ಪಿ ಬಿ ಶ್ರೀನಿವಾಸ್- ಚೈತ್ರದ ಕೋಗಿಲೆ
ಕಾಕಿನಾಡ ಕೋಗಿಲೆ ನೀ
ಪಿ ಬಿ ಶ್ರೀನಿವಾಸ
ನೀನು ಹಾಡಿದಂಥ ಯುಗದ
ತುಂಬ ಚೈತ್ರ ಮಾಸ
ಭಾವ ಪೂರ್ಣ ಜೇನುಧಾರೆ
ನಿನ್ನ ಗಾನ ವಿಶೇಷ
ಕಲ್ಲಿನೆದೆಯು ಕರಗಿ ಹರಿಯುವಂಥ
ಧ್ವನಿಯ ಪಾಶ
ಜಾತಕ ಫಲವೆಂಬ ಚಿತ್ರದಲ್ಲಿ
ಮೊದಲು ಹಾಡಿ
ಗೀತೆಗಳಲಿ ತುಂಬಿ ನಿನ್ನ
ಮಾಧುರ್ಯದ ಮೋಡಿ
ಚಿತ್ರಗೀತೆ ಜಾತಕವನೆ ಮುಂದೆ
ಬದಲು ಮಾಡಿ
ಹೊಸ ಆಯಾಮವೆ ಕೊಟ್ಟೆ ನೀನು
ಸಿರಿ ಗಂಧವ ತೀಡಿ
ಬಾಡಿ ಹೋದ ಬಳ್ಳಿಯಲ್ಲು
ಹೂ ಅರಳಿಸ ಬಲ್ಲ
ಶಕ್ತಿ ನಿನ್ನ ಕಂಠಕಿಹುದು
ನಿನಗೆ ಸಾಟಿ ಇಲ್ಲ
ನೀನು ಹಾಡುತಿರಲು ಅರಿತು
ಪದಗಳರ್ಥ ವ್ಯಾಪ್ತಿ
ರಸಿಕರೆದೆಯು ಅರಳುತಿತ್ತು
ಪಡೆದು ಭಾವ ಪ್ರಾಪ್ತಿ
ಜೇನುದುಂಬಿಯೆಂಬ ಕಾವ್ಯ
ನಾಮ ನಿನ್ನದಿಹುದು
ನಿನ್ನ ದನಿಯ ಅನುಕರಿಸಲು
ಕಷ್ಟಸಾಧ್ಯವಹುದು
ಕನ್ನಡದ ಹಿರಿತನವನು ನೀನು
ಹಾಡೆ ಹೊಗಳಿ
ಮೂಡಿ ಬರುವುದಭಿಮಾನದ
ಹೂವು ಎದೆಯಲರಳಿ
ತಾಯಿಯನ್ನು ಕುರಿತು ನೀನು
ಅಮ್ಮ ಎಂದು ಕರೆಯೆ
ಮಾತೃಪ್ರೇಮ ದನಿಯಲ್ಲಿಯೆ
ಜೇನು ಧಾರೆ ಸುರಿಯೆ
ತೂಕಡಿಸಿ ಬೀಳದಿರಿ ಎಂದು
ಬೀಸಿ ಚಾಟಿ
ಸಾವಿರಾರು ಹೃದಯವೀಣೆ
ಮಿಡಿದೆ ತಂತಿ ಮೀಟಿ
ಹತ್ತೆಂಟು ಭಾಷೆಗಳಲಿ
ಪಾಂಡಿತ್ಯವ ಗಳಿಸಿ
ಲಕ್ಷಕಿಂತ ಹೆಚ್ಚುವರಿಯ
ಗೀತೆಗಳನೆ ರಚಿಸಿ
ಸರಸ್ವತಿಯ ಪುತ್ರನಾಗಿ
ವೇದ ನದಿಯ ತೆರದಿ
ಗುಪ್ತಗಾಮಿನಿಯಾಗಿ ಉಳಿದೆ
ನೀ ಕಾಲಾಂತರದಿ
ಮೂಲ ಒರತೆ ಬತ್ತುತಿರಲು
ಹರಿದ ನದಿಯ ಪಾತ್ರ
ನೀರ ಪಸೆಯೆ ಆರಿ ಹೋಗಿ
ಉಳಿದುದುಸುಕು ಮಾತ್ರ
ಸಾಹಿಯ್ತಕ ಚೆಲುವೆಲ್ಲವು
ಅವಿಯಾದ ಜಲವು
ಸಂಗೀತದ ರಸಧಾರೆಗೆ
ಇರದಾಯಿತು ಒಲವು
ಒಲವು ಇರದ ಲತೆಯೊಳಿಂದು
ಅರಳದಂಥ ಹೂವು
ಅರಳದಂಥ ಹಾಡು ಹೂವಿಗಿಲ್ಲ
ಅಂದ ಚಂದವು
ಗಂಧವಿರದ ಅರಳಲಾರದಂಥ
ಹಾಡು ಹೂವು
ಹೂವಿನೊಡಲಿನಲ್ಲಿ ಇಂದು
ಬರಿದೆ ಕಹಿ ಬೇವು
ನೀನು ಹಾಡಿ ಬಿಟ್ಟು ಹೋದ
ಗೀತೆಗಳ ಮಾಲೆ
ರಸಿಕರೆದೆಯ ನದಿಗೆ ನಿರತ
ಸುರಿವ ಜೀವ ಸೆಲೆ
ಗೂಢವಾಗಿ ಹರಿದು ಭಾವ
ತರಂಗಗಳ ಮಿಡಿಸಿ
ಅಂತರಂಗದಲ್ಲಿ ಒಂದು
ಸ್ವರ್ಗವನ್ನೆ ಸೃಜಿಸಿ
ಸಜ್ಜನಿಕೆಯೆ ಮೂರ್ತಿವೆತ್ತ
ಗಾನ ಸುಧೆಯ ದೊರೆ
ನಡೆದೆ ನೀನು ಗಮ್ಯದೆಡೆಗೆ
ತೊರೆದು ನಮ್ಮ ಧರೆ
ಕಿವಿಗಳಲ್ಲಿ ದುಂಬಿ ನಿನ್ನ
ದನಿ ಅನುರಣಿಸುತಿರೆ
ಸಹೃದಯರೆದೆಯಂಬರದಿ
ನೀನೆ ಭಾಗ್ಯತಾರೆ.
ಡಾ.ಸುದರ್ಶನ ಗುರುರಾಜರಾವ್