ವೈರುಧ್ಯ (vairudhya)

ವೈರುಧ್ಯ (vairudhya)

ಹಿರಿಯ ಕವಿಗಳ ವಾಣಿಯಿಂದ ಎರವಲು ಪಡೆದ ಸಾಲುಗಳನ್ನು ಬಳಸಿ ಕನ್ನಡ ನಾಡಿನ ಜನಗಳ ವೈರುಧ್ಯಮಯ ಜೀವನವನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿದ್ದೇನೆ. ಕನ್ನಡ ಶಾಲೆಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಉಳಿಸುವ ಯಾವ ಪ್ರಯತ್ನವೂ ಸರ್ಕಾರದಿಂದಾಗಲೀ ಜನಗಳಿಂದಾಗಲೀ ಆಗುತ್ತಿಲ್ಲ ಎಂಬುದು ಕಳವಳಕಾರೀ ಸಂಗತಿ. ಭಾಷೆಯ ಅವನತಿಯೊಂದಿಗೆ ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಾಹಿತ್ಯ ಅಳಿಯುವುದಲ್ಲದೆ ಜನಪದ, ಅನುಭವ, ಜೀವನ ಮೌಲ್ಯಗಳು,ಜೀವನದಲ್ಲಿ ಬೇಕಾಗಬಹುದಾದ ಬುದ್ಧಿವಂತಿಕೆ,ಹಾಡುಗಳು,ಗಾದೆಗಳು ಎಲ್ಲವೂ ಅವನತಿ ಹೊಂದುವುದು ಅನಿವಾರ್ಯವಾಗುತ್ತದೆ. ದೂರದೃಷ್ಟಿಯಾಗಲೀ ಅಭಿಮಾನವಾಗಲೀ ಇರದ ಆಳುವವರು, ಸರಕಾರೀ ಶಾಲೆಗಳ ದುಸ್ಥಿತಿಯ ಲಾಭ ಪಡೆಯುವ ಖಾಸಗೀ ವಲಯ, ಬದ್ಧತೆ ಇಲ್ಲದ ಶಿಕ್ಷಕರು, ಮೌಲ್ಯ ವಿರದ ಪಠ್ಯಕ್ರಮ, ಇವೆಲ್ಲದರ ನಡುವೆ ಕಳೆದುಹೋದ, ಮತಿಭ್ರಮಣೆಗೊಳಗಾದ ಪೋಷಕರು, ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದಂತಾಗಿರುವ ಮಕ್ಕಳು ಎಲ್ಲರಿಂದ ಕನ್ನಡ ಇಂದು ನಲುಗಿ ಹೋಗುತ್ತಿದೆ. ದೂರದೇಷದಲ್ಲಿರುವ ನಾವು ಕವಿತೆ ಬರೆಯುವುದರ ಹೊರತು ಏನುಮಾಡಬಹುದು ಎಂಬುದು ನನ್ನನ್ನು ಕಾಡುತ್ತಿರುವ ಪ್ರಶ್ನೆ.

ವೈರುಧ್ಯ

ಕನ್ನಡ ದಿಂಡಿಮ ಬಾರಿಸು ಎನ್ನುವ
ಕವಿ ವಾಣಿಯ ಕರೆ ಕೇಳಿದರು
ತಮಟೆಗೆ ಕಂಗ್ಲೀಷ್ ಕೋಲಲಿ ಬಡಿದು
ಚಮರ ಗೀತೆಯನು ನುಡಿಸಿದರು

ಕನ್ನಡ ಭಾಷೆಗೆ ಹೋರಾಡೆನ್ನುತ
ಜೋಗುಳ ಹಾಡಿದ ತಾಯಿಯರು
ಮುದದಲಿ ತಮ್ಮಯ ಮಕ್ಕಳ ಇಂಗ್ಲಿಷ್
ಶಾಲೆಗೆ ಓದಲು ಕಳಿಸಿದರು

ಇಂಗ್ಲಿಷ್ ಶಾಲೆಯ ಕಂಗ್ಲಿಷ ಕಲಿತ
ಮುಂದಿನ ಪೀಳಿಗೆ ತಾಯಿಯರು
ಜೋಗುಳ ಹಾಡನು ಹಾಡದೆ ತಮ್ಮಯ
ಮಕ್ಕಳ ಪೀಳಿಗೆ ಬೆಳೆಸಿದರು

ಜೋಗುಳ ಕೇಳದ ಮಕ್ಕಳು ಕನ್ನಡ
ಮಾತನೆ ಆಡದೆ ಬೆಳೆದಿರಲು
ಮನದಲು -ಮನೆಯಲು ಕನ್ನಡ ಭಾಷೆಯ
ಕುರುಹಗಳೆಲ್ಲವು ಅಳಿದಿರಲು

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕನ್ನಡಕಲಿಯದ ಇಂದಿನ ಪೀಳಿಗೆ
ಕನ್ನಡ ಎನೆ ಮೂಗ್ ಮುರಿಯುವುದು

ಕನ್ನಡ ಗೋವಿನ ಮುದ್ದಿನ ಕರುಗಳು
ಕನ್ನಡದಕ್ಷರ ಕಲಿಯಲೆ ಇಲ್ಲ
ಕನ್ನಡ ಗೋವಿನ ಹಾಲನು ಕುಡಿದು
ಕಂಗ್ಲೀಷ್ ಒದರುತಲಿಹರಲ್ಲ

ಕನ್ನಡದಲ್ಲಿಯೆ ಬಿನ್ನಹ ಗೈಯುತ
ಹರನನು ವರಗಳ ಕೇಳಿಲ್ಲ
ಕಂಗ್ಲೀಷ್ ಇಂಗ್ಲೀಷ್ ಎನ್ನುತ
ಎಲ್ಲೆಡೆ ಭಿಕ್ಷೆಯ ಬೇಡುತಲಿಹೆವಲ್ಲ

ಎಂದೆಂದಿಗು ನೀ ಕನ್ನಡವಾಗಿರು
ಎನ್ನುವ ಸತ್ಯದ ಅರಿವಿಲ್ಲ
ಕನ್ನಡ ಪದಸಿರಿ ಬಳಸದೆ ನಿತ್ಯವು
ಕನ್ನಡ ಕೊಲ್ಲುತಲಿಹೆವಲ್ಲ

ಕನ್ನಡಕಾಗಿ ಕೈಯೆತ್ತುತ ದಿನ
ಕಲ್ಪವೃಕ್ಷವ ಬೆಳೆಸಿಲ್ಲ
ಕಂಗ್ಲೀಷ್ ಕೊಡಲಿಯ ಏಟನು
ಹಾಕುತ ವೃಕ್ಷವ ಉರುಳಿಸುತಿಹೆವಲ್ಲ

ಕನ್ನಡದೊಳಗಿಹ ಕಂಪನು ಅರಿಯದೆ
ಬೇರೆಡೆ ಹುಡುಕುತಲಿಹೆವಲ್ಲ
ಸಂಸ್ಕೃತಿಯರಿಯದೆ ಕೀಳರಿಮೆಯಲಿ
ಮಿಡುಕುತ ನೋಡುತಲಿಹೆವಲ್ಲ

ರಾಮಾಯಣದ ರಾಮನ ನೀತಿಯ
ಗಾಳಿಗೆ ತೂರಿದ ಜನರಂತೆ
ಋಷಿ ವಾಲ್ಮೀಕಿಯ ಹೆಸರಲಿ ನಿರತ
ಬೇಳೆಯ ಬೇಯಿಸಿಕೊಳುವಂತೆ

ತಾಯ್ನುಡಿಗಾಗಿ ನುಡಿಯೊಳಗಾಗಿ
ನೆಡೆಯದೆ ಇಂದಿನ ಜನಪದವು
ವೈರುಧ್ಯವೆ ಮೈವೆತ್ತಿದ ತೆರದಲಿ
ಬಾಳುತಲಿಹೆವು ಅನುದಿನವು

ಡಾ. ಸುದರ್ಶನ ಗುರುರಾಜರಾವ್.