ಅಂತರಾಗ್ನಿ

ಅಂತರಾಗ್ನಿ

ಸಾಧನೆಯ ಅಂತರಾಗ್ನಿಯದು
ಬೇಕೆಂದು ಬದುಕಿಗೆ
ಸಾಧನೆಯೆ ಇಲ್ಲದಿಹುದೆಂಥ ಬದುಕು
ಸುತ್ತಲಿನ ಪರಿಸರದಿ ಸ್ಫೂರ್ತಿಯನು
ಪಡೆಯುತಲಿ ನೀ ಶ್ರಮಿಸು
ಪರಿಹರಿಸೆ ಅದರ ಹುಳುಕು

ಅದಿಕವಿ ಪಂಪ ತಾ ಭಾರತವ
ಬರೆದಾಗ ಕನ್ನಡದಿ
ಭಾರತದ ಕಾವ್ಯವಿರಲಿಲ್ಲ
ಸ್ಫೂರ್ತಿಯನು ತಾ ಪಡೆದು
ರಚಿಸಿರಲು ಕಾವ್ಯವನು
ಅದಿಕವಿ ತಾನಾಗಿ ಮೆರೆಯದಿರಲಿಲ್ಲ

ಪಂಪನಾ ಕಾವ್ಯವದು ಒರತೆಯಾಗುತ
ಹರಿದು ಮುಂದೆಲ್ಲ
ಹಲವಾರು ಕಾವ್ಯಗಳ ಕೂಡಿ
ಕಾಲನಾ ಹರಿವಿನಲಿ ಹಲವು
ಕಾವ್ಯಗಳೆಂಬ ಝರಿಗಳನು
ಸೇರುತಲಿ ನದಿಯಾಗಿ ಓಡಿ

ರನ್ನ ಜನ್ನರ ಪೊನ್ನ ಹರಿಹರರ
ಕಾವ್ಯಗಳು ಕನ್ನಡದ
ಸಾಹಿತ್ಯ ನದಿಗೆ ಸೇರುತಿರೆ
ಭಾರತಾಂಬೆಯಖಂಡ ಸಾಹಿತ್ಯ
ಸಾಗರದ ಮಡಿಲನ್ನು
ತಾವೆಂದು ತುಂಬಿ ಹರಿಸುತಿರೆ

ಭಾಷೆ ಹಲವಾರಿರಲು ಭರತ
ಖಂಡದ ತುಂಬ ನೀತಿ
ನಿಯಮಗಳೊಂದು ಹೊಂದಿ ಸೇರದಿರೆ
ಪಾಣಿನಿಯು ಇದಕಂಡು ವ್ಯಾಕರಣ
ರಚಿಸಿರಲು ಏಕತೆಯು
ವಿವಿಧತೆಯ ನಡುವೆ ಮೂಡುತಿರೆ

ಬಾಣಂತಿ ಜ್ವರದಿಂದ ಮಾತೆಯರು
ಅಸುನೀಗಿ ಹಸುಗೂಸುಗಳು
ಆಗೆ ತಬ್ಬಲಿಗಳು
ಇಗ್ನಾಜು ಫಿಲಿಪ ಸಮಲ್ವೈಸ
ಇದಕಂಡು ಮರುಗುತಲಿ
ದುಡಿದು ತಾ ಹಗಲು ಇರುಳು

ಸಂಕಲ್ಪವನು ತೊಟ್ಟು ನಿದ್ರೆ
ಊಟವ ಬಿಟ್ಟು ದುಡಿದಿರಲು
ಜ್ವರಕೆ ತಾ ಕಾರಣವನರಸಿ
ಕೈ ತೊಳೆದು ರೋಗಿಗಳ ಮುಟ್ಟುವುದೆ
ಇದಕೆಂದು ಪರಿಹಾರ
ಎಂಬಂಥ ಬೆಳಕು ಹರಿಸಿ

ಕತೃತ್ವ ಶಕ್ತಿಯದು ಪ್ರತಿಯೊಂದು
ಜೀವಿಯಲು ಅಡಗಿಹುದು
ಕಾಣದೆಯೆ ಸುಪ್ತವಾಗಿ
ಅಂತರಾಗ್ನಿಯ ಕಾವು ಸೋಕಿರಲು
ತಾ ಕರಗಿ ಹರಿಯುವುದು
ಹೊರಗಡೆಗೆ ವ್ಯಕ್ತವಾಗಿ

ನಿನ್ನೊಳಗೆ ಅದಗಿರುವ ಪ್ರತಿಭೆಗಳೆ
ಎಂದೆಂದು ಸಾಧನೆಗೆ
ಬೇಕಿರುವ ಪರಿಕರಗಳು
ಗುರು-ಮಿತ್ರ ತಂದೆ ತಾಯಿಯರು
ಪರಿಸರವು ನಿನ್ನ ಸಾಧನೆಗೆ
ವೇಗ ವರ್ಧಕಗಳು

ಮೈಕೊಡವಿ ಎದ್ದೇಳು ಭಯವನ್ನು
ಕೈಬಿಟ್ಟು ಉದ್ದೀಪಿಸು
ನಿನ್ನ ಅಂತರಾಗ್ನಿಯನ್ನು
ಉರಿವ ಹಣತೆಯ ತೆರದಿ ತೋರು ನೀ
ಬೆಳಕನ್ನು ವ್ಯರ್ಥ ಗೊಳಿಸದೆ
ನಿನ್ನ ಈ ಜೀವನವನು.

ಡಾ.ಸುದರ್ಶನ ಗುರುರಾಜರಾವ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s