ಭಾರತ ದೇಶ -ಕನ್ನಡ ನಾಡು – ಕನ್ನಡ ಭಾಷೆ ಕುರಿತ ಪಿ.ಬಿ.ಶ್ರೀನಿವಾಸರ ಹಾಡುಗಳು

ಭಾರತ ದೇಶ -ಕನ್ನಡ ನಾಡು –  ಕನ್ನಡ ಭಾಷೆ  ಕುರಿತ ಪಿ.ಬಿ.ಶ್ರೀನಿವಾಸರ ಹಾಡುಗಳು

 

Map of Karnataka

ಸಾಹಿತ್ಯ ಹಾಗೂ ಸಂಗೀತ ಎರಡರಲ್ಲೂ ಶ್ರೀಮಂತವಾದ ಹಾಡುಗಳನ್ನು ಮಧುರವಾಗಿ ಹಾಡಿ ನಮಗಾಗಿ ಬಿಟ್ಟು ಹೋಗಿದ್ದಾರೆ ಜೇನುದುಂಬಿ, ಗಾನ ಗಾರುಡಿಗ, ಕಾಕಿನಾಡ ಕೋಗಿಲೆ,  ಎಂದು ಹೆಸರಾದ ಮಧುರ ಕಂಠದ ಗಾಯಕ ನಮ್ಮ ಪಿ.ಬಿ.ಶ್ರೀನಿವಾಸ್..

ಅವರು ಹಾಡಿದ ಹಾಡುಗಳು ನಮ್ಮ ಜೀವನದ ಪ್ರತಿಯೊಂದು ಪ್ರಸಂಗಕ್ಕೂ ಹಲವಾರು ಇವೆ. ೫೦ ವರ್ಷ ಗಳಷ್ಟು ಹಳೆಯದಾದರೂ ಇನ್ನೂ ಅನುರಣಿಸಿ ನಮ್ಮ ಭಾಷೆಯ ಸೌಂದರ್ಯವನ್ನು ಜೀವಂತವಾಗಿಟ್ಟಿವೆ.ಅಂತರ್ಗತ ಭಾವನೆಗಳಿಗೆ, ಶ್ರುತಿ ಲಯಗಳಿಗೆ ಒತ್ತುಕೊಟ್ಟು ಹಾಡಿದ್ದು ಇವರ ವಿಶೇಷತೆ. ತಾಯಿಯ ಹಾಡುಗಳಿಂದ ಪ್ರಭಾವಿತರಾಗಿ,ಯಾವ ಗುರುಮುಖದಿಂದಲೂ ಅಧಿಕೃತವಾಗಿ ಸಂಗೀತ ಕಲಿಯದಿದ್ದರೂ ಸಂಗೀತ ಸರಸ್ವತಿಯನ್ನು ತಮ್ಮ ಸತತ ಪರಿಶ್ರಮದಿಂದ ಒಲಿಸಿಕೊಂಡು ಗಾಯನ ಶಿಖರದ ಉತ್ತುಂಗವನ್ನು ತಲುಪಿದ್ದು ಈಗ ಇತಿಹಾಸ.

ಕರ್ನಾಟಕ ಸಂಗೀತ ರುಚಿಸದೆ ಉತ್ತರ ಭಾರತದ ಹಿಂದೂಸ್ತಾನಿ ಶೈಲಿಯಲ್ಲಿ ಆಗಿನ ಗಾಯಕರುಗಳ ಹಾಡುಗಳನ್ನು ಶ್ರದ್ಧೆಯಿಂದ ಆಲಿಸಿ -ಅನುಕರಿಸಿ ಕಲಿತಿದ್ದರೆಂದರೆ ಇವರು  ಒಂದು ಬಗೆಯ ಆಧುನಿಕ ಏಕಲವ್ಯರೆನ್ನಬಹುದು.  .

ಅವುಗಳಲ್ಲಿ ಕನ್ನಡ ಭಾಷೆ- ನಾಡು -ಸಾಹಿತ್ಯ ಕುರಿತಾಗಿ ಅವರ ಕೆಲವು ಹಾಡುಗಳ ಪಟ್ಟಿ ಇಲ್ಲಿದೆ. ಹಾಡುಗಳನ್ನು ಕುರಿತಾದ ಸಂಕ್ಷಿಪ್ತ ಟಿಪ್ಪಣಿ ಸೇರಿಸಿದ್ದೇನೆ (ನನಗೆ ತಿಳಿದಷ್ಟು) ನಿಮ್ಮ ಅವಗಾಹನೆಗಾಗಿ.

 

  • ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು : ವಿಜಯನಗರದ ವೀರಪುತ್ರ  ನಾಯಕ ನಟ ಸುದರ್ಶನ ಅವರಿಗಾಗಿ ಹಾಡಿದ್ದು. ಅಧಿಕೃತವಾಗಿ ಕನ್ನಡದಲ್ಲಿ ಅವರ ಪಾದಾರ್ಪಣೆ
  • ಕನ್ನಡವೇ ತಾಯ್ನುಡಿಯು ಕರುನಾಡು ತಾಯ್ನಾಡು : ಅನ್ನಪೂರ್ಣ ಚಿತ್ರದಲ್ಲಿ ಹಿನ್ನೆಲೆ ಗಾಯಕನಾದ ನಟನಿಗೆ ಪಿ.ಬಿ.ಎಸ್ ಹಾಡಿದ ಹಿನ್ನೆಲೆ ಗಾಯನ!
  • ಬಾ ತಾಯೆ ಭಾರತಿಯೇ  ಭಾವ ಭಾಗೀರಥಿಯೆ; ತಾಯಿ ಕರುಳು ಚಿತ್ರದ ಈ ಸುಂದರ ಹಾಡಿನ ನಿಜವಾದ ಕತೃ  ಬಹುಮುಖ ಪ್ರತಿಭೆಯ ನಟ ಟಿ.ಎನ್.ಬಾಲಕ್ರಿಶ್ಣ ಅವರು. ಎಲ್ಲಾ ದಾಖಲೆಗಳಲ್ಲಿ  ಜಿ ವಿ  ಅಯ್ಯರ್ ಇ ಹಾಡಿನ ರಚನೆಕಾರರೆಂದು ನಮೂದಿಸಿದೆ. ಆದರೆ ತಮ್ಮ ಎರಡನೆಯ ಮಗಳು ಭಾರತಿ ಹುಟ್ಟಿದಾಗ ಆ ಮಗುವಿನ ಆಗಮನದ ಸಂಭಮದಲ್ಲಿ ರಚಿಸಿದ ಅನನ್ಯ ಗೀತೆ.
  • ಕನ್ನಡತಿ ನಮ್ಮೊಡತೀ ಕಣ್ಣು ತೆರೆದು ನೋಡು : ಪುನರ್ಜನ್ಮ, 
  • ಕಲಿಯಿರೊಂದು ಪಾಠವನು ಕನ್ನಡತಾಯ್ ಮಕ್ಕಳೇ : ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ರಾಜಕುಮಾರ್ ಅವರು  ತಮ್ಮ ಪೂರ್ವಾಶ್ರಮದಲ್ಲಿ ಮಕ್ಕಳಿಗೆ ಕಲಿಸುವ ಗೀತೆ
  • ನಮ್ಮ ತಾಯಿ ಭಾರತಿ ನಮ್ಮ ನಾಡು ಭಾರತ: ನಾಂದಿ ಚಿತ್ರದಲ್ಲಿ ಶಿಕ್ಷಕ ಪಾತ್ರದ   ರಾಜಕುಮಾರರಿಗಾಗಿ ಹಾಡಿದ ಹಾಡು.
  • ಮೈಸೂರು ದಸರಾ ಎಷ್ಟೊಂದು ಸುಂದರಾ : ಕರುಳಿನ ಕರೆ ಚಿತ್ರದಲ್ಲಿ ರಾಜಕುಮಾರ್-ಸುದರ್ಶನ  ಅವರ ನಟನೆಗೆ ಹಾಡಿದ ಹಾಡು
  • ಒಲವಿನಾ ಪ್ರಿಯಲತೆ ಅವಳದೇ ಚಿಂತೆ: ಜಿ.ಕೆ.ವೆಂಕಟೇಶ್ ಅವರ ಸಂಗೀತ ಇರುವ ಈ ಭಾವಪೂರ್ಣ ಗೀತೆ ಸಂಪೂರ್ಣ ಕನ್ನಡ ನಾಡಿನ ಕುರಿತಲ್ಲದಿದ್ದರೂ  ಕನ್ನಡ ನಾಡಿನ ಸಂಸ್ಕೃತಿಯಲ್ಲಿ ಅರಳಿದ   ಪ್ರಿಯ ಸತಿಯರ ಗುಣಲಕ್ಷಣಗಳನ್ನು  ಬಣ್ಣಿಸುತ್ತದೆ. ಇದನ್ನು ಪಿ.ಬಿ.ಎಸ್ ರ ಕಂಠದಲ್ಲಿ ಕೇಳಿಯೇ ಅನುಭವಿಸಬೇಕು.
  • ದೇವನೊಬ್ಬ ನಾಮ ಹಲವು ಭಕುತರೆನಿತೋ ಭುವಿಯಲಿ : ನಮ್ಮ ಊರ ದೇವರು ಚಿತ್ರದಲ್ಲಿ ರಾಜೇಶ್ ಅವರಿಗಾಗಿ  ಹಾಡಿದ್ದು. ಕನ್ನಡ ಮಾತೆಯನ್ನು ಭಾರತಮಾತೆಯ ಮಗಳಾಗಿ ಸಾಮರಸ್ಯ ಬೆಸೆಯುವ ಗೀತೆ.
  • ಕಣ್ಣಾರೆ ನೀ ನೋಡು ಕನ್ನಡ ಸೀಮೆ ಮನಸಾರೆ ಕೊಂಡಾಡು ಈ ನಾಡ ಹಿರಿಮೆ: ‘ಚಿರಂಜೀವಿ’ ಎಂಬ ಕನ್ನಡದಲ್ಲಿ  ಮೂಡಿಬಂದ ಒಂದು ಅಮೋಘ ಚಿತ್ರದ ಈ ಹಾಡು ಕನ್ನಡ ಭಾಷೆ, ಸಾಹಿತ್ಯ , ನಾಡು, ವೈಭವ, ಇತಿಹಾಸ, ಎಲ್ಲವನ್ನೂ ಸಮಗ್ರವಾಗಿ ಚಿತ್ರಿಸುವ ಪರಿಪೂರ್ಣ ಗೀತೆ. ಈ ಚಿತ್ರದ ಪ್ರತಿಯೊಂದು ಹಾಡೂ ಒಂದೊಂದು ರತ್ನವೇ ಸರಿ. ವಿಜಯ ನಾರಸಿಂಹ ಅವರ ಸಾಹಿಯ್ತ, ವಿಜಯಭಾಸ್ಕರ್ ಸಂಗೀತ ಕಳಶಪ್ರಾಯವಾಗಿದೆ. ಮಗುವೊಂದು ಕ್ಯಾನ್ಸರ್ ಖಾಯಿಲೆಗೆ ತುತ್ತಾದಾಗ  ಅದರ ಪರಿವಾರದಲ್ಲಿ ಆಗುವ ತವಕ-ತಲ್ಲಣಗಳನ್ನು, ನೋವಿನಲ್ಲೂ ತ್ಯಾಗಮಯಿಯಾಗಬಹುದಾದ ಸಾಮಾಜಿಕ, ಮಾನವೀಯ ಕಾಳಜಿಯನ್ನು ಮನದಲ್ಲಿ ಮೂಡಿಸುವ ಅದ್ಭುತ ಚಿತ್ರ.
  • ಒಂದೇ ನಾಡು ಒಂದೇ ಕುಲವು ಒಂದೇ ದೈವವೂ: ನಾಡ ಭಕ್ತಿ ಗೀತೆ ಎಂದೆನ್ನಬಹುದು. ಮೇಯರ್ ಮ್ಮುತ್ತಣ್ಣ ಚಿತ್ರದ್ದು.
  • ನಮ್ಮ ತಾಯಿ ಭಾರತಿ ಪಡೆದ ಪುನಿತ ಸಂಸ್ಕೃತಿ ವಿಶ್ವ ದಯಾ ಕೀರುತಿ ನಡೆಸುವ ವರ್ಧಂತಿ : ಚಿತ್ರ ನನಗೆ ತಿಳಿಯದು.
  • ಕನ್ನಡ ನಾಡಿನ ವೀರ ರಮಣೀಯ: ನಾಗರಹಾವು ಚಿತ್ರದಲ್ಲಿ ಒನಕೆ ಓಬವ್ವ ಪಾತ್ರ -ಕಥೆಯನ್ನು ಬಿಂಬಿಸುವ ಹಾಡು- ವಿಷ್ಣುವರ್ಧನರಿಗಾಗಿ ಹಾಡಿದ್ದು.
  • ಈ ದಿನ ಮಜಾ ಕಂಡೆನು ನಿಜ ಆದೆನು  ರಾಜ: ದೇವರ ಮಕ್ಕಳು ಚಿತ್ರದ ಹಾಡು. ಸೆರೆಯಿಂದ ಬಿಡುಗಡೆಯಾಗಿ ಬರುವ ರಾಜಕುಮಾರರ ಪಾತ್ರಕ್ಕೆ ಹಿನ್ನೆಲೆ ಗಾಯನ.
  • ಆಗದು ಎಂದಿ ಕೈಕಟ್ಟಿ ಕುಳಿತರೆ : ಬಂಗಾರದ ಮನುಷ್ಯಾ ಚಿತ್ರದಲ್ಲಿ ಭಾಷೆ, ನಟನೆ,ಸಾಹಿತ್ಯ ಸಂಗೀತ, ಸ್ಫೂರ್ತಿಯ ಸಂದೇಶ ತುಂಬಿದ ಬದುಕಿನ  ಬಂಗಾರವನ್ನು ಎಲ್ಲ ರೀತಿಯಲ್ಲಿ ಎಲ್ಲ ಜನರಿಗೆ ಮುಟ್ಟಿಸಿದ ಚಿತ್ರ ಹಾಗೂ ಕಲಶಪ್ರಾಯವಾದ ಗೀತೆ.    
  • ನಾವಾಡುವ ನುಡಿಯೇ ಕನ್ನಡ ನುಡಿ: ಗಂಧದ ಗುಡಿ ಚಿತ್ರದ ಅತಿ ಜನಪ್ರಿಯ ಗೀತೆ. ಈ  ಮಾಧುರ್ಯ ಪಿ.ಬಿ.ಎಸ್ ಅಲ್ಲದೆ ಇನ್ನೊಬ್ಬರು ಹೇಳಿದ್ದರೆ ಹೇಗಿರುತ್ತಿತ್ತೋ ತಿಳಿಯದು. ಅನುಕರಿಸಿದವರೆಲ್ಲರೂ ತಮ್ಮ ಪರಿಮಿತಿಯನ್ನು ಮೀರಲಾಗದೇ ಸೋತಿದ್ದಾರೆ.
  • ಬೆಳೆದಿದೆ ನೋಡಾ ಬೆಂಗಳೂರು ನಗರ ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ: ಮನೆ ಕಟ್ಟಿ ನೋಡು ಚಿತ್ರದ ಆರಂಭ ಗೀತೆ .  ಸಿ.ವಿ ಶಿವಶಂಕರ ಅವರ ರಚನೆ.
  • ನಾ ನೋಡಿ  ನಲಿಯುವ ಕಾರವಾರ ಓ ಕಾರವಾರ ಕಡಲಿನ ತೀರ ನಾ ನೋಡಿ  ನಲಿಯುವ ಕಾರವಾರ: ಮಹಡಿ ಮನೆ ಚಿತ್ರದಲ್ಲಿ ಸಿ.ವಿ ಶಿವಶಂಕರ್ ಅವರ ಹಾಡಿಗೆ ದನಿಯಾಗಿಹರು. ಅಪರೂಪದ ಗೀತೆ.
  • ಕೊಡಗಿನ ಕಾವೇರಿ- ಕಾವೇರಿ ನೀ ಬೆಡಗಿನ ವಯ್ಯಾರಿ: ಶರಪಂಜರ ಚಿತ್ರದ ಈ ಅದ್ಭುತ ಗೀತೆ ತನ್ನ ಸಾಹಿತ್ಯ ಸಂಗೀತಕ್ಕಷ್ಟೇ ಅಲ್ಲದೆ ಚಿತ್ರೀಕರಣದ ದೃಶ್ಯ ಸೌಂದರ್ಯಕ್ಕೂ ಹೆಸರಾಗಿದೆ. ಕಾವೇರಿ ನದಿಯ ನೆಪದಲ್ಲಿ ಕನ್ನಡ ನಾಡನ್ನು ವರ್ಣಿಸುವ ಶ್ರೀಮಂತ ಗೀತೆ.
  • ನೀಡಿ ಬನ್ನಿ ಪ್ರಾಣದಾನ ಉಳಿಸ ಬನ್ನಿ ಮಾನ ಹರಿಸ ಬನ್ನಿ ದೇವಗಂಗೆ : ತೂಗುದೀಪ ಚಿತ್ರದ ಹಾಡು. ನಮ್ಮ ಚಿ ಉದಯಶಂಕರ ಅವರ ತಂದೆ ಚಿ.ಸದಾಶಿವಯ್ಯ ನವರ ರಚನೆ.
  • ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ ; ಪರೋಪಕಾರಿ ಚಿತ್ರದ  ಗೀತೆ. ;
  • ಜನ್ಮ ಜನ್ಮದಾ ಅನುಬಂಧ ಹೃದಯ ಹೃದಯ ಗಳ ಪ್ರೇಮಾನುಬಂಧ: ಸಾಕ್ಷಾತ್ಕಾರ ಚಿತ್ರಕ್ಕೆ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಪಾಂಡಿತ್ಯ ಪೂರ್ಣ ಗೀತೆ. ರಂಗರಾವ್ ಅವರ ಸಂಗೀತದಲ್ಲಿ ಮೂಡಿಬಂದ ಹಾಡಿನ ಮೊದಲಲ್ಲಿರುವ ಆಲಾಪದಲ್ಲಿ ಪಿ.ಬಿ.ಎಸ್ ತುಂಬಿದ ಭಾವ ಹೃದಯಂಗಮ.
  • ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ: ಇದೂ ಕೂಡಾ ಕನ್ನಡ ನಾಡಿನ ವೈಭವವನ್ನು ಸಮಗ್ರವಾಗಿ ವಿವರಿಸುವ ಗೀತೆ. ಎಸ್. ಜಾನಕಿ ಅವರೊಡನೆ ಪಿ.ಬಿ.ಎಸ್ ಹಾಡಿದ್ದಾರೆ.
  • ಜಯ ಭಾರತ ಜನನಿ ಯ ತನುಜಾತೆ ಜಯಹೇ ಕರ್ನಾಟಕ ಮಾತೆ. : ಕು.ವೆಂ.ಪು ಅವರ ನಾಡಗೀತೆಯನ್ನು ಮೊದಲು ಹಾಡಿದ್ದು ಪಿ.ಬಿ.ಎಸ್.
  • ಯಾರು ಏನು ಮಾಡುವರು ನನಗೇನು ಕೇಡು ಮಾಡುವರು : ಕ್ರಾಂತಿ ವೀರ
  • ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ : ಪೋಸ್ಟ್ ಮಾಸ್ಟರ್ ಚಿತ್ರದ ಈ ಗೀತೆ ಪಿ.ಬಿ.ಎಸ್ ರ ಭಾವ ಪೂರ್ಣ ಧ್ವನಿಯನ್ನು ಸಂಪೂರ್ಣವಾಗಿ ಬಳಸಿಕೊಂಡ ಮಧುರ ಹಾಡು.  

 

ಇನ್ನೂ ಕೆಲವು ಇದೆಯೆಂದು ನನಗೆ ಅನಿಸುತ್ತಿದೆ. ತಿಳಿದವರು ಸೇರಿಸಿ ಈ ಪಟ್ಟಿಯನ್ನು ಇನ್ನು ಹೆಚ್ಚು ಸಂಪದ್ಭರಿತಗೊಳಿಸಬಹುದು.

 

 

ಸುದರ್ಶನ ಗುರುರಾಜರಾವ್ .

 

2 thoughts on “ಭಾರತ ದೇಶ -ಕನ್ನಡ ನಾಡು – ಕನ್ನಡ ಭಾಷೆ ಕುರಿತ ಪಿ.ಬಿ.ಶ್ರೀನಿವಾಸರ ಹಾಡುಗಳು

  1. Savitha Suresh says:

    Arisina kumkuma chitrada
    ILidu Baa thaayi iLidu baa

    Naandi chitrada
    Haadonda. haaduve nee kelu maguve

    Nanna thamma chirada
    Ide hosa haadu hrudaya soaks hi haadu

    Muriyada mane
    Bhagavantha kai kotta dudiyokanta

    Doorada betta
    Preetine aa dyavru thanda aasthi

    Sandhya raga
    Deena naa bandiruve baagilali nindiruve

Leave a comment