಾ ಇಲ್ಲಿಯವರೆಗೆ ಕೇಳೇ ಇಲ್ಲ” ಎಂದರು ಮಡದಿಯೆಡೆಗೆ ಅಭಿಮಾನದಿಂದ ನೋಡುತ್ತಾ.
ಈ ದಿನ ಆ ವಿಚಾರವನ್ನೂ ಅನಾವರಣ ಮಾಡಿ ನನ್ನ ಮನಸ್ಸನ್ನೂ ಹಗುರು ಮಾಡಿಕೊಳ್ಳುತ್ತೇನೆ -ಎಂದಂದು ಹೇಳಲು ಪ್ರಾರಂಭಿಸಿದರು.
ನಿನ್ನಮ್ಮನಿಗೆ ಹೆರಿಗೆಯ ದಿನಗಳು ಹತ್ತಿರ ಬರುತ್ತಿದ್ದವು. ಆಗ ನಾವು ಬೆಂಗಳೂರಿನಲ್ಲೇ ಇದ್ದೆವು.ರಕ್ತದೊತ್ತಡ ಜಾಸ್ಥಿಯಾದರಿಂದ ನಾನು ಅವಳನ್ನು ಆಸ್ಪತ್ರೆಗೆ ಕರೆದೊಯ್ದೆ. ಅಲ್ಲಿಂದ ಮುಂದೆ ಆದ ಕಥೆ ನಿನಗೆ ಗೊತ್ತೇ ಇದೆ. ಮಗುವನ್ನು ಕಳೆದುಕೊಂಡು ನಾವಿಬ್ಬರೂ ಖಿನ್ನರಾಗಿದ್ದೆವು. ಅಷ್ಟರಲ್ಲಿ ಪಕ್ಕದ ವಾರ್ಡಿನಲ್ಲಿ ಗಲಿಬಿಲಿ ಗಲಾಟೆ ಆಯ್ತು. ರಮ್ಯಾ ಮಲಗಿದ್ದಳು. ನಾನು ಹೋಗಿ ಗಲಾಟೆ ಆಗುವಲ್ಲಿ ನಿಂತೆ. ಯಾರೋ ಶ್ರೀಮಂತರಂತೆ.ಅವರ ಮಗಳು ಅಲ್ಲಿದ್ದಳಂತೆ.ಹಸುಗೂಸನ್ನು ಅಲ್ಲಿಯೇ ಬಿಟ್ಟು ತನ್ನ ತಂದೆ ತಾಯಿಯರೊಡನೆ ಹೊರಟು ಹೋಗಿದ್ದಳಂತೆ. ಮಗುವಿಗೆ ಬೇಕಾದ ಎಲ್ಲ ಸಾಮಾನು ಸರಂಜಾಮುಗಳನ್ನೂ ಅಲ್ಲಿ ಒಪ್ಪವಾಗಿ ಇಟ್ಟಿದ್ದರಂತೆ. ಅವರ್ಯಾರ ಸುಳಿವೂ ಇರಲಿಲ್ಲ. ಆಗೆಲ್ಲ ಈಗಿನಷ್ಟು ಕಂಪ್ಯುಟರ್ ದಾಖಲೆ ಮುಂತಾದ ವ್ಯವಸ್ಥೆ ಇರಲಿಲ್ಲ. ವಿಳಾಸ ಇತ್ಯಾದಿಗಾಗಿ ಹೆಚ್ಚು ತಲೆಕೆಡಿಸಿಕೊಳ್ಳುತ್ತಲೂ ಇರಲಿಲ್ಲ. ಬಹುತೇಕ ನಂಬಿಕೆಯ ಮೇಲೆ ವ್ಯವಹಾರ ನಡೆಯುತ್ತಿದ್ದ ದಿನಗಳವು.ಅವರು ಹೇಳಿದ್ದು ಇವರು ಬರೆದುಕೊಂಡಿದ್ದು. ಆ ಶ್ರೀಮಂತರು ತಮ್ಮ ಎಲ್ಲ ವಿವರಗಳನ್ನು ತಪ್ಪಾಗಿ ಕೊಟ್ಟಿದ್ದರು ಆದರೆ ಅಸ್ಪತ್ರೆಗೆ ಕಟ್ಟಬೇಕಾದ ಹಣ ಸರಿಯಾಗಿ ಸಂದಾಯ ಮಾಡಿದ್ದರು. ಇದೆಲ್ಲಾ ಗಮನಿಸಿದಾಗ ಅವರು ಎಚ್ಚರಿಕೆಯಿಂದಲೇ ಮಗುವನ್ನು ತೊರೆಯುವ ಯೋಚನೆ ಹಾಕಿದ್ದರೆಂದು ಕಾಣುತ್ತದೆ. ಏಕೆ ಹಾಗೆ ಮಾಡಿದರೆಂದು ಅಲ್ಲಿದ್ದ ಯಾವ ವೈದ್ಯರಿಗೂ ಮತ್ಯಾರಿಗೂ ಗೊತ್ತಿರಲಿಲ್ಲ.ಹೀಗಾಗಿ ಗಲಿಬಿಲಿ ನಡೆದಿತ್ತು. ಆಗ ನೀನು ಎರಡು ದಿನದ ಮಗುವಿರಬೇಕು. ಅಳಲು ಮೊದಲು ಮಾಡಿದೆ. ಅಲ್ಲಿದ್ದ ನರ್ಸ್ ನಿನ್ನನ್ನು ತಂದು ರಮ್ಯಾಳಿಗೆ ಕೊಟ್ಟಳು. ನಿನ್ನಮ್ಮನಿಗೆ ಎದೆಹಾಲಿನ ಭಾರ ಇಳಿಯಬೇಕಿತ್ತು.ಅವಳ ಹಾಲು ಕುಡಿದ ಮೊದಲ ಮಗು ನೀನೆ.ಅಷ್ಟರಲ್ಲಿ ಸುಮಾರು ನಲತ್ತು ವಯಸ್ಸಿನ ಹೆಂಗಸೊಬ್ಬಳು ಅಲ್ಲಿಗೆ ಬಂದಳು. ಅವರ ಮನೆಯ ಕೆಲಸದವಳೆಂದು ಪರಿಚಯಿಸಿಕೊಂಡಳು.ಪರಿಸ್ಥಿತಿ ಅವಳಿಗೂ ಅನಿರೀಕ್ಷಿತವಾಗಿತ್ತು. ಸುಮಾರು ಎರಡು ತಿಂಗಳಿಂದ ಅವರ ಮನೆಯಲ್ಲಿ ಇದ್ದಳೆಂದೂ,ಆ ಮನೆಗೆ ಈಗ ಬೀಗ ಹಾಕಿತ್ತೆಂದೂ, ಅವರು ಊರು ಬಿಟ್ಟು ಹೊರಟುಹೋಗಿರಬೇಕೆಂದೂ ಹೇಳಿದಳು. ಕೆಲಸದವಳಾದ ಕಾರಣ ಅವರ ಪೂರ್ವಾಪರ ಅವಳಿಗೂ ಸರಿಯಾಗಿ ತಿಳಿದಿರಲಿಲ್ಲ. ಆದರೂ ಅವರು ಬಹಳ ಸ್ಥಿತಿವಂತರಿದ್ದರೆಂದೂ ಬಹಳ ಗೌಪ್ಯತೆ ಕಾಪಾಡುತ್ತಿದ್ದರೆಂದೂ ,ತಂದೆ ತಾಯಿ, ಮಗಳನ್ನು ಹೊರತು ಪಡಿಸಿ ಅಪರೂಪಕ್ಕೆಂಬಂತೆ ಅವಳ ವಾರಿಗೆಯ ಇನ್ನೊಬ್ಬ ಯುವತಿ ಬರುತ್ತಿದ್ದಳೆಂದು ಹೇಳಿದಳು. ಉಳಿದಂತೆ ಬೇರೆ ಜನ ಬಂದು ಹೋದದ್ದನ್ನು ತಾನು ಕಾಣಲಿಲ್ಲವೆಂದೂ ಸೇರಿಸಿದಳು. ಸಂಜೆಯಾದರೂ ಇನ್ನು ಯಾರ ಸುಳಿವೂ ಇರದಿದ್ದ ಕಾರಣ ಅವರ್ಯಾರೂ ಬರದೆ ಇದ್ದದ್ದು ಬಹುತೇಕ ಖಾತ್ರಿಯಾಯಿತು. ಹಿರಿಯ ವೈದ್ಯರು ನನ್ನನ್ನು ಕರೆದು ಈ ಮಗುವನ್ನು ನೀವು ಸಾಕಿಕೊಳ್ಳಬಲ್ಲಿರಾ? ಎಂದು ಕೇಳಿದರು. ನಾವೂ ಸಂತೋಷದಿಂದ ಒಪ್ಪಿದೆವು. ಆದರೂ ಇನ್ನೂ ನಾಲ್ಕಾರು ದಿನ ಆಸ್ಪತ್ರೆಯಲ್ಲೇ ಇರಿ. ಅಕಸ್ಮಾತಾಗಿ ಅವರು ಬಂದು ಇಲ್ಲದ ರಗಳೆಯಾಗುವುದು ಬೇಡ, ಹಾಗೆಯೇ ಈ ಮಗುವಿನ ಬಗೆಗೆ ಸಾಕಷ್ಟು ಮಾಹಿತಿ ಕಲೆ ಹಾಕಿ ಉಳಿದ ಪರೀಕ್ಷೆಗಳೇನಾದರೂ ಬಾಕಿಯಿದ್ದಲ್ಲಿ ಅವನ್ನು ಮುಗಿಸಿ ಆರೋಗ್ಯಪೂರ್ಣವಾಗಿರುವುದನ್ನು ಖಚಿತಪಡಿಸಿಕೊಂಡೇ ಮನೆಗೆ ತೆರಳಬಹುದೆಂದು ಸಲಹೆ ಮಾಡಿದರು. ಹೀಗಾಗಿ ನೀನು ನಮ್ಮ ಮಡಿಲಿಗೆ ಬಂದೆ ಎಂದಂದು ನಿಲ್ಲಿಸಿದರು.
”ಆಸ್ಪತ್ರೆಯವರು ಪೋಲಿಸ್ ಕಂಪ್ಲೇಂಟ್ ಕೊಡಲಿಲ್ಲವೋ?” ಶಕುಂತಲ ಕೇಳಿದಳು.
ಅದನ್ನೂ ವಿವೇಚಿಸಲಾಯ್ತು. ಆದರೆ ಯಾವ ಪೂರ್ವಾಪರಗಳ ಸರಿಯಾದ ಆಧಾರವಿಲ್ಲದೆ ದೂರು ಯಾರ ಮೇಲೆ ಕೊಡುವುದು? ಅದೂ ಅಲ್ಲದೆ ಅದರಿಂದ ಉಂಟಾಗಬಹುದಾದ ಕೋಲಾಹಲ, ಕಾನೂನು ರಗಳೆಯಿಂದ ನಿನಗೆ ತೊಂದರೆಯಾಗುತ್ತಿತ್ತೇ ವಿನಃ ಯಾವುದೆ ಉಪಕಾರ ಆಗುತ್ತಿರಲಿಲ್ಲ. ನಿನಗೆ ಮಡಿಲಿನ ನಮಗೆ ಮಗುವಿನ ಅವಶ್ಯಕೆತೆ ಇತ್ತು.ಇದನ್ನು ಮನಗಂಡೇ ಡಾ. ಹೆಗಡೆಯವರು ಆ ದಿಶೆಯತ್ತ ಒಲವು ತೋರಲಿಲ್ಲ ಎಂದು ಹೇಳಿದರು.
”ಎಂಥ ವಿಚಿತ್ರ!! ಹಸುಗೂಸನ್ನು ತೊರೆದ ಆ ಹೆಂಗಸಿನ ಬಗೆಗೆ ಏನೂ ತಿಳಿಯಲಿಲ್ಲವೋ?” ಶಕುಂತಲ ಕೇಳಿದಳು. ಹೆಂಗಸು ಎಂದು ಸಂಬೋಧಿಸಿದಳೇ ವಿನಃ ನಮ್ಮಮ್ಮ ಎಂದು ಅನ್ನದಿದ್ದುದು ರಮ್ಯಾಳಿಗೆ ಒಂದು ಬಗೆಯ ಅವ್ಯಕ್ತ ಆನಂದ ತಂದದ್ದಲ್ಲದೆ ಅವಳ ಮೇಲಿನ ಮಮತೆ ಇನ್ನೂ ಹೆಚ್ಚ್ಹಾಯಿತು. ಶಕುಂತಲೆಗೆ ಅದು ತಿಳಿಯದಿರಲಿಲ್ಲ.
ಸುಧಾಕರ ತಲೆದೂಗುತ್ತಾ,” ನಿಧಾನವಾಗಿ ಕೆಲವು ವಿಷಯಗಳು ತಿಳಿದವು ಹಿರಿಯ ವೈದ್ಯರಾದ ಹೆಗಡೆಯವರು ನಾನು ನನ್ನ ಜೀವನದಲ್ಲಿ ಕಂಡ ಕೆಲವೇ ಕೆಲವು ಪ್ರಾತಃ ಸ್ಮರಣೀಯರಲ್ಲಿ ಒಬ್ಬರು. ಅವರ ಮಾನವೀಯ ಕಾಳಜಿ, ದೂರದೃಷ್ಟಿ,ಕಳಕಳಿ ಬಹಳ ಅಪರೂಪ. ನೀನು ನಮ್ಮ ಮಡಿಲಿಗೆ ಬರುವುದು ಖಚಿತವಾದ ನಂತರ ಅವರು ನಿನ್ನ ಹುಟ್ಟಿಗೆ ಕಾರಣರಾದ ತಂದೆ ತಾಯಿಯರ ಬಗೆಗೆ ಸಾಧ್ಯವಾದಷ್ಟು ಮಾಹಿತಿ ಕಲೆ ಹಾಕುವ ಬಗೆಗೆ ಯೋಚಿಸತೊಡಗಿದರು. ನನ್ನನ್ನು ಕರೆದು ತಮ್ಮ ಕಾರ್ಯಯೋಜನೆ ತಿಳಿಸಿದರು. ಮಗುವಿಗೆ ಭದ್ರ ನೆಲೆ ಸಿಕ್ಕಿದ್ದು ಅವರಿಗೆ ನೆಮ್ಮದಿ ತಂದಿದೆಯೆಂದೂ ಆದರೆ ಪಾಲಕ ಪೋಷಕರಾಗಿ ಎಷ್ಟುಸಾಧ್ಯವೋ ಅಷ್ಟೂ ವಿವರಗಳು ಮಗುವಿನ ಬಗ್ಗೆ ತಿಳಿದಿದ್ದರೆ ಉತ್ತಮವೆಂದೂ ಮುಂದೆ ಏನಾದರೂ ಖಾಯಿಲೆ ಕಸಾಲೆಗಳು ಬಂದಲ್ಲಿ ಆ ವಿಚಾರಗಳು ಸಹಾಯಕರವಾಗಬಹುದೆಂದೂ ತಿಳಿಸಿದರು. ಹಾಗಾಗಿ ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲೇ ಉಳಿದರೆ ಅನುಕೂಲವೆಂದು ಕೇಳಿಕೊಂಡರು. ಆ ದಿನವೇ ನಿನ್ನನ್ನು ಬಿಟ್ಟುಹೋಗಿದ್ದ ರೂಂ ಅನ್ನು ಖಾಲಿಮಾಡಲಾಯ್ತು. ಅಲ್ಲೊಂದು ಚಿಕ್ಕ ಫ಼ೈಲ್ ಕಂಡು ಬಂತು. ಅದರಲ್ಲಿ ಆ ಹೆಂಗಸು ಗರ್ಭಿಣಿಯಾದಾಗಿನಿಂದ ನಿಯಮಿತ ತಪಾಸಣೆಗೊಳಪಟ್ಟ ದಾಖಲೆಗಳು ಲಭ್ಯವಾದವು. ತಿಂಗಳಿಗೊಮ್ಮೆ ವೈದ್ಯರು ಪರೀಕ್ಷಿಸಿ ಬರೆದಿದ್ದರು. ಅದರಲ್ಲಿ ವೃಂದಾ ಎಂಬ ಹೆಸರಿತ್ತು ಆದರೆ ನೀನು ಹುಟ್ಟಿದ ಆಸ್ಪತ್ರೆಯಲ್ಲಿ ಸಿಂಧೂ ಎಂಬ ಹೆಸರಿನಿಂದ ದಾಖಲಿಸಿದ್ದರು. ಬೇಕಾಗಿಯೇ ನಿಜ ನಾಮಧೇಯ ಮರೆಮಾಚಿದ್ದು ಸ್ಪಷ್ಟವಾಗಿತ್ತು. ಉಳಿದಂತೆ ವಯಸ್ಸು, ಎತ್ತರ, ಗಾತ್ರ, ತೂಕ ಮುಂತಾದುವು ಸರಿಯಾಗಿಯೇ ತಾಳೆಯಾಗಿದ್ದವು.
ಆಕೆಯನ್ನು ಕ್ರಮವಾಗಿ ನೋಡಿಕೊಂಡ ವೈದ್ಯರ ವಿಳಾಸ ಅದರಿಲ್ಲತ್ತಷ್ಟೇ, ನನ್ನನೂ ಕರೆದುಕೊಂಡು ಹೆಗಡೆಯವರು ಆ ಪ್ರಸೂತಿ ತಜ್ಞೆಯ ಬಳಿಗೆ ಹೋದರು. ವಿಷಯ ವಿವರಿಸಿ, ನನ್ನನ್ನೂ ಪರಿಚಯಿಸಿ ನಾವು ಅಲ್ಲಿಗೆ ಹೋದ ಉದ್ದೇಶ ಹೇಳಿ ಸಾಧ್ಯವಾದಷ್ಟೂ ಮಾಹಿತಿ ನೀಡಲು ಕೋರಿಕೊಂಡರು. ಆಕೆಯೂ ಅದಕ್ಕೆ ಸ್ಪಂದಿಸಿ ಒಪ್ಪಿದಳು. ನಮಗೂ ಕಾಫ್ಹಿ ತರಿಸಿಕೊಟ್ಟು ಹೇಳಲು ಪ್ರಾರಂಭಿಸಿದಳು.
ವೃಂದಾ ಯೆಂಬ ಆ ಯುವತಿ ತನ್ನ ಬಳಿಗೆ ಸುಮಾರು ಆರು ತಿಂಗಳಿನಿಂದ ಬರುತ್ತಿದ್ದಳೆಂದೂ,ಕೆಲವೊಮ್ಮೆ ತಂದೆ ತಾಯಿಯರ ಜೊತೆಗೆ ಬಂದರೆ ಮತ್ತೆ ಕೆಲವು ಸಾರಿ ಆಕೆಯ ಗೆಳತಿ ಇರುತ್ತಿದ್ದಳೆಂದೂ, ಅವರೆಲ್ಲ ಯಾವುದೋ ಒಂದು ಅಸ್ಪಷ್ಟ ಒತ್ತಡಕ್ಕೆ ಸಿಕ್ಕಿದ್ದವರಂತೆ ಕಾಣುತ್ತಿದ್ದರೆಂದೂ ಹೇಳಿದರು. ಒಮ್ಮೆ ತಾಯಿಯೂ, ವೃಂದಾ ಗೆಳತಿಯೂ ಜೊತೆಗೆ ಬಂದಿದ್ದಾಗ, ವೃಂದಾಳನ್ನು ರಕ್ತ ಪರೀಕ್ಷೆಗೆಂದು ಕಳಿಸಿ ಆಕೆಯ ತಾಯಿಯ ಬಳಿ ಮಾತನಾಡತೊಡಗಿದೆ. ಆಕೆಗೂ ತನ್ನ ಮನಸ್ಸಿನ ಭಾರ ಇಳಿಸಿಕೊಳ್ಳಬೇಕಿತ್ತೆಂದು ತೋರುತ್ತದೆ , ಹೇಳಿದಳು ” ವೃಂದಾ, ಶ್ರೀಮಂತ ಮನೆತನದಲ್ಲಿ ಜನಿಸಿದ ಹೆಮ್ಮೆಯ ಕೂಸು. ಮಹತ್ವಾಕಾಂಕ್ಷಿ ತಂದೆಯ ಮಾರ್ಗದರ್ಶನದಲ್ಲಿ ತಾನೂ ಮಹತ್ವಾಕಾಂಕ್ಷಿಯಾಗೇ ಬೆಳೆದಳು.ಗಂಡು ಮಕ್ಕಳಿಲ್ಲದ ಅವರು ಅವಳನ್ನು ವ್ಯವಹಾರದಲ್ಲೂ ಪಳಗಿಸಿದರು. ರೂಪ, ಬುದ್ಧಿ ಎರಡೂ ಚುರುಕು. ಸದಾ ಏನನ್ನಾದರೂ ಸಾಧಿಸುವ ತುಡಿತ ಅವಳಿಗೆ. ಕೆಲವುಸಾರಿ ವಿಚಿತ್ರವೆನ್ನುವಂತೆ ನಡೆದುಕೊಳ್ಳುತ್ತಿದಳು. ಯೌವ್ವನ ಸಹಜ ಅಸೆ ಆಕಾಂಕ್ಷೆಗಳನ್ನು ತೋರಿಸುತ್ತಿದ್ದುದು ಅಪರೂಪವಾದರೂ ಆಗಾಗ ಒಪ್ಪವಾಗಿ ಸಿಂಗರಿಸಿಕೊಳ್ಲುತ್ತಿದ್ದಳು,ಓಡಾಡುತ್ತಿದ್ದಳು. ತಾಯಿಯಾಗಿ ತಾನು ಆ ರೀತಿ ಅವಳಿರಲೆಂದು ಎಷ್ಟು ಬಯಸಿಲ್ಲ?! ಆದರೆ ಈ ಬದಲಾವಣೆ ತಾತ್ಕಾಲಿಕವಾಗಿರುತ್ತಿತ್ತು. ಮತ್ತೆ ತನ್ನ ಓದು, ದುಡಿತ, ವ್ಯವಹಾರ ಹೀಗೆ ಕಳೆದು ಹೋಗುತ್ತಿದ್ದಳು. ಇವಳೇನು ಹೆಂಗಸೋ ಇಲ್ಲ ಹೆಂಗಸಿನ ರೂಪದಲ್ಲಿರುವ ಗಂಡಸೋ ಎನ್ನುವಂತಿತ್ತು ಅವಳ ನಡವಳಿಕೆ. ಹೀಗಿರುವಲ್ಲಿ ಇಂಜಿನಿಯರಿಂಗ್ ಮುಗಿಸಿ ಎಮ್.ಬಿ.ಎ ಓದುತ್ತೇನೆಂದು ಹೇಳಿದಾಗ ಅವರಪ್ಪನಿಗೆ ಬಹಳೆ ಹೆಮ್ಮೆ. ಕಳಿಸಿದರು. ಅಲ್ಲಿಯೇ ಅವಳಿಗೆ ವಿಶ್ವನಾಥನಂತೆ, ಅವಳ ಸಹಪಾಠಿಯಾದವನ ಪರಿಚಯವಾಯ್ತಂತೆ. ನಾವೇನೂ ಅವನನ್ನು ಒಮ್ಮೆಯೂ ಕಾಣಲಿಲ್ಲ ಅವಳೂ ಅವನನ್ನು ಮನೆಗೆ ಕರೆತರಲಿಲ್ಲ ಒಂದೆರೆಡು ಬಾರಿ ಅವಳಲ್ಲಿ ಸ್ತ್ರೀ ಸಹಜ ಬದಲಾಣೆ ಬಂದಿದ್ದಾಗ ನನ್ನಲ್ಲಿ ಹೇಳಿಕೊಂಡಿದ್ದಳು. ಬಡತನದ ಹಿನ್ನೆಲೆಯಿಂದ ಬಂದವನೆಂದೂ, ಅಸಾಧಾರಣ ಬುದ್ಧಿವಂತನೆಂದೂ ಹೇಳಿದ್ದಳು. ಪ್ರೀತಿ, ಪ್ರೇಮ, ಮದುವೆ ಇಂಥದ್ದೆನಾದರೂ ಯೋಚಿಸಿದ್ದೀರಾ ಎಂದದ್ದಕ್ಕೆ ಅದೇನೂ ಇಲ್ಲವೆಂದವಳು ಮೂರು ತಿಂಗಳು ಕಳೆದಾಗ ನನ್ನ ಬಳಿ ಬಂದು ಹೇಳಿದಳು. ದಿಗ್ಭ್ರಮೆಗೊಂಡ ನಾನು ಮುಂದೇನು ಮಾಡಬೇಕೆಂದಿದ್ದೀರಾ ಎಂದರೆ ಉದಾಸೀನ ತೋರಿದಳು. ವೈದ್ಯರಲ್ಲಿಗೆ ನಾನೇ ಕರೆದೊಯ್ದರೆ ಅವರು ಹದಿನಾಲ್ಕು ವಾರ ಕಳೆದಿರುವುದರಿಂದ ಈಗ ಏನೂ ಮಾಡಲು ಬರುವುದಿಲ್ಲವೆಂದು ಕೈಚೆಲ್ಲಿದರು. ವೃಂದಾ ಅಷ್ಟೇನೂ ವಿಚಲಿತಳಾಗಿರಲಿಲ್ಲ. ಕೇಳಿದರೆ ಇದೊಂದು ಜೈವಿಕ ಬದಲಾವಣೆ ಅಷ್ಟೇ ಅದಕ್ಕೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಸಲೀಸಾಗಿ ನಿರ್ವಿಕಾರವಾಗಿ ಹೇಳಿಬಿಟ್ಟಳು. ಇನ್ನು ಅವರಪ್ಪನಿಗೆ ತಿಳಿಸಲೇ ಬೇಕಾಯಿತು. ಒಂದು ರಾತ್ರಿ ಕೂತು ಮಾತುಕತೆ ನಡೆಸಿದೆವು. ವಿಶ್ವನಾಥನ ಬಗೆಗೆ ಕೇಳಿದರು. ಅವನು ಮದುವೆಯ ವಿಚಾರದಲ್ಲಿ ಸ್ಪಂದಿಸುವುದಿಲ್ಲವೆಂದೂ,ಸಂಬಂಧಗಳ ವಿಷಯದಲ್ಲಿ ಅಯೊಮಯವಾಗಿ ವರ್ತಿಸುತ್ತಾನೆಂದೂ, ಒಂದು ಸಂದರ್ಭದಲ್ಲಿ ಭಾವಾವೇಷಕ್ಕೆ ಒಳಗಾಗಿ ಈ ಸ್ಥಿತಿ ಬಂದಿದೆಯೆಂದು ಹೇಳಿದಳು. ತನಗೂ ಮದುವೆಯ ಜಂಜಾಟ ಬೇಡವೆಂದಳು. ಅದಕ್ಕಾಗಿ ನಾವು ತಾತ್ಕಾಲಿಕವಾಗಿ ಬೆಂಗಳೂರಿಗೆ ಬಂದಿದ್ದೇವೆ. ಹೆರಿಗೆಯ ನಂತರ ಇನ್ನೆರೆಡು ತಿಂಗಳಿದ್ದು ಅನಂತರ ವಾಪಸ್ ಹೋಗಲಿದ್ದೇವೆ ಎಂದಷ್ಟೇ ಹೇಳಿದ್ದಳು. ಮಗುವನ್ನು ತೊರೆಯುವ ಯೋಜನೆ ಹೊಸೆದಿದ್ದರೆಂದು ತಮ್ಮ ಗಮನಕ್ಕೆ ಬರದಿದ್ದುದಕ್ಕೆ ಕ್ಷಮೆ ಕೇಳಿದರು.

ಬಹಳ ವಿಚಿತ್ರವಾದ ಕೇಸು ಇದು. ಹೆಂಗಸರು ಹೀಗೂ ಇರಬಹುದೇ? ಡಾ.ಹೆಗಡೆ ತಮ್ಮ ಕೌತುಕ ಹೊರಹಾಕಿದರು. ತಲೆದೂಗುತ್ತಾ ಆ ಲೇಡಿ ಡಾಕ್ಟರು ತಮ್ಮ ಅನುಭವದಲ್ಲೂ ಇಂತಹ ಕೇಸನ್ನು ಮೊದಲ ಬಾರಿಗೆ ನೋಡಿದ್ದಂತೆ. ವೃಂದಾ ಏನೂ ಆಗಿಯೇ ಇಲ್ಲವೆಂಬಂತೆ ಇರುತ್ತಿದ್ದಳಂತೆ. ತನ್ನ ಹೊಟ್ಟೆಯಲ್ಲ್ಲಿ ಬೆಳೆಯುತ್ತಿದ್ದ ಮಗುವಿನ ಬಗೆಗೆ ಕೌತುಕ, ನವಿರು ಭಾವನೆಗಳು, ಕನಸುಗಳು, ಕಾಳಜಿ ಏನೂ ತೊರಿಸುತ್ತಿರಲಿಲ್ಲವಂತೆ. ಈ ರೀತಿ ಸ್ಪಂದನೆಯೇ ತೋರಿಸದ, ಉಳಿದಂತೆ ನಾರ್ಮಲ್ ಆಗಿ ಇರುವಂಥ ಗರ್ಭಿಣಿ ಹೆಂಗಸನ್ನು ಕಂಡಿದ್ದಿಲ್ಲವಂತೆ ಅವರ ಅನುಭವದಲ್ಲು. ನಿಸರ್ಗ ಸಾಮಾನ್ಯವಾಗಿ ಮಗುವನ್ನು ಹೆತ್ತು ಹೊತ್ತು, ಪಾಲಿಸಿ ಪೋಷಿಸುವ ,ಆ ಮೂಲಕ ಪೀಳಿಗೆಯನ್ನು ಉಳಿಸಿ ಬೆಳೆಸುವ ಸಾಮರ್ಥ್ಯ ಹಾಗು ಅದಕ್ಕೆ ಬೇಕಾದ ದೈಹಿಕ ಹಾಗೂ ಮಾನಸಿಕ ಧಾರ್ಢ್ಯತೆಯನ್ನು ಹೆಣ್ಣಿಗೆ ದಯಪಾಲಿಸಿರುತ್ತದೆ.ಇದಕ್ಕೆ ಹೊರತಾದ ಉದಾಹರಣೆ ಎಂದರೆ ಸಮುದ್ರ ಕುದುರೆ. ಅಲ್ಲಿ ಗಂಡು ಪ್ರಾಣಿ ಮಗುವನ್ನು ಹೆರುವುದು ಮತ್ತು ಹೊರುವುದು. ಹಾಗೆಯೇ ಈ ಮಹತ್ಕಾರ್ಯದಲ್ಲಿ ಸಹಕಾರವಾಗುವಂತೆ ಮಗುವನ್ನು ತನ್ನ ಪ್ರಾಣದಂತೆ ಪ್ರೀತಿಸುವ ಸುಮಧುರ ಶಕ್ತಿಯನ್ನು ಕೂಡಾ ತಾಯಿಯಲ್ಲಿ-ಹೆಣ್ಣಿನಲ್ಲಿ ತುಂಬಿರುತ್ತದೆ. ಮಗುವನ್ನು ಕಂಡಾಗ ಮನ ಮಿಡಿದು ಹಾರ್ಮೋನುಗಳು ಸ್ರಾವವಾಗಿ ಆ ಮೂಲಕ ನರಮಂಡಲದಲ್ಲಿ ಆಗುವ ಬದಲಾವಣೆಗಳೇ ಈ ಪ್ರೀತಿಯ ಅಭಿವ್ಯಕ್ತಿಗೆ ಮೂಲಕಾರಣ.ನಿರ್ವ್ಯಾಜ ಪ್ರೀತಿಯನ್ನು ತೋರಬಲ್ಲ ಈ ಕಾರಣಕ್ಕಾಗಿಯೇ ತಾಯಿಗೆ ದೇವರ ಸ್ಥಾನವನ್ನು ಪ್ರಪಂಚದ ಎಲ್ಲ ಧರ್ಮಗಳೂ ಕೊಟ್ಟಿರುವುದು. ಎಲ್ಲ ನಿಯಮಗಳಿಗೂ ಅಪವಾದವಿರುತ್ತದೆ ಹಾಗೂ ಎಲ್ಲ ಗುಣಗಳಲ್ಲೂ ಒಂದು ಬಗೆಯ ಸ್ಪೆಕ್ಟ್ರಂ ಪ್ರಕೃತಿಯಲ್ಲಿ ಇರುತ್ತದೆ. ಕಡುಗಪ್ಪು ಬಣ್ಣದಿಂದ ಕಡುಕೆಂಪು ಬಣ್ಣದ ಮನುಷ್ಯರಿಲ್ಲವೇ ಹಾಗೆ; ಬೆಳಕಿನಲ್ಲಿ ಒಂದು ತುದಿಯಿಂದ ಮತ್ತೊಂದಕ್ಕೆ ಬಣ್ಣಗಳು ಕ್ರಮೇಣ ಬದಲಾಗುವುದಿಲ್ಲವೇ ಹಾಗೆ. ಆದರ್ಶ ತಾಯಿಯರು ಒಂದು ತುದಿಯಲ್ಲಿದ್ದರೆ ಭಾವನಾ ರಹಿತ ತಾಯಂದಿರು ಇನ್ನೊಂದು ತುದಿಯಲ್ಲಿರುವುದು ಸಾಧ್ಯ ಆದರೆ ಇದು ಅಪರೂಪ.ಗಂಡಸರಂತೆ ಯೋಚಿಸುವ, ವ್ಯವಹರಿಸುವ ತಾಯಂದಿರೂ ಇರುವುದು ಸಾಧ್ಯ ;ವೃಂದಾ ಪ್ರಾಯಶಃ ಈ ಗುಂಪಿಗೆ ಸೇರಿರಬಹುದು. ಇಂತಹವರು ಮಕ್ಕಳನ್ನು ಕುರಿತು ಯೋಚಿಸುವುದಿಲ್ಲ. ವೈಜ್ಞಾನಿಕವಾಗಿ ,ತರ್ಕಬದ್ಧವಾಗಿ ಪರಿಸ್ಥಿತಿಯನ್ನು ವಿಶ್ಲೇಷಿಸಿದರೂ ಕೂಡಾ ಒಂದೇ ವ್ಯಕ್ತಿಯಲ್ಲಿ ಸರತಿಯಂತೆ ಈ ಎರಡೂ ಬಗೆಯ ಗುಣಗಳು ಮೇಳೈಸಿರುವುದು, ವ್ಯಕ್ತಗೊಳ್ಳುವ ಪರಿ ಅವರೂ ಮೊದಲು ನೋಡಿದ್ದು. ಈ ರೀತಿಯ ಉದಾಹರಣೆಗಳು ವೈದ್ಯಕೀಯ ಸಾಹಿತ್ಯದಲ್ಲೂ ಅವರಿಗೆ ಕಂಡು ಬಂದಿಲ್ಲವಂತೆ. ಅದು ಏನೇ ಇದ್ದರೂ ಇಂತಹವರ ಆರೈಕೆಯಲ್ಲಿ ಮಕ್ಕಳ ಸಮಗ್ರ ಬೆಳವಣಿಗೆ ಅಸಂಭವ ಅಥವಾ ಕಷ್ಟ. ಹಾಗಾಗಿ ಈ ಮಗುವನ್ನು ಅವರು ತೊರೆದದ್ದು ಒಂದು ಬಗೆಯಲ್ಲಿ ಒಳ್ಳೆಯದೇ ಆಯಿತು. ಇದು ದೇವರು ಕೊಟ್ಟ ವರ ಎಂದೇ ತಿಳಿಯಿರಿ ಎಂದು ಆಕೆ ನುಡಿದ್ದಲ್ಲದೆ ಅವರು ಕೊಟ್ಟಿರುವ ವಿವರಗಳು ಬಹುತೇಕ ನಿಜವಾದರೂ ಅವರ ಹೆಸರು ,ವಿಳಾಸಗಳನ್ನು ಉದ್ದೇಶಪೂರ್ವಕವಾಗಿ ಮರೆ ಮಾಚಿದ್ದಾರೆ. ದಿನ ಪೂರ್ತಿ ನೂರಾರು ರೋಗಿಗಳನ್ನು ನೋಡುವ ನಮಗೆ ಈ ವಿವರಗಳ ಸತ್ಯಾಸತ್ಯತೆ ಕೆದಕುವ ಗೊಡವೆಯಾಗಲೀ , ಸಮಯವಾಗಲೀ ಇರುವುದಿಲ್ಲ. ನಂಬಿಕೆಯ ಮೇಲೆ ವ್ಯವಹಾರ ನಡೆಯುತ್ತಿರುತ್ತದೆ. ಆದರೆ, ’ಆದದ್ದೆಲ್ಲಾ ಒಳಿತೇ ಆಯಿತು’ ಎಂದುಕೊಂಡು ಮುಂದುವರಿಯಿರಿ. ಆಕೆ ತನ್ನ ಹೆಸರು ಊರು ಬದಲಾಯಿಸಿಕೊಂಡು ಮತ್ತೇನೋ ಸಾಧನೆಯಲ್ಲಿ ತೊಡಗಿರಬಹುದು. ಮಗುವಿಗೂ ,ಅದರ ನೂತನ ತಂದೆ-ತಾಯಿಗಳಿಗೂ ಶುಭವಾಗಲಿ ಎಂದು ಹಾರೈಸಿದ್ದಲ್ಲದೆ ಉಳಿದಂತೆ ಯಾವ ಖಾಯಿಲೆ ಕಸಾಲೆಗಳೇನೂ ವೃಂದಾಳಲ್ಲಿ ಕಾಣಿಸದ್ದರಿಂದ ಎಲ್ಲಾ ಒಳ್ಳೆಯದಾಗುವುದೆಂಬ ಭರವಸೆ ನೀಡಿ ನಮ್ಮನ್ನು ಬೀಳ್ಕೊಟ್ಟರು. ಇಷ್ಟು ಹೇಳಿ ಸುಧಾಕರ ತಮ್ಮ ಮಾತು ನಿಲ್ಲಿಸಿದರು.
ಎಲ್ಲರೂ ಮೌನದಿಂದಿದ್ದರು. ರಮ್ಯಾ ತಲೆ ತಗ್ಗಿಸಿಕೊಂಡೇ ಮಾತುಗಳನ್ನು ಕೇಳುತ್ತಿದ್ದರು.ಶಕುಂತಲಾ ತಲೆಯೆತ್ತಿ ನೋಡಿದರೂ ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದಳು.ಎಲ್ಲ ವಿಚಾರಗಳು ಮನದಾಳಕ್ಕೆ ಇಳಿಯುವವರೆಗೆ ಸುಮ್ಮನೆ ಕುಳಿತಿದ್ದು ಸುಧಾಕರ ಮುಂದುವರಿದು ” ನೋಡು ಮಗೂ ಮನಸ್ಸೊಂದು ಹಾಲಿನ ಕಡಲು. ಸಮಸ್ಯೆ ಎಂಬ ಮಂದಾರ ಪರ್ವತವನ್ನು ಚಿಂತನೆ ಅಥವಾ ಜಿಜ್ಞಾಸೆಯೆಂಬ ಹಾವಿನಿಂದ ಸುತ್ತಿ ಸತ್ಯ-ಮಿಥ್ಯ, ವಾಸ್ತವ -ಕಾಲ್ಪನಿಕ ಎಂಬುವ ದೇವ ದಾನವರುಗಳಿಂದ ಮಂಥನ ನಡೆಸಿದಾಗ ಮೊದಲು ಬರುವುದು ಕಹಿಯಾದ ವಿಷವೇ. ಅದನ್ನು ನೀಲಕಂಠನಂತೆ ಗಂಟಲಲ್ಲಿ ಇಳಿಸಿಕೊಂಡು, ಸಂಭಾಳಿಸಿಕೊಂಡು ಮುನ್ನಡೆದಾಗಲೇ ಅಮೃತದ ದರ್ಶನ ಆಗುವುದು. ಆದ್ದರಿಂದಲೇ ಇಂದು ಸಮಯ ಪ್ರಶಸ್ತವೆಂದು ಬಗೆದು ಈ ವಿಚಾರವನ್ನೆಲ್ಲ ಬಿಚ್ಚಿಟ್ಟೆ ಅಷ್ಟೇ” ಎಂದರು.
ತಲೆದೂಗಿದ ಶಕುಂತಲೆ,”ಅಪ್ಪಾಜಿ ಈ ಚಿಂತನ ಮಂಥನದಲ್ಲಿ ನನಗೆ ವಿಷಯ ಸಿಕ್ಕಿತೇ ವಿನಃ ಯಾವ ವಿಷದ ದರ್ಶನವೂ ನನಗಾಗಲಿಲ್ಲ. ನಿಮ್ಮಿಬ್ಬರ ವಾತ್ಸಲ್ಯದ ಅಮೃತ ನನ್ನ ಬಳಿ ಇರುವಾಗ ಬೇರೆ ಯಾವುದರ ಹಂಗೂ ನನಗೆ ಬೇಕಾಗಿಯೇ ಇಲ್ಲ. ಆ ವಿಶ್ವಾಮಿತ್ರ-ಮೇನಕೆಯರ ಮಗಳಲ್ಲ ಈ ಶಕುಂತಲ. ಅಂದಿಗೂ, ಇಂದಿಗೂ ಇನ್ನೆಂದಿಗೂ ನಿಮ್ಮಿಬ್ಬರ ಮುದ್ದಿನ ಮಗಳೇ ಎಂದು ರಮ್ಯ-ಸುಧಾಕರರನ್ನು ಅಪ್ಪಿದಾಗ ಆನಂದಾಶ್ರುಗಳು ತುಂಬಿದ ಅವರ ಕಣ್ಣುಗಳಿಗೆ ಪ್ರೀತಿಯ ಅನುಭವದ ಹೊರತು ಬೇರೇನೂ ಕಾಣಿಸುತ್ತಿರಲಿಲ್ಲ.

ಡಾ.ಸುದರ್ಶನ ಗುರುರಾಜರಾವ್.

ತಾಜಾ ಮಹಲ್

ತಾಜಾ ಮಹಲ್

ತಾಜಾ ಮಹಲ್

ದಿನ ರಾತ್ರಿಯು ಸ್ವಪ್ನದಲ್ಲಿ
ಮಮತಾಜಳು ನಗೆಯ ಚೆಲ್ಲಿ
ತಾಜಮಹಲು ಬಳಿಗೆ ನೀನು ಬಾರೊ ಎನ್ನುತ
ಆಗ್ರಹವನು ಮಾಡಲಾಗಿ
ನಿಗ್ರಹವನು ವಿಜಯ ನೀಗಿ
ಒಂದು ದಿನ ಹೊರಡಲೆಂದು ಸಿದ್ಧನಾಗುತ

ಮಡದಿಗದನು ಹೇಳದಂತೆ
ಹೆಜ್ಜೆ ಕಳ್ಳ ಬೆಕ್ಕಿನಂತೆ
ಇಡುತ ತನ್ನ ಗಂಟು ಮೂಟೆ ಕಟ್ಟತೊಡಗಿದ

ವಿಜಯನ ನಡವಳಿಕೆ ಕಂಡು
ಮಡದಿ ಅನುಮಾನಗೊಂಡು
ಅವನ ಬೆನ್ನ ಬಿಡದೆ ಹಿಂದೆ ಸುತ್ತ ತೊಡಗಲು
ಇರಿಸು ಮುರಿಸು ಮಾಡಿಕೊಂಡು
ಗುಟ್ಟು ಜತನ ಕಾಯ್ದುಕೊಂಡು
ಸಮಜಾಯಿಶಿ ವಿಜಯ ಮನದೆ ಹೊಸೆದುಕೊಳ್ಳಲು

ಎಲ್ಲಿಗೀಗ ತಮ್ಮ ಪಯಣ
ಎನ್ನ ನಯನದಲ್ಲಿ ನಯನ
ಇಟ್ಟು ನಿಜವ ನುಡಿಯಿರೆಂದು ಜೋರು ಮಾಡಲು

ಕಛೇರಿ ಕೆಲಸ ನನಗೆ ಉಂಟು
ದೂರದೂರಿಗೆಂದು ಗಂಟು
ಕಟ್ಟುತಿರುವೆ ಬರಲು ವಾರ ಬೇಕು ಎನ್ನುತ
ಹೊರಟು ನಿಂತ ವಿಜಯ ಅಂದೆ
ಕರೆದೊಯ್ಯುವೆ ನಿನ್ನ ಮುಂದೆ
ಎನುತ ರಮಿಸಿ ಮಡದಿಯನ್ನು ಬೀಳುಕೊಳ್ಳುತ

ದೂರದಲ್ಲಿ ತಾಜಮಹಲು
ಕಣ್ಣಳತೆಗೆ ಕಾಣುತಿರಲು
ವಿಜಯ ತಾನೆ ಶಹಜಹಾನನಂತೆ ಬೀಗುತ
ಅಂಗಿಹೋಗಿ ಕುರ್ತವಾಯ್ತು
ತಲೆಗೆ ಗರಿಯ ಪೇಠ ಬಂತು
ಕೈಯ್ಯಲೊಂದು ಚೆಂಗುಲಾಬಿ ಹೂವು ಹಿಡಿಯುತ

ಕೊಟ್ಟ ಭಾಷೆ ಮೀರದಂತೆ
ಬಂದೆ ನಿನ್ನ ಅಣತಿಯಂತೆ
ನಿನ್ನ ಒಲವು ನನಗೆ ಈಗ ಬೇಕು ಎನ್ನುತ

ಮಮತಾಜಳ ಬಳ್ಳಿ ನಡುವ
ಬಳಸೆ ಕೈಯ್ಯ ಚಾಚಿದನವ
ಪಕ್ಕದಿ ಮಲಗಿದ್ದ ಸೀತೆ ಮುಖಕೆ ತಾಕಲು
ನಿದ್ರೆಯಲ್ಲಿ ಮಾತ ಕೇಳಿ
ಬಳಿಕ ಮುಖಕೆ ಹಸ್ತ ತಗುಲಿ
ಮಗ್ಗುಲು ಬದಲಿಸಿದ ಸೀತೆ ಎಚ್ಚರಾಗಲು

ಸ್ಲೋ ಮೋಷನ್ ಮೂವಿಯಂತೆ
ಗಾಳಿಯಲ್ಲಿ ತೇಲುವಂತೆ
ಕಾಲು ಕೈಯ್ಯನಾಡಿಸುತ್ತ ಮಡದಿಗೊದೆಯಲು
ಮೊದಲು ಮಾತು ಕೇಳುತಿತ್ತು
ಇದೇನಿಂಥ ಒದೆತ ಬಿತ್ತು
ಎಂದು ಸೀತೆ ನಿದ್ರೆಯಿಂದ ಎದ್ದು ನೋಡಲು

ಹಾವ ಭಾವ ಮಾಡಿಕೊಂಡು
ಜೊ.. ವಾ..ದಾ ಕಿ.ಯಾ ಎಂದು
ಕನಸು ಕಾಣುತಿದ್ದ ವಿಜಯ ತನಗೆ ಕಾಣಲು
ಮಮತಾಜಳ ಹೆಸರು ಕೇಳಿ
ಕೆಟ್ಟ ಕುತೂಹಲವು ಕೆರಳಿ
ಕನಸಿನಾಟವನ್ನು ಸೀತೆ ಗಮನಿಸುತಿರಲು

ಸಿಟ್ಟು ಪಿತ್ತ ನೆತ್ತಿಗೇರಿ
ಸದ್ದು ಮಾಡದೊಳಗೆ ಸೇರಿ
ಚೊಂಬಿನಲ್ಲಿ ನೀರ ತಂದು ಮೇಲೆ ಸುರಿಯಲು
ಕೋಪ ತಣ್ಣಗಾಗದಿರಲು
ಮತ್ಸರವದು ಎದೆಯ ಸುಡಲು
ಖಾಲಿ ಚೊಂಬಿನಿಂದ ತಲೆಗೆ ಹಾಕಿ ಕುಕ್ಕಲು

ಕನಸೆ ನಿಜವು ಎಂದುಕೊಂಡು
ರಸದನುಭವ ಮನದಿ ಉಂಡು
ನಲಿಯುತಿದ್ದ ವಿಜಯ ಧಿಗ್ಗನೆದ್ದು ಕೂಡಲು
ನಿಶೆಯು ಜರ್ರನೆಂದು ಇಳಿದು
ವಾಸ್ತವತೆಯು ಮನದಿ ಸುಳಿದು
ಕಣ್ಣನುಜ್ಜಿಕೊಂಡು ತಲೆಯನೆತ್ತಿ ನೋಡಲು

ಮಮತಾಜಳ ಜಾಗದಲ್ಲಿ
ಮಡದಿ ಮುಖವು ಕಂಡಿತಲ್ಲಿ
ಕೆಂಡದಂಥ ಕಣ್ಣ ದೃಷ್ಟಿ ಕಂಡು ನಲುಗುತ
ಮೂತಿಯನ್ನು ತಿವಿಸಿಕೊಂಡು
ಮಂಗ ಮುಖವ ಮಾಡಿಕೊಂಡು
ತಡಬಡಾಯಿಸಿ ಮಾತನಾಡೆ ತಾನು ತೊದಲುತ

ಕದ್ದು ಹಾಲು ಕುಡಿದ ಬೆಕ್ಕು
ಮನೆಯಾಕೆಯ ಕೈಗೆ ಸಿಕ್ಕು
ಥಳಿಸಿಕೊಂಡು ನೀರ ಮೇಲೆ ಸುರಿಸಿಕೊಂಡೊಲು
ಕನಸಿನ ಸವಿ ಮಂಡಿಗೆ
ನನಸಿನ ಬಿಸಿ ತುಪ್ಪವಾಗೆ
ಬಾಯಿ ಸುಟ್ಟ ಬೆಕ್ಕಿನಂತೆ ಮೂತಿಮಾಡಲು

ಮಂಚದಿಂದ ಇಳಿಯಿರೆಂದು
ಹರುಕು ಚಾಪೆಯೊಂದ ತಂದು
ಕಲ್ಲಿನಂಥ ದಿಂಬು ಕೊಡುತ ಹೊರಗೆ ನೂಕಲು
ಜಗುಲಿ ಮೇಲೆ ವಿಜಯ ಮಲಗಿ
ಚಳಿಗೆ ದೇಹ ನಡುಗಿ ನಲುಗಿ
ಹರುಷಗೊಂಡ ಸೊಳ್ಳೆ ಅಲ್ಲಿ-ಇಲ್ಲಿ ಕಚ್ಚಲು

ಉರಿತ ಕೆರೆತ ತಾಳದಾಗಿ
ಕೊರೆವ ಚಳಿಯ ಸಹಿಸದಾಗಿ
ಜಗುಲಿಮೇಲೆ ತಕತಕನೆ ವಿಜಯ ಕುಣಿಯಲು
ಕರೆಯಿರಿ ಮಮತಾಜಳನ್ನು
ಓಡಿಸಲಿ ಸೊಳ್ಳೆಗಳನು
ಕಾಯುತಿರುವೆ ನಿಮ್ಮ ಸರಸ ನೋಡಿ ತಣಿಯಲು!!

ಇರುವ ಸುಖವ ಬಿಟ್ಟುಕೊಟ್ಟು
ಸಿಗದ ರಾಣಿಗಾಸೆಪಟ್ಟು
ಮರುಳು ಹಿಡಿದ ತನ್ನ ಬುದ್ಧಿ ಶಪಿಸಿಕೊಳ್ಳುತ
ಮಮತಾಜಳ ಮುಖವೆ ಕಾಣೆ
ಸೀತೆ ನೀನೆ ನನ್ನ ಜಾಣೆ
ಬಾಗಿಲನ್ನು ತೆಗಿಸೆ ರಮಿಸಿ ತಾಜಾ ಮಾಡುತ

ಬಾಗಿಲನ್ನು ಬಿಡದೆ ಬಡಿದ
ಕಿಟಕಿಯಲ್ಲಿ ಕೈಯ್ಯ ಮುಗಿದ
ಮಹಲಿನೊಳಗೆ ಬಿಟ್ಟುಕೊಳಲು ಕಾಡಿ ಬೇಡಿದ
ಅಷ್ಟರಲ್ಲಿ ಬೆಳಕು ಹರಿದು
ಸೀತೆ ಕೋಪ ತಾಪ ಇಳಿದು
ಗಂಡ ಹೆಂಡಿರವರ ಜಗಳ ಸೂರ್ಯ ಮುಗಿಸಿದ.

ಡಾ.ಸುದರ್ಶನ ಗುರುರಾಜರಾವ್

 

ಕಳೆ- ಕಳೆ

ಕಳೆ- ಕಳೆ

ಜನಪದವು ವ್ಯವಹರಿಸೆ ಬೇಕೊಂದು ಭಾಷೆಯು
ಆ ಭಾಷೆ ಬೆಳೆಯಲು ಬೇಕು ಜನಪದದೊಲವು
ಜನಪದದ ನುಡಿತೋಟ ಕಥೆ ಕಾವ್ಯ ತರು ಲತೆಯು
ನಳ ನಳಿಸೆ ಇರಬೇಕು ಅಭಿಮಾನ ಅರಿವು

ಒಟ್ಟು ಸಾವಿರದೊಂದು ಭಾಷೆಗಳ ನಡುವಿನಲಿ
ಪುಟ್ಟ ಉದ್ಯಾನದೊಳ್ ಇರುವ ಕನ್ನಡದ ನುಡಿಯ
ನೆಟ್ಟ ಗಿದ ಮರ ಬಳ್ಳಿ ಫಲ ಪುಷ್ಪ ನೀಡಲು
ತೋಟ ಮಾಲಿಯು ಅದಕೆ ನೀನಾಗು ಗೆಳೆಯ

ಪಂಪ ಕಟ್ಟಿದ ತೋಟ ರನ್ನ ಬೆಳೆಸಿದ ತೋಟ
ಜನ್ನ ಹರಿಹರ ಪೊನ್ನ ರಾಘವಾಂಕರ ತೋಟ
ಗದುಗಿನಾ ನಾರಣನು ನೀರನೆರೆದಿಹ ತೋಟ
ಮುದ್ದಣ ಮನೋರಮೆಯರ್ ವಿಹರಿಸಿದ ತೋಟ

ಶರಣರರಸಿದ ತೋಟ ದಾಸರೊಲುಮೆಯ ತೋಟ
ಗೊರವ ಜಂಗಮ ಜೋಗಿ ಜಾನ ಪದಗಳ ತೋಟ
ಸರಸ್ವತಿಯ ವರತೋಟ ವರಕವಿಗಳಾ ತೋಟ
ಮೇರು ಕೃತಿಗಳು ಮೆರೆವ ಮನಸೆಳೆವ ತೋಟ

ಕಬ್ಬಿಗರ ಕೈತೋಟ ಅಬ್ಬರವಿರದಾ ತೋಟ
ಕಬ್ಬ ಕಾವ್ಯಗಳ ಹಗ್ಗದುಯ್ಯಾಲೆ ತೋಟ
ಇಬ್ಬನಿಯ ತಂಪೆರೆವ ಸಹೃದಯರಾ ತೋಟ
ಹಬ್ಬದೂಟವ ದಿನವು ಬಡಿಸುತಿಹ ತೋಟ

ಕಬ್ಬಿನಾ ಸಿಹಿರಸವು ಕಬ್ಬಗಳಲ್ಲಿಹ ತೋಟ
ತಬ್ಬಿದರೆ ಮನದೆಲ್ಲ ಮಬ್ಬು ಕಳೆಯುವ ತೋಟ
ನಿಬ್ಬೆರೆಗು ಮಾಡುವಂತಿರುವ ಸುಂದರ ತೋಟ
ಅಬ್ಬೆಯರು ಮಮತೆಯಲಿ ಲಾಲಿ ಹಾಡಿದ ತೋಟ

ತಲ್ಲಣಿಸಿದಾ ಮನವು ತಾಯಿಯನು ಹುಡುಕೊವೊಲು
ಎಲ್ಲು ಸಿಗದಿಹ ಒಲುಮೆ ಅವಳ ಮಡಿಲಿನೊಳಿರಲು
ಅಲ್ಲಿ ತಲೆಯನ್ನಿಟ್ಟು ನೋವ ನೀ ಮರೆಯುವೊಲು
ಬಲ್ಲವನೆ ಬಲ್ಲನೋ ಕನ್ನಡದ ಜೇನ್ಹೊನಲು

ಮನೆಯೊಳಾಡುವ ಭಾಷೆ ಮನವನಾಳುವ ಭಾಷೆ
ಕನ್ನಡದ ನಲ್ನುಡಿಯು ಚೆಲುವು ಮರೆದಿಹ ಭಾಷೆ
ಅನ್ನ ನೀಡದಿದೆಂದು ತೊರೆಯದಿರು ನಿನ ಭಾಷೆ
ನಿನ್ನ ನೀನರಿತರೆ ಮೂಡದಾ ಕ್ಲೀಷೆ

ಜೀವನದ ಓಟದಲಿ ಬೇಕುಗಳ ಬೆನ್ಹಿಡಿದು
ಬೇಕುಗಳ ಕಣ್ಪಟ್ಟಿ ಕಟ್ಟಿ ಓಡುತ ನವೆದು
ಜೀಕುತಲಿ ನೋಡದಲೆ ಕನ್ನಡದ ತೋಟ
ಸಾಗಿದರೆ ಕಾಣದೆಲೊ ವಿಹಂಗಮ ನೋಟ

ತೋಟದಂಚಿನಲೆಲ್ಲೊ ಬೆಳೆದಿದ್ದ ಕಳೆ ಹುಲ್ಲು
ನೋಟವನು ತಪ್ಪಿಸುತ ಒಳನುಗ್ಗುತಿಹುದಲ್ಲೊ
ದಿಟವಾಗಿ ಕಿತ್ತೆಸೆದು ತೊಡೆಯದಿರೆ ನೀನು
ಕಾಟಕ್ಕೆ ಗಿಡ-ಬಳ್ಳಿ ಸೊರಗದಿಹವೇನು?

ಆಂಗ್ಲ ಭಾಷೆಯ ಕಳೆಯು ಕನ್ನಡದಿ ಬೆರೆತಿರಲು
ಆಮ್ಗ್ಲೆ ಪದಗಳೆ ನಮ್ಮ್ಮ ಮಾತೆಲ್ಲ ತುಂಬಿರಲು
ಕಳೆ ಬೆಳೆದ ತೋಟದಂತೆಮ್ಮ ನುಡಿ ಸೊರಗಿರಲು
ಗೆಳೆಯ ಬಾ ನೀ ಜೊತೆಗೆ ಕಳೆಯ ಕಿತ್ತೆಸೆಯಲು

ಕನ್ನಡವ ನುಡಿವಲ್ಲಿ ಶುದ್ಧ ಕನ್ನಡ ನುಡಿದು
ಕನ್ನಡದ ಪದಸಿರಿಯ ಮನದಾಳದಿಂದಗೆದು
ಕನ್ನಡವ ಕನ್ನಡಗ ಸೊಗಡಿನಲೆ ಬಳಸಿದರೆ
ಕನ್ನಡದ ತೋಟದೊಳ್ ಹರಿಯದೇ ಶುಭ್ರತೊರೆ?

ಕನ್ನಡದ ನುಡಿತೋಟ ನಿನ ಸೇವೆ ಬೇಡುತಿದೆ
ಮನ್ನಿಸು ಈ ನನ್ನ ಕೋರಿಕೆಯ ಗೆಳೆಯ
ನಿನ್ನ ಮನೆಯಲಿ ಎಂದು ನೀನಾಡೊ ಮಾತಿನಲಿ
ಕನ್ನಡದ ಪದಗಳನೆ ಬಿಡದೆ ಬಳಸುವೆಯಾ?

ಡಾ. ಸುದರ್ಶನ ಗುರುರಾಜರಾವ್