ಜೇನುದುಂಬಿ ಪಿ.ಬಿ.ಶ್ರೀನಿವಾಸ್

ನಾನು ನನ್ನ ಕಾಲದ ಎಲ್ಲ ಹುಡುಗರಂತೆ ರೇಡಿಯೊ ಹಾದುಗಳನ್ನು ಕೇಳುತ್ತ ಬೆಳೆದವನು. ಪ್ರತಿ ದಿನ ಪ್ರಸಾರವಾಗುತ್ತಿದ್ದ ಹಲವಾರು ಹಾಡುಗಳೆಲ್ಲ ಚೆನ್ನಾಗಿರುತ್ತಿದ್ದರೂ ನನ್ನ ಗಮನ ಸೆಳೆದು ಪರವಶಗೊಳಿಸುತ್ತಿದ್ದುದು ಪಿ.ಬಿ ಶ್ರೀನಿವಾಸರ ಹಾಡುಗಳೆ. ಕೆಲವೊಮ್ಮೆ ದಿನ ಪೂರ್ತಿ ಅವರ ಹಾಡೊಂದನ್ನು ಗುನುಗುಡುತ್ತಿದ್ದುದು ಅಪರೂಪವೇನಾಗಿರಲಿಲ್ಲ. ಜೀವನದಲ್ಲಿ ಪ್ರತಿಭೆಯೊಂದಿಗೆ ಅದೃಷ್ಟ ಇರಬೇಕು ಎಂಬುದಕ್ಕೆ ಪಿ.ಬಿ ಅವರ ವೃತ್ತಿ ಜೀವನ ಸಾಕ್ಷಿಯಾಗಿ ನಿಲ್ಲುತ್ತದೆ. ಇನ್ನೂ ಹಾಡುವ ಕಸುವು ಇದ್ದಾಗಲೇ ಅವಕಾಶ ವಂಚಿತರಾಗಿ ನೇಪಥ್ಯಕ್ಕೆ ಸರಿದಿದ್ದು ಚಿತ್ರಗೀತೆಗಳಿಗಾದ ಅನ್ಯಾಯವೆ ಸರಿ. ಒಂದೊಮ್ಮೆ ಆಕಾಶವಾಣಿಯ ಸಂದರ್ಶನದಲ್ಲಿ ನಿಮ್ಮ ಮಕ್ಕಳಿಗೆ ನಿಮ್ಮಂತೆ ಹಾದಲು ಬರುತ್ತದೆಯೆ ಎಂದು ಕೇಳಿದಾಗ ಅವರು ಬಹಳ ಮಾರ್ಮಿಕವಾಗಿ ಉತ್ತರಿಸಿದರು. ನನ್ನ ಮಕ್ಕಳೂ ಕೂಡ ನನ್ನಷ್ಟೇ ಚೆನ್ನಗಿ ಹಾಡಬಲ್ಲರು ಆದರೆ ನಮ್ಮ ವೃತ್ತಿಯಲ್ಲಿ ನಿಶ್ಚಿತತೆ ಇಲ್ಲ. ಹಾಗಾಗಿ ಅವರಾರೂ ಗಾಯನವನ್ನು ವೃತ್ತಿಯಾಗಿ ತೆಗೆದುಕೊಳ್ಳಲಿಲ್ಲ. ಸ್ವಾಭಾವಿಕವಾಗಿ ಅವರ ತಂದೆಯ ಕಳವಳವನ್ನು ಅವರೆಲ್ಲರೂ ಅನುಭವಿಸಿರಲೂ ಸಾಕು. ೪೫ -೪೬ ನೇ ವಯಸ್ಸಿಗೆ ಪಿ.ಬಿ ಹಾಡುವುದು ಬಹಳ ಅಪರೂಪವಾಗಿದ್ದು ಜೀವನ ಕಷ್ಟಕರವಾಗಿದ್ದಿರಬಹುದು.ಅವರ ಜೀವನದ ಈ ಮುಖವನ್ನು ನಾವು ಕಂಡರಿಯೆವು. ಈ ನಿಟ್ಟಿನಲ್ಲಿ ಅವರ ಮೇಲೆ ಬರಹಗಳು ಬರಬೇಕಿದೆ. ಈ ಗಾನಕೊಗಿಲೆಯನ್ನು ಸಂಧಿಸುವ ನನ್ನ ಬಯಕೆ ಅಪೂರ್ಣವಾಗಿಯೇ ಉಳಿಯಿತು.
ಜೇನುದುಂಬಿ ಪಿ.ಬಿ.ಎಸ್ ರ ಕಾವ್ಯನಾಮ. ಆವರನ್ನು ಅದೇ ಹೆಸರಲ್ಲಿ ಉಲ್ಲೇಖಿಸಿ ಅವರ ನೆನಪಿಗಾಗಿ ಈ ಕವನ ರಚಿಸಿದ್ದೇನೆ. ಕಾನದ ಆದರೆ ಬರೀ ಕೇಳಿದ ಗುರುವಿಗೆ ನನ್ನ ಗುರುನಮನ.

ಜೇನುದುಂಬಿ ಪಿ.ಬಿ.ಶ್ರೀನಿವಾಸ್

ಹಿನ್ನೆಲೆ ಗಾಯನವ ಮುನ್ನೆಲೆಗೆ ತಂದೆ ನೀ
ನಿನ್ನ ಹಾಡಲಿ ಜಗಕೆ ಮೋಡಿಯನು ಮಾಡಿ
ಮಾಧುರ್ಯವೆನ್ನುವ ಶಬ್ದಕ್ಕೆ ಅರ್ಥವನು
ನಿನ್ನ ಕಂಠದಿ ಸತತ ರಸಿಕರಿಗೆ ನೀಡಿ

ನುಡಿಗಳಾ ತೋಟದಲಿ ಬೆಡಗಿನಲಿ ಬೆಳೆದಿರಲು
ತಡೆಯಿರದೆ ಹಾಡುಗಳ ತರು-ಲತೆಗಳು
ಸಂಗೀತ ದೇವತೆಯು ಮನದುಂಬಿ ವಿಹರಿಸಲು
ಚೆಲುವ ಪುಶ್ಪಗಲಲ್ಲಿ ಮೈತಳೆದವು

ಗುನುಗುಣಿಸಿ ನೀ ಬಂದೆ ಜೇನುದುಂಬಿಯ ತೆರದಿ
ಹೀರಿ ಮಧುವನು ಜಗಕೆ ಉಣಬಡಿಸಲು
ತಂಗಾಳಿ ಬೀಸಿದೊಲು ತಂಪುಮಳೆಗರೆದವೊಲು
ಇಂಪು-ಕಂಪೆರೆಡು ಹದದಿ ಸೇರಿದವೊಲು

ಜೇನಿನಾ ಸಿಹಿಯಂತೆ ಜೇನಿನಾ ಜಿಗುಟಂತೆ
ಜೇನಿನಾ ಧಾರೆಯೊಲು ಕೊನೆಯೆ ಇರದಂತೆ
ಹಾಡುತಿರೆ ನೀನಂದು ಕೇಳಿ ಕುಣಿಯಿತು ಜಗವು
ಮಧುರ ವಾಣಿಯ ನಾದ ಅನುರಣಿಸಿದಂತೆ

ವಿವಿಧ ತೋಟಗಳ ಹಲವಾರು ಬಳ್ಳಿಗಳ
ಹಲವು ಹೂವುಗಳಿಂದ ಜೇನು ನೀತಂದೆ
ತುಂಬಿದೆ ಸಹೃದಯರೆದೆಯೆಂಬ ಗೂಡನ್ನು
ನಿನ್ನ ಹಾಡಿನ ಮಧುರ ಮಧುವಿನಿಂದೆ

ಕಾಲವುರುಳಿತು ಜನಮಾನ ಬದಲಾಯ್ತು
ತೋಟಗಳ ಗಿಡ ಬಳ್ಳಿ ಹೊಸದಾಗಲು
ಅಬ್ಬರದ ಆರ್ಭಟವು ಹೂದೋಟದೊಳು ನಡೆಯೆ
ನಿನ್ನ ಕೆಲಸಕೆ ಸಿಗದೆ ಹೊಸ ಹೂಗಳು

ಹಳೆ ತೋಟಿಗಳು ತೆರಳಿ ಹೊಸ ತೋಟಿಗಳು ಬರಲು
ಬಳ್ಳಿ ಬಳ್ಳಿಯಲಿ ಬರಿದೆ ಕಾಗದದ ಹೂವು
ಹೂ ತೋಟ ತಂತಿ ಬೇಲಿಯಾ ಒಳಗಾಯ್ತು ಜೇನು
ದುಂಬಿಯ ಮನದ ತುಂಬೆಲ್ಲ ನೋವು

ಮಧುಕರನ ಜೊತೆಯಿರದ ವಾಸನೆಯ ಸೊಂಕಿರದ
ಕಾಗದದ ಹೂವುಗಳ ರಾಶಿಯಿಂದು
ಕೊಳೆಯುತ್ತ ಕೊಳೆಸುತ್ತ ಕುಣಿಸುತ್ತ ಬರುತಿರಲು
ಸೊಗಡಿರದೆ ಸೊರಗಿಹುದು ಭಾಷೆಯಿಂದು

ವ್ಯವಹಾರ ಮೊದಲಾಗಿ ವ್ಯವಧಾನ ಮರೆಯಾಗಿ
ತೆರೆ ಮರೆಗೆ ಸರಿದಿರಲು ಜೇನುದುಂಬಿ
ನಿನ್ನ ಸುಮಧುರ ಗಾನ ಸಹೃದಯರೆದೆಗಳಿಗೆ
ನಿರತ ಕೊಡುತಿದೆ ಸುಧೆಯ ತುಂಬಿ ತುಂಬಿ
ಡಾ. ಸುದರ್ಶನ ಗುರುರಾಜರಾವ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s